ಅನುಪಮಾ ಗೌಡಗೂ ಮುನ್ನ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದ ನಟಿಯರ ಪಟ್ಟಿ
2019ನೇ ಸಾಲಿನ ಕನ್ನಡ ಸಿನಿಮಾಗಳಿಗೆ ಇತ್ತೀಚೆಗೆ ರಾಜ್ಯ ಪ್ರಶಸ್ತಿ ಘೋಷಣೆ ಆಗಿದೆ. ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರೆ ಅನುಪಮಾ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. 'ತ್ರಯಂಬಕಂ' ಚಿತ್ರಕ್ಕಾಗಿ ಆಕೆಗೆ ಈ ಗೌರವ ಲಭಿಸಿದೆ. 50 ವರ್ಷಗಳ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಇತಿಹಾಸದಲ್ಲಿ ಸಾಕಷ್ಟು ನಟಿಯರು ಈ ಪ್ರಶಸ್ತಿಗೆ ಪಡೆದಿದ್ದಾರೆ.
ಅಂದಹಾಗೆ 1967-68 ವರ್ಷದಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲು ಆರಂಭಿಸಲಾಯಿತು. ಕಳೆದ ನಾಲ್ಕೈದು ವರ್ಷಗಳಿಂದ ಇದಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ದಿಢೀರನೆ ಸರ್ಕಾರ 2019ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದೆ. ತೀರ್ಪುಗಾರರು ಒಟ್ಟು 172 ಸಿನಿಮಾಗಳನ್ನು ನೋಡಿ 18ಕ್ಕೂ ಅಧಿಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ.

ಅನುಪಮಾ ಗೌಡಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿರುವುದಕ್ಕೆ ಆಪ್ತರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಸ್ನೇಹಿತರ ಜೊತೆ ಆಕೆ ಸಂಭ್ರಮಾಚರಣೆ ಸಹ ಮಾಡಿದ್ದಾರೆ. ಅಂದಹಾಗೆ ಕರ್ನಾಟದ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲ ಬಾರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು ಮಿನುಗು ತಾರೆ ಕಲ್ಪನಾ.
'ಬೆಳ್ಳಿಮೋಡ' ಚಿತ್ರದ ನಟನೆಗಾಗಿ 1967ರಲ್ಲಿ ಕಲ್ಪನಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. 'ಹಣ್ಣೆಲೆ ಚಿಗುರಿದಾಗ' ಚಿತ್ರಕ್ಕಾಗಿ ಮರುವರ್ಷವೂ ಪ್ರಶಸ್ತಿ ಅವರನ್ನ ಅರಸಿ ಹೋಗಿತ್ತು. ಅದೇ ಚಿತ್ರದ ನಟನೆಗಾಗಿ ಆರ್. ನಾಗೇಂದ್ರ ರಾವ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರು. 'ಶರಪಂಜರ' ಚಿತ್ರಕ್ಕಾಗಿ 3ನೇ ಬಾರಿ ಕಲ್ಪನಾ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಆರತಿ- ತಾರಾ ಸಾಧನೆ
ಕಲ್ಪನಾ ಅವರಿಗಿಂತ ಹೆಚ್ಚು ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದವರು ಆರತಿ ಹಾಗೂ ತಾರಾ. 'ನಾಗರಹಾವು', 'ಕಥಾಸಂಗಮ', 'ಧರ್ಮಸೆರೆ' ಹಾಗೂ 'ರಂಗನಾಯಕಿ' ಚಿತ್ರಗಳಿಗೆ ಆರತಿ ಈ ಗೌರವ ಸ್ವೀಕರಿಸಿದ್ದರು. ಇತ್ತೀಚೆಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಟಿ ತಾರಾ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. 'ಕರ್ಮ', 'ಕಾನೂರು ಹೆಗ್ಗಡತಿ', 'ಸೈನೆಡ್' ಹಾಗೂ 'ಹೆಬ್ಬೆಟ್ ರಾಮಕ್ಕ' ಸೇರಿ 4 ಚಿತ್ರಗಳಿಗೆ ತಾರಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ನಟಿ ಜಯಂತಿಗೆ 3 ಪ್ರಶಸ್ತಿ
ಮಿನುಗು ತಾರೆ ಕಲ್ಪನಾ ರೀತಿಯಲ್ಲೇ ಅಭಿನಯ ಶಾರದೆ ಜಯಂತಿ ಅವರಿಗೂ 3 ಬಾರಿ ರಾಜ್ಯ ಪ್ರಶಸ್ತಿ ಒಲಿದಿತ್ತು. 1976ರಲ್ಲಿ 'ಮನಸ್ಸಿನಂತೆ ಮಾಂಗಲ್ಯ' ಚಿತ್ರಕ್ಕಾಗಿ ಮೊದಲಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. 'ಧರ್ಮ ದಾರಿ ತಪ್ಪಿತು' ಹಾಗೂ 'ಮಸಣದ ಹೂವು' ಚಿತ್ರದ ನಟನೆಗೂ ಈ ಗೌರವ ಲಭಿಸಿತ್ತು.
ಸುಧಾರಾಣಿ, ಭಾವನಾ, ಶ್ರುತಿ
'ಪಂಚಮವೇದ' ಹಾಗೂ 'ಮೈಸೂರು ಮಲ್ಲಿಗೆ' ಚಿತ್ರಗಳಿಗೆ ಎರಡು ಬಾರಿ ಸುಧಾರಾಣಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅದೇ ರೀತಿ 'ಕ್ಷಾಮ' ಹಾಗೂ 'ಭಾಗೀರಥಿ' ಚಿತ್ರಗಳ ನಟನೆಗಾಗಿ ಭಾವನಾ, 'ಆಘಾತ' ಹಾಗೂ 'ಗೌಡ್ರು' ಚಿತ್ರಗಳಿಗಾಗಿ ಶ್ರುತಿ ಕೂಡ 2 ಬಾರಿ ಈ ಪ್ರಶಸ್ತಿ ಸ್ವೀಕರಿಸಿದ್ದರು.
ನಟಿ ಭಾರತಿ ವಿಷ್ಣುವರ್ಧನ್(ಶ್ರೀಕೃಷ್ಣ ದೇವರಾಯ), ನಟಿ ಎಲ್.ವಿ ಶಾರದಾ(ವಂಶವೃಕ್ಷ), ನಟಿ ನಂದಿನಿ ಭಕ್ತವತ್ಸಲ(ಕಾಡು) ನಟಿ ಎ. ರೇವತಿ(ಕನಕ), ನಟಿ ಅಪರ್ಣಾ ನಾರಂಗ್(ಸ್ಪಂದನಾ), ನಟಿ ವೈಶಾಲಿ ಕಾಸರವಳ್ಳಿ(ಆಕ್ರಮಣ), ನಟಿ ಪದ್ಮಾವಾಸಂತಿ(ಮಾನಸ ಸರೋವರ), ನಟಿ ಅಭಿನಯ(ಅನುಭವ), ನಟಿ ರೂಪಾದೇವಿ(ಅವಳ ಅಂತರಂಗ), ಗೀತಾ(ಅರುಣರಾಗ), ನಟಿ ಉಷಾ(ಶಿವಯೋಗಿ ಅಕ್ಕಮಹಾದೇವಿ), ನಟಿ ಸರಿತಾ (ಸಂಕ್ರಾಂತಿ) ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು.
90ರ ದಶಕದಲ್ಲಿ 'ಹೂವು ಹಣ್ಣು' ಚಿತ್ರಕ್ಕೆ ನಟಿ ಜ್ಯೂಲಿ ಲಕ್ಷ್ಮಿ, 'ಓಂ' ಚಿತ್ರಕ್ಕಾಗಿ ಪ್ರೇಮಾ, 'ಜನುಮದ ಜೋಡಿ' ಚಿತ್ರಕ್ಕಾಗಿ ಶಿಲ್ಪಾ, 'ತಾಯಿ ಸಾಹೇಬ' ಚಿತ್ರಕ್ಕಾಗಿ ಜಯಮಾಲ, 'ದೋಣಿ ಸಾಗಲಿ' ಚಿತ್ರಕ್ಕೆ ಸೌಂದರ್ಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.
ಕಳೆದ 25 ವರ್ಷಗಳಲ್ಲಿ 'ಶಾಪ' ಚಿತ್ರಕ್ಕಾಗಿ ಅನುಪ್ರಭಾಕರ್, 'ತಾಯಿ ಇಲ್ಲದ ತಬ್ಬಲಿ' ಚಿತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ, 'ನಾಯಿ ನೆರಳು' ಚಿತ್ರಕ್ಕೆ ಪವಿತ್ರಾ ಲೋಕೇಶ್, 'ಗುಲಾಬಿ ಟಾಕೀಸ್' ಚಿತ್ರಕ್ಕೆ ಉಮಾಶ್ರೀ, 'ಮೊಗ್ಗಿನ ಮನಸ್ಸು' ಚಿತ್ರಕ್ಕಾಗಿ ರಾಧಿಕಾ ಪಂಡಿತ್, 'ಸಂಜು ವೆಡ್ಸ್ ಗೀತಾ' ಚಿತ್ರಕ್ಕೆ ರಮ್ಯಾ, 'ತಲ್ಲಣ' ಚಿತ್ರಕ್ಕೆ ನಿರ್ಮಲಾ ಚೆನ್ನಪ್ಪ, 'ಡಿಸೆಂಬರ್ -1' ಚಿತ್ರಕ್ಕೆ ನಿವೇದಿತಾ, 'ವಿದಾಯ' ಚಿತ್ರಕ್ಕೆ ಲಕ್ಷ್ಮಿ ಗೋಪಾಲಸ್ವಾಮಿ, ಗಂಗಾ ಚಿತ್ರಕ್ಕೆ ಮಾಲಾಶ್ರೀ, 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಶ್ರುತಿ ಹರಿಹರನ್, 'ಇರುವುದೆಲ್ಲವ ಬಿಟ್ಟು' ಚಿತ್ರಕ್ಕಾಗಿ ಮೇಘನಾ ರಾಜ್ ಈ ಪ್ರಶಸ್ತಿ ಸ್ವೀಕರಿಸಿದ್ದರು.


Click it and Unblock the Notifications











