ಹೆಸರು ಬದಲಿಸಿಕೊಂಡರೆ ಅವಕಾಶ ; ಖ್ಯಾತ ನಿರ್ದೇಶಕರಿಗೆ ದರ್ಶನ್ ಹೇಳಿದ್ದೇನು..?
ಹೆಸರಲ್ಲೇನಿದೆ .. ವ್ಯಕ್ತಿತ್ವದಲ್ಲಿ ಎಲ್ಲವೂ ಅಡಗಿದೆ ಅನ್ನುವ ಮಾತು ಸಾಮಾನ್ಯವಾಗಿ ಕೇಳಿ ಬರುತ್ತೆ. ಆದರೆ ಬಣ್ಣದ ಪ್ರಪಂಚದಲ್ಲಿ ಈ ಹೆಸರಿನ ಮೇಲಿನ ವ್ಯಾಮೋಹ ತುಸು ಹೆಚ್ಚೇ ಇದೆ. ಹೀಗಾಗಿಯೇ ಕೆಲವರು ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರನ್ನ ಬದಲಿಸಿಕೊಂಡರೆ, ಇನ್ನೂ ಕೆಲವರು ನಿರ್ದೇಶಕ ಹಾಗೂ ನಿರ್ಮಾಪಕರ ಒತ್ತಾಸೆ, ಒತ್ತಾಯಕ್ಕೆ ಮಣಿದು ಹೆಸರು ಬದಲಿಸಿಕೊಂಡಿದ್ದು ಇದೆ.
ಆದರೆ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಇದಕ್ಕೆ ತದ್ವಿರುದ್ದ. ಜಪ್ಪಯ್ಯ ಅಂದರೂ ದರ್ಶನ್ ತಮ್ಮ ಹೆಸರನ್ನ ಬದಲಿಸಿಕೊಳ್ಳಲಿಲ್ಲ ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ

ಹೌದು, ನಿಮಗೆ ಗೊತ್ತಿರಲಿ.. ಕನ್ನಡ ಚಿತ್ರರಂಗಕ್ಕೆ ದರ್ಶನ್ ಆಗಷ್ಟೇ ಬಂದಿದ್ದರು. ಅವಕಾಶಕ್ಕಾಗಿ ಅಲೆದಾಟ, ಬದುಕಿನ ಹೋರಾಟ ನಡೆಯುತ್ತಿದ್ದ ದಿನಗಳವು. ಆ ದಿನಗಳಲ್ಲಿ ಡೈರೆಕ್ಟರ್ ಒಬ್ಬರನ್ನ ದರ್ಶನ್ ಭೇಟಿಯಾಗಿದ್ದರು. ಚಿತ್ರದಲ್ಲಿ ಪಾತ್ರ ಕೊಡುವಂತೆ ಕೇಳಿದ್ದರು. ಆ ನಿರ್ದೇಶಕರು ಒಪ್ಪಿಕೊಂಡಿದ್ದರು ಕೂಡ. ಆದರೆ ಇದೇ ಸಮಯದಲ್ಲಿ ಆ ಚಿತ್ರದ 'ಸಾರಥಿ', ಬಾಕ್ಸಾಫೀಸ್ ನ ಈ ''ಸಾರಥಿ''ಗೆ 'ಷರತ್ತು' ಹಾಕಿದ್ದರು. 'ಹೆಸರು' ಬದಲಿಸಿಕೊಳ್ಳುವಂತೆ ಹೇಳಿದ್ದರು. ದರ್ಶನ್ ಜಾಗದಲ್ಲಿ ಬೇರೆ ಯಾರಿದ್ದರೂ ಒಪ್ಪಿಕೊಳ್ಳುತ್ತಿದ್ದರೇನೋ. ಆದರೆ ದರ್ಶನ್ ಮಾತ್ರ ಇದಕ್ಕೆ ಒಪ್ಪಲಿಲ್ಲ. ಖಂಡ ತುಂಡವಾಗಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡು ಅಲ್ಲಿಂದ ಎದ್ದು ಬಂದಿದ್ದರು ದರ್ಶನ್.
ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ತಮಗಾದ ಈ ಅನುಭವವನ್ನ ದಶಕದ ಹಿಂದೆ ಡಿಡಿ ಚಂದನ ವಾಹಿನಿಗೆ ಸಂದರ್ಶನದಲ್ಲಿ ದರ್ಶನ್ ಹೇಳಿದ್ದರು. ಆ ಅನುಭವದ ಸಾರ ಈಗ ವರ್ಷಾನುವರ್ಷಗಳ ನಂತರ ವೈರಲ್ ಆಗುತ್ತಿದೆ. ವಾಟ್ಸಾಪ್ ಗಳಿಂದ ವಾಟ್ಸಾಪ್ ಗೆ ಹರಿದಾಡುತ್ತಿದೆ
ವೈರಲ್ ಆದ ತುಣುಕಿನಲ್ಲಿ ಮಾತನಾಡಿರುವ ದರ್ಶನ್, ಒಂದು ಸಾರಿ ಒಂದು ಸಿನಿಮಾಗೆ ಅಂತ ಹೋಗಿದ್ದೇ. ದೊಡ್ಡ ಡೈರೆಕ್ಟರ್ನ ಭೇಟಿ ಮಾಡೋಕೆ ಹೋಗಿದ್ದೆ ಆಗ ವಿಲನ್ ಪಾತ್ರ ಮಾಡುತ್ತಿದ್ದೆ. ಮಾತುಕತೆ ವೇಳೆ ನಿರ್ದೇಶಕರು ಆಯಿತು ದರ್ಶನ್ ಅದಕ್ಕೇನು ಮಾಡೋಣ ಅಂತ ಒಪ್ಪಿದ್ದರು ಎಂದು ಹೇಳಿದ್ದರು.

ಮುಂದುವರೆದು ಮಾತನಾಡಿರುವ ದರ್ಶನ್ ಆದರೆ ಆ ನಂತರ ಅವರು ಹೆಸರು ಚೆನ್ನಾಗಿಲ್ಲ. ಹೆಸರು ಚೇಂಜ್ ಮಾಡೋಣ, ಒಂದೊಳ್ಳೇ ಹೆಸರು ಇಡೋಣ ಎಂದರು. ಇನ್ನೂ ಆಗ ದೊಡ್ಡ ಡೈರೆಕ್ಟರ್ ಆದರೂ ನಾನು ಮಾತನಾಡಲೇಬೇಕು ಎಂದುಕೊಂಡು, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಸರ್, ಅವಕಾಶ ಕೊಡದೇ ಇದ್ದರೂ ಬೇಜಾರ್ ಇಲ್ಲ. ಕೊಟ್ಟರೂ ನಾನು ಬಂದು ಮಾಡಲ್ಲ, ಬಟ್ ನಮ್ಮ ಅಪ್ಪ ಅಮ್ಮ ಇಟ್ಟ ಹೆಸರು ಇದು. ದರ್ಶನ್ ಅಂದರೆ ಸಾಕು ನನಗೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದರು. ನೀವು ಕೊಟ್ಟ ಕ್ಯಾರೆಕ್ಟರ್ಗಾಗಿ ಹೆಸರು ಬದಲಿಸಿಕೊಳ್ಳುವುದಿಲ್ಲ. ಧನ್ಯವಾದ ಹೇಳಿ ಬಂದೆ. ಆ ಬಳಿಕ ಆ ಸಿನಿಮಾನ ಬಿಟ್ಟೆ' ಎಂದು ದರ್ಶನ್ ಹೇಳಿದ್ದರು.
ಇವತ್ತು ದರ್ಶನ್ ಹೆಸರಿಗೆ ಒಂದು ತೂಕ ಇದೆ. ಶಕ್ತಿ ಇದೆ. ಸ್ಯಾಂಡಲ್ ವುಡ್ ಏಕ ಚಕ್ರಾಧಿಪತಿ, ಬಾಕ್ಸ್ ಆಫೀಸ್ ಸುಲ್ತಾನ್, ಸುಲ್ತಾನ್ ಆಫ್ ಸ್ಯಾಂಡಲ್ ವುಡ್, ಚಾಲೆಂಜಿಂಗ್ ಸ್ಟಾರ್ , ಭೂಮಿ ಪುತ್ರ, ಹೀಗೆ ಹತ್ತಾರು ಬಿರುದುಗಳಿವೆ. ಒಟ್ನಲ್ಲಿ ನಂಬಿದರೆ ಸರ್ವಸ್ವವನ್ನೂ ಧಾರೆಯೆರೆದುಬಿಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದಲ್ಲ ಬದಲಿಗೆ ಅವತ್ತೇ ತಮ್ಮ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್ ಅನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ


Click it and Unblock the Notifications











