Bedara Kannappa turns 70; 'ಬೇಡರ ಕಣ್ಣಪ್ಪ' ಚಿತ್ರಕ್ಕೆ ರಾಜ್ ಆಯ್ಕೆ ಆಗಿದ್ದೇಗೆ? ಸಿಕ್ಕ ಸಂಭಾವನೆ ಎಷ್ಟು?
ಕನ್ನಡ ಸಿನಿರಸಿಕರು ಎಂದೂ ಮರೆಯದ ಚಿತ್ರ 'ಬೇಡರ ಕಣ್ಣಪ್ಪ'. ಭಾರತೀಯ ಚಿತ್ರರಂಗಕ್ಕೆ ಡಾ. ರಾಜ್ಕುಮಾರ್ ಎನ್ನುವ ಅದ್ಭುತ ಪ್ರತಿಭೆಯನ್ನು ಪರಿಚಯಿಸಿದ ಸಿನಿಮಾ ಇದು. ಹೆಚ್. ಎಲ್. ಎನ್ ಸಿಂಹ ನಿರ್ದೇಶನದ ಈ ಭಕ್ತಿಪ್ರಧಾನ ಚಿತ್ರ ಹಲವು ಮೈಲಿಗಲ್ಲುಗಳಿವೆ ಸಾಕ್ಷಿ ಆಗಿತ್ತು. ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಮುತ್ತುರಾಜನಿಗೆ ಭದ್ರ ಬುನಾದಿ ಆಯಿತು.
30ರ ದಶಕದಲ್ಲೇ ಕನ್ನಡ ಸಿನಿಮಾಗಳ ನಿರ್ಮಾಣ ಆರಂಭವಾದರೂ ಕುಮಾರತ್ರಯರ ಆಗಮನದ ನಂತರ ಕನ್ನಡ ಚಿತ್ರರಂಗ ಹೆಚ್ಚು ಬೆಳವಣಿಗೆ ಕಂಡಿತ್ತು. ಅದರಲ್ಲೂ ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದವರಲ್ಲಿ ಡಾ. ರಾಜ್ಕುಮಾರ್ ಪ್ರಮುಖರು. ತಮ್ಮ ಸಿನಿಮಾಗಳ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆ ತಂದವರು ಮುತ್ತುರಾಜ್. ಕನ್ನಡಿಗರಿಗೆ ಸಿನಿಮಾಗಳ ರುಚಿ ಅತ್ತಿಸಿದವರೇ ಡಾ. ರಾಜ್ ಎಂದರೂ ತಪ್ಪಾಗಲ್ಲ. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಅಣ್ಣಾವ್ರು ಮುಂದೆ 200 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು.

ಮುತ್ತುರಾಜ ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಾಟಕಗಳಲ್ಲಿ ನಟಿಸುತ್ತಿದ್ದರು. ತಂದೆ ಜೊತೆಗೆ ಮಕ್ಕಳು ಬಣ್ಣ ಹಚ್ಚಲು ಆರಂಭಿಸಿದ್ದರು. ಮುತ್ತುರಾಜನ ಪ್ರತಿಭೆ ನೋಡಿದ ತಂದೆ ಆತನನ್ನು ಸಿನಿಮಾ ನಟ ಮಾಡುವ ಹಂಬಲ ಇತ್ತು. ಹಾಗಾಗಿ ಸಿನಿಮಾ ಸ್ಟುಡಿಯೋಗಳಲ್ಲಿ ಸುತ್ತಾಡಿ ಮಗನಿಗೆ ಅವಕಾಶಗಳನ್ನು ಕೇಳುತ್ತಿದ್ದರು. ಹೋದ ಕಡೆಯೆಲ್ಲಾ ನೋಡೋಣ, ಮಾಡೋಣ ಎನ್ನುವ ಉತ್ತರವೇ ಬರುತ್ತಿತ್ತು. ಈತನ ಮೂಗು ಉದ್ದ. ಈತ ಹೀರೊ ಆಗೋಕೆ ಸಾಧ್ಯಾನಾ ಎಂದು ನಕ್ಕವರು ಇದ್ದಾರೆ.
1954, ಮೇ 7ರಂದು ತೆರೆಕಂಡ 'ಬೇಡರ ಕಣ್ಣಪ್ಪ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಮೊದಲ ಪ್ರಯತ್ನದಲ್ಲೇ ಮುತ್ತುರಾಜ್ ಗೆದ್ದಿದ್ದರು. ಈ ಸಿನಿಮಾ ಇದೀಗ 70 ವರ್ಷ ಪೂರೈಸಿದೆ. ಆದರೆ ಅಂದು ಮುತ್ತುರಾಜನಿಗೆ ಈ ಸಿನಿಮಾ ಅವಕಾಶ ಸಿಗುವುದು ಅಷ್ಟು ಸುಲಭ ಆಗಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ನಿರ್ಮಾಪಕರಲ್ಲಿ ಒಬ್ಬರಾದ ಮೇಯಪ್ಪನ್ ಒಪ್ಪಿಕೊಂಡಿದ್ದರು. ಆದರೆ ಅನುಮಾನಪಟ್ಟವರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ನಟಿಸಿ ಗೆದ್ದರು ಡಾ. ರಾಜ್ಕುಮಾರ್.

ಅದಾಗಲೇ ಒಂದೆರಡು ಸಿನಿಮಾಗಳನ್ನು ಸಣ್ಣಪುಟ್ಟ ಪಾತ್ರಗಳಲ್ಲಿ ಮುತ್ತುರಾಜ ನಟಿಸಿದ್ದರು. ಸುಬ್ಬಯ್ಯ ನಾಯ್ಡು ನಾಟಕ ಸಂಸ್ಥೆಯಲ್ಲಿ 'ಅಂಬರೀಶ', 'ಭೂ ಕೈಲಾಸ', 'ಬಸವೇಶ್ವರ' ಹೀಗೆ ಹಲವು ನಾಟಕಗಳಲ್ಲಿ ಮುತ್ತುರಾಜ್ ನಟಿಸುತ್ತಿದ್ದರು. 'ಭಕ್ತ ಅಂಬರೀಶ' ನಾಟಕದಲ್ಲಿ ಅಣ್ಣಾವ್ರ ನಟನಗೆ ಭಾರೀ ಪ್ರಶಂಸೆ ಸಿಗುತ್ತಿತ್ತು. ಅದೇ ಸಮಯದಲ್ಲಿ ಎವಿಎಂ ಪ್ರೊಡಕ್ಷನ್ಸ್ ಹಾಗೂ ಕರ್ನಾಟಕ ಫಿಲ್ಮ್ಸ್ ಜಂಟಿಯಾಗಿ 'ಬೇಡರ ಕಣ್ಣಪ್ಪ' ಚಿತ್ರ ನಿರ್ಮಾಣಕ್ಕೆ ಮುಂದಾಗಿತ್ತು. ನಾಯಕ ಪಾತ್ರಕ್ಕೆ ಮುತ್ತುರಾಜ ಹೆಸರು ಕೇಳಿಬಂದಿತ್ತು.
ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜನಿಗೆ ಸಿನಿಮಾ ಅದೇ ಮೊದಲ ಅನುಭವ. ಮೊದಲಿಗೆ ಲುಕ್ ಟೆಸ್ಟ್ ಆಗಿತ್ತು. 15 ದಿನಗಳ ಬಳಿಕ ಆಯ್ಕೆ ಆಗಿರುವುದಾಗಿ ಮನೆಗೆ ಪತ್ರ ಬಂದಿತ್ತು. ಮೇಯಪ್ಪನ್ ಅವರಿಗೆ ನಾಯಕನ ಪಾತ್ರಕ್ಕೆ ಮುತ್ತುರಾಜ್ ಆಯ್ಕೆ ಸಮಾಧಾನ ತಂದಿರಲಿಲ್ಲ. ಆತ ಮೂಗುರ ಉದ್ದ, ನಾಯಕ ಪಾತ್ರಕ್ಕೆ ಸೂಕ್ತನಾ? ಎನ್ನುವ ಅಳುಕು ಅವರಲ್ಲಿತ್ತು. ಆದರೆ ನಾಲ್ಕೇ ದಿನಗಳಲ್ಲಿ ತಮ್ಮ ಅಭಿನಯದಿಂದ ಮೇಯಪ್ಪನ್ ಮನಸ್ಸು ಗೆದ್ದಿದ್ದರು ಮುತ್ತುರಾಜ್.
'ಬೇಡರ ಕಣ್ಣಪ್ಪ' ಚಿತ್ರದಲ್ಲಿ ದಿಣ್ಣ ಆಗಿ ಮುತ್ತುರಾಜ್ ನಟಿಸಿದ್ದರು. ಪತ್ನಿ ನೀಲ ಆಗಿ ಪಂಡರಿಬಾಯಿ ಕಾಣಿಸಿಕೊಂಡಿದ್ದರು. ಕಾಶೀನಾಥ್ ಶಾಸ್ತ್ರಿ ಆಗಿ ನರಸಿಂಹರಾಜು ನಟಿಸಿದ್ದರು. 1954ರಲ್ಲಿ ತೆರೆಕಂಡ ಸಿನಿಮಾ ಸತತ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಉದ್ದ ಮೂಗು ಎಂದು ಮೂದಲಿಸಿದವರೇ ಮುತ್ತುರಾಜನ ನಟನೆಗೆ ಮನ ಸೋತಿದ್ದರು.
ನಾಸ್ತಿಕನಾದ ದಿಣ್ಣ ತನ್ನ ಮುಗ್ಧ ಭಕ್ತಿಯಿಂದ ಶಿವನನ್ನೇ ಒಲಿಸಿಕೊಂಡ ಕಥೆಯಲ್ಲಿ ಡಾ. ರಾಜ್ಕುಮಾರ್ ಅಭಿನಯ ಮೋಡಿ ಮಾಡಿತ್ತು. ಗುಬ್ಬಿ ವೀರಣ್ಣ ನಾಟಕ ಕಂಪೆನಿಯಲ್ಲಿ ಬೇಡರ ಕಣ್ಣಪ್ಪ ನಾಟಕಗಳನ್ನು ಮಾಡಲಾಗುತ್ತಿತ್ತು. ಮುಂದೆ ಇದೇ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿತ್ತು. ಮುತ್ತುರಾಜ್ ತಿಂಗಳಿಗೆ 300 ರೂ. ಸಂಭಾವನೆಯಂತೆ 6 ತಿಂಗಳು ಕೆಲಸ ಮಾಡಿ 1800 ರೂ. ಸಂಭಾವನೆ ಪಡೆದಿದ್ದರು. ಇದು ಚಿತ್ರರಂಗದಲ್ಲಿ ಅವರು ಪಡೆದ ಮೊದಲ ಸಂಭಾವನೆ.
ಮುಂದೆ ಈ ಚಿತ್ರವನ್ನು ತೆಲುಗಿನಲ್ಲಿ ರೀಮೆಕ್ ಮಾಡಿದಾಗ ಅಣ್ಣಾವ್ರು ತೆಲುಗು ಕಲಿತು ನಟಿಸಿದ್ದರು. ಆಂಧ್ರದಲ್ಲಿ ಶತದಿನೋತ್ಸವ ಆಚರಿಸಿತ್ತು. ತಮ್ಮ ಚಿತ್ರಕ್ಕೆ ತಾವೇ ಕಂಠದಾನ ಮಾಡಬೇಕು ಎನ್ನುವುದು ಮುತ್ತುರಾಜ್ ಆಸೆ ಆಗಿತ್ತು. ಆದರೆ ತಮಿಳು, ಹಿಂದಿ ಕಲಿತು ನಟಿಸಲು ಇಷ್ಟಪಟ್ಟಿದ್ದರು. ಆದರೆ ನಿರ್ಮಾಪಕ, ನಿರ್ದೇಶಕರು ಒಪ್ಪಲಿಲ್ಲ. ಅಂದು ಅದಕ್ಕೆ ಅವಕಾಶ ಸಿಕ್ಕಿದ್ದರೆ ಮೊದಲ ಚಿತ್ರದಲ್ಲೇ ಚತುರ್ಭಾಷಾ ನಟನಾಗಿ ಮುತ್ತುರಾಜ್ ಪರಿಚಿತರಾಗುತ್ತಿದ್ದರು.
ಮನೆಯಲ್ಲಿ ಬಡತನ. ಚಿತ್ರದಲ್ಲಿ ಕಂಠದಾನ ಹಾಗೂ ಹಾಡುವ ಅವಕಾಶ ಸಿಕ್ಕರೆ ಹೆಚ್ಚು ಸಂಭಾವನೆ ಬರುತ್ತದೆ ಎಂದು ಮುತ್ತುರಾಜ್ ಬಯಸಿದ್ದರು. ಆದರೆ ಅವರು ಧ್ವನಿ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲ. ಹಾಗಾಗಿ ಚಿತ್ರದ ಹಾಡುಗಳನ್ನು ಸಿ. ಎಸ್ ಜಯರಾಮ್ ಹಾಡುವಂತಾಯಿತು. ಇಲ್ಲದಿದ್ದರೆ ಮೊದಲ ಚಿತ್ರದಲ್ಲೇ ಗಾಯಕರಾಗಿಯೂ ಪರಿಚಿತರಾಗಬೇಕಿತ್ತು. ಇನ್ನು ಚಿತ್ರಕ್ಕೆ ಆ ವರ್ಷ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು.
ಚಿತ್ರಕ್ಕೆ ಆರ್. ಸುದರ್ಶನಂ ಸಂಗೀತ ನೀಡಿದ್ದರು. 'ಬೇಡರ ಕಣ್ಣಪ್ಪ' ಸಿನಿಮಾ ಗೆಲ್ಲದಿದ್ದರೆ ಚಿತ್ರರಂಗದಿಂದ ದೂರಾಗಲೂ ಡಾ. ರಾಜ್ ನಿರ್ಧರಿಸಿದ್ದರು. ಈ ಸಿನಿಮಾ ಬಳಿಕ ಕೂಡ ಅವಕಾಶಗಳಿಲ್ಲದೇ ಮುತ್ತುರಾಜ್ ಸಂಕಷ್ಟ ಎದುರಿಸಿದ್ದ ದಿನಗಳಿವೆ. ಇನ್ನು ಮಗನನ್ನು ಸಿನಿಮಾ ನಟ ಮಾಡಬೇಕು ಎನ್ನುವುದು ಪುಟ್ಟಸ್ವಾಮಯ್ಯನವರ ಕನಸಾಗಿತ್ತು. ಆದರೆ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಮುತ್ತುರಾಜ್ ಆಯ್ಕೆ ಆಗುವ ವೇಳೆಗೆ ಅವರು ನಿಧನರಾಗಿದ್ದರು. ನನ್ನ ಗೆಲುವನ್ನು ತಂದೆ ನೋಡಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಅಣ್ಣಾವ್ರನ್ನ ಬಹಳ ಕಾಡಿತ್ತು.
'ಬೇಡರ ಕಣ್ಣಪ್ಪ' ಕಥೆಯನ್ನು ಕೊಂಚ ಬದಲಿಸಿ 'ಶಿವ ಮೆಚ್ಚಿನ ಕಣ್ಣಪ್ಪ' ಸಿನಿಮಾ ಕಟ್ಟಿಕೊಡಲಾಗಿತ್ತು. ಶಿವರಾಜ್ಕುಮಾರ್ ಹೀರೊ ಆಗಿ ನಟಿಸಿದ್ದರು. ಬಾಲ್ಯದ ದಿಣ್ಣ ಆಗಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಶಿವನಾಗಿ ಡಾ. ರಾಜ್ಕುಮಾರ್ ಬಣ್ಣ ಹಚ್ಚಿದ್ದರು.


Click it and Unblock the Notifications











