ಜಗ್ಗೇಶ್- ಪರಿಮಳಾ ಪ್ರೇಮಕಥೆ; ಅಂದು ಸಂಗ್ರಾಮ್ ಸಿಂಗ್, ಅಶೋಕ್ ಕುಮಾರ್ ಜಗ್ಗಣ್ಣನಿಗೆ ಚೆನ್ನಾಗಿ ರುಬ್ಬಿದ್ದು ಯಾಕೆ?
ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಹಲವರು ಲವ್ ಮಾಡಿ ಮದುವೆ ಆಗಿದ್ದಾರೆ. ನಟ ಜಗ್ಗೇಶ್ ಅವರದ್ದು ಕೂಡ ಲವ್ ಮ್ಯಾರೇಜ್. ಪರಿಮಳಾ ಅವರಿಗೆ ಸಿನಿಮಾ ನಂಟು ಇಲ್ಲದಿದ್ದರೂ ಜೊತೆಗಿನ ಪ್ರೇಮ್ ಕಹಾನಿ ಮಾತ್ರ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಅಂದು ನಟ ಜಗ್ಗೇಶ್ ಪಟ್ಟ ಪಾಡು ಅಷ್ಟಿಷ್ಟಲ್ಲ.
ನಟ ಜಗ್ಗೇಶ್ ಹಾಗೂ ಪರಿಮಳಾ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಜೋಡಿ ಮದುವೆಯಾಗಿ 40 ವರ್ಷ ಕಳೆದಿದೆ. ಇಂದು ಮಕ್ಕಳು, ಮೊಮ್ಮಕ್ಕಳ ಜೊತೆ ದಂಪತಿ ಸುಮಧುರ ಜೀವನ ಸಾಗಿಸುತ್ತಿದ್ದಾರೆ. ಆಗಿನ್ನು ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಜಗ್ಗೇಶ್, 9ನೇ ತರಗತಿಯಲ್ಲಿ ಓದುತ್ತಿದ್ದ ಪರಿಮಳಾ ಅವರನ್ನು ಪ್ರೀತಿಸಿದ್ದರು.

ಡಿಗ್ರಿ ಓದುತ್ತಿದ್ದ ಜಗ್ಗೇಶ್, ಹೈಸ್ಕೂಲ್ ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದರು. ಆಕೆ ಕೂಡ ಒಪ್ಪಿಕೊಂಡುಬಿಟ್ಟಿದ್ದಳು. ಆದರೆ ಪೋಷಕರ ಒಪ್ಪಿಗೆ ಅಷ್ಟು ಸುಲಭವಾಗಿ ಸಿಗಲಿಲ್ಲ. ಹಾಗಾಗಿ 1984, ಮಾರ್ಚ್ 22ರಂದು ಇಬ್ಬರೂ ಪೋಷಕರ ಕಣ್ಣು ತಪ್ಪಿಸಿ ಸರಳವಾಗಿ ಮದುವೆ ಆಗಿದ್ದರು. ಇದೇ ಕಾರಣಕ್ಕೆ ಜಗ್ಗೇಶ್ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಆಗ ಪರಿಮಳಾ ಅವರಿಗೆ ಇನ್ನು 17 ವರ್ಷ ವಯಸ್ಸು. ಹಾಗಾಗಿ ಪ್ರಕರಣದಲ್ಲಿ ಜಗ್ಗಣ್ಣ ಜೈಲು ಸೇರುವ ಭೀತಿ ಶುರುವಾಗಿತ್ತು.
ಅಂದು ಜಗ್ಗೇಶ್ ಹಾಗೂ ಪರಿಮಳಾ ಮದುವೆಗೆ ಮೂರು ಜನ ಸ್ನೇಹಿತರು, ಒಬ್ಬ ಪುರೋಹಿತರು ಮಾತ್ರ ಸಾಕ್ಷಿ ಆಗಿದ್ದರು. ಎರಡು ಪ್ಲೇಟ್ ಪಕೋಡ, ಎರಡು ಪ್ಲೇಟ್ ಪೂರಿ ತರಿಸಿ, ಮೈಸೂರ್ ಪಾಕ್ ತಿಂದು ಮದುವೆ ಮುಗಿಸಿದ್ದರು. ಮದುವೆ ಬಳಿಕ ಈ ವಿಚಾರ ಪೋಷಕರು ಮನೆಯಲ್ಲಿ ಗೊತ್ತಾಗಿತ್ತು. ಪರಿಮಳಾ ಅವರನ್ನು ಪೋಷಕರು ಮದ್ರಾಸ್ಗೆ ಕರೆದುಕೊಂಡು ಹೋಗಿಬಿಟ್ಟಿದ್ದರು. ಒಂದೂವರೆ ವರ್ಷ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ.

ಮದ್ರಾಸ್ನಿಂದ ಪರಿಮಳಾ ಅವರನ್ನು ಕರೆದುಕೊಂಡು ಬಂದಿದ್ದ ಜಗ್ಗೇಶ್, ಯಶವಂತಪುರದ ಬಳಿ ಮನೆ ಮಾಡಿಕೊಂಡು ಇದ್ದರು.
ಅಲ್ಲಿಗೆ ಹುಡುಕಿಕೊಂಡು ಹೋಗಿದ್ದ ಪೊಲೀಸರು ಜಗ್ಗೇಶ್ ಕಠಿಣ ಕ್ರಮ ಕೈಗೊಂಡಿದ್ದರು. ಪೊಲೀಸ್ ಭಾಷೆಯಲ್ಲಿ ಜಗ್ಗೇಶ್ ಅವರನ್ನು ವಿಚಾರಿಸಿಕೊಂಡಿದ್ದರು. ಎಷ್ಟೇ ಹೊಡೆದರೂ ಇಬ್ಬರೂ ತಮ್ಮ ಪ್ರೀತಿಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲ ಎಂದು ಗೊತ್ತಾದಾಗ ಪೋಷಕರನ್ನು ಕರೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಖ್ಯಾತ ಪೊಲೀಸ್ ಅಧಿಕಾರಿಗಳಾದ ಸಂಗ್ರಾಮ್ ಸಿಂಗ್, ಟೈಗರ್ ಅಶೋಕ್ ಕುಮಾರ್ ಇಬ್ಬರು ಪ್ರಕರಣ ಸಂಬಂಧ ಜಗ್ಗೇಶ್ ಅವರನ್ನು ಚೆನ್ನಾಗಿ ದಂಡಿಸಿದ್ದರು. ಈ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಖುದ್ದು ನಿವೃತ್ತ ಪೊಲೀಸ್ ಅಧಿಕಾರಿಗಳು ವಿವರಿಸಿದ್ದರು.
"ಚಿತ್ರನಟನಿಂದ ಹುಡುಗಿಯ ಕಿಡ್ಯ್ನಾಪ್" ಎಂದು ಅವತ್ತಿನ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ, ಮದುವೆ ಎಂದು ಧುಡುಕಿದ ತಪ್ಪಿಗೆ ಪೊಲೀಸ್ ಠಾಣೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತಾಯಿತು. ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭಗವತಿ ಅವರು ಮಾನವೀಯತೆ ಆಧಾರದ ಮೇಲೆ ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟಿದ್ದರು. ಅದೊಂದು ಲ್ಯಾಂಡ್ಮಾರ್ಟ್ ಜಡ್ಜ್ಮೆಂಟ್ ಆಗಿತ್ತು.
40ನೇ ವರ್ಷ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಜಗ್ಗೇಶ್, ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. "1984 ಮಾರ್ಚ್ 22 ನಾನು ಮದುವೆಯಾದ ದಿನ...ಇಂದು 40ವರ್ಷದ ಮದುವೆ ವಾರ್ಷಿಕೋತ್ಸವ. 40 ವರ್ಷ ಸಮಯ ಕ್ಷಣದಂತೆ ಹೋದ ಭಾವನೆ. ತಾಳಿ ಕಟ್ಟೋವಾಗ್ಲು ತಾಳಿ ಕಟ್ಟಿದ ಮೇಲು ತಾಳಿ ಮೂರುಗಂಟಿನ ತಾಳಿ ಬಿಗಿದಮೇಲೆ ಬಿಡಿಸಿಕೊಳ್ಳದಂತೆ ಬಾಳಿ" ಎಂದು ಬರೆದು ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











