ಕುತೂಹಲ ಕೆರಳಿಸಿವೆ ಈ 10 ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಕನ್ನಡ ಚಿತ್ರಗಳು
ಎಲ್ಲೆಲ್ಲೂ ಈಗ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಬಾಲಿವುಡ್ ಮಂದಿ ಕೂಡ ಎರಡೆರಡು ಭಾಗಗಳಲ್ಲಿ ಕಥೆಗಳನ್ನು ಹೇಳಲು ಶುರು ಮಾಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ಮುಂದುವರೆದ ಭಾಗವನ್ನು ತೆರೆಗೆ ತರುತ್ತಿದ್ದಾರೆ. ಸೀಕ್ವೆಲ್ ಜೊತೆಗೆ ಪ್ರೀಕ್ವೆಲ್ ಸಿನಿಮಾಗಳು ಬರ್ತಿದೆ. ಸದ್ಯ ಸ್ಯಾಂಡಲ್ವುಡ್ ಮಂದಿ ಕೂಡ ಇದೇ ಲೆಕ್ಕಾಚಾರದಲ್ಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳಿಗೆ ದೊಡ್ಡಮಟ್ಟದಲ್ಲಿ ಅಡಿಗಲ್ಲು ಹಾಕಿದ್ದು 'KGF' ಸರಣಿ. ಪ್ರಶಾಂತ್ ನೀಲ್ ಪ್ರಯತ್ನಕ್ಕೆ ಪ್ರೇರಣೆಯಾಗಿದ್ದು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ. ಇದೀಗ ಸಣ್ಣ ಪುಟ್ಟ ಸಿನಿಮಾಗಳ ಸೀಕ್ವೆಲ್ ಬರ್ತಿವೆ. ಕೆಲ ಸೀಕ್ವೆಲ್ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರೂ ತೆರೆಗೆ ಬರುವುದು ಗ್ಯಾರೆಂಟಿ ಇಲ್ಲ. ಇನ್ನು ಕೆಲವು ಬಹಳ ನಿರೀಕ್ಷೆ ಹುಟ್ಟಿಸಿವೆ.

1. ಕಾಂತಾರ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಬಂದ 'ಕಾಂತಾರ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಸದ್ಯ ಚಿತ್ರದ ಪ್ರೀಕ್ವೆಲ್ ಕೆಲಸಗಳು ನಡೀತಿದೆ. ರಿಷಬ್ ಶೆಟ್ಟಿ ಮತ್ತೆ ಸಿನಿಮಾ ನಿರ್ದೇಶಿಸಿ ನಟಿಸಲಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿ ಮುಹೂರ್ತ ಕೂಡ ನೆರವೇರಿಸಲಾಗಿದೆ. 'ಕಾಂತಾರ' ಚಾಪ್ಟರ್-1 ಹೆಸರಿನಲ್ಲಿ ಸಿನಿಮಾ ತೆರೆಗೆ ಬರಲಿದೆ.
2. ರಿಚರ್ಡ್ ಆಂಟೊನಿ
ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಉಳಿದವರು ಕಂಡಂತೆ' ಸಿನಿಮಾ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತ್ತು. ಬಾಕ್ಸಾಫೀಸ್ನಲ್ಲಿ ಸಿನಿಮಾ ಹಿಟ್ ಆಗದಿದ್ದರು ರಿಚರ್ಡ್ ಆಂಟನಿ ಪಾತ್ರ ಸಿನಿರಸಿಕರಿಗೆ ಬಹಳ ಇಷ್ಟವಾಗಿತ್ತು. ಈಗಾಗಲೇ ಸಿಂಪಲ್ ಸ್ಟಾರ್ 'ಉಳಿದವರು ಕಂಡಂತೆ' ಪ್ರೀಕ್ವೆಲ್ 'ರಿಚರ್ಡ್ ಆಂಟನಿ' ಚಿತ್ರಕ್ಕೆ ಕೈಹಾಕಿದ್ದಾರೆ. ಹೊಂಬಾಳೆ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಲಿದೆ.

3. ಕಬ್ಜ-2
ಕಳೆದ ವರ್ಷ ಆರ್. ಚಂದ್ರು ನಿರ್ದೇಶನದಲ್ಲಿ ಬಂದಿದ್ದ 'ಕಬ್ಜ' ಸಿನಿಮಾ ಭಾರೀ ಸದ್ದು ಮಾಡಿತ್ತು. ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದರೂ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ಕ್ಲೈಮ್ಯಾಕ್ಸ್ನಲ್ಲಿ ಸೀಕ್ವೆಲ್ ಬಗ್ಗೆ ಸುಳಿವು ನೀಡಿದ್ದರು. ಇದೀಗ ಅಧಿಕೃತವಾಗಿ ಚಿತ್ರವನ್ನು ಘೋಷಣೆ ಮಾಡಲಾಗಿದೆ. ಆರ್. ಸಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಆರ್. ಚಂದ್ರು ಸಿನಿಮಾ ಘೋಷಣೆ ಮಾಡಿದ್ದಾರೆ.
4. ಬೆಲ್ ಬಾಟಂ-2
ರಿಷಬ್ ಶೆಟ್ಟಿ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ 'ಬೆಲ್ ಬಾಟಂ'. ಜಯತೀರ್ಥ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈಗಾಗಲೇ ಅದೇ ತಂಡ ಸೀಕ್ವೆಲ್ ಘೋಷಣೆ ಮಾಡಿ ಮುಹೂರ್ತ ಮಾಡಿತ್ತು. ಆ ಸಿನಿಮಾಗೂ ಮುನ್ನ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಮಾಡಿ ಸೂಪರ್ ಸಕ್ಸಸ್ ಕಂಡರು. ಹಾಗಾಗಿ 'ಬೆಲ್ಬಾಟಂ'-2 ತಡವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಬರೋಕು ಪಕ್ಕಾ ಎನ್ನಲಾಗ್ತಿದೆ.
5. ಕಿರಾತಕ-2
ಯಶ್ ನಟನೆಯ 'ಕಿರಾತಕ-2' ಸಿನಿಮಾ ನಿಂತೇ ಹೋಯ್ತು ಎಂದು ಎಲ್ಲರೂ ಅಂದುಕೊಂಡಿದ್ದಾರೆ. 15 ದಿನಗಳ ಕಾಲ ಚಿತ್ರೀಕರಣದ ಬಳಿಕ ಸಿನಿಮಾ ನಿಂತು ಹೋಗಿತ್ತು. 'KGF' ಸರಣಿ ಬಳಿಕ ಯಶ್ ಈ ಸಿನಿಮಾ ಬೇಡ ಎಂದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಅದೇ ಕಾರಣಕ್ಕೆ 15 ದಿನಗಳ ಚಿತ್ರೀಕರಣದ ಹಣವನ್ನು ಕೂಡ ನಿರ್ಮಾಪಕರಿಗೆ ಮರಳಿಸಿದ್ದಾರೆ ಎನ್ನಲಾಗಿತ್ತು. ಆದರೆ ಯಶ್ ಇನ್ನು ಆ ಕಥೆ ಬಗ್ಗೆ ಆಸಕ್ತಿ ವಹಿಸಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.
6. KGF-3
ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ನಲ್ಲಿ ಬಂದ 'KGF' ಸರಣಿ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಚಾಪ್ಟರ್-2 ಕ್ಲೈಮ್ಯಾಕ್ಸ್ನಲ್ಲಿ ಮತ್ತೊಂದು ಸೀಕ್ವೆಲ್ ಬಗ್ಗೆ ಚಿತ್ರತಂಡ ಸುಳಿವು ನೀಡಿತ್ತು. ಈ ಬಗ್ಗೆ ಪ್ರಶಾಂತ್ ನೀಲ್ ಸಹ ಮಾತನಾಡಿದ್ದಾರೆ. ಆದರೆ ಯಾವಾಗ ಸಿನಿಮಾ ಸೆಟ್ಟೇರುತ್ತದೆ ಎನ್ನುವುದು ಮಾತ್ರ ಗೊತ್ತಿಲ್ಲ.
7. ಉಗ್ರಂ ವೀರಂ
ಪ್ರಶಾಂತ್ ನೀಲ್ ನಿರ್ದೇಶನದ ಚೊಚ್ಚಲ ಸಿನಿಮಾ 'ಉಗ್ರಂ'. ಇತ್ತೀಚೆಗೆ ಇದೇ ಕಥೆಯನ್ನು ಬದಲಿಸಿ 'ಸಲಾರ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಆದರೆ ಶ್ರೀಮುರಳಿ ಜೊತೆ ಪ್ರಶಾಂತ್ ನೀಲ್ ಸೀಕ್ವೆಲ್ ಘೋಷಿಸಿದ್ದರು. 'ಉಗ್ರಂ ವೀರಂ' ಟೈಟಲ್ ಎಂದಿದ್ದರು. ಆದರೆ ಬಳಿಕ ಆ ಸಿನಿಮಾ ಸುದ್ದಿ ಬರಲೇಯಿಲ್ಲ.
8. ನವಗ್ರಹ-2
ದಿನಕರ್ ನಿರ್ದೇಶನದಲ್ಲಿ ಕನ್ನಡದ ಖ್ಯಾತ ಖಳನಟರ ಮಕ್ಕಳು ನಟಿಸಿದ್ದ 'ನವಗ್ರಹ' ಸಿನಿಮಾ ಗಮನ ಸೆಳೆದಿತ್ತು. ಚಿತ್ರದ ಸೀಕ್ವೆಲ್ ಮಾಡಲು ಚಿತ್ರತಂಡ ಅಂದುಕೊಂಡಿದ್ದು ಸುಳ್ಳಲ್ಲ. ದರ್ಶನ್ ಅಭಿಮಾನಿಗಳು ಇಂತಾದೊಂದು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ದಿನಕರ್ ಕೂಡ ಈ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಸಿನಿಮಾ ನಿರ್ಮಾಣ ಪ್ರಯತ್ನ ಮಾತ್ರ ಇನ್ನು ಶುರುವಾಗಿಲ್ಲ.
9. ಟಗರು-2
ದುನಿಯಾ ಸೂರಿ 'ಟಗರು' ಕ್ಲೈಮ್ಯಾಕ್ಸ್ನಲ್ಲೇ ಸೀಕ್ವೆಲ್ ಸುಳಿವು ಕೊಟ್ಟಿದ್ದರು. ಸಣ್ಣ ಟೀಸರ್ ಸಹ ಬಿಡುಗಡೆ ಮಾಡಿದ್ದರು. ಆದರೆ ಬಳಿಕ ಆ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ ಶಿವಣ್ಣ ಮಾತ್ರ ಮತ್ತೆ 'ಟಗರು' ಶಿವನಾಗಿ ಅಬ್ಬರಿಸಲು ಸಿದ್ಧರಿದ್ದಾರೆ. ಯಾವಾಗ ಬೇಕಿದ್ದರೂ ಸಿನಿಮಾ ಮಾಡಲು ಸಿದ್ಧ ಎನ್ನುತ್ತಿದ್ದಾರೆ.
10. ಭೈರತಿ ರಣಗಲ್
ನರ್ತನ್ ನಿರ್ದೇಶನದಲ್ಲಿ ಶಿವಣ್ಣ, ಶ್ರೀಮುರಳಿ ನಟನೆಯ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಶಿವಣ್ಣನ 'ಭೈರತಿ ರಣಗಲ್' ಪಾತ್ರ ಬಹಳ ಗಮನ ಸೆಳೆದಿತ್ತು. ಪ್ರೀಕ್ವೆಲ್ ಮಾಡುವಂತೆ ಅಭಿಮಾನಿಗಳು ಕೇಳಿದ್ದರು. ಇದೀಗ ಸಿನಿಮಾ ನಿರ್ಮಾಣ ನಡೀತಿದೆ. ವರ್ಷಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











