ಶರಣ್
ಶರಣ್ ಜೀವನಚರಿತ್ರೆ
ಶರಣ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ,ನಿರ್ಮಾಪಕ ಮತ್ತು ಹಿನ್ನಲೆ ಗಾಯಕ.ಸುಮಾರು 2 ದಶಕಗಳಿಂದ ತಮ್ಮ ತಿಳಿಹಾಸ್ಯದಿಂದ ಕನ್ನಡ ಸಿನಿಪ್ರಿಯರಿಗೆ ಕಚಗುಳಿಯಿಡುತ್ತಿರುವ ಶರಣ್ ತುಂಬು ಕಲಾಕುಟುಂಬದಿಂದ ಬಂದವರು.ಇವರ ಹಿರಿಯ ಸಹೋದರಿ ಶೃತಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ.
ಬಾಲ್ಯ
ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಹಲವು ದಿನಗಳ ಕಾಲ ನಾಟಕ ತಂಡ ಯಾದಗಿರಿಯಲ್ಲಿ ಬೀಡುಬಿಟ್ಟಿದ್ದಾಗ ಶರಣ್ ತಾಯಿ ತುಂಬು ಗರ್ಭಿಣಿಯಾಗಿದ್ದರು. ಒಮ್ಮೆ ವೈದ್ಯರ ಹತ್ತಿರ ಹೆರಿಗೆಪೂರ್ವ ಪರೀಕ್ಷೆಗೆ ಹೋದಾಗ ಹೊಟ್ಟಿಯಲ್ಲಿರುವ ಮಗು ಅಪಾಯಕರ ಸ್ಥಿತಿಯಲ್ಲಿರುವುದರಿಂದ,ತಾಯಿಯ ಆರೋಗ್ಯಕ್ಕಾಗಿಯಾದರೂ ಗರ್ಭಪಾತ ಮಾಡುವುದು ಸೂಕ್ತವೆಂದು ಹೇಳುತ್ತಾರೆ.ಆದರೆ ಶರಣ್ ತಾಯಿ ಒಪ್ಪುವುದಿಲ್ಲ. ತಿಂಗಳು ತುಂಬಿದಾಗ ಡಾಕ್ಟರ್ ಸಿಸೇರಿಯನ್ಗೆ ಸೂಚಿಸುತ್ತಾರೆ. ಆಗ ಶರಣ್ ತಾಯಿ ಯಾದಗಿರಿಯ ಪ್ರಸಿದ್ಧ ಶರಣ ಬಸವೇಶ್ವರರನ್ನು ಪ್ರಾರ್ಥಿಸಿ ,ಮಗು ಕ್ಷೇಮವಾಗಿ ಜನಿಸಿದರೆ ನಿನ್ನ ಹೆಸರನ್ನೇ ಇಡುತ್ತೇನೆಂದು ಹರಕೆ ಹೊರುತ್ತಾರೆ. ನಂತರ ಹರಕೆಯಂತೆ ಸುಖಪ್ರಸವವಾದಾಗ ಮಗುವಿಗೆ ಶರಣ್ ಎಂದು ಹೆಸರಿಟ್ಟರು.
ಕಲಾಜೀವನ
ಚಿತ್ರರಂಗಕ್ಕೆ ಬರುವ ಮುನ್ನ ಸಂಗೀತದಲ್ಲಿ ಆಸಕ್ತಿಯಿದ್ದ ಶರಣ್ ಒಂದು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ದರು. ತಮ್ಮದೇ ಆದ ಒಂದು ಭಕ್ತಿ ಗೀತೆಗಳ ಅಲ್ಬಮ್ವೊಂದನ್ನು ಕೂಡ ಹೊರತಂದಿದ್ದರು. ಹಾಗೇಯೆ ದೂರದರ್ಶನದ ಕೆಲವು ಸೀರೀಸ್ಗಳ ಟೈಟಲ್ ಟ್ರಾಕ್ ಹಾಡುತ್ತಿದ್ದರು.ನಂತರ ದೂರದರ್ಶನದ ಕೆಲವು ಸೀರಿಯಲ್ಗಳಲ್ಲಿ ನಟಿಸತೊಡಗಿದರು. 1996 ರಲ್ಲಿ ತೆರೆಕಂಡ ಸಿದ್ಧಲಿಂಗಯ್ಯನವರ `ಪ್ರೇಮ ಪ್ರೇಮ ಪ್ರೇಮ' ಚಿತ್ರದ ಮೂಲಕ ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಸಿದರು.ತದನಂತರ ಸುಮಾರು 99 ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಕಲಾವಿದನಾಗಿ ಕನ್ನಡದ ಸಿನಿರಸಿಕರ ಮನಗೆದ್ದರು.
ನೂರನೇ ಚಿತ್ರ ರ್ಯಾಂಬೋ
2012 ರಲ್ಲಿ ತಾವೇ ನಿರ್ಮಸಿದ `ರ್ಯಾಂಬೋ' ಚಿತ್ರದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಪ್ರೇಕ್ಷಕ ಮತ್ತು ವಿಮರ್ಶಕರಿಂದ ಬಹುವಾಗಿ ಪ್ರಶಂಸೆ ಪಡೆದ ಈ ಚಿತ್ರ 2012 ರ ಟಾಪ್ 5 ಹಿಟ್ ಚಿತ್ರಗಳಲ್ಲಿ ಗುರುತಿಸಿಕೊಂಡಿತು. ನಂತರ ಬಂದ `ವಿಕ್ಟರಿ',`ಅಧ್ಯಕ್ಷ' `ರಾಜರಾಜೇಂದ್ರ' ಮುಂತಾದ ಚಿತ್ರಗಳು ಒಂದರ ಮೇಲೊಂದರಂತೆ ಭಾಕ್ಸಾಫೀಸಿನಲ್ಲಿ ಗೆದ್ದು ಶರಣ್ರ ವೃತ್ತಿಜೀವನಕ್ಕೆ ಹೊಸತಿರವು ನೀಡಿದವು.
ತಮ್ಮ ಇಷ್ಟದ ಗಾಯನವನ್ನು ಮುಂದುವರೆಸಿರುವ ಶರಣ್ `ರಾಜರಾಜೇಂದ್ರ',`ವಜ್ರಕಾಯ',`ಬುಲೆಟ್ ಬಸ್ಯಾ',`ದನ ಕಾಯೋನು' ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಹಲವು ಹಾಡುಗಳಿಗೆ ಧ್ವನಿ ನೀಡಿದ್ದಾರೆ.