18 ವರ್ಷ ಪೂರೈಸಿದ 'ಮಿಲನಾ'-'ಅನಾಥರು'; ಒಟ್ಟಿಗೆ ಬಂದಿದ್ದ ಚಿತ್ರಗಳ ಫಲಿತಾಂಶ ಏನಾಗಿತ್ತು?
ಪ್ರಕಾಶ್ ಹಾಗೂ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಬಂದಿದ್ದ 'ಮಿಲನಾ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅದಕ್ಕಿಂತ ಒಂದು ದಿನ ಮುನ್ನ ಉಪೇಂದ್ರ ಹಾಗೂ ದರ್ಶನ್ ನಟನೆಯ 'ಅನಾಥರು' ಚಿತ್ರ ಬಿಡುಗಡೆಯಾಗಿತ್ತು. ಎರಡೂ ಚಿತ್ರಗಳು 18 ವರ್ಷ ಪೂರೈಸಿವೆ. ಸಾಧು ಕೋಕಿಲ ತಮ್ಮ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ.
ಸಿಂಪಲ್ ಕಥೆಯ 'ಮಿಲನಾ' ಸ್ವಮೇಕ್ ಸಿನಿಮಾ ಆಗಿತ್ತು. ತಮಿಳಿನ 'ಪಿತಾಮಗನ್' ರೀಮೆಕ್ 'ಅನಾಥರು' ಸಿನಿಮಾ ಕೂಡ ಸದ್ದು ಮಾಡಿತ್ತು. ಉಪ್ಪಿ ಹಾಗೂ ದರ್ಶನ್ ನಟನೆಗೆ ಸಿನಿರಸಿಕರು ಫಿದಾ ಆಗಿದ್ದರು. ರಾಧಿಕಾ ಕುಮಾರಸ್ವಾಮಿ ಸ್ವತಃ ಸಿನಿಮಾ ವಿತರಣೆ ಮಾಡಿದ್ದರು. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಆಕೆ ನಟಿಸಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿರಲಿಲ್ಲ. 'ಮಿಲನಾ' ಚಿತ್ರಕ್ಕೆ ಹೋಲಿಸಿದ್ರೆ ಮಲ್ಟಿಸ್ಟಾರರ್ 'ಅನಾಥರು' ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು.

ಸಾಧು ಕೋಕಿಲ ಟ್ವೀಟ್ ಮಾಡಿ "ಅನಾಥರು ಸಿನಿಮಾಗೆ 18 ವರ್ಷಗಳು. ನಾನು ನಿರ್ದೇಶಕ ಮತ್ತು ಸಂಗೀತ ನಿರ್ದೇಶಕನಾಗಿ ಮರೆಯಲಾಗದ ಅನುಭವ. ಉಪೇಂದ್ರ ಅವರ ಅದ್ಭುತ ಅಭಿನಯ ಹಾಗೂ ದರ್ಶನ್ ಅವರ ಸಮರ್ಪಣೆ ಚಿತ್ರದ ಆತ್ಮ" ಎಂದು ಬರೆದುಕೊಂಡಿದ್ದಾರೆ. ವೃಷಬಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮುನಿರತ್ನ ಚಿತ್ರವನ್ನು ನಿರ್ಮಾಣ ಮಾಡಿದ್ದರು. ತಮಿಳಿನಲ್ಲಿ ವಿಕ್ರಂ ಮಾಡಿದ್ದ ಪಾತ್ರ ಉಪೇಂದ್ರ ಮಾಡಿದ್ರೆ ಸೂರ್ಯ ಪಾತ್ರವನ್ನು ದರ್ಶನ್ ನಿಭಾಯಿಸಿದ್ದರು.
'ಅನಾಥರು' ಚಿತ್ರದಲ್ಲಿ ಉಪೇಂದ್ರ ಹಾಗೂ ದರ್ಶನ್ ನಟನೆ ಮರೆಯೋಕೆ ಸಾಧ್ಯವಿಲ್ಲ. ಆದರೆ ಯಾಕೋ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಆದರೆ ಗಂಡ-ಹೆಂಡತಿಯ 'ಮಿಲನಾ' ಸಿನಿಮಾ 500 ದಿನ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಫ್ಯಾಮಿಲಿ ಆಡಿಯನ್ಸ್ ದೊಡ್ಡಮಟ್ಟದಲ್ಲಿ ಆಕಾಶ್(ಪುನೀತ್ ರಾಜ್ಕುಮಾರ್) ಹಾಗೂ ಅಂಜಲಿ(ಪಾರ್ವತಿ ಮನನ್) ಪ್ರೇಮ್ ಕಹಾನಿ ನೋಡಿ ಚಿತ್ರಮಂದಿರಕ್ಕೆ ಹೋಗಿದ್ದರು.
ಕೆ. ಎಸ್ ದುಷ್ಯಂತ್ ನಿರ್ಮಾಣದ 'ಮಿಲನಾ' ಚಿತ್ರಕ್ಕೆ ಮನೋಮೂರ್ತಿ ಸಂಗೀತ ದೊಡ್ಡ ಬಲ ತುಂಬಿತ್ತು. ಅದಾಗಲೇ ಪ್ರೀತಿಯಲ್ಲಿ ಸೋತ ನಾಯಕ- ನಾಯಕಿ ಪೋಷಕರ ಬಲವಂತಕ್ಕೆ ಮದುವೆ ಆಗಿರುತ್ತಾರೆ. ಮದುವೆ ದಿನವೇ ಪತ್ನಿ ದೂರಾಗಲು ಬಯಸುತ್ತಾಳೆ. ತನ್ನ ಪ್ರಿಯಕರನ ಜೊತೆ ಮದುವೆಯಾಗುಲು ಮುಂದಾಗುತ್ತಾಳೆ. ಪತಿ ಆಕಾಶ್ ಮುಂದೆ ನಿಂತು ಅವರಿಬ್ಬರನ್ನು ಸೇರಿಸಲು ಮುಂದಾಗುತ್ತಾನೆ. ಆದರೆ ಕೊನೆಗೆ ಅಂಜಲಿಗೆ ಆಕಾಶ್ ಮೇಲೆ ಪ್ರೀತಿ ಹುಟ್ಟಿ ಡಿವೋರ್ಸ್ ಪಡೆಯಲು ಹೋಗಿದ್ದವರು ಒಟ್ಟಾಗಿ ಬಾಳಲು ಒಪ್ಪುವ ಕಥೆ ಚಿತ್ರದಲ್ಲಿತ್ತು.
ತಮಿಳಿನಲ್ಲಿ ಬಾಲ ನಿರ್ದೇಶನ ಮಾಡಿದ್ದ 'ಅನಾಥರು' ಚಿತ್ರಕ್ಕೆ ತುಷಾರ್ ರಂಗನಾಥ್ ಕನ್ನಡದಲ್ಲಿ ಸಂಭಾಷಣೆ ಹಾಗೂ ಹಾಡುಗಳ ಸಾಹಿತ್ಯ ರಚಿಸಿದ್ದರು. ರೀಮೆಕ್ ಮಾಡಿದ್ರು ಈ ತರ ಮಾಡ್ಬೇಕಪ್ಪಾ ಎನ್ನುವಂತೆ ಈ ಸಿನಿಮಾ ಮೂಡಿ ಬಂದಿತ್ತು. ಆದರೂ ಯಾಕೋ ಜನ ಒಪ್ಪಿಕೊಳ್ಳಲಿಲ್ಲ. ಆದರೆ ತಂಡದ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮುಖ್ಯವಾಗಿ ಉಪೇಂದ್ರ, ದರ್ಶನ್ ಹೆಚ್ಚು ಅಂಕ ಗಳಿಸಿದ್ದರು.
ಸ್ಮಶಾನದಲ್ಲಿ ಹುಟ್ಟಿ ಬೆಳೆದ ರುದ್ರ(ಉಪೇಂದ್ರ) ಕಾರಣಾಂತರಗಳಿಂದ ಪಟ್ಟಣಕ್ಕೆ ಬರ್ತಾನೆ. ಗಾಂಜಾ ಮಾರುವ ಪಾರ್ವತಿ(ಸಾಂಘವಿ)ಗೆ ಹತ್ತಿರವಾಗುತ್ತಾನೆ. ಜೈಲಿಗೂ ಹೋಗುವಂತಾಗುತ್ತದೆ. ಅತ್ತ ಜನರಿಗೆ ಸಣ್ಣ ಪುಟ್ಟ ಮೋಸ ಮಾಡುತ್ತಾ ಜೀವನ ಸಾಗಿಸುವ ಸತ್ಯಪ್ರಕಾಶ್(ದರ್ಶನ್) ಜೈಲು ಪಾಲಾಗುತ್ತಾನೆ. ಹೀಗೆ ರುದ್ರ ಹಾಗೂ ಸತ್ಯ ಒಟ್ಟಾಗಿ ಜೈಲಿನಿಂದ ಹೊರಬಂದು ಒಟ್ಟಿಗೆ ಬದುಕುತ್ತಿರುತ್ತಾರೆ. ಮುಂದೆ ಅವರ ಬದುಕಿನಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.
ಯಾವುದೇ ಡೈಲಾಗ್ ಇಲ್ಲದೇ ಬರೀ ತಮ್ಮ ಅಭಿನಯದಿಂದಲೇ ಉಪೇಂದ್ರ ಮೋಡಿ ಮಾಡುತ್ತಾರೆ. ಇನ್ನು ಬರೀ ಮಾತಿನಿಂದಲೇ ಕಮಾಲ್ ಮಾಡುವ ಸತ್ಯ ಪಾತ್ರದಲ್ಲಿ ದರ್ಶನ್ ಅಭಿಮಾನಿಗಳ ಮನಗೆದ್ದಿದ್ದರು. ಈ ಸಿನಿಮಾ ಯಾಕೆ ಗೆಲ್ಲಲಿಲ್ಲ ಎಂದು ಇವತ್ತಿಗೂ ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. 'ಮಿಲನಾ' ಹಾಗೂ 'ಅನಾಥರು' ಚಿತ್ರಗಳು 18 ವರ್ಷ ಪೂರೈಸಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











