"ಏಯ್ ಮನೆ ಹಿಂದೆ ಏನೋ ಇದೆ?"; ಪುನೀತ್ ರಾಜ್ಕುಮಾರ್ ಗದರಿದ ಹಳೇ ವೀಡಿಯೋ ವೈರಲ್
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅಗಲಿ ವರ್ಷಗಳೇ ಕಳೆಯುತ್ತಿದೆ. ಅಪ್ಪು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳು ಇನ್ನು ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಹೀರೊ ಆಗಿದ್ದ ರಾಜರತ್ನನ್ನು ಅಭಿಮಾನಿಗಳು ಪ್ರತಿ ಕ್ಷಣ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
ಅಭಿಮಾನಿಗಳನ್ನು ದೇವರು ಎಂದು ಭಾವಿಸಿರುವ ಕುಟುಂಬದ ಕುಡಿ ಪುನೀತ್ ರಾಜ್ಕುಮಾರ್. ಅಪ್ಪಾಜಿ ರೀತಿಯೇ ಸರಳ, ಸಜ್ಜನ ವ್ಯಕ್ತಿತ್ವ ರೂಢಿಸಿಕೊಂಡವರು. ಸಿಕ್ಕಾಪಟ್ಟೆ ಸಿಂಪಲ್ ಆಗಿ ಇರುತ್ತಿದ್ದ ಅಪ್ಪು ಅಭಿಮಾನಿಗಳಿಗಾಗಿ ಸದಾ ಮುಂದೆ ನಿಲ್ಲುತ್ತಿದ್ದರು. ಅವರ ಗುಣ ಎಂಥದ್ದು ಎಂದು ಸಾಕಷ್ಟು ಸಂದರ್ಭಗಳಲ್ಲಿ ರುತುವಾತಾಗಿದೆ.

ಬಲಗೈಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎನ್ನುವ ಅಪ್ಪು ನಿಮಯ. ಅವರ ನಿಧನದ ಬಳಿಕ ಸಾಕಷ್ಟು ಜನ ಅವರ ಸಹಾಯದ ಬಗ್ಗೆ ಮೆಲುಕು ಹಾಕಿದ್ದಾರೆ. ಕರುನಾಡ ಕೊಟ್ಯಧಿಪತಿ ಹಾಗೂ ಫ್ಯಾಮಿಲಿ ಪವರ್ ಕಾರ್ಯಕ್ರಮಗಳಲ್ಲಿ ಕಡಿಮೆ ಹಣ ಗೆದ್ದವರು, ಕಷ್ಟದಲ್ಲಿ ಇದ್ದವರಿಗೆ ಅಪ್ಪು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹೀಗೆ ಸಾಕಷ್ಟು ಜನರಿಗೆ ಸಹಾಯ ಮಾಡಿರುವ ಉದಾಹರಣೆಯಿದೆ.
ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಲು ಪ್ರತಿದಿನ ಅಭಿಮಾನಿಗಳು ದೂರ ಊರುಗಳಿಂದ ಬರುತ್ತಿದ್ದರು. ಮನೆಯಲ್ಲೇ ಇದ್ದರೆ ಅಪ್ಪು ಹೊರಬಂದು ಮಾತನಾಡಿಸುತ್ತಿದ್ದರು. ಆಟೋಗ್ರಾಫ್ ಕೊಡುತ್ತಿದ್ದರು, ಬಳಿಕ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಭಿಮಾನಿಗಳು ಊಟ ಮಾಡಿಲ್ಲ ಎಂದರೆ ತಮ್ಮ ಮನೆಯ ಹಿಂಭಾಗದ ಹೋಟೆಲ್ನಲ್ಲಿ ಊಟ ಕೊಡಿಸುವಂತೆ ಆಪ್ತರಿಗೆ ಹೇಳುತ್ತಿದ್ದರು.
ಪುನೀತ್ ರಾಜ್ಕುಮಾರ್ ಹೀಗೆ ಅಭಿಮಾನಿಗಳಿಗೆ ಊಟ ಕೊಡಿಸು ಎಂದು ಆಪ್ತರಿಗೆ ಹೇಳಿದ್ದ ವೀಡಿಯೋ ಈಗ ವೈರಲ್ ಆಗ್ತಿದೆ. ಅಭಿಮಾನಿಗಳ ಎದುರು ಆಪ್ತನನ್ನು ಕರೆದು, "ಏಯ್ ಮನೆ ಹಿಂದೆ ಏನೋ ಇದೆ. ಪಾರ್ಕ್ ಇದೆ. ಆ ಪಾರ್ಟ್ನಲ್ಲಿ ಹೋಟೆಲ್ ಇದೆ. ಅದು ನನ್ನ ಫ್ರೆಂಡ್ದು. ಅಲ್ಲಿ ಹೋಗಿ ಹೇಳಿ ಊಟ ಕೊಡ್ಸು, ಕರ್ಕೊಂಡ್ ಹೋಗು" ಎಂದು ಅಪ್ಪು ಹೇಳಿರುವುದನ್ನು ವೀಡಿಯೋದಲ್ಲಿ ನೋಡಬಹುದು.
Appu 🥺💖#AppuReRelease #AppuLivesOn #AppuLocalArrivesOnMarch14 @PuneethRajkumar pic.twitter.com/ahUO4uCqIG
— Sanjana__GN (@Sanjana__GN_) March 13, 2025
ನೆಚ್ಚಿನ ನಟನ ಈ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೊಮ್ಮೆ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಬಾಸ್ ನಿಮ್ ತರ ಯಾರು ಇರಲ್ಲ ಬಾಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಮವಾರ(ಮಾರ್ಚ್ 17) ಪುನೀತ್ 50ನೇ ವರ್ಷದ ಹುಟ್ಟಹಬ್ಬ. ಅದಕ್ಕೂ ಮುನ್ನ ಶುಕ್ರವಾರ ಅಪ್ಪು ಸಿನಿಮಾ ಹೊಸ ರೂಪದಲ್ಲಿ ರೀ-ರಿಲೀಸ್ ಆಗುತ್ತಿದೆ.
ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದ 'ಅಪ್ಪು' ಚಿತ್ರದ ಮೂಲಕ ಹೀರೊ ಆಗಿ ಪುನೀತ್ ಚಿತ್ರರಂಗಕ್ಕೆ ವಾಪಸ್ ಬಂದಿದ್ದರು. ಮೊದಲ ಸಿನಿಮಾ ಶತದಿನೋತ್ಸವ ಆಚರಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕಾಲೇಜು ಹುಡುಗನಾಗಿ ಪುನೀತ್ ಮಿಂಚಿದ್ದರು. ಫೈಟ್ಸ್, ಡ್ಯಾನ್ಸ್ ಮೂಲಕ ಕೊಂಚ ಹೆಚ್ಚೇ ಪ್ರೇಕ್ಷಕರನ್ನು ರಂಜಿಸಿ ಗೆದ್ದಿದ್ದರು. ಇದೀಗ ಅಶ್ವಿನಿ ಪುನೀತ್ ರಾಜ್ಕುಮಾರ್ 'ಅಪ್ಪು' ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ.
ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು ರಕ್ತದಾನ, ಅನ್ನದಾನ, ನೇತ್ರದಾನ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಇನ್ನು ಕುಟುಂಬ ಸದಸ್ಯರು ತೆರಳಿ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ 'ಅಪ್ಪು' ಸಿನಿಮಾ ತೆರೆಮೇಲೆ ಮತ್ತೆ ಅಪ್ಪಳಿಸಲಿದೆ.


Click it and Unblock the Notifications











