ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಟ ಹರೀಶ್ ರಾಯ್ ಬಚಾವಾಗಿದ್ದೇಗೆ? ಆ ಕೇಸ್ ಏನು?
ಕನ್ನಡ ಪೋಷಕ ನಟ ಹರೀಶ್ ರಾಯ್ ಮಾರಕ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಹೊಟ್ಟೆಗೆ ಪಸರಿಸಿ ನೀರು ತುಂಬಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಿಮಗೆ ಗೊತ್ತಾ 22 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಹರೀಶ್ ರಾಯ್ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು.
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ದರ್ಶನ್ ಮೇಲಿನ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ಆಗಬಹುದು ಎಂದು ಕೆಲ ಕಾನೂನು ತಜ್ಞರು, ಮಾಜಿ ಪೊಲೀಸ್ ಅಧಿಕಾರಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಅದೇ ನಿಜವಾದರೆ ನಟ ದರ್ಶನ್ ಎಷ್ಟು ವರ್ಷ ಜೈಲಿನಲ್ಲಿ ಇರಬೇಕಾಗುತ್ತದೆ? ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲವೇ? ಎನ್ನುವ ಚರ್ಚೆ ಶುರುವಾಗಿದೆ. 1992ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನಟ ಹರೀಶ್ ರಾಯ್ ಅವರಿಗೆ 10 ವರ್ಷಗಳ ಬಳಿಕ ಶಿಕ್ಷೆ ಆಗಿತ್ತು. ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬಳಿಕ ಶಿಕ್ಷೆಯಿಂದ ಪಾರಾಗಿದ್ದರು.

ಅಷ್ಟಕ್ಕೂ 34 ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಕೊಲೆ ಪ್ರಕರಣ ಏನು? ಎಂದು ತಿಳಿಯುವ ಮುನ್ನ ಹರೀಶ್ ರಾಯ್ ಜೀವಾವಧಿ ಶಿಕ್ಷೆಯಿಂದ ಬಚಾವಾಗಿದ್ದರ ಬಗ್ಗೆ ತಿಳಿಯೋಣ. ಅಂದು ಉಡುಪಿ ಜಿಲ್ಲಾ ಸೆಷನ್ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಬಗ್ಗೆ ವರ್ಷದ ಹಿಂದೆ ಟಿವಿ9 ಸಂದರ್ಶನದಲ್ಲಿ ಹರೀಶ್ ರಾಯ್ ಬಿಚ್ಚಿಟ್ಟಿದ್ದರು. "302 ಕೇಸ್ನಲ್ಲಿ ನನಗೆ ಜೀವಾವಧಿ ಶಿಕ್ಷೆ ಆಗಿತ್ತು. ಯಾರೋ ತಪ್ಪು ಮಾಡಿ ನನ್ನ ಮೇಲೆ ಹಾಕಿದ್ರು. ಘಟನೆಯಲ್ಲಿ ಸತ್ತ ವ್ಯಕ್ತಿ ಸಾಯುವ ಮುನ್ನ ನಾನು ಅಲ್ಲಿರಲಿಲ್ಲ ಎಂದು ಹೇಳಿದ್ದಾನೆ. ಆದರೂ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ರು" ಎಂದು ಹರೀಶ್ ರಾಯ್ ಹೇಳಿದ್ದರು.
ಪ್ರಕರಣ ಮುಂದೆ ಸಿಓಡಿ ತನಿಖೆಗೆ ಹೋಯಿತು. ನಾನು ಈ ರಗಳೆ ಬೇಡ ಎಂದು ಉಪೇಂದ್ರ ಸರ್ ಪರಿಚಯದಿಂದ ಚಿತ್ರರಂಗಕ್ಕೆ ಬಂದೆ ಎಂದು ಹರೀಶ್ ರಾಯ್ ನೆನಪಿಸಿಕೊಂಡಿದ್ದರು. "ಚಿತ್ರರಂಗಕ್ಕೆ ಬಂದ ಬಳಿಕ ಪ್ರಕರಣದ ಬಗ್ಗೆ ಗಮನ ಕೊಡಲಿಲ್ಲ. ವಕೀಲರನ್ನು ಇಟ್ಟು ಕೇಸ್ ಮುನ್ನಡೆಸಲಿಲ್ಲ. 302 ಕೇಸ್ ಎನ್ನುವುದು ಕುತ್ತಿಗೆಗೆ ಕುಣಿಕೆ ಇದ್ದಂತೆ. ಯಾವಾಗ ಬಿಗಿಯಾಗುತ್ತೋ ಗೊತ್ತಿಲ್ಲ. ಕೊನೆಗೆ ಉಡುಪಿ ಸೆಷನ್ ಕೋರ್ಟ್ಗೆ ಕರೆದ್ರು. ಕೇಸ್ನಲ್ಲಿ ಸೋತಿದ್ದೀರಾ, ನಿಮಗೆ ಜೀವಾವಧಿ ಶಿಕ್ಷೆ ಅಂದ್ರು. 2003ರಲ್ಲಿ ನಾನು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದೆ. ಅಂತಹ ಸಮಯದಲ್ಲಿ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದೆ" ಎಂದು ತಿಳಿಸಿದ್ದರು.

ನಾನು ತಪ್ಪು ಮಾಡಿರಲಿಲ್ಲ. ಬಳಿಕ ಹೈಕೋರ್ಟ್ನಲ್ಲಿ ಕೇಸ್ ಗೆದ್ದೆ. ನನಗೆ ಪ್ರಕರಣದಲ್ಲಿ ಸಂಬಂಧವೇ ಇರಲಿಲ್ಲ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ನಾನು ಸೆಲೆಬ್ರೆಟಿ ಎನ್ನುವ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಕೊಂಚ ಕನಿಕರ ತೋರಿಸಿದ್ದರು. ಜೈಲಿನಲ್ಲಿ ಮುತ್ತಪ್ಪ ರೈ ಅವರನ್ನು ಭೇಟಿ ಆಗಿದ್ದೆ. ಅವ್ರು ಆಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ಎಂದು ಹರೀಶ್ ರಾಯ್ ಮೆಲುಕು ಹಾಕಿದ್ದರು. ಇನ್ನು 'ಓಂ' ಚಿತ್ರದಲ್ಲಿ ರಾಯ್ ಎನ್ನುವ ಡಾನ್ ಪಾತ್ರದಲ್ಲಿ ನಟಿಸಿದ್ದರು. ಹಾಗಾಗಿ ಮುಂದೆ ತಮ್ಮ ಹೆಸರಿನ ಜೊತೆ ರಾಯ್ ಎನ್ನುವುದನ್ನು ಸೇರಿಸಿಕೊಂಡಿದ್ದರು.
ಅಂದಹಾಗೆ ಹರೀಶ್ ರಾಯ್ ನಿಜ ನಾಮಧೇಯ ಹರೀಶ್ ಆಚಾರ್ಯ. ಉಡುಪಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದ ಜಯರಾಮ್ ಎಂಬುವವರ ಮೇಲೆ 1992, ನವೆಂಬರ್ 13ರಂದು ಹರೀಶ್ ಆಚಾರ್ಯ ತಮ್ಮ ಸ್ನೇಹಿತರ ಜೊತೆ ಸೇರಿ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. 13 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಜಯರಾಮ್ ಕೊನೆಯುಸಿರೆಳೆದಿದ್ದರು. ಸಾಯುವ ಮುನ್ನ ಹರೀಶ್ ರಾಯ್ ವಿರುದ್ಧ ಅವರು ದೂರು ನೀಡಿದ್ದರು. ಹಾಗಾಗಿ ಅವರ ವಿರುದ್ಧ ವಿಚಾರಣೆ ನಡೆದು 10 ವರ್ಷಗಳ ಬಳಿಕ ಉಡುಪಿ ಸೆಷನ್ ಕೋರ್ಟ್ನಲ್ಲಿ ಜೀವಾವಧಿ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿತ್ತು.


Click it and Unblock the Notifications











