ತೂಗುದೀಪ್ ಶ್ರೀನಿವಾಸ್
ತೂಗುದೀಪ್ ಶ್ರೀನಿವಾಸ್ ಜೀವನಚರಿತ್ರೆ
ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ. 1943 ರಲ್ಲಿ ಮುನಿಸ್ವಾಮಿ ಮತ್ತು ಪಾರ್ವತಮ್ಮ ದಂಪತಿಗಳ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡರು. ಶಾಲಾದಿನಗಳಲ್ಲಿ ನಾಟಕಗಳಲ್ಲಿ ಮುಂಚೂಣಿಯಿಂದ ಕಾಣಿಸಿಕೊಳ್ಳುತ್ತಿದ್ದ ಶ್ರೀನಿವಾಸ್ ಮುಂದೆ ಖ್ಯಾತ ನಿರ್ಮಾಪಕ ಎಂ.ಪಿ.ಶಂಕರ್ ತಂಡ ಸೇರಿದರು. ಮೈಸೂರಿನವರೇ ಆದ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿಯವರು ಇವರ ನಾಟಕ ನೋಡಿ ಮೆಚ್ಚಿಕೊಂಡು ತಮ್ಮ ಚಿತ್ರ `ತೂಗುದೀಪ'ದಲ್ಲಿ ಅವಕಾಶ ನೀಡಿದರು . ಆ ಚಿತ್ರದ ಹಾಡುಗಳಿಗೆ ಗಾಯಕ ಪಿ.ಬಿ.ಶ್ರೀನಿವಾಸ ಧ್ವನಿ ನೀಡಿದ್ದರು. ಚಿತ್ರದ ಟೈಟಲ್ ಕಾರ್ಡನಲ್ಲಿ ಇಬ್ಬರು ಶ್ರೀನಿವಾಸ ಹೆಸರುಗಳು ಬೇಡವೆಂದು ಸ್ವಾಮಿಯವರು ಶ್ರೀನಿವಾಸರಿಗೆ ತೂಗುದೀಪ ಶ್ರೀನಿವಾಸ ಎಂದು ಹೆಸರು ನೀಡಿದರು. ಈ ಚಿತ್ರದ ನಂತರ `ಮೇಯರ್ ಮುತ್ತಣ್ಣ',`ಬಂಗಾರದ ಮನುಷ್ಯ',`ಗಂಧದ ಗುಡಿ',ಕಳ್ಳ-ಕುಳ್ಳ',`ಸಾಹಸ ಸಿಂಹ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಪ್ರಮುಖ ಖಳನಟನಾಗಿ ಗುರುತಿಸಿಕೊಂಡರು. ವರನಟ ರಾಜಕುಮಾರ್ರ ಹೆಚ್ಚಿನ ಚಿತ್ರಗಳಲ್ಲಿ ತೂಗುದೀಪರಿಗೆ ಒಂದು ಪಾತ್ರ ಇದ್ದೇ ಇರುತಿತ್ತು.
1973 ರಲ್ಲಿ ಮೀನಾರವನ್ನು ಕೈ ಹಿಡಿದ ತೂಗುದೀಪರಿಗೆ ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರಿದ್ದಾರೆ. ಹಿರಿಯ ಪುತ್ರ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿರಿಯ ಪುತ್ರ ದಿನಕರ್ ತೂಗುದೀಪ ನಿರ್ದೇಶಕರಾಗಿ ಪ್ರಸಿದ್ದರಾಗಿದ್ದಾರೆ.
ಮೂತ್ರಪಿಂಡ ವೈಕಲ್ಯದಿಂದ ಬಳಲಿದ ತೂಗುದೀಪರಿಗೆ ಅವರ ಪತ್ನಿ ಮೀನಾರವರೇ ಕಿಡ್ನಿ ನೀಡಿದ್ದರು. 1995 ಅಕ್ಟೋಬರ್ 16 ರಂದು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು.