15 Years of Hudugaru: ರೀಮೆಕ್ ರೈಟ್ಸ್ ಖರೀದಿಸಿದ್ರಾ ಸುದೀಪ್? 'ಹುಡುಗರು' ಚಿತ್ರ ಗೆಲ್ಲಿಸಿದ್ದು ಪುನೀತ್ ಅಲ್ಲ ಯೋಗಿ!
ಫ್ಯಾಮಿಲಿ ಪ್ರೇಕ್ಷಕರು ಮೆಚ್ಚುವಂತಹ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಹೆಚ್ಚು ನಟಿಸಿದ್ದರು. 'ಹುಡುಗರು' ಕೂಡ ಅದೇ ಸಾಲಿಗೆ ಸೇರುವ ಸಿನಿಮಾ. ತಮಿಳಿನ 'ನಾಡೋಡಿಗಳ್' ರೀಮೆಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಕಟ್ಟಿಕೊಡಲಾಗಿತ್ತು. 2011, ಮೇ 5ರಂದು ತೆರೆಗೆ ಬಂದಿದ್ದ ಸಿನಿಮಾ ಇದೀಗ 15 ವರ್ಷ ಪೂರೈಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.
40 ಚಿತ್ರಮಂದಿರಗಳಲ್ಲಿ 'ಹುಡುಗರು' ಸಿನಿಮಾ 50 ದಿನ ಪ್ರದರ್ಶನ ಕಂಡು ಗಮನ ಸೆಳೆದಿತ್ತು. ಪುನೀತ್ ರಾಜ್ಕುಮಾರ್ ಜೊತೆಗೆ ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಲೂಸ್ ಮಾದ ಯೋಗಿ, ರಂಗಾಯಣ ರಘು ಹಾಗೂ ಸಾಧು ಕೋಕಿಲ ಚಿತ್ರದಲ್ಲಿ ನಟಿಸಿದ್ದರು. ಇಬ್ಬರು ಪ್ರೇಮಿಗಳನ್ನು ಒಂದು ಮಾಡಲು ಮೂವರು ಸ್ನೇಹಿತರು ನಡೆಸುವ ಹೋರಾಟದ ಕಥೆ ಚಿತ್ರದಲ್ಲಿತ್ತು. 'ಹುಡುಗರು' ಚಿತ್ರದಲ್ಲಿ ಯೋಗಿ ನಟನೆ ಎಲ್ಲರಿಗೂ ಇಷ್ಟವಾಗಿತ್ತು.

"ಈ ಮೂವರಲ್ಲಿ ಚಿತ್ರವನ್ನು ಗೆಲ್ಲಿಸಿದ್ದು ಪುನೀತ್ ಅಲ್ಲ, ಅದು ಯೋಗೇಶ್. ನಾನು ಅವನ ಅಭಿಮಾನಿ" ಎಂದು ಸ್ವತಃ ರಾಘವೇಂದ್ರ ರಾಜ್ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದರು. "ನಮ್ಮ ಪುನೀತ್ಗೆ ಯೋಗೇಶ್ ಜತೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಬಯಕೆಯಿದೆ. ಆತನೀಗ ಯೋಗಿ ಫ್ಯಾನ್ ಆಗಿ ಬಿಟ್ಟಿದ್ದಾನೆ" ಎಂದಿದ್ದರು.
2009ರಲ್ಲಿ ಸಮುದ್ರಖನಿ ತಮಿಳಿನಲ್ಲಿ 'ನಾಡೋಡಿಗಳ್' ಸಿನಿಮಾ ಕಟ್ಟಿಕೊಟ್ಟಿದ್ದರು. ಶಶಿಕುಮಾರ್ ಎಂಬುವವರು ಹೀರೊ ಆಗಿ ನಟಿಸಿದ್ದರು. ಯಾವುದೇ ಬಿಲ್ಡಪ್ ಇಲ್ಲದೇ ಸೀದಾ ಸಾದಾ ಹುಡುಗರ ಕಥೆ ಅದು. ಆಗ ಕನ್ನಡದಲ್ಲಿ ರೀಮೆಕ್ ಸಿನಿಮಾಗಳ ಹಾವಳಿ ಜೋರಾಗಿತ್ತು. ಈ ಸಿನಿಮಾ ಮೆಚ್ಚಿ ಕನ್ನಡದಲ್ಲಿ ಸುದೀಪ್ ರೀಮೆಕ್ ಮಾಡಲು ಪ್ರಯತ್ನಿಸಿದ್ದರು ಎಂದು ಸುದ್ದಿ ಆಗಿತ್ತು. 40 ಲಕ್ಷಕ್ಕೆ ರೀಮೆಕ್ ರೈಟ್ಸ್ ಖರೀದಿಸಿದ್ದಾರೆ ಎನ್ನಲಾಗಿತ್ತು. ಬಳಿಕ ಏನಾಯ್ತೋ ಏನೊ ಗೊತ್ತಿಲ್ಲ, ಪುನೀತ್ ರಾಜ್ಕುಮಾರ್ ಆ ಚಿತ್ರದಲ್ಲಿ ನಟಿಸಿದ್ದರು.

ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್ಕುಮಾರ್ 'ಹುಡುಗರು' ಸಿನಿಮಾ ನಿರ್ಮಾಣ ಮಾಡಿದ್ದರು. ವಿ. ಹರಿಕೃಷ್ಣ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿತ್ತು. ಚಿತ್ರದುರ್ಗ, ಶ್ರವಣ ಬೆಳಗೊಳ, ಮೇಲುಕೋಟೆ, ಮೈಸೂರು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು.
'ಹುಡುಗರು' ಚಿತ್ರಕ್ಕೆ ಯೋಗರಾಜ್ ಭಟ್ ಕೆಲ ಟೈಟಲ್ಗಳನ್ನು ಸೂಚಿಸಿದ್ದರು. 'ಪಟಾಲಂ' ಹಾಗೂ 'ದೋಸ್ತ್' ಎಂಬ ಮತ್ತೆರಡು ಟೈಟಲ್ಗಳನ್ನು ಕೊಟ್ಟಿದ್ದರು. ಅಂತಿಮವಾಗಿ 'ಹುಡುಗರು' ಫೈನಲ್ ಆಗಿತ್ತು. ಮುಂದೆ ಸಮುದ್ರಖನಿ ಕನ್ನಡದಲ್ಲಿ 'ಯಾರೇ ಕೂಗಾಡಲಿ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಆಗ 'ಹುಡುಗರು' ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು ಎಂದು ನಿರ್ದೇಶಕ ಹೇಳಿಕೊಂಡಿದ್ದರು.
ನಮಗಿಂತ ನೀವು ಕನ್ನಡದಲ್ಲಿ 'ಹುಡುಗರು' ಸಿನಿಮಾ ಚೆನ್ನಾಗಿ ಮಾಡಿದ್ದೀರಾ.. ಈ ಸಿನಿಮಾ ನೋಡುತ್ತಿದ್ದರೆ ತಮಿಳಿನಲ್ಲಿ ಮತ್ತೊಮ್ಮೆ ರೀಮೆಕ್ ಮಾಡಬೇಕು ಎನಿಸುತ್ತೆ ಎಂದು ಹೇಳಿದ್ದಾರೆ ಕೆ. ಮಾದೇಶ್ ಫಿಲ್ಮಿಬೀಟ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು. 'ಹುಡುಗರು' ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಯಾವುದೇ ಜಾತ್ರೆ ಅಂದ್ರು ಇವತ್ತಿಗೂ 'ಏನ್ ಚೆಂದಾನೆ ಹುಡುಗಿ' ಹಾಡು ನೆನಪಿಸಿಕೊಳ್ಳುತ್ತಾರೆ.
ಐಟಂ ಸಾಂಗ್ 'ತೊಂದ್ರೆ ಇಲ್ಲ ಪಂಕಜಾ' ಹಿಟ್ ಆಗಿತ್ತು. ಆ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಜಯಂತ್ ಕಾಯ್ಕಿಣಿ ಬರೆದ 'ನೀರಲ್ಲಿ ಸಣ್ಣ ಅಲೆಯೊಂದು' ಸಾಂಗ್ ಕೂಡ ಸಿನಿರಸಿಕರ ಫೇವರಿಟ್ ಎನಿಸಿಕೊಂಡಿದೆ. 'ಶಂಭೋ ಶಿವ ಶಂಭೋ' ಸಾಂಗ್ ಕೂಡ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು.


Click it and Unblock the Notifications