30 Years of Kichcha Sudeep: ರಾಜಮೌಳಿ 'ಈಗ' ಚಿತ್ರಕ್ಕೆ ಮೊದಲ, ಕೊನೆಯ ಆಯ್ಕೆ ಸುದೀಪ್ ಆಗಿದ್ರು
ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸುದೀಪ್ ಗೆದ್ದಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ನಿರೂಪಕನಾಗಿ ಸುದೀಪ್ ಸಕ್ಸಸ್ ಕಂಡಿದ್ದಾರೆ. ಕಿಚ್ಚ ಒಳ್ಳೆ ಶೆಫ್, ಕ್ರಿಕೆಟರ್ ಕೂಡ ಹೌದು. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಸಕಲಕಲಾವಲ್ಲಭ.
ಇಂದಿಗೆ ಸರಿಯಾಗಿ 30 ವರ್ಷಗಳ ಹಿಂದೆ ಸುದೀಪ್ ಚಿತ್ರರಂಗ ಪ್ರವೇಶಿಸಿದ್ದರು. ಜನವರಿ 31 ರಂದು ಕಿಚ್ಚನ ಮೊದಲ ಸಿನಿಮಾ 'ಬ್ರಹ್ಮ' ಸೆಟ್ಟೇರಿತ್ತು. ಈ ಸಿನಿಮಾ ತೆರೆಗೆ ಬರಲೇ ಇಲ್ಲ. ಅಂದು ಮೊದಲು ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿ ಸುದೀಪ್ ಕ್ಯಾಮರಾ ಮುಂದೆ ನಟಿಸಿದರು. ಈ 30 ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸುದೀಪ್ ಮೋಡಿ ಮಾಡಿದ್ದಾರೆ. ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಇದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಸುದೀಪ್ ವೃತ್ತಿ ಜೀವನದಲ್ಲಿ ಮರೆಯಲಾಗದ ಸಿನಿಮಾ 'ಈಗ'. ರಾಜಮೌಳಿ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಡ್ರಾಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅವತ್ತಿನ ಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಒಂದು ಸಣ್ಣ ನೊಣವೇ ಚಿತ್ರದ ಹೀರೊ. ಸುದೀಪ್ ಖಳನಾಯಕನಾಗಿ ಅಬ್ಬರಿಸಿದ್ದರು. ತೆಲುಗಿನಲ್ಲಿ ಘಟಾನುಘಟಿ ಕಲಾವಿದರು ಇರುವಾಗ ಜಕ್ಕಣ್ಣ ಮಾತ್ರ ಆ ಪಾತ್ರಕ್ಕೆ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಅದು ಕಿಚ್ಚನ ಅಭಿನಯದ ತಾಖತ್ತು.
'ಈಗ' ಚಿತ್ರದ ಸುದೀಪ್ ಪಾತ್ರದಲ್ಲಿ ಅಷ್ಟು ಸುಲಭವಾಗಿ ಎಲ್ಲರೂ ನಟಿಸೋಕೆ ಸಾಧ್ಯವಿಲ್ಲ. ಅದಕ್ಕೆ ಕಿಚ್ಚ ಸುದೀಪ್ ರೀತಿಯ ನಟನೇ ಬೇಕಾಗಿತ್ತು ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಾಮಾನ್ಯವಾಗಿ ಯಾವುದೇ ಕಥೆ ಮಾಡಿದಾಗ ಪಾತ್ರಗಳಿಗೆ ಸಾಕಷ್ಟು ಜನರ ಹೆಸರುಗಳು ಕೇಳಿಬರುತ್ತವೆ. ಸುದೀಪ್ ಅಲ್ಲದೇ ಬೇರೆ ಯಾರನ್ನೂ ಆ ಪಾತ್ರಕ್ಕೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಕ್ಕಣ್ಣ ಹೇಳಿದ್ದರು.
ಹಲವು ಸೂಪರ್ ಹಿಟ್ ಸಿನಿಮಾಗಳನ್ನು ರಾಜಮೌಳಿ ಕಟ್ಟಿಕೊಟ್ಟಿದ್ದಾರೆ. ಅವರ ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಹೆಚ್ಚಿನ ತೂಕ ಇರುತ್ತದೆ. ವಿಲನ್ ಆರ್ಭಟ ಹೆಚ್ಚಾಗಿ ಇದ್ದಷ್ಟು ಕ್ಲೈಮ್ಯಾಕ್ಸ್ನಲ್ಲಿ ಹೀರೊ- ವಿಲನ್ ಮುಖಾಮುಖಿ ಕಿಕ್ ಕೊಡುತ್ತದೆ ಎಂದು ನಂಬಿದವರು ರಾಜಮೌಳಿ. ಆದರೆ ತಮ್ಮ ಅಷ್ಟೂ ಸಿನಿಮಾಗಳಲ್ಲಿ ಸುದೀಪ್ ಬೆಸ್ಟ್ ವಿಲನ್ ಎಂದು ವಿದೇಶದಲ್ಲಿ ಒಮ್ಮೆ ಹೇಳಿದ್ದರು.
'ಈಗ' ಚಿತ್ರದ ಆ ಪಾತ್ರಕ್ಕೆ ಸುದೀಪ್ ಆಯ್ಕೆ ಯಾಕೆ ಎನ್ನುವ ಪ್ರಶ್ನೆಗೆ ಮಾ ಟಿವಿ ಸಂದರ್ಶನದಲ್ಲಿ ರಾಜಮೌಳಿ ಉತ್ತರಿಸಿದ್ದರು. "ಪ್ರತಿಯೊಂದಕ್ಕೂ ವೈಲೆನ್ಸ್ ಯಾಕೆ ಎಂದು ವಿಲನ್ ಮೊದಲ ಡೈಲಾಗ್ ಚಿತ್ರದಲ್ಲಿದೆ. ಆದರೆ ಬಳಿಕ ಬಹಳ ವೈಲೆಂಟ್ ಆಗಿ ಬದಲಾಗ್ತಾನೆ. ಬಳಿಕ ಕಾಮೆಡಿಯನ್ ಆಗ್ತಾನೆ, ರೊಮ್ಯಾಂಟಿಕ್ ಆಗ್ತಾನೆ. ಮತ್ತೆ ವೈಲೆಂಟ್ ಆಗ್ತಾನೆ. ಎಲ್ಲವೂ ಕತ್ತಿನ ಅಲಗಿನ ಮೇಲೆ. ಕೊಂಚ ಹೆಚ್ಚಾದರೂ ಓವರ್ ಆಕ್ಟಿಂಗ್ ಆಗಿಬಿಡುತ್ತೆ. ಕಮ್ಮಿ ಆದರೂ ಸಮಸ್ಯೆ. ಆ ರೀತಿ ನಟಿಸುವುದು ಬಹಳ ಕಷ್ಟ. 'ರಣ್' ಚಿತ್ರದಲ್ಲಿ ಸುದೀಪ್ ನಟನೆ ನೋಡಿದಾಗ ಈ ಪಾತ್ರಕ್ಕೆ ಅವನೇ ಸೂಕ್ತ ಅನ್ನಿಸಿತು. ಅಮಿತಾಬ್ ಬಚ್ಚನ್ ಮುಂದೆ ಆ ರೀತಿ ನಟಿಸೋದು ತಮಾಷೆ ಅಲ್ಲ. ನಿಜಕ್ಕೂ ದೊಡ್ಡ ನಟ ಎನಿಸಿದ್ದರು" ಎಂದು ಜಕ್ಕಣ್ಣ ಹೇಳಿದ್ದರು.
'ಈಗ' ಕಥೆ ಮಾಡಿದಾಗ ಸುದೀಪ್ ಈ ಪಾತ್ರ ಮಾಡಿದ್ರೆ ಚೆನ್ನಾಗಿರುತ್ತೆ ಎನಿಸಿತು. ಕೇಳಿದಾಗ ಕೂಡಲೇ ಒಪ್ಪಿಕೊಂಡ್ರು. ಫಸ್ಟ್ ಲಾಸ್ಟ್ ಚಾಯ್ಸ್ ಎಲ್ಲವೂ ಸುದೀಪ್ ಆಗಿದ್ದರು ಎಂದು ರಾಜಮೌಳಿ ವಿವರಿಸಿದ್ದರು. ಕಿಚ್ಚನ ಅಭಿನಯದ ತಾಖತ್ತು ಇದು.


Click it and Unblock the Notifications











