ಫೆ. 14.. 1986.. ಚೆನ್ನೈನಲ್ಲಿ ಕ್ರೇಜಿ ಕಲ್ಯಾಣ: MGR, ರಜನಿ, ವಿಷ್ಣು, ಅಂಬಿ ಇನ್ನು ಯಾರೆಲ್ಲಾ ಬಂದಿದ್ರು?
ಸ್ಯಾಂಡಲ್ವುಡ್ ಶೋಮ್ಯಾನ್ ಕ್ರೇಜಿಸ್ಟಾರ್ ರವಿಚಂದ್ರನ್. ದೊಡ್ಡದಾಗಿ ಕನಸು ಕಾಣುವುದು. ಆ ಕನಸನ್ನು ಬೆಳ್ಳಿಪರದೆ ಮೇಲೆ ನನಸು ಮಾಡೋದು ರವಿಚಂದ್ರನ್ ಸ್ಟೈಲ್. ಕನ್ನಡ ಚಿತ್ರರಂಗದಲ್ಲಿ ಹಲವು ಅದ್ಭುತಗಳನ್ನು ಸೃಷ್ಟಿಸಿದ, ಹಲವು ಮೊದಲುಗಳಿಗೆ ನಾಂದಿ ಹಾಡಿದ ರವಿಮಾಮ ಪ್ರೇಮಿಗಳ ದಿನದಂದೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಹೌದು ಫೆಬ್ರವರಿ 14, 1986ರಲ್ಲಿ ರವಿಚಂದ್ರನ್, ಸುಮತಿ ಅವರ ಕೈ ಹಿಡಿದಿದ್ದರು. ಅಂದಿನ ಮದ್ರಾಸ್ನಲ್ಲಿ ಕನಸುಗಾರರ ಕಲ್ಯಾಣ ಬಹಳ ಅದ್ಧೂರಿಯಾಗಿ ನಡೆದಿತ್ತು. ಕನ್ನಡ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತ ನಿರ್ಮಾಪಕ ಎನ್. ವೀರಾಸ್ವಾಮಿ ಅವರು ತಮ್ಮ ಮಗನ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದರು. ಭಾರತೀಯ ಚಿತ್ರರಂಗದ ತಾರೆಯರೆಲ್ಲಾ ಅಂದು ಈ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಸ್ವತಃ ರವಿಚಂದ್ರನ್ ಬಳಿ ಅನುಮತಿ ಪಡೆದು ನಿರ್ದೇಶಕ ರಘುರಾಮ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಕ್ರೇಜಿಸ್ಟಾರ್ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ಮದುವೆ ಸಂಭ್ರಮ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.
ಬಹಳ ಶಾಸ್ತ್ರೋಸ್ತವಾಗಿ ಹಾಗೂ ಅಷ್ಟೇ ಅದ್ಧೂರಿಯಾಗಿ ರವಿಚಂದ್ರನ್ ಹಾಗೂ ಸುಮತಿ ಜೋಡಿ ಹಸೆಮಣೆ ಏರಿದ್ದರು. ಫೆಬ್ರವರಿ 13ಕ್ಕೆ ವರಪೂಜೆ, 14ರಂದು ಬೆಳಗ್ಗೆ ಮುಹೂರ್ತ, ನಂತರ ಆರತಕ್ಷತೆ ಹೀಗೆ ಮದುವೆಯ ಸುಂದರ ಕ್ಷಣಗಳ ಝಲಕ್ ಈ ವಿಡಿಯೋದಲ್ಲಿದೆ.

ಚೆನ್ನೈನಲ್ಲಿ ನಡೆದ ಮದುವೆ
80ರ ದಶಕದವರೆಗೂ ಕನ್ನಡ ಚಿತ್ರರಂಗ ಮದ್ರಾಸ್ನಲ್ಲಿ ನೆಲೆಯೂರಿತ್ತು. ಹಾಗಾಗಿ ಕನ್ನಡ ಸಿನಿಮಾ ಕಲಾವಿದರು, ತಂತ್ರಜ್ಞರು ಮದ್ರಾಸ್ನಲ್ಲೇ ನೆಲೆ ನಿಂತಿದ್ದರು. ಹಾಗಾಗಿ ಅಂದು ಮದ್ರಾಸ್ನ ವಿಜಯ ಶೇಷ ಮಹಲ್ನಲ್ಲೇ ರವಿಚಂದ್ರನ್- ಸುಮತಿ ಮದುವೆ ನಿಶ್ಚಯವಾಗಿತ್ತು. ಎನ್. ವೀರಾಸ್ವಾಮಿ ಅವರೇ ಮುಂದೆ ನಿಂತು ಮದುವೆ ಕೆಲಸಗಳಲ್ಲಿ ಓಡಾಡಿದ್ದರು. ನಮ್ಮ ಸಿನಿಮಾ ತಾರೆಯರನ್ನೆಲ್ಲಾ 37 ವರ್ಷಗಳ ಹಿಂದೆ ಈ ವಿಡಿಯೋದಲ್ಲಿ ನೋಡೊದೇ ಚೆಂದ. ಅರ್ಜುನ್ ಸರ್ಜಾ, ಎಸ್. ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಹಿಂದಿನ ದಿನವೇ ಮದುವೆ ಮಂಟಪಕ್ಕೆ ಬಂದು ಜೋಡಿಗೆ ಶುಭ ಹಾರೈಸಿದ್ದರು.

ಫೆಬ್ರವರಿ 14ರಂದು ಕಲ್ಯಾಣ
ಆಗಿನ್ನು ರವಿಚಂದ್ರನ್ ನಟನೆಯ 'ಪ್ರೇಮಲೋಕ' ಸಿನಿಮಾ ರಿಲೀಸ್ ಆಗಿರಲಿಲ್ಲ. ಆದರೆ ಅದಾಗಲೇ ಕ್ರೇಜಿಸ್ಟಾರ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದು. ತಂದೆಯ ಜೊತೆಗೆ ಸಿನಿಮಾ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ ರವಿಚಂದ್ರನ್ ಅವರಿಗೆ ಇಡೀ ದಕ್ಷಿಣ ಭಾರತ ಚಿತ್ರರಂಗ ಆಪ್ತವಾಗಿತ್ತು. ಪ್ರೇಮಲೋಕದಿಂದ ಪ್ರೇಮದ ಸಂದೇಶ ತಂದು ಭೂಮಿಯಲ್ಲಿ ಹಾಡಿ ತಿಳಿಸಿದ ಕ್ರೇಜಿಸ್ಟಾರ್ ಪ್ರೇಮಿಗಳ ದಿನದಂದೇ ಹೊಸಬಾಳಿಗೆ ಕಾಲಿಟ್ಟಿದ್ದು ವಿಶೇಷ. ನಿನ್ನೆ(ಫೆಬ್ರವರಿ) ವಿ. ರವಿಚಂದ್ರನ್ ದಂಪತಿ 37ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಧರೆಗಿಳಿದ ತಾರಾಲೋಕ
ಕ್ರೇಜಿಸ್ಟಾರ್ ಮದುವೆ ಸಮಾರಂಭಕ್ಕೆ ತಮಿಳು ಚಿತ್ರರಂಗದ ದಿಗ್ಗಜರಾದ ಎಂಜಿಆರ್, ಶಿವಾಜಿ ಗಣೇಶನ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ತಂತ್ರಜ್ಞರು ಹಾಜರಾಗಿದ್ದರು. ಧಾರೆ ಎರೆದು ನವಜೋಡಿಗೆ ಆರ್ಶೀವದಿಸಿದ್ದರು. ಇನ್ನು ಸಾಹಸ ಸಿಂಹ ವಿಷ್ಣುವರ್ಧನ್- ಭಾರತಿ ದಂಪತಿ, ವರದಪ್ಪ ದಂಪತಿ, ಅಂಬರೀಶ್, ಎಸ್. ಪಿ ಬಾಲಸುಬ್ರಮಣ್ಯಂ, ಲೀಲಾವತಿ, ಲೋಕೇಶ್, ಚಿ. ಉದಯ್ ಶಂಕರ್, ಜೈ ಜಗದೀಶ್, ಗೀತಾ, ಸುಮಲತಾ (ಆಗಿನ್ನು ಅಂಬರೀಶ್- ಸುಮಲತಾ ಮದುವೆ ನಡೆದಿರಲಿಲ್ಲ) ಸೇರಿದಂತೆ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು.

ಮದುವೆ ನಂತರ ಆರತಕ್ಷತೆ
ಈಗ ಮದುವೆಗೂ ಒಂದು ದಿನ ಮುನ್ನ ಬಹುತೇಕರು ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಆದರೆ ಮೊದಲೆಲ್ಲಾ ಮುಹೂರ್ತ ಮುಗಿದ ಮೇಲೆಯೇ ಆರತಕ್ಷತೆ ಏರ್ಪಡಿಸಲಾಗುತ್ತಿತ್ತು. ಸಂಗೀತ ನಿರ್ದೇಶಕ ಇಳಯ ರಾಜಾ ಸೇರಿದಂತೆ ಹಲವರು ಆರತಕ್ಷತೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಲೋಕೇಶ್, ಅರ್ಜುನ್ ಸರ್ಜಾ, ಅಂಬರೀಶ್ ಆರತಕ್ಷತೆ ವೇಳೆಯೂ ಹಾಜರಿದ್ದರು. ಇನ್ನು ಆರ್ಕೇಸ್ಟ್ರಾ ಕೂಡ ಇತ್ತು. ಒಟ್ಟಾರೆ 37 ವರ್ಷಗಳ ಹಿಂದೆ ರವಿಚಂದ್ರನ್- ಸುಮತಿ ಮದುವೆ ಆಲ್ಬಮ್ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











