ಚೇತನ್ ಕುಮಾರ್
ಚೇತನ್ ಕುಮಾರ್ ಜೀವನಚರಿತ್ರೆ
ಚೇತನ್ ಕುಮಾರ್ ಕನ್ನಡದ ಚಿತ್ರರಂಗದ ನಟ ಮತ್ತು ಸಮಾಜ ಸೇವಕ. 1983ರ ಫೆಬ್ರವರಿ 24ರಂದು ಅಮೆರಿಕದ ಶಿಕಾಗೋದಲ್ಲಿ ಜನಿಸಿದ ಇವರು, ಅಲ್ಲಿಯೇ ಶಿಕ್ಷಣ ಮುಗಿಸಿ ತಾಯ್ನಾಡಿನಲ್ಲಿ ಸೇವೆ ಸಲ್ಲಿಸ ಭಾರತಕ್ಕೆ ಬಂದರು. ಕಾಲೇಜಿನ ದಿನಗಳಿಂದಲೇ ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದ ಚೇತನ್, ಆಧುನಿಕ ನೃತ್ಯ, ಆಧುನಿಕ ವಾದ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತರು.
ಸಾಕ್ಷ್ಯಚಿತ್ರ
ದಕ್ಷಿಣ ಭಾರತದ ಜಾತಿ ವ್ಯವಸ್ಥೆ, ಹಳ್ಳಿ ಮತ್ತು ಪಟ್ಟಣಗಳಲ್ಲಿನ ಲಿಂಗ ತಾರತಮ್ಯಗಳ ಕುರಿತು 2004ರಲ್ಲಿ ಚೇತನ್ ಸಾಕ್ಷ್ಯಚಿತ್ರ ಮಾಡಿದರು. ಮಕ್ಕಳಲ್ಲಿ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಯೋಚನೆ ಬೆಳೆಸಬೇಕೆಂದು 2005ರಿಂದ ಮೈಸೂರಿಗೆ ಹತ್ತಿರವಿರುವ ಮುಲ್ಲೂರಿನ ಹಳ್ಳಿ ಶಾಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಠ ಮಾಡುತ್ತಿದ್ದಾರೆ.
ರಂಗಭೂಮಿ
ರಂಗಭೂಮಿಯಲ್ಲಿಯೂ ಅಭಿರುಚಿಯಿರುವ ಚೇತನ್ 'ಸೇತುಮಾಧವನ ಸಲ್ಲಾಪ' ಮತ್ತು 'ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ' ಎಂಬ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಜೀವನ
ನಟ ಚೇತನ್ 2005ರಲ್ಲಿ ತೆರೆಕಂಟ ಕೆ.ಎಮ್.ಚೈತನ್ಯ ನಿರ್ದೇಶನದ ಬೆಂಗಳೂರು ಭೂಗತಲೋಕದ ಕಥೆಯನ್ನಾಧರಿಸಿದ ಚಿತ್ರ 'ಆ ದಿನಗಳು' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದ ಅಭಿನಯಕ್ಕೆ ಉದಯ ಟಿವಿಯ ಪ್ರಶಸ್ತಿ ಕೂಡ ಪಡೆದರು. ಮುಂದೆ ಬಿರುಗಾಳಿ, ಸೂರ್ಯಕಾಂತಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಇವರಿಗೆ 2013ರಲ್ಲಿ ತೆರೆಗೆ ಬಂದ 'ಮೈನಾ' ಚಿತ್ರ ಬಿಗ್ ಬ್ರೇಕ್ ನೀಡಿತು. ನಂತರ ಅತಿರಥ ಹಾಗೂ ರಣಂ ಸಿನಿಮಾಗಳಲ್ಲಿ ಅಭಿನಯಿಸಿದರು.
ಸಾಮಾಜಿಕ ಹೋರಾಟ
ಚೇತನ್ 2013ರಲ್ಲಿ ಎಂಡೋಸಲ್ಫಾನ ಪೀಡಿತರ ಚಳುವಳಿ, 2016ರಲ್ಲಿ ಕೊಡಗಿನ ಆದಿವಾಸಿಗಳಿಗೆ ಪುರ್ನವಸತಿಗಾಗಿ ಚಳುವಳಿ, ಚಿತ್ರರಂಗದ ಕಾರ್ಮಿಕರ ಹಕ್ಕಿಗಾಗಿ ಹೋರಾಟ, 2018ರಲ್ಲಿ ಕಡುಗೊಲ್ಲ ಸಮುದಾಯದವರ ಪರವಾಗಿ ಹೋರಾಟ ಹೀಗೆ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಧಾರೆಗಳಿಂದ ಪ್ರಭಾವಿತರಾಗಿರುವ ಚೇತನ್, ಸದ್ಯ ಸಾಕಷ್ಟು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಮದುವೆ: ನಟ ಚೇತನ್ 2020ರಲ್ಲಿ ಅಸ್ಸಾಂ ಮೂಲದ ಮೇಘಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಈ ಸದ್ಯ ಇವರಿಬ್ಬರು ಸಮಾಜ ಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ.