Year Ender 2025 ; ಪ್ರೀತಿ,ಪ್ರೇಮ,ಮದುವೆ,ಡಿವೋರ್ಸ್-ಈ ವರ್ಷ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಸೆಲೆಬ್ರೆಟಿಗಳಿವರು
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ ಇದಕ್ಕೆ ಪುರಾವೆ ಎನ್ನುವಂತೆ ಈ ವರ್ಷ ಹಲವರು ಡಿವೋರ್ಸ್ ಪಡೆದಿದ್ದಾರೆ.
ವಿಪರ್ಯಾಸ ಅಂದರೆ ಹೀಗೆ ವಿಚ್ಛೇದನ ಪಡೆದವರಲ್ಲಿ ಹಲವರದ್ದು ಲವ್ ಮ್ಯಾರೇಜ್. ಇನ್ನೂ.. ಕೆಲವರು ಒಂದು ಎರಡು ವರ್ಷಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದರೆ, ಇನ್ನೂ ಕೆಲವರು 20 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿದ್ಧಾರೆ. ಹಾಗಿದ್ದರೆ ಈ ವರ್ಷದ ಈ ನಾಲ್ಕು ತಿಂಗಳಿನಲ್ಲಿ ಯಾರೆಲ್ಲ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿದ್ದಾರೆ. ತಮ್ಮ ಸಾಂಸಾರಿಕ ಜೀವನದ ವಿಚಾರದಿಂದ ಯಾರೆಲ್ಲ ಸದ್ದು ಮಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ
''ರಿಶ್ತೆ''.. ''ಸಿಐಡಿ''.. ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ''.. ಹೀಗೆ ಹತ್ತು ಹಲವು ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಅಮನ್ ವರ್ಮಾ, 2016ರ ಡಿಸೆಂಬರ್ನಲ್ಲಿ ವಂದನಾ ಲಾಲ್ವಾನಿ ಅವರನ್ನು ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ಜೀವನ ಖುಷಿಯಿಂದ ಕೂಡಿತ್ತು. ಆದರೆ ''ಟೈಮ್ಸ್ ಆಫ್ ಇಂಡಿಯಾ'' ವರದಿಯ ಪ್ರಕಾರ ಆ ನಂತರ ಇಬ್ಬರ ನಡುವೆ ಮಗು ಮಾಡಿಕೊಳ್ಳುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
ಹೀಗಾಗಿಯೇ ಅಮನ್ ವರ್ಮಾ ಅವರಿಂದ ದೂರವಾಗುವ ನಿರ್ಧಾರಕ್ಕೆ ಬಂದ ವಂದನಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದರು. ಇನ್ನು ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ತಮ್ಮ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಹಲವು ಬಾರಿ ಪ್ರಯತ್ನವನ್ನು ಮಾಡಿದ್ದರು ಕೂಡ ಸಾಧ್ಯವಾಗಲಿಲ್ಲ. ರಾಜಿ ಮಾಡಿಕೊಳ್ಳಲಾಗದ ಹಂತಕ್ಕೆ ಈಗ ವಿಚಾರ ತಲುಪಿದ್ದು ವಿಚ್ಛೇದನ ಪಡೆಯುವುದೊಂದೇ ಅಂತಿಮ ದಾರಿಯೆಂದು ಇಬ್ಬರು ನಿರ್ಧರಿಸಿದರು.

ಮುಗ್ದಾ ಚಾಪೇಕರ್ ಮತ್ತು ರಾವಿಶ್ ದೇಸಾಯಿ
''ಧರ್ಮ ವೀರ್''.. ''ಗೋಲ್ಮಾಲ್ ಹೈ ಸಬ್ ಗೋಲ್ಮಾಲ್ ಹೈ''.. ''ಹಲ್ಲಾ ಬೋಲ್''.. ಮುಂತಾದ ಧಾರಾವಾಹಿಗಳ ಮೂಲಕ ಹಿಂದಿ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ಮುಗ್ದಾ ಚಾಪೇಕರ್ ಕೂಡ ತಮ್ಮ 09 ವರ್ಷಗಳ ದಾಂಪತ್ಯಕ್ಕೆ ಇದೇ ವರ್ಷ ಗುಡ್ ಬೈ ಹೇಳಿದರು. ತಮ್ಮ ಪತಿ ರಾವಿಶ್ ದೇಸಾಯಿಗೆ ವಿಚ್ಚೇದನ ನೀಡಿದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದರು. ಯಾಕೆಂದರೆ ಮುಗ್ದಾ ಚಾಪೇಕರ್ ಮತ್ತು ರಾವಿಶ್ ದೇಸಾತಿ ಅವರದ್ದು ಲವ್ ಮ್ಯಾರೇಜ್. ಧಾರಾವಾಹಿಯಲ್ಲಿ ಜೊತೆಯಲ್ಲಿ ಅಭಿನಯಿಸುತ್ತಾ ಪ್ರೀತಿಯಲ್ಲಿ ಬಿದ್ದವರು ಇಬ್ಬರು. ಹೀಗಾಗಿಯೇ ತಮ್ಮ ನೆಚ್ಚಿನ ಜೋಡಿ ನಿಜ ಜೀವನದಲ್ಲಿ ಕೂಡ ಒಂದಾಗುತ್ತಿದೆ ಎಂದು ಅನೇಕರು ಖುಷಿ ಪಟ್ಟಿದ್ದರು. ಶುಭ ಕೋರಿದ್ದರು. ಆದರೆ 09 ವರ್ಷಗಳ ದಾಂಪತ್ಯ ಜೀವನ ಈ ವರ್ಷದ ಆರಂಭದಲ್ಲಿ ಮುರಿದು ಬಿತ್ತು.
ಜಿ.ವಿ. ಪ್ರಕಾಶ್ ಮತ್ತು ಸೈಂಧವಿ
ಜಿ.ವಿ.ಪ್ರಕಾಶ್ ಪಕ್ಕದ ತಮಿಳುನಾಡಿನ ಖ್ಯಾತ ಸಂಗೀತ ನಿರ್ದೇಶಕ. ಇಷ್ಟೇ ಅಲ್ಲ ನಟ ಕೂಡ ಹೌದು. ''ಪೊಲ್ಲಾಧವನ್''.. ''ರಾಜಾ ರಾಣಿ''.. ''ತೇರಿ''.. ''ತಲೈವಿ''.. ''ಕ್ಯಾಪ್ಟನ್ ಮಿಲ್ಲರ್''.. ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಇವರದ್ದು. ಇನ್ನು ಇವರ ಪತ್ನಿ ಸೈಂಧವಿ ಕೂಡ ತಮಿಳು ಚಿತ್ರರಂಗದ ಖ್ಯಾತ ಗಾಯಕಿ. ''ಅನಿಯನ್'' ಚಿತ್ರದ ಮೂಲಕ 2005ರಲ್ಲಿ ವೃತ್ತಿ ಜೀವನ ಶುರು ಮಾಡಿದ ಸೈಂಧವಿ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಕೇವಲ ತಮಿಳು ಮಾತ್ರವಲ್ಲ ತೆಲುಗಿನಲ್ಲಿ ಕೂಡ ಹಾಡು ಹಾಡಿರುವ ಸೈಂಧವಿ ಕನ್ನಡದಲ್ಲಿ ''ಸೈಕೋ''.. ''ಉಲ್ಲಾಸ ಉತ್ಸಾಹ'' ಚಿತ್ರಗಳ ಹಾಡನ್ನು ಹಾಡಿದ್ದಾರೆ. ಪ್ರೇಮ್ ನಿರ್ದೇಶನದ ''ಏಕ್ ಲವ್ ಯಾ'' ಚಿತ್ರದಲ್ಲಿನ ''ಮತ್ತೆ ನೋಡಬೇಡ'' ಹಾಡಿಗೆ ಕೂಡ ಧ್ವನಿಯಾಗಿದ್ದಾರೆ.

ಇಂಥಾ ಹಿನ್ನೆಲೆಯ ಜಿವಿ ಪ್ರಕಾಶ್ ಮತ್ತು ಸೈಂಧವಿ ಕಳೆದ ವರ್ಷ ಮೇ 13ರಂದು ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. ಆಗ ಇವರಿಬ್ಬರ ಅಭಿಮಾನಿಗಳು ಮುನಿಸು ಮರೆತು ಮತ್ತೆ ಒಂದಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಈ ನಿರೀಕ್ಷೆ ಈ ವರ್ಷ ಹುಸಿಯಾಯ್ತು. ಯಾಕೆಂದರೆ ವರ್ಷದ ನಂತರ ಜಿವಿ ಪ್ರಕಾಶ್ ಈಗ ತಮ್ಮ ಪತ್ನಿ ಸೈಂಧವಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಂತೆಯೇ ಜೊತೆಯಾಗಿ ಬಂದು ಡಿವೋರ್ಸ್ ಅರ್ಜಿ ಸಲ್ಲಿಸಿ ತೆರಳಿದರು.
ಸಂಯುಕ್ತಾ ಷಣ್ಮುಗನ್ ಮತ್ತು ಕಾರ್ತಿಕ್ ಶಂಕರ್
2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ, ''ಬಿಗ್ ಬಾಸ್'' ನಾಲ್ಕರಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಷಣ್ಮುಗನಾಥನ್ ಅವರ ದಾಂಪತ್ಯ ಕೂಡ ಇದೇ ವರ್ಷ ಮುರಿದು ಬಿತ್ತು. ತಮ್ಮ ಪತಿ ಕಾರ್ತಿಕ್ ಶಂಕರ್ ಅವರಿಂದ ದೂರವಾಗುತ್ತಿರುವ ವಿಚಾರವನ್ನು ಫೋಟೊಶೂಟ್ ಮೂಲಕ ಸಂಯುಕ್ತಾ ತಮ್ಮ ಅಭಿಮಾನಿಗಳಿಗೆ ತಿಳಿಸಿದರು.

ಚಿತ್ರರಂಗದಲ್ಲಿ ಬ್ಯುಸಿ ಇದ್ದಾಗಲೇ ಸಂಯುಕ್ತಾ ತಮ್ಮ ಪೋಷಕರ ಒತ್ತಾಸೆಯಂತೆ ಕಾರ್ತಿಕ್ ಶಂಕರ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಇವರಿಗೆ ರಾಯನ್ ಎಂಬ ಮಗ ಕೂಡ ಇದ್ದಾನೆ. ಗಂಡ-ಮನೆ-ಸಂಸಾರ ಎಂದು ಸಂಯುಕ್ತಾ ಖುಷಿಯಾಗಿಯೇ ಇದ್ದರು. ಆದರೆ, ಸಂಯುಕ್ತಾ ಬೆನ್ನ ಹಿಂದೆ ಮಾಡಬಾರದ್ದನ್ನೆಲ್ಲ ಕಾರ್ತಿಕ್ ಶಂಕರ್ ಮಾಡಲು ಶುರು ಮಾಡಿದ್ದರು. ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ತಮ್ಮ ದಾಂಪತ್ಯ ಮುರಿದು ಬೀಳಲು ಪತಿಯ ಈ ಅನೈತಿಕ ಸಂಬಂಧವೇ ಕಾರಣವೆಂದು ಸಂಯುಕ್ತಾ ಹೇಳಿದರು.
ಪಲ್ಲವಿ ರಾವ್- ಸೂರಜ್ ರಾವ್
''ಶುಭಾರಂಭ್''.. ''ಯೇ ಜುಕೀ ಜುಕೀ ಸೀ ನಜರ್''.. ''ಕಯಾಮತ್ ಸೇ ಕಯಾಮಾತ್''.. ''ದಿಯಾ ಔರ್ ಭಾತಿ ಹಮ್''..''ಮೇ ತೇರಿ ಲಕ್ಷ್ಮಿ ಆಂಗನ್ ಕೀ''.. ''ಪಾಂಡ್ಯ ಸ್ಟೋರ್'' ಹೀಗೆ ಹಲವು ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಪಲ್ಲವಿ ರಾವ್ ಕೂಡ ಇದೇ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು.

''ಅದಾಲತ್'' ಮತ್ತು ಭಾರತದೆಲ್ಲೆಡೆ ಪ್ರಖ್ಯಾತವಾದ ''ಕ್ಯುಂಕಿ ಸಾಸ್ ಬೀ ಕಭಿ ಬಹು ಥೀ'' ಸೇರಿ ಹಲವಾರು ಧಾರಾವಾಹಿಗಳಿಗೆ ಕೆಲಸವನ್ನು ಮಾಡಿದ್ದ ಸೂರಜ್ ರಾವ್ ಅವರಿಂದ ದೂರವಾದರು. ವಿಶೇಷ ಅಂದರೆ ಇವರಬ್ಬರದ್ದು ಲವ್ ಮ್ಯಾರೇಜ್. ಎಲ್ಲಕ್ಕಿಂತ ಹೆಚ್ಚಾಗಿ 22 ವರ್ಷ ಜೊತೆಯಲ್ಲಿದ್ದರು ಇಬ್ಬರು. ಇಬ್ಬರಿಗೆ ಎದೆಯೆತ್ತರಕ್ಕೆ ಬೆಳೆದ 21 ವರ್ಷದ ಮಗಳಿದ್ದಾಳೆ. 18 ವರ್ಷದ ಮಗ ಕೂಡ ಇದ್ದಾನೆ. ಆದರೂ ಕೂಡ ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದ ಹಿನ್ನೆಲೆ ಇಬ್ಬರು ದೂರವಾಗುತ್ತಿರುವುದಾಗಿ ಘೋಷಿಸಿದರು.
ರಾಹುಲ್ ದೇಶಪಾಂಡೆ -ನೇಹಾ
ಮರಾಠಿಯ ಖ್ಯಾತ ಗಾಯಕ ಮತ್ತು ನಾಯಕ, ''ಮಿ.ವಸಂತ್ ರಾವ್'' ಚಿತ್ರದಲ್ಲಿನ ''ಕೈವಲ್ಯಗಾನ" ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದ ರಾಹುಲ್ ದೇಶಪಾಂಡೆ ಅವರ ದಾಂಪತ್ಯ ಜೀವನ ಕೂಡ ಇದೇ ವರ್ಷ ಮುಕ್ತಾಯವಾಯ್ತು.

ತಮ್ಮ 17 ವರ್ಷದ ದಾಂಪತ್ಯ ಜೀವನಕ್ಕೆ ರಾಹುಲ್ ಈ ವರ್ಷ ಎಳ್ಳು-ನೀರು ಬಿಟ್ಟರು. ತಮ್ಮ ಪತ್ನಿ ನೇಹಾಗೆ ವಿಚ್ಛೇದನ ನೀಡಿದರು . ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ರಾಹುಲ್ ದೇಶಪಾಂಡೆ ನನ್ನ ಪ್ರಯಾಣದಲ್ಲಿ ಇಲ್ಲಿಯವರೆಗೆ ನೀವೆಲ್ಲರೂ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸಿದ್ದೀರಾ. ಈ ಹಿನ್ನೆಲೆ ನಾನು ನಿಮ್ಮ ಜೊತೆ ಪ್ರಮುಖವಾದ ವಿಚಾರವನ್ನು ಹಂಚಿಕೊಳ್ಳಲು ಬಯಸಿದ್ದೇನೆ, 17 ವರ್ಷಗಳ ನಂತರ ನಾನು ಮತ್ತು ನೇಹಾ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗುತ್ತಿದ್ದೇವೆ ಎಂದು ಹೇಳಿದರು.
ಸಿಂಪಲ್ ಕೌಲ್-ರಾಹುಲ್ ಲೂಂಬಾ
ಸಿಂಪಲ್ ಕೌಲ್.. ಹಿಂದಿ ಕಿರುತೆರೆಯ ಚಿರಪರಿಚಿತ ಮುಖ. ''ಶರಾರತ್''.. ''ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ''.. ''ಝಿದ್ದಿ ದಿಲ್ ಮಾನೆ ನಾ''.. ಮೂಲಕ ಅನೇಕರ ಹೃದಯ ಗೆದ್ದ ಸಿಂಪಲ್ ತಮ್ಮ ಗಂಡ ರಾಹುಲ್ ಲೂಂಬಾ ಅವರಿಂದ ದೂರವಾದರು. 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು.

ನಾವು ಇಬ್ಬರು ಪ್ರಬುದ್ದರು, ದೂರವಾಗುತ್ತಿದೆವೆಯಾದರೂ ನಮ್ಮ ನಡುವೆ ಸ್ನೇಹ ಮುಂದುವರೆಯುತ್ತೆ. ಯಾಕೆಂದರೆ ನಾವು ಯಾರನ್ನಾದರೂ ಮದುವೆಯಾದಾಗ ಮದುವೆಯಾದ ವ್ಯಕ್ತಿ ನಮ್ಮ ಕುಟುಂಬದವರೇ ಆಗಿರುತ್ತಾರೆ. ನಮ್ಮ ವಿಚಾರದಲ್ಲಿ ಕೂಡ ಹಾಗೇ ಆಗಿದೆ. ಜನ ಹೇಗೆ ದೂರವಾಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ ಆದರೆ ನನ್ನಿಂದ ಅದು ಸಾಧ್ಯ ಇಲ್ಲ ಎಂದಿರುವ ಸಿಂಪಲ್ ಮುಂದೆಯೂ ಕೂಡ ಪ್ರೀತಿಯಿಂದ.. ಸಂತೋಷದಿಂದ.. ಆಧ್ಯಾತ್ಮಿಕವಾಗಿ ನಾವು ಬದುಕುತ್ತೇವೆ ಎಂದು ''ಟೈಮ್ಸ್ ಆಫ್ ಇಂಡಿಯಾ''ಗೆ ಪ್ರತಿಕ್ರಿಯೆಯನ್ನು ನೀಡಿದ್ದರು.
ರೋಷ್ನಾ ಆನ್ ರಾಯ್ ಮತ್ತು ಕಿಚು ಟೆಲ್ಲಸ್
ಪ್ರಿಯಾ ವಾರಿಯರ್ ಅಭಿನಯದ ''ಒರು ಅದಾರ್ ಲವ್'' ಚಿತ್ರದ ಮೂಲಕ ಬೆಳಕಿಗೆ ಬಂದ ರೋಷ್ನಾ ಆನ್ ರಾಯ್ ತಮ್ಮ ಪತಿ ಕಿಚು ಟೆಲ್ಲಸ್ ಅವರಿಂದ ಈ ವರ್ಷ ದೂರವಾದರು. ಕೇವಲ ಐದೇ ವರ್ಷಕ್ಕೆ ಇವರ ನಡುವೆ ಅರಳಿದ್ದ ಪ್ರೇಮ ಕಮರಿತು. ಈ ಹಿನ್ನೆಲೆ ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ ರೋಶ್ನಾ ವಿಚ್ಚೇದನದ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ಭಾವನಾತ್ಮಕ ಪತ್ರವನ್ನು ಬರೆದು ಇನ್ಮುಂದೆ ನಾನು ಸ್ವತಂತ್ರ್ಯಳು ಅವರು ಸ್ವತಂತ್ರ್ಯರು ಎಂದು ಹೇಳಿದರು.

ಯೋಗಿತಾ ಚವ್ಹಾಣ್ ಮತ್ತು ಸೌರಭ್ ಚೌಘುಲೆ.
ಮರಾಠಿ ಕಿರುತೆರೆಯ ತಾರೆಯರಾದ ಯೋಗಿತಾ ಚವ್ಹಾಣ್ ಮತ್ತು ಸೌರಭ್ ಚೌಘುಲೆ ಅವರ ಪ್ರೀತಿಗೆ '' ಜೀವ್ ಮಝಾ ಗುಂತಲಾ'' ಇವರ ಪ್ರೇಮಕ್ಕೆ ಬುನಾದಿಯನ್ನು ಹಾಕಿತ್ತು. ಈ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ಆಕ್ಟ್ ಮಾಡುತ್ತಲೇ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿದ್ದರು ಇಬ್ಬರು. ಕಳೆದ ವರ್ಷ ಮಾರ್ಚ್ 3ರಂದು ಖುಷಿ ಖುಷಿಯಿಂದ ಮದುವೆಯಾಗಿದ್ದರು. ತಮ್ಮ ಅತ್ಯಾಪ್ತ ಸ್ನೇಹಿತರ ಜೊತೆ ಸಂಭ್ರಮಿಸಿ ಗುರು ಹಿರಿಯರ ಆಶೀರ್ವಾದ ಪಡೆದಿದ್ದರು.
ಇನ್ನು ತಮ್ಮ ಭವಿಷ್ಯದ ಕುರಿತು ತುಂಬಾನೇ ಮಹತ್ವಕಾಂಕ್ಷಿಯಾಗಿದ್ದ ಇಬ್ಬರು ಮದುವೆಯಾದ ಎರಡು ಮೂರು ತಿಂಗಳಿಗೆ ಸ್ವಂತ ಮನೆಯನ್ನು ಖರೀದಿಸಿದರು. ಗೃಹ ಪ್ರವೇಶವನ್ನು ಕೂಡ ಮಾಡಿದರು. ಆದರೆ.. ಈಗ ಕೇವಲ ಒಂದೂವರೆ ವರ್ಷಕ್ಕೆ ಇವರ ಪ್ರೀತಿ ಮುದುಡಿತು.

ಕೇವಲ ಇವರಷ್ಟೇ ಅಲ್ಲ ಬಾಲ್ಯದ ಗೆಳೆಯ ವಿನಾಯಕ್ ಅವರ ಜೊತೆ ಮದುವೆಯಾಗಿದ್ದ ಹರಿತಾ ನಾಯರ್ ಮಲಯಾಳಂ ನಟಿ ಹರಿತಾ ನಾಯರ್ ಕೂಡ ತಮ್ಮ ಪತಿಗೆ ವಿಚ್ಚೇದನ ನೀಡಿದರು. ಕೇವಲ ಒಂದೂವರೆ ವರ್ಷದಲ್ಲಿಯೇ ಇವರ ದಾಂಪತ್ಯ ಜೀವನ ಮುರಿದು ಬಿತ್ತು. ಇನ್ನು ಕಳೆದ ವರ್ಷ ಮೂರನೇ ಮದುವೆಯಾಗಿದ್ದ ಮಲಯಾಳಂನ ನಟಿ ಮೀರಾ ವಾಸುದೇವನ್ ಕೂಡ ಇದೇ ವರ್ಷ ತಮ್ಮ ಮೂರನೇ ಪತಿಗೆ ವಿಚ್ಛೇದನ ನೀಡಿದರು. ಇವರಲ್ಲದೇ ಧನುಷ್ ಅಣ್ಣ ಸೆಲ್ವ ರಾಘವನ್ ಸೇರಿ ಇನ್ನೂ ಹಲವರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಇದ್ದು ಮುಂದಿನ ವರ್ಷ ಯಾರೆಲ್ಲ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











