ರಿಷಬ್ ಶೆಟ್ಟಿ ಗಂಧರ್ವ ಪುರುಷ, ಯಶ್ಗೆ 2028ರವರೆಗೂ ಸೋಲಿಲ್ಲ; ಜ್ಯೋತಿಷಿ ನಾಗರಾಜ್ ಕೋಟೆ ಭವಿಷ್ಯ
ರಾಕಿಂಗ್ ಸ್ಟಾರ್ ಯಶ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಕೇವಲ ಒಂದೊಂದು ಚಿತ್ರದಿಂದ ಇಬ್ಬರ ನಸೀಬು ಬದಲಾಗಿದೆ. ಯಶ್ಗೆ 'KGF' ಸರಣಿ ಹಾಗೂ ರಿಷಬ್ ಶೆಟ್ಟಿಗೆ 'ಕಾಂತಾರ' ಸಿನಿಮಾ ತಂದುಕೊಟ್ಟ ನೇಮು ಫೇಮು ಅಷ್ಟಿಷ್ಟಲ್ಲ. ದೊಡ್ಡಮಟ್ಟದಲ್ಲಿ ಇಬ್ಬರೂ ಗೆದ್ದು ಬೀಗಿದ್ದಾರೆ.
ಇಬ್ಬರ ಡಿಡಿಕೇಷನ್, ಪರಿಶ್ರಮದ ಬಗ್ಗೆ ಎರಡು ಮಾತಿಲ್ಲ. ಜೊತೆಗೆ ಅದೃಷ್ಟ ಕೂಡ ಇಬ್ಬರ ಕೈ ಹಿಡಿದಿದೆ. ಇಬ್ಬರಿಗೂ ಈಗ ಶುಕ್ರದೆಸೆ ನಡೀತಿದೆ ಎಂದೇ ಕೆಲವರು ವಿಶ್ಲೇಷಿಸುತ್ತಿದ್ದಾರೆ. ಸದ್ಯ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಿಸಿ ನಟಿಸುತ್ತಿದ್ದಾರೆ. 'ರಾಮಾಯಣ' ಚಿತ್ರ ನಿರ್ಮಾಣಕ್ಕೂ ಕೈ ಜೋಡಿಸಿದ್ದು ರಾವಣನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇತ್ತ ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

'ಕಾಂತಾರ' ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಯಶ್ ಹಾಗೂ ರಿಷಬ್ ಶೆಟ್ಟಿ ಜಾತಕ ಹಾಗೂ ಭವಿಷ್ಯದ ಬಗ್ಗೆ ನಟ, ಜ್ಯೋತಿಷಿ ನಾಗರಾಜ್ ಕೋಟೆ ಮಾತನಾಡಿದ್ದಾರೆ. ಸುದ್ದಿಮನೆ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಸ್ಯನಟರಾಗಿದ್ದ ನಾಗರಾಜ್ ಕೋಟಿ ಈಗ ಜ್ಯೋತಿಷ್ಯ ಹೇಳಿ ಜನಪ್ರಿಯರಾಗಿದ್ದಾರೆ.
ತಮ್ಮ ಗುರುಗಳ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಜ್ಯೋತಿಷ್ಯಶಾಸ್ತ್ರ ಕಲಿತಿದ್ದು ತಮ್ಮ ಬಳಿ ಪರಿಹಾರ ಕೇಳಿ ಬಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದಿದ್ದಾರೆ. ಇನ್ನು ಯಶ್ ಹಾಗೂ ರಿಷಬ್ ಶೆಟ್ಟಿ ಅವರ ಯಶಸ್ಸಿನ ಬಗ್ಗೆ ನಾಗರಾಜ್ ಕೋಟೆ ಮಾತನಾಡಿದ್ದಾರೆ. ಯಶ್ ಅವರದ್ದು ವೃಶ್ಚಿಕ ರಾಶಿ, ಸಮಯ ತುಂಬಾ ಚೆನ್ನಾಗಿದೆ. ಶುಕ್ರದೆಸೆ ಇದೆ ಅನ್ನಿಸ್ತಿದೆ. ಈ ರಾಶಿಯವರಿಗೆ 2028ರ ತನಕ ಇಂಡಸ್ಟ್ರಿ ಆಳುತ್ತಾರೆ ಎಂದು ನಾಗರಾಜ್ ಕೋಟೆ ಹೇಳಿದ್ದಾರೆ.
ಯಶ್ ರೀತಿಯಲ್ಲೇ 'ಕಾಂತಾರ' ಚಿತ್ರದಿಂದ ರಾತ್ರೋರಾತ್ರಿ ರಿಷಬ್ ಶೆಟ್ಟಿ ಜನಪ್ರಿಯತೆ ಸಾಧಿಸಿಬಿಟ್ಟರು. ನಿರ್ದೇಶಕರಾಗಿ, ನಟರಾಗಿ ಗೆದ್ದಿದ್ದಾರೆ. ಅವರ ಬಗ್ಗೆ ನಾಗರಾಜ್ ಕೋಟೆ ಮಾತನಾಡಿ ರಿಷಬ್ ಅವರ ತಂದೆ ಕೂಡ ಜ್ಯೋತಿಷಿ ಎಂದು ನಾನು ಕೇಳಿಪಟ್ಟೆ. ಅವರ ತಂದೆ ಸಲಹೆ ಕೂಡ ಅವರಿಗೆ ಸಹಕಾರಿ ಆಗಿರಬಹುದು. ರಿಷಬ್ ಶೆಟ್ಟಿ ಕುಂಡಲಿ ನನ್ನ ಬಳಿ ಇಲ್ಲ. ಇದ್ದಿದ್ದರೆ ಅವರ ಭವಿಷ್ಯದ ಬಗ್ಗೆ ಹೇಳಬಹುದಿತ್ತು ಎಂದಿದ್ದಾರೆ.

ರಿಷಬ್ ಶೆಟ್ಟಿಗೆ ಯಾವ ದೆಸೆ ನಡೀತಿದೆ. ಯಾವಾಗ ಮುಕ್ತಾಯವಾಗುತ್ತದೆ ಎಂದು ಹೇಳುವುದು ಕಷ್ಟ. ಹತ್ತು ಹದಿನೈದು ವರ್ಷ ಅವರು ಇಂಡಸ್ಟ್ರಿಯಲ್ಲಿ ಸೈಕಲ್ ಹೊಡೆದಿರುತ್ತಾರೆ. 'ಕಾಂತಾರ' ವೇಳೆಗೆ ಒಳ್ಳೆ ದೆಸೆ ಶುರುವಾಗಿತ್ತು. ನಿರ್ದೇಶನ ಮಾಡಿ ನಟಿಸಿದ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗುವುದು ಕಷ್ಟ. ನಾನು ರಾಷ್ಟ್ರಪ್ರಶಸ್ತಿ ಜ್ಯೂರಿ ಆಗಿ ಒಮ್ಮೆ ಹೋಗಿದ್ದೆ. ಅಲ್ಲಿ ಒಬ್ಬರಿಗೆ ಪ್ರಶಸ್ತಿ ಕೊಡುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು. ಅಂತಾದ್ರಲ್ಲಿ ರಿಷಬ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದು ತಮಾಷೆ ಮಾತಲ್ಲ ಎಂದು ನಾಗರಾಜ್ ಕೋಟೆ ವಿವರಿಸಿದ್ದಾರೆ.
ರಿಷಬ್ ಶೆಟ್ಟಿ ಒಬ್ಬ ಗಂಧರ್ವ ಪುರುಷ. ಅವರೊಳಗೆ ದೇವರ ಅಂಶ ಇದೆ. ಇಲ್ಲದಿದ್ದರೆ ಇದೆಲ್ಲಾ ಸಾಧ್ಯವಿಲ್ಲ. ಕಲಾವಿದರೆಲ್ಲರೂ ಗಂಧರ್ವರೇ. ಅದರಲ್ಲಿ ಬಹಳ ದೇವರಿಗೆ ಆಪ್ತರಾದ ಗಂಧರ್ವ ರಿಷಬ್ ಶೆಟ್ಟಿ ಇರಬಹುದು ಎಂದು ನಾಗರಾಜ್ ಕೋಟೆ ಹೇಳಿದ್ದಾರೆ. ಸದ್ಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ' ಪ್ರೀಕ್ವೆಲ್ ರಿಲೀಸ್ ಡೇಟ್ ಘೋಷಣೆ ಆಗಿದೆ. ಮುಂದಿನ ವರ್ಷ ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ. 'ಜೈ ಹನುಮಾನ್' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ರಿಷಬ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications