twitter

    ವಿ ನಾಗೇಂದ್ರ ಪ್ರಸಾದ್ ಜೀವನಚರಿತ್ರೆ

    ಕನ್ನಡ ಚಿತ್ರಗೀತೆಗಳ ಬರಹಗಾರರಲ್ಲಿ ಪ್ರಸಿದ್ಧ ಹೆಸರು ಗೀತರಚನೆಕಾರ 'ವಿ ನಾಗೇಂದ್ರ ಪ್ರಸಾದ್' ಅವರದು. 'ಈ ಟಚ್ಚಲಿ ಏನೋ ಇದೆ...', ಹಾಗೂ 'ಕಣ್ ಕಣ್ಣ ಸಲಿಗೆ..' ಮುಂತಾದ ಅಸಂಖ್ಯಾತ ಒಂದಕ್ಕಿಂತ ಇನ್ನೊಂದು ವಿಭಿನ್ನ ಹಾಗೂ ವಿಶಿಷ್ಟ ಎಂಬಂತಹ ಹಾಡುಗಳ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮನಗೆದ್ದವರು ನಾಗೇಂದ್ರ ಪ್ರಸಾದ್. ಕೆ ವಿ ಜಯರಾಂ ನಿರ್ದೇಶನದ 'ಗಾಜಿನ ಮನೆ' ಚಿತ್ರಕ್ಕೆ 'ಗಂಧರ್ವ' ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳನ್ನು ಬರೆಯುವ ಮೂಲಕ ತಮ್ಮ ಗೀತಸಾಹಿತ್ಯದ ಪಯಣ ಆರಂಭಿಸಿದವರು ವಿ ನಾಗೇಂದ್ರ ಪ್ರಸಾದ್.

     ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ...' ಹಾಡಿಗೆ 'ರಾಜ್ಯ ಪ್ರಶಸ್ತಿ' ಪಡೆದವರು. ದೀಪಕ್ ನಟನೆಯ 'ಶಿಷ್ಯ' ಹಾಗೂ 'ಅಂಬಿ' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ 'ಶ್ರೀ ಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

    ಇಂಥ ಬಹುರೂಪಿ ಬರಹಗಾರ ನಾಗೇಂದ್ರ ಪ್ರಸಾದ್ ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ತಂದೆ ವೆಂಕಟರಮಣಪ್ಪ, ತಾಯಿ ಚಂದ್ರಮ್ಮ. ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಅಜ್ಜಿಮನೆ ನಾಗಮಂಗಲದಲ್ಲಿ. ನಂತರ ಪ್ರೌಢ ಶಿಕ್ಷಣ, ಪದವಿ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿದ ಇವರು ಸಾಹಿತ್ಯದ ಹಿನ್ನೆಲೆ ಕುಟುಂಬದಿಂದ ಬಂದವರು. ಇವರ ತಾತ ವೆಂಕಟಸುಬ್ಬಯ್ಯನವರು ನಾಟಕಕಾರರಾಗಿದ್ದರು. ಹೀಗಾಗಿ ನಾಟಕ ಹಾಗೂ ರಂಗಭೂಮಿಯ ನಂಟು ಹರಿದು ಬಂತು. ಹೈಸ್ಕೂಲ್ ನಲ್ಲಿದ್ದಾಗಲೇ ಇವರು ಬರೆದ ಕವಿತಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.

    ನಂತರ ಅಭಿನಯ ತರಂಗ ನಾಟಕಶಾಲೆಯಲ್ಲಿ ಡಿಪ್ಲೋಮಾ ಮುಗಿಸಿದರು. ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಅಭಿನಯಿಸಿದ ಪ್ರಸಾದರು 15 ರಿಂದ 20 ಬೀದಿ ನಾಟಕಗಳನ್ನು ರಚಿಸಿದ್ದಾರರೆ. ಹಾಗೇ, 15 ರೇಡಿಯೋ ನಾಟಕಗಳ ರಚನೆ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ. ನಂತರ ಸಿನಿಮಾಗೆ ಹಾಡು ಬರೆಯುವ ಅವಕಾಶ ದೊರೆಯಿತು. ಕೆ ವಿ ಜಯರಾಂ ನಿರ್ದೇಶನ ಹಾಗೂ ಗಂಧರ್ವ ಸಂಗೀತ ನಿರ್ದೇಶನದ 'ಗಾಜಿನ ಮನೆ' ಚಿತ್ರಕ್ಕೆ ಎಲ್ಲಾ ಗೀತೆಗಳಿಗೆ ಸಾಹಿತ್ಯ ಬರೆಯುವ ಮೂಲಕ ಇವರು ಚಿತ್ರಗೀತೆಗಳ ರಚನೆ ಪ್ರಾರಂಭಿಸಿದರು.

     ನಂತರ ಒಂದಾದ ಮೇಲೆ ಇನ್ನೊಂದರಂತೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರುಗಳಾದ ಗುರುಕಿರಣ್, ವಿ ಹರಿಕೃಷ್ಣ, ಹಂಸಲೇಖ, ಇಳೆಯರಾಜ, ಸಾಧು ಕೋಕಿಲ, ಎಲ್ ಎನ್ ಶಾಸ್ತ್ರಿ ಮುಂತಾದವರ ಸ್ವರಸಂಯೋಜನೆಗಳಲ್ಲಿ 300 ಕ್ಕೂ ಮೀರಿದ ಚಿತ್ರಗಳಿಗೆ 1000ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ.

    ಕನ್ನಡ ಚಿತ್ರನಿರ್ದೇಶಕ ಸಂಘದ ಸೆಕ್ರಟೆರಿಯಾಗಿರುವ ಇವರು ಹೊಸಪ್ರತಿಭೆಗಳಿಗೆ ಚಿತ್ರನಿರ್ದೇಶನ ತರಬೇತಿಯನ್ನು ನೀಡುತ್ತಿದ್ದಾರೆ.

    ಸುಮಾರು 500ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಗೌರವಕ್ಕೆ ಪ್ರಾಪ್ತರಾದ ಕೀರ್ತಿ ಇವರದು. `ಕನ್ನಡ ಮಾಣಿಕ್ಯ' ಎಂಬ ಮಾಸಿಕ ಪತ್ರಿಕೆಗೆ ಮುಖ್ಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X