92 Years of Sati Sulochana: ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ಕಥೆ ಏನು? ಚಿತ್ರಕ್ಕೆ ಆಗಿದ್ದ ಬಜೆಟ್ ಎಷ್ಟು?
ಮಾರ್ಚ್ 3.. ಕನ್ನಡ ಚಿತ್ರರಂಗದಲ್ಲಿ ಮರೆಯಲಾಗ ದಿನ. ಸರಿಯಾಗಿ 92 ವರ್ಷ ವರ್ಷಗಳ ಹಿಂದೆ ಇದೇ ದಿನ ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ತೆರೆಗೆ ಬಂದಿತ್ತು. ಕನ್ನಡ ಸಿನಿಮಾ ಹುಟ್ಟು ಆ ಬಳಿಕ ಸಾವಿರಾರು ಕನ್ನಡ ಸಿನಿಮಾಗಳು ಪ್ರೇಕ್ಷಕರು ಮುಂದೆ ಬಂದಿವೆ. ನೂರಾರು ಕಲಾವಿದರು, ತಂತ್ರಜ್ಞರು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಸಿನಿಮಾಗಳು ಇವತ್ತಿಗೂ ಪ್ರೇಕ್ಷಕರನ್ನು ರಂಜಿಸುತ್ತಲೇ ಇವೆ. ಸಾಮಾಜಿಕ ಬದಲಾವಣೆಗೂ ಕನ್ನಡ ಸಿನಿಮಾಗಳ ಕೊಡುಗೆ ಅಪಾರ.
'ಸತಿ ಸುಲೋಚನ' ಚಿತ್ರಕ್ಕೂ ಮುನ್ನ ಒಂದಷ್ಟು ಮೂಕಿ ಚಿತ್ರಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ಅಂದಹಾಗೆ 'ಭಕ್ತಧ್ರುವ' ಮೊದಲು ಚಿತ್ರೀಕರಣ ಆರಂಭಿಸಿದರೂ 'ಸತಿ ಸುಲೋಚನ' ಮೊದಲು ತೆರೆ ಕಂಡಿತ್ತು. ವೈ. ವಿ ರಾವ್ ನಿರ್ದೇಶನದಲ್ಲಿ ಚಾಮನಲಾಲ್ ದೂಂಗಾಜಿ ಹಾಗೂ ಶಾ ಭೂರ್ಮಲ್ ಚಮನ್ಲಾಲ್ ಸಿನಿಮಾ ನಿರ್ಮಾಣ ಮಾಡಿದ್ದರು. ಸೃಜನ್ ಲೋಕೇಶ್ ತಾತ ಅಂದ್ರೆ ಲೋಕೇಶ್ ಅವರ ತಂದೆ ಸುಬ್ಬಯ್ಯ ನಾಯ್ಡು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ತ್ರಿಪುರಾಂಬ, ಆರ್. ನಾಗೇಂದ್ರ ರಾವ್, ಇಂದುಬಾಲ ಸೇರಿ ಹಲವರು 'ಸತಿ ಸುಲೋಚನ' ಚಿತ್ರದ ತಾರಾಗಣದಲ್ಲಿ ಇದ್ದರು. ಅಂದಹಾಗೆ ಈ ಚಿತ್ರವನ್ನು ನೋಡಲು ಸಿಗುವುದಿಲ್ಲ. ಚಿತ್ರದ ಒಂದೇ ಒಂದು ತುಣುಕು ಕೂಡ ಲಭ್ಯವಿಲ್ಲ. ಚಿತ್ರಕಥೆ ಪ್ರತಿ ಕೂಡ ಸಿಕ್ಕಿಲ್ಲ. ಅಂದಹಾಗೆ ಇದು 173 ನಿಮಿಷ(2 ಗಂಟೆ 50 ನಿಮಿಷ) ಕಾಲಾವಧಿಯ ಚಿತ್ರವಾಗಿತ್ತು. ಬರೋಬ್ಬರಿ 30 ಹಾಡುಗಳು ಈ ಚಿತ್ರದಲ್ಲಿದ್ದವು.
ಚಿತ್ರದ ಕಥೆ
ರಾಮಾಯಣ ಕಾವ್ಯಗಳಲ್ಲಿ ಸತಿ ಸುಲೋಚನ ಬಗ್ಗೆ ಉಪಕಥೆಯಿದೆ. ಲಂಕೆಯಲ್ಲಿ ರಾಮ ಹಾಗೂ ರಾವಣನ ನಡುವೆ ಯುದ್ಧ ಅದಾಗಲೇ ಆರಂಭವಾಗಿರುತ್ತದೆ. ಮೊದಲಿಗೆ ರಾವಣನನ ಮಗ ಇಂದ್ರಜಿತ್ ಜೊತೆ ಯುದ್ಧ ನಡೆಯುತ್ತದೆ. ಇಂದ್ರಜಿತ್ ಪತ್ನಿ ಈಕೆ. ರಾವಣನಿಗೆ ವಿಷ್ಣು ವೈರಿ. ದರೆ ಸುಲೋಚನ ಯುದ್ಧದಲ್ಲಿ ಪತಿಗೆ ತೊಂದರೆ ಆಗದಂತೆ ವಿಷ್ಣುವಿನ ಆರಾಧನೆ ಮಾಡುತ್ತಿರುತ್ತಾಳೆ. ಇದೇ ಕಥೆಯನ್ನು ಆಧರಿಸಿ ಬೆಳ್ಳಾವೆ ನರಹರಿ ಶಾಸ್ತ್ರಿ ಚಿತ್ರಕಥೆ ಬರೆದಿದ್ದರು. ಚಿತ್ರದಲ್ಲಿ ಇಂದ್ರಜಿತ್ ಪಾತ್ರದಲ್ಲಿ ಸುಬ್ಬಯ್ಯ ನಾಯ್ಡು ನಟಿಸಿದ್ದರು. ಸುಲೋಚನಾ ಆಗಿ ತ್ರಿಪುರಾಂಬ ಮಿಂಚಿದ್ದರು.

ಚಿತ್ರದ ಬಜೆಟ್
'ಸತಿ ಸುಲೋಚನ' ಬರೀ ಒಂದು ಸಿನಿಮಾ ಅಲ್ಲ, ಕನ್ನಡ ಚಿತ್ರರಂಗದ ಒಂದು ದಾಖಲೆ ಆಗಿ ಉಳಿದುಕೊಂಡಿದೆ. ಆದರೆ ಚಿತ್ರದ ಒಂದೇ ಒಂದು ರೀಲ್ ಕೂಡ ಉಳಿದಿಲ್ಲ. ಅದನ್ನು ಸಂರಕ್ಷಿಸುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ. 2 ತಿಂಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿತ್ತು. ಕೊಲ್ಲಾಪುರದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿತ್ತು. ಅವತ್ತಿನ ಕಾಲಕ್ಕೆ 40 ಸಾವಿರ ರೂ. ಬಜೆಟ್ನಲ್ಲಿ ಸಿನಿಮಾ ತಯಾರಾಗಿತ್ತು.
ಸಿನಿಮಾ ಮೇಕಿಂಗ್
ಇವತ್ತು ಡಿಜಿಟಲ್ ಯುಗ. ಬರೀ ಮೊಬೈಲ್ ಫೋನ್ನಲ್ಲಿ ಒಂದು ಸಿನಿಮಾ ಚಿತ್ರೀಕರಣ ಮಾಡಿಬಿಡಬಹುದು. 90 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. ಅವತ್ತಿನ ಕಾಲದಲ್ಲಿ ಸಿನಿಮಾ ನಿರ್ಮಾಣ ಸವಾಲಿನ ಕೆಲಸವಾಗಿತ್ತು. ವಿದ್ಯುತ್ ದೀಪಗಳು ಇರಲಿಲ್ಲ. ಸುತ್ತಾ ಸೆಟ್ ಹಾಕಿ ಗೋಡೆ ನಿರ್ಮಿಸಿ ಸೂರ್ಯನ ಬೆಳಕನ್ನು ರಿಪ್ಲೆಕ್ಟರ್ ಮೇಲೆ ಬೀಳುವಂತೆ ಮಾಡಿ ಲೈಟಿಂಗ್ ವ್ಯವಸ್ಥೆ ಮಾಡಿ ಚಿತ್ರೀಕರಣ ನಡೆಸಲಾಗಿತ್ತು. ಯುದ್ಧದ ಸನ್ನಿವೇಶ ಚಿತ್ರೀಕರಣಕ್ಕೆ 4 ಮಿಚ್ಚೆಲ್ ಕ್ಯಾಮರಾ ಬಳಸಿದ್ದರು.
ಸಿನಿಮಾ ಪ್ರದರ್ಶನ
ಬೆಂಗಳೂರಿನ ಸಿಟಿ ಮಾರ್ಕೆಟ್ ಬಳಿ ಅಪ್ಸರಾ ಎಂಬ ಚಿತ್ರಮಂದಿರ ಇತ್ತು. ಪರಿಮಳ, ಪ್ರದೀಪ್ ಮತ್ತೆರಡು ಚಿತ್ರಮಂದಿರಗಳಿದ್ದವು. ಈಗ ಅದೆಲ್ಲಾ ಕಣ್ಮರೆ ಆಗಿದೆ. 90 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಪ್ಯಾರಾಮೌಂಟ್ ಎಂಬ ಚಿತ್ರಮಂದಿರ ಇತ್ತು. ಅಲ್ಲಿ ಮೊದಲ ಬಾರಿಗೆ 'ಸತಿ ಸುಲೋಚನ' ಸಿನಿಮಾ ಪ್ರದರ್ಶನ ಕಂಡಿತ್ತು. ಮೊದಲಿಗೆ ಜನ ಬಹಳ ಆಶ್ಚರ್ಯ ಚಕಿತರಾಗಿ ಸಿನಿಮಾ ವೀಕ್ಷಿಸಿದ್ದರು. ಪಾತ್ರಗಳು ಮಾತನಾಡುವುದು, ಯುದ್ಧದ ಸನ್ನಿವೇಶ ಎಲ್ಲವೂ ಅದ್ಭುತ ಅನುಭವ ನೀಡಿತ್ತು. ಈ ಚಿತ್ರಕ್ಕೆ ಸಿಕ್ಕ ಯಶಸ್ಸು ಮುಂದೆ ಹಲವು ಸಿನಿಮಾಗಳ ನಿರ್ಮಾಣಕ್ಕೆ ನಾಂದಿ ಹಾಡಿತು.


Click it and Unblock the Notifications











