Majestic Completes 22 Years: 'ಮೆಜೆಸ್ಟಿಕ್' ಅವಕಾಶ ಕೇಳಲು ಅಂದು ಗಣೇಶ್ ಬೈಕ್ ಏರಿದ್ದರು ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಬಾಕ್ಸಾಫೀಸ್ ಸುಲ್ತಾನ್, ಅಸಂಖ್ಯಾತ ಅಭಿಮಾನಿಗಳ ಡಿಬಾಸ್ ಆಗಿ ಮೆರೆಯುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್ ಮಗನಾದರೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್ ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು.
'ಮೆಜೆಸ್ಟಿಕ್' ಚಿತ್ರದಲ್ಲಿ ಹೀರೊ ಆಗಿ ನಟಿಸಿ ದರ್ಶನ್ ಸಕ್ಸಸ್ ಕಂಡರು. ಬಳಿಕ ಹಿಂತಿರುಗಿ ನೋಡಲಿಲ್ಲ. ಆ ಸಿನಿಮಾ ತೆರೆಕಂಡು ಇದೀಗ 22 ವರ್ಷಗಳಾಗಿದೆ. ಅಭಿಮಾನಿಗಳು ಮತ್ತೊಮ್ಮೆ ಕಲ್ಟ್ ಕ್ಲಾಸಿಕ್ 'ಮೆಜೆಸ್ಟಿಕ್' ಸಿನಿಮಾ ನೆನಪಿಸಿಕೊಳ್ಳುತ್ತಿದ್ದಾರೆ. 2002 ಫೆಬ್ರವರಿ 8ರಂದು ಈ ಕ್ರೈಂ ಥ್ರಿಲ್ಲರ್ ಸಿನಿಮಾ ತೆರೆಕಂಡಿತ್ತು. ಚಿತ್ರದಲ್ಲಿ ರೌಡಿ ದಾಸನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು.

ರೌಡಿಸಂ ಕಥೆಯಲ್ಲಿ ಒಂದು ಲವ್ ಸ್ಟೋರಿ ತಂದು ಪಿ. ಎನ್ ಸತ್ಯ ಸಿನಿಮಾ ನಿರ್ದೇಶನ ಮಾಡಿದ್ದರು. ಎಂ.ಜಿ ರಾಮಮೂರ್ತಿ ಹಾಗೂ ಭಾ. ಮಾ ಹರೀಶ್ ಸಿನಿಮಾ ನಿರ್ಮಿಸಿದ್ದರು. ಅಣಜಿ ನಾಗರಾಜ್ ಛಾಯಾಗ್ರಹಣ, ಸಾಧು ಕೋಕಿಲ ಸಂಗೀತ ಚಿತ್ರಕ್ಕಿತ್ತು. 'ನಾನೇ ನಾನೇ ರಾಜಾಧಿರಾಜಾ ಎಂದೆಂದಿಗೂ' ಎಂದು ಹಾಡುತ್ತಾ ಬಂದ ದರ್ಶನ್ ಮುಂದೆ ನಿಜವಾಗಿಯೂ ಅಭಿಮಾನಿಗಳ ಹೃದಯ ಸಿಂಹಾಸನ ಏರಿದರು. ಅಂದಹಾಗೆ ದರ್ಶ್ಗೆ 'ಮೆಜೆಸ್ಟಿಕ್' ಸಿನಿಮಾ ಅವಕಾಶ ಸಿಕ್ಕಿದ್ದು ಅಷ್ಟು ಸುಲಭ ಅಲ್ಲ.
ಒಳ್ಳೆ ಕೆಲಸಕ್ಕೆ ಸಾಕಷ್ಟು ಜನ ತಾನಾಗಿಯೇ ಸಹಾಯಕ್ಕೆ ಬರಯತ್ತಾರಂತೆ. ಅದೇ ರೀತಿ ಅಂದು ದರ್ಶನ್ 'ಮೆಜೆಸ್ಟಿಕ್' ಸಿನಿಮಾದಲ್ಲಿ ನಟಿಸುವಂತಾಗಲು ಹಲವರು ಜೊತೆಗಿದ್ದರು. ಅಣಜಿ ನಾಗರಾಜ್ ಅಂತಹವರಲ್ಲಿ ಒಬ್ಬರು. ಈ ವಿಚಾರವನ್ನು ಸ್ವತಃ ದರ್ಶನ್ ಕೂಡ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. 'ಜನುಮದ ಜೋಡಿ' ಸಮಯದಿಂದಲೂ ದರ್ಶನ್- ಅಣಜಿ ನಾಗರಾಜ್ ಆತ್ಮೀಯ ಸ್ನೇಹಿತರಾಗಿದ್ದರು.

'ಮೆಜೆಸ್ಟಿಕ್' ಚಿತ್ರಕ್ಕೆ ನಾಯಕನ ಹುಡುಕಾಟದಲ್ಲಿದ್ದಾಗ ದರ್ಶನ್ ಹೆಸರನ್ನು ಅಣಜಿ ನಾಗರಾಜ್ ಸೂಚಿಸಿದ್ದರು. 2 ವರ್ಷಗಳ ಹಿಂದೆ 'ಮೆಜೆಸ್ಟಿಕ್' ಸಿನಿಮಾ ರೀ ರಿಲೀಸ್ ವೇಳೆ ನೀಡಿದ ಸಂದರ್ಶನದಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿದ್ದರು. "ಅಣಜಿದು ಒಂದು ದಿನ ಫೋನ್ ಬಂದು ನನಗೆ. ಎಲ್ಲಿದ್ದೀಯ ಅಂತ ಕೇಳಿದ್ರು. ಆಗ ನಾನು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಚಿತ್ರೀಕರಣದಲ್ಲಿ ಇದ್ದೀನಿ ಎಂದೆ. ಪ್ರಕೃತಿ ಲಾಡ್ಜ್ಗೆ ಹೋಗಿ ಪಿ.ಎನ್ ಸತ್ಯ ಅವರನ್ನು ಭೇಟಿ ಆಗಲು ಹೇಳಿದರು"
"ನನಗೆ ಬೆಂಗಳೂರು ಹೊಸದು. ಅಡ್ರೆಸ್ ಗೊತ್ತಿರಲಿಲ್ಲ. ಸರಿ ಹೋಗುತ್ತೇನೆ ಎಂದೆ. ಬ್ರೇಕ್ ಸಮಯದಲ್ಲಿ ಹೋಗಬೇಕಿತ್ತು. ನನ್ನ ಬಳಿ ಯಾವುದೇ ಗಾಡಿ ಇರಲಿಲ್ಲ. ಆಗ ಗಣಿ ಹತ್ತಿರ ಒಂದು ಸುಜುಜಿ ಸಮುರಾಯ್ ಬೈಕ್ ಇತ್ತು. ಈ ರೀತಿ ಅವಕಾಶ ಕೇಳೋಕೆ ಹೋಗಬೇಕು ಎಂದೆ. ನನ್ನ ಗಾಡಿ ತಗೊಂಡು ಹೋಗು ಅಂದ. ಗಾಡಿ ತಗೊಂಡು ಹೋಗಿ ಪಿ. ಎನ್ ಸತ್ಯ ಅವರನ್ನು ಭೇಟಿ ಮಾಡಿದ್ದೆ"
"ನಿರ್ದೇಶಕರು ಸರಿ ದರ್ಶನ್, ನನ್ನದ್ದೇನು ಇಲ್ಲ. ನಿರ್ಮಾಪಕರು ಒಪ್ಪಬೇಕು ಅಂದ್ರು. ಸಂಜೆ ಬನ್ನಿ ಅಂದ್ರು. ಸಂಜೆ ಹೋಗಿ ಭೇಟಿ ಮಾಡಿದೆ. ರಮೇಶ್ ಅವ್ರು ಮೊದಲು ಮೆಜೆಸ್ಟಿಕ್ ಚಿತ್ರಕ್ಕೆ ನಾನು ಸೂಕ್ತ ಎಂದು ಒಪ್ಪಿಕೊಂಡರು. ಅಲ್ಲಿಂದ 'ಮೆಜೆಸ್ಟಿಕ್' ಸಿನಿಮಾ ಶುರುವಾಯಿತು" ಎಂದು ದರ್ಶನ್ ಹೇಳಿದ್ದರು.
ಅಂದಾಜು 40ರಿಂದ 50 ಲಕ್ಷ ಬಂಡವಾಳದಲ್ಲಿ ನಿರ್ಮಾಣವಾಗಿದ್ದ 'ಮೆಜೆಸ್ಟಿಕ್' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿತು. ಶತದಿನೋತ್ಸವ ಪ್ರದರ್ಶನ ಕಂಡು ಸಂಚಲನ ಸೃಷ್ಟಿಸಿತು. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೀರೊ ಎಂಟ್ರಿ ಆಗಿತ್ತು. ಅಭಿಮಾನಿಗಳು ಅಂದಿನಿಂದಲೇ ದರ್ಶನ್ ಅವರನ್ನು ದಾಸ ಎಂದು ಕರೆಯಲು ಆರಂಭಿಸಿದರು. ಸದ್ಯ 50ಕ್ಕೂ ಅಧಿಕ ಸಿನಿಮಾಗಳಲ್ಲಿ ಹೀರೊ ಆಗಿ ದರ್ಶನ್ ನಟಿಸಿ ಗೆದ್ದಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಇತ್ತೀಚೆಗೆ 'ಕಾಟೇರ' ಸಿನಿಮಾ ಮೂಲಕ ಮತ್ತೆ ಬಾಕ್ಸಾಫೀಸ್ ಶೇಕ್ ಮಾಡಿದ್ದಾರೆ.


Click it and Unblock the Notifications











