ಸಂಜಯ್ ದತ್ ಕುರಿತು ನೀವು ತಿಳಿಯಬೇಕಾದ 10 ಸಂಗತಿಗಳು
ಸುನೀಲ್ ದತ್-ನರ್ಗಿಸ್ ದತ್ ದಂಪತಿಯ ಮಗನಾಗಿದ್ದ ಸಂಜಯ್ ಸಣ್ಣ ವಯಸ್ಸಿನಲ್ಲಿಯೇ ಐಷಾರಾಮಿ ಜೀವನ ಕಂಡವರು. ಮಗನ ಆಸೆಗಳನ್ನು ಕ್ಷಣ ಮಾತ್ರದಲ್ಲಿ ಪೂರೈಸುತ್ತಿದ್ದ ಪೋಷಕರ ಆಶ್ರಯದಲ್ಲಿ ಬೆಳೆದ ಸಂಜಯ್ ಬಹಳ ಬೇಗ ದುಶ್ಚಟಗಳಿಗೆ ಆಕರ್ಷಿತರಾದರು.
ಹತ್ತ ವರ್ಷ ತುಂಬುವಷ್ಟರಲ್ಲಿ ಸಿಗರೇಟ್ ಸೇದುವ ಅಭ್ಯಾಸ ಬೆಳೆಸಿಕೊಂಡರು. ಮಗನಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ಕಾರಣಕ್ಕೆ ಬೋರ್ಡಿಂಗ್ ಸ್ಕೂಲ್ಗೆ ಸೇರಿಸಲಾಯಿತು. ಸುಮಾರು ಹತ್ತು ವರ್ಷಗಳ ಕಾಲ ಬೋರ್ಡಿಂಗ್ ಶಾಲೆಯಲ್ಲಿದ್ದ ಸಂಜಯ್, ಹೆಚ್ಚು ಹೆಚ್ಚು ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿದ್ದರು. ಡ್ರಗ್ಸ್ ಸೇವನೆಯ ಆರಂಭಿಸಿದ್ದರು. ಒಂದು ವರ್ಷ ಯುಎಸ್ನಲ್ಲಿ ಮಾದಕ ವ್ಯಸನಿ ಕೇಂದ್ರದಲ್ಲಿಯೂ ಇದ್ದು ಬಂದರು.
ಹೀಗೆ, ಜೀವನದ ಆರಂಭಿಕ ದಿನಗಳಲ್ಲಿಯೇ ದಿಕ್ಕು ತಪ್ಪಿದ್ದ ಸಂಜಯ್ ದತ್, ನಂತರವೂ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಜೈಲು ಶಿಕ್ಷೆ ಸಹ ಅನುಭವಿಸಬೇಕಾಯಿತು. ದತ್ ಜೀವನದ ಕುರಿತು 'ಸಂಜು' ಎಂಬ ಹೆಸರಿನಲ್ಲಿ ಸಿನಿಮಾ ಬಂದು ಯಶಸ್ಸು ಕಂಡಿದೆ. ಆದರೂ, ಮುನ್ನಾಭಾಯ್ ಬಗ್ಗೆ ನೀವು ತಿಳಿಯದ ಆಸಕ್ತಿಕರ ವಿಷಯಗಳು ಇಲ್ಲಿವೆ. ಮುಂದೆ ಓದಿ...

ಪತ್ರಿಕೆಯಲ್ಲಿ ಬಂದ ಸಲಹೆಯಿಂದ ನಾಮಕರಣ
ಸುನೀಲ್ ದತ್ ಮತ್ತು ನರ್ಗಿಸ್ ದತ್ ಪೋಷಕರಾದಾಗ ಮಗನಿಗೆ ಏನೆಂದು ಹೆಸರಿಡಬಹುದು ಎಂದು ಪತ್ರಿಕೆಯಲ್ಲಿ ಸಲಹೆ ಕೇಳಿದ್ದರು. ಅಂದು ಪತ್ರಿಕೆಯಲ್ಲಿ ಬಂದ ಸಲಹೆಗಳ ಪೈಕಿ ಸಂಜಯ್ ಎನ್ನುವ ಹೆಸರನ್ನು ಆಯ್ಕೆ ಮಾಡಿ ಸಂಜಯ್ ದತ್ ಎಂದು ನಾಮಕರಣ ಮಾಡಿದ್ದರು.

9 ವರ್ಷದಲ್ಲೇ ಸಿಗರೇಟ್ ಸೇದಿದ್ದರು
ಸಂಜಯ್ 9 ವರ್ಷ ವಯಸ್ಸಿನಲ್ಲಿಯೇ ಸಿಗರೇಟ್ ಸೇದಿದ್ದರು. ಅಪ್ಪ ಮತ್ತು ಸ್ನೇಹಿತರು ಪಾರ್ಟಿ ಮಾಡಿದ ನಂತರ ಅಲ್ಲಿ ಬಿದ್ದಿ ಸಿಗರೇಟ್ ತುಂಡಗಳನ್ನು ಸೇದಿದ್ದರು ಎಂದು ಸ್ವತಃ ಸಂಜಯ್ ದತ್ ಹೇಳಿಕೊಂಡಿದ್ದಾರೆ. ಒಮ್ಮೆ ಸ್ನಾನದ ಕೋಣೆಯಲ್ಲಿ ಸಂಜಯ್ ಸಿಗರೇಟ್ ಸೇದುವುದನ್ನು ಕಂಡ ಸುನೀಲ್ ದತ್ ಶೂನಲ್ಲಿ ಹೊಡೆದಿದ್ದರಂತೆ.

ತಾಯಿಗಾಗಿ ಖಾಲಿ ಕುರ್ಚಿ ಇಟ್ಟಿದ್ದ ಸಂಜಯ್
ಸಂಜಯ್ ಚೊಚ್ಚಲ ಸಿನಿಮಾ ರಾಕಿ ಬಿಡುಗಡೆ ಸಮಯದಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ನರ್ಗಿಸ್ ಆರೋಗ್ಯ ತೀರಾ ಹದಗೆಟ್ಟಿತು. ಮಗನನ್ನು ಬೆಳ್ಳಿ ಪರದೆ ಮೇಲೆ ನೋಡಬೇಕು ಎನ್ನುವ ಆಸೆ ತಾಯಿ ಪಾಲಿಗೆ ಸಿಗಲಿಲ್ಲ. ರಾಕಿ ಚಿತ್ರದ ರಿಲೀಸ್ಗೂ 5 ದಿನ ಮುಂಚೆ ನರ್ಗಿಸ್ ಕೊನೆಯುಸಿರೆಳೆದರು. ಆಮೇಲೆ ರಾಕಿ ಸಿನಿಮಾದ ಪ್ರೀಮಿಯರ್ ಪ್ರದರ್ಶನದ ವೇಳೆ ಮುಂದಿನ ಸಾಲಿನಲ್ಲಿ ಒಂದು ಕುರ್ಚಿಯನ್ನು ಖಾಲಿ ಇಟ್ಟು ತಾಯಿ ನೋಡುತ್ತಿದ್ದಾರೆ ಎಂದು ನಂಬಿದ್ದರು.

ರಿಷಿ ಕಪೂರ್ಗೆ ಹೊಡೆಯಲು ಮನೆಗೆ ಹೋಗಿದ್ದ ದತ್
ನಟಿ ಟೀನಾ ಜೊತೆ ಪ್ರೀತಿಯಲ್ಲಿದ್ದರು. ಆದರೆ, ಸಂಜಯ್ ದತ್ ಮಾದಕ ವ್ಯಸನ ಹಾಗೂ ಅತಿಯಾದ ಮದ್ಯ ಸೇವನೆಯಿಂದ ಬೇಸತ್ತಿದ್ದ ಟೀನಾ ಬ್ರೇಕ್ ಅಪ್ ಮಾಡಿಕೊಂಡರು. ಈ ನಡುವೆ ರಿಷಿ ಕಪೂರ್ ಜೊತೆ ಟೀನಾ ಸಿನಿಮಾ ಮಾಡುವ ಸಮಯದಲ್ಲಿ ಅವರಿಬ್ಬರು ನಡುವೆ ಸಂಬಂಧ ಇದೆ ಎಂಬ ವದಂತಿ ಹಬ್ಬಿತ್ತು. ಈ ಸಮಯದಲ್ಲಿ ತೀವ್ರವಾಗಿ ಕೋಪಗೊಂಡಿದ್ದ ಸಂಜಯ್ ದತ್, ರಿಷಿ ಕಪೂರ್ ಮನೆಗೆ ತೆರಳಿ ಹೊಡೆಯಲು ನಿರ್ಧರಿಸಿದ್ದರು. ಆದರೆ, ಮನೆಗೆ ಹೋದ ಸಮಯದಲ್ಲಿ ರಿಷಿ ಕಪೂರ್ ಪ್ರೇಯಸಿ ನೀತು ಕಪೂರ್ ಹೇಗೋ ಅದನ್ನು ತಪ್ಪಿಸಿದರು. ಈ ಘಟನೆ ಬಗ್ಗೆ ಸಂಜಯ್ ದತ್ ಆಪ್ತ ಸ್ನೇಹಿತ ಗುಲ್ಶಾನ್ ಗ್ರೋವರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಎರಡು ದಿನದ ಬಳಿಕ ಎದ್ದಿದ್ದರು
ಒಂದು ದಿನ ಹೆರಾಯಿನ್ (ಮಾದಕ ವಸ್ತು) ಸೇವಿಸಿ ಎರಡು ದಿನಗಳ ಕಾಲ ನಿದ್ದೆಯಿಂದ ಎದ್ದಿರಲಿಲ್ಲ ಎಂಬ ಘಟನೆಯನ್ನು ಸ್ವತಃ ದತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ''ಹೆರಾಯಿನ್ ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಂಡಿದ್ದೆ. ಆಮೇಲೆ ಎಚ್ಚರ ಆಯಿತು. 'ಬಾಬಾ ನೀನು ಎರಡು ದಿನದ ಬಳಿಕ ಎಚ್ಚರಗೊಂಡಿದ್ದೀರಾ' ಎಂದು ಅಳಲು ಪ್ರಾರಂಭಿಸಿದ. ತೀವ್ರ ಗಾಬರಿಯಾದೆ, ಇದನ್ನು ನಿಲ್ಲಿಸದಿದ್ದರೆ ನಾನು ಸಾಯುತ್ತೇನೆ ಎಂಬ ಭಯ ಹುಟ್ಟಿಕೊಂಡಿತು. ಆಮೇಲೆ ನನ್ನ ತಂದೆ ಬಳಿ ಹೋಗಿ ನನ್ನನ್ನು ಉಳಿಸಲು ಕೇಳಿಕೊಂಡೆ. ಆಮೇಲೆ ಯುಎಸ್ಗೆ ಹೋದೆ'' ಎಂದು ದತ್ ಹೇಳಿಕೊಂಡಿದ್ದರು.

ಓದು ತಪ್ಪಿಸಿಕೊಳ್ಳಲು ನಟನೆ ಆರಂಭ
ಮೊದಲಿನಿಂದಲೂ ಶಿಕ್ಷಣದ ಮೇಲೆ ಆಸಕ್ತಿ ಹೊಂದದ ಸಂಜಯ್ ದತ್, ಓದುವುದನ್ನು ತಪ್ಪಿಸಿಕೊಳ್ಳಲು ತಮಗೆ ಇಷ್ಟವಿಲ್ಲದಿದ್ದರೂ ನಟನೆ ಆರಂಭಿಸಿದರು. ಆದರೂ ತಂದೆಯ ಒತ್ತಾಯಕ್ಕೆ ಸಿಲುಕಿ ಪದವಿ ಮುಗಿಸಿದರು. ತಮ್ಮ ಚೊಚ್ಚಲ ಸಿನಿಮಾ 'ರಾಕಿ' ಸಮಯದಲ್ಲಿ ಅದಾಗಲೇ ಸಂಜಯ್ ದತ್ ಮಾದಕ ವ್ಯಸನಿ ಆಗಿಬಿಟ್ಟಿದ್ದರು. ಮಗ ಡ್ರಗ್ಸ್ ವ್ಯಸನಿ ಆಗಿರುವುದು ಆರಂಭದಲ್ಲಿ ತಾಯಿ ನರ್ಗಿಸ್ಗೆ ತಿಳಿದಿದ್ದರೂ, ಸುನೀಲ್ ದತ್ ಅವರಿಗೆ ಹೇಳಿರಲಿಲ್ಲ. ಪ್ರೀತಿಯಿಂದ ಅದನ್ನು ಬಿಡಿಸಬಹುದು ಎಂದು ನಂಬಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.

ಸಂಜತ್ ದತ್ಗೆ ಮೂರು ಪತ್ನಿಯರು
1987ರಲ್ಲಿ ನಟಿ ರಿಚಾ ಶರ್ಮಾ ಜೊತೆ ಸಂಜಯ್ ದತ್ ವಿವಾಹವಾದರು. 1996ರಲ್ಲಿ ರಿಚಾ ಬ್ರೈನ್ ಟ್ಯೂಮರ್ನಿಂದ ಸಾವನ್ನಪಿದರು. ಒಬ್ಬ ಮಗಳಿದ್ದು, ಯುಎಸ್ನಲ್ಲಿ ವಾಸವಾಗಿದ್ದಾರೆ. 1998ರಲ್ಲಿ ರಿಯಾ ಪಿಳ್ಳೈ ಎಂಬ ಮಾಡೆಲ್ ಜೊತೆ ಎರಡನೇ ವಿವಾಹವಾದರು. 2008ರಲ್ಲಿ ಡಿವೋರ್ಸ್ ಆಯಿತು. ಅದೇ ವರ್ಷ ಮಾನ್ಯತಾ ಜೊತೆ ದತ್ ಮೂರನೇ ಮದುವೆ ಆದರು. ದತ್ ಮತ್ತು ಮಾನ್ಯತಾ ದಂಪತಿಗೆ ಇಬ್ಬರು ಮಕ್ಕಳು.

'ಖಳನಾಯಕ್' ದೊಡ್ಡ ಸಕ್ಸಸ್
1993ರ ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಂಜಯ್ ದತ್ ಜೈಲು ಸೇರಿದ್ದರು. ಆ ಸಮಯದಲ್ಲಿ ಖಳನಾಯಕ್ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಸಕ್ಸಸ್ ಕಂಡಿತ್ತು. 'ನಾನು ಖಳನಾಯಕ್' ಎಂಬ ಸಾಲಿನಲ್ಲಿ ಸಿನಿಮಾ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು.

ಶಾರೂಖ್ ಮಾಡಬೇಕಿತ್ತು ಮುನ್ನಾಭಾಯ್
ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಅವಕಾಶ ಮೊದಲು ಶಾರೂಖ್ಗೆ ಹೋಗಿತ್ತು. ಆ ಬಳಿಕ ಅದು ಸಂಜಯ್ ದತ್ ಪಾಲಿಗೆ ಬಂದಿತ್ತು. ಅದೃಷ್ಟವಶಾತ್ ಈ ಸಿನಿಮಾ ದೊಡ್ಡ ಹಿಟ್ ಆಯಿತು. ದತ್ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ ಸಹ ಲಭಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಕೊಡಲಿಲ್ಲ ಸುಪ್ರೀಂ
2009ರಲ್ಲಿ ಸಮಾಜವಾದಿ ಪಕ್ಷ ಸೇರಿದ ಸಂಜಯ್ ದತ್, ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ, ಸಂಜಯ್ ವಿರುದ್ಧ ಪ್ರಕರಣ ಇದ್ದ ಕಾರಣ ಸುಪ್ರೀಂಕೋರ್ಟ್ ದತ್ ಸ್ಪರ್ಧೆಯನ್ನು ಅನರ್ಹಗೊಳಿಸಿತು.


Click it and Unblock the Notifications











