ಛಾಯಾ ಸಿಂಗ್
ಛಾಯಾ ಸಿಂಗ್ ಜೀವನಚರಿತ್ರೆ
ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಛಾಯಾ ಬೆಂಗಳೂರಿನ ಲೌರ್ಡ್ಸ್ ಶಾಲೆಯಲ್ಲಿ ಓದದಿರು. ಇವರ ಪೋಷಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ ರಜಪೂತರು.
ಸ್ಯಾಂಡಲ್ವುಡ್
ಕನ್ನಡ ಸಿನಿಮಾರಂಗದಿಂದ ನಟನೆ ಆರಂಭಿಸಿದ ಛಾಯಾ ಸಿಂಗ್, 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ಕಾಲಿವುಡ್ ಪ್ರವೇಶ
ತುಂಟಾಟ ಸಿನಿಮಾ ಬಳಿಕ ಕಾಲಿವುಡ್ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.
ಮದುವೆ: ಛಾಯಾ ಸಿಂಗ್ 2012ರಲ್ಲಿ ಕೃಷ್ಣ ಎಂಬುವವರನ್ನು ಮದುವೆಯಾದರು. 2010ರಲ್ಲಿ ತೆರೆಕಂಡ ಆನಂದಪುರತು ವೀಡು ಎಂಬ ಸೂಪರ್ ನ್ಯಾಚುರಲ್ ಮಿಸ್ಟರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ಛಾಯಾ ನಾಯಕಿ ಪಾತ್ರ ಮಾಡಿದ್ದರೆ, ಕೃಷ್ಣ ನೆಗೆಟಿವ್ ಪಾತ್ರ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಶುರುವಾಗಿ, ಆ ಸ್ನೇಹ ಪ್ರೀತಿಗೆ ತಿರುಗಿತು.
ಕಂಬ್ಯಾಕ್
ನಂದಿನಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಮರಳಿದ್ದ ಛಾಯಾ, ಸದ್ಯ ಅಮೃತಧಾರೆ ಧಾರಾವಾಹಿ ಮೂಲಕ ಗಮನ ಸೆಳಯುತ್ತಿದ್ದಾರೆ. 30 ವರ್ಷಕ್ಕೆ ಹೀರೋಯಿನ್ ಸಿಗದೇ ಪರದಾಡುವ ಈ ಕಾಲದಲ್ಲಿ, 42 ವರ್ಷದಲ್ಲಿ ಭೂಮಿಕಾ ಎಂಬ ಸೂಪರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇದರ ಜೊತೆಗೆ ತಮಿಳು ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.