ರಚಿತಾ ರಾಮ್
ರಚಿತಾ ರಾಮ್ ಜೀವನಚರಿತ್ರೆ
ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರಮುಖ ನಾಯಕ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ಬಾಲ್ಯ-ಕಿರುತೆರೆ-ಭರತನಾಟ್ಯ
ಬೆಂಗಳೂರಿನಲ್ಲಿ ಜನಿಸಿದ ರಚಿತಾರ ಬಾಲ್ಯದ ಹೆಸರು ಬಿಂದಿಯಾ ರಾಮ್. ಇವರ ಪೂರ್ವಜರು ಮಧ್ಯಪ್ರದೇಶದ ಭೂಪಾಲ್ ಮೂಲದವರು. ರಚಿತಾರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದ. ರಾಮ್ ರವರು ಸುಮಾರು 500ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.ರಚಿತಾರ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರಯಲ್ಲಿ ಹಲವು ಸೀರಿಯಲ್ಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ.ಕಥಕ್ ಮತ್ತು ಭರತನಾಟ್ಯದಲ್ಲಿ ತರಬೇತಿ ಪಡೆದ ರಚಿತಾ ರಾಮ್ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಸಹೋದರಿ ನಿತ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ `ಬೆಂಕಿಯಲ್ಲಿ ಅರಳಿದ ಹೂವು' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಅರಸಿ' ಸೀರಿಯಲ್ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿ ಜನಮನ್ನಣೆ ಪಡೆದರು.
ಸಿನಿಪ್ರವೇಶ
2013ರಲ್ಲಿ ತೆರೆಕಂಡ 'ಬುಲ್ಬುಲ್' ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು. ಚಿತ್ರದ ಅಡಿಷನ್ಗಾಗಿ ಬಂದ 200ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು. ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ನಂತರ ದರ್ಶನರ `ಅಂಬರೀಶ್, ಗಣೇಶ್ರ `ದಿಲ್ ರಂಗೀಲಾ', ಸುದೀಪ್ರ `ರನ್ನ', ಶ್ರೀಮುರಳಿಯವರ `ರಥಾವರ' ಪುನೀತ್ರ `ಚಕ್ರವ್ಯೂಹ' ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಬಹುಬೇಡಿಕೆಯ ನಟಿಯಾದರು. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು.
ಬಿಂದಿಯಾ ರಾಮ್ ==>ರಚಿತಾ ರಾಮ್
ಕಿರುತೆರೆಯಲ್ಲಿ ರಚಿತಾರ ಹೆಸರು `ಬಿಂದಿಯಾ ರಾಮ್' ಎಂದೇ ಬಳಕೆಯಲ್ಲಿತ್ತು. ಆದರೆ ಕನ್ನಡ ಚಿತ್ರರಂಗದಲ್ಲಿ `ಹಳ್ಳಿಮೇಷ್ಟ್ರು' ಮತ್ತು `ರಾಯರು ಬಂದರು ಮಾವನ ಮನೆಗೆ' ಚಿತ್ರಗಳ ಖ್ಯಾತಿ ನಟಿ `ಬಿಂದಿಯಾ' ಹೆಸರು ಮೊದಲೇ ಪ್ರಸ್ತುತದಲ್ಲಿತ್ತು. ಆದ್ದರಿಂದ ತಮ್ಮ ಮೊದಲ ಚಿತ್ರದಲ್ಲಿಯೇ ತಮ್ಮ ಹೆಸರನ್ನು ರಚಿತಾ ರಾಮ್ ಎಂದು ಬದಲಿಸಿಕೊಂಡರು.
ರಿಯಾಲಿಟಿ ಶೋಗಳಲ್ಲಿ
ಬುಲ್ಬುಲ್ ಚಿತ್ರ ತೆರೆಕಾಣುವ ಮುನ್ನ 2013 ರಲ್ಲಿ ರಚಿತಾ ರಾಮ್ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಸಂದರ್ಶನವೊಂದರಲ್ಲಿ ``ನಾನು ಈಗಿನ ರಿಯಾಲಟಿ ಶೋಗಳ ಬಗ್ಗೆ ತುಂಬಾ ಆಕರ್ಷಿತಳಾಗಿದ್ದೇನೆ. ನಾನು ಯಾವುದಾದರೂ ಒಂದು ರಿಯಾಲಿಟಿ ಶೋ ನಿರೂಪಕಿಯಾಗಬೇಕು'' ಎಂದು ಹೇಳದ್ದರು. 2016ರಲ್ಲಿ ಉದಯ ಟಿವಿಯ `ಕಿಕ್' ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸದರು .ಆದರೆ ನಿರೂಪಕಿಯಾಗಿ ಅಲ್ಲ,ಬದಲಾಗಿ ಶೋ ಜಡ್ಜ್ ಆಗಿ. ನಂತರ `ಕಾಮಿಡಿ ಟಾಕೀಸ್',`ಮಜಾಭಾರತ- 2' ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.
ರಿಷಭಪ್ರಿಯ
ರಚಿತಾ ರಾಮ್, ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್ರ ಪತ್ನಿ ರಾಗಿಣಿ ಚಂದ್ರನ್ ಅಭಿನಯದ `ರಿಷಭಪ್ರಿಯ' ಎಂಬ ಡಾಕುಮೆಂಟರಿಯನ್ನು ನಿರ್ಮಿಸಿ ಚಿತ್ರ ನಿರ್ಮಾಣದಲ್ಲಿ ಮೊದಲ ಹೆಜ್ಜೆಯನ್ನಿಟ್ಟರು. ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.