ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?
ಸ್ಯಾಂಡಲ್ ವುಡ್ ನ ಸಾಹಸ ಸಿಂಹ, ಅಭಿಮಾನಿಗಳ ಪ್ರೀತಿಯ ದಾದಾ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಡಾ.ವಿಷ್ಣುವರ್ಧನ್. 200ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳನ್ನು ರಂಜಿಸಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ.
Recommended Video
ಸುಮಾರು 4 ದಶಕಗಳ ಕಾಲ ಕನ್ನಡ ಚಿತ್ರರಂಗವಾಳಿರುವ ವಿಷ್ಣುವರ್ಧನ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಿದ್ದ ಸಮಯದಲ್ಲಿ ವಿಷ್ಣು ಬಾಳಲ್ಲಿ ದಿಢೀರ್ ಬದಲಾವಣೆಯಾಗುತ್ತೆ. ಅಂದು 1976-77ರ ಸಮಯ. ವಿಷ್ಣುವರ್ಧನ್ ಚಿತ್ರರಂಗದಿಂದ ದೂರ ಆಗುವ ನಿರ್ಧಾರಕ್ಕೆ ಬರುತ್ತಾರೆ. ಸಿನಿಮಾರಂಗ ಬಿಟ್ಟು ಟ್ಯಾಕ್ಸಿ ಡ್ರೈವರ್ ಆಗಲು ನಿರ್ಧರಿಸುತ್ತಾರೆ. ಈ ಬಗ್ಗೆ ಅಳಿಯ ಅನಿರುದ್ಧ ಹೇಳಿರುವ ಇಂಟ್ರಸ್ಟಿಂಗ್ ಸಂಗತಿ ಇಲ್ಲಿದೆ. ಮುಂದೆ ಓದಿ..

ಅನಿರುದ್ಧ್ ಹೇಳಿದ್ದೇನು?
ನಾಗರಹಾವು, ಭೂತಯ್ಯನ ಮಗ ಅಯ್ಯು, ಕಳ್ಳ ಕುಳ್ಳ, ಕಿಟ್ಟು ಪುಟ್ಟು ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ವಿಷ್ಣು ಬಣ್ಣದ ಲೋಕ ಬಿಟ್ಟು ಕ್ಯಾಬ್ ಡ್ರೈವರ್ ಆಗಲು ನಿರ್ಧರಿಸುತ್ತಾರಂತೆ. ಆಗಲೆ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದ ವಿಷ್ಣು ಈ ನಿರ್ಧಾರಕ್ಕೆ ಬರಲು ಕಾರಣವೇನು ಎನ್ನುವುದನ್ನು ಅಳಿಯ ಅನಿರುದ್ಧ ಬಹಿರಂಗ ಪಡಿಸಿದ್ದಾರೆ. ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಎವರ್ ಗ್ರೀನ್ ಹೊಂಬಿಸಿಲು ಸಿನಿಮಾದ ಬಗ್ಗೆ ಮಾತನಾಡಿದ ಅನಿರುದ್ಧ್, ವಿಷ್ಣುವರ್ಧನ್ ಬಗ್ಗೆ ಗೊತ್ತಿರದ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಮದುವೆ ನಂತರ ವಿಷ್ಣುಗೆ ಸಿನಿಮಾ ಅವಕಾಶ ಇರಲಿಲ್ಲ
1975ರಲ್ಲಿ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಜೊತೆ ವಿಷ್ಣುವರ್ಧನ್ ಹಸೆಮಣೆ ಏರುತ್ತಾರೆ. ಮದುವೆ ಆಗಿ ಒಂದು ವರ್ಷದ ನಂತರ ವಿಷ್ಣುವರ್ಧನ್ ಸಿನಿಮಾ ಅವಕಾಶಗಳಿಲ್ಲದೆ ಖಾಲಿ ಕೂರುವಂತಾಗಿತ್ತು. ಆಗ ವಿಷ್ಣು ದಂಪತಿ ಚೆನ್ನೈನಲ್ಲಿ ನಲೆಸಿರುತ್ತಾರೆ. ಆಗ ವಿಷ್ಣುವರ್ಧನ್ ಒಂದು ದೊಡ್ಡ ನಿರ್ಧಾರಕ್ಕೆ ಬರುತ್ತಾರೆ.

ಟ್ರಾವೆಲ್ ಏಜನ್ಸಿಯಲ್ಲಿ ಕಾರ್ ರಿಜಿಸ್ಟರ್ ಮಾಡಿದ್ರು ವಿಷ್ಣು
ಸಿನಿಮಾ ಅವಕಾಶವಿಲ್ಲ ಅಂತ ಸುಮ್ಮನೆ ಕೂರದ ವಿಷ್ಣುವರ್ಧನ್ ಟ್ಯಾಕ್ಸಿ ಓಡಿಸಲು ನಿರ್ಧಾರ ಮಾಡುತ್ತಾರೆ. ಈ ವಿಚಾರವನ್ನು ಸಾಹಸಸಿಂಹ ಪತ್ನಿಯ ಬಳಿ ಹೇಳಿಕೊಳ್ಳುತ್ತಾರೆ. ಭಾರತಿ ಅವರು ಕೂಡ ಒಪ್ಪಿಗೆ ನೀಡುತ್ತಾರೆ. ತಕ್ಷಣ ಚೆನ್ನೈನ ಒಂದು ಟ್ರಾವೆಲ್ ಏಜನ್ಸಿಗೆ ಹೋಗಿ ಗಾಡಿ ರಿಜಿಸ್ಟರ್ ಮಾಡಿಸುತ್ತಾರೆ. ಮಾರನೆ ದಿನವೆ ಕೆಲಸಕ್ಕೆ ಹಾಜರಾಗಲು ಸಿದ್ಧರಾಗುತ್ತಾರೆ.

ಹೊಂಬಿಸಿಲು ಚಿತ್ರದ ಆಫರ್ ಬರುತ್ತೆ
ಕಾರ್ ರಿಜಿಸ್ಟರ್ ಮಾಡಿಸಿ ಬಂದಿದ್ದ ವಿಷ್ಣು ಮಾರನೆ ದಿನವೆ ಕೆಲಸಕ್ಕೆ ಹಾಜರಾಗಬೇಕಿತ್ತು. ಅಂದು ಸಂಜೆ ನಿರ್ಮಾಪಕರೊಬ್ಬರು ವಿಷ್ಣುವರ್ಧನ್ ಅವರ ಮನೆಗೆ ಬರುತ್ತಾರೆ. ಚಿತ್ರದ ಕಥೆ ಹೇಳಿ ನೀವೆ ನಾಯಕರಾಗಿ ಅಭಿನಯಿಸಬೇಕೆಂದು ಹೇಳುತ್ತಾರೆ. ಆ ಚಿತ್ರವೆ 'ಹೊಂಬಿಸಿಲು'. ಸಿನಿಮಾ ಅವಕಾಶ ವಿಲ್ಲದೆ ಇದ್ದ ವಿಷ್ಣು ಬಾಳಿಗೆ ಹೊಂಬಿಸಿಲು ಸಿನಿಮಾ ಬೆಳಕಾಗಿ ಬರುತ್ತೆ.

ಟ್ಯಾಕ್ಸಿ ಕೆಲಸ ಕೈ ಬಿಟ್ಟ ದಾದಾ
ದೊಡ್ಡ ಸಿನಿಮಾ ಆಫರ್ ಬಂದ ಕಾರಣ ಟ್ಯಾಕ್ಸಿ ಡ್ರೈವರ್ ಆಗಲು ಹೊರಟ್ಟಿದ್ದ ಕೆಲಸವನ್ನು ಕೈ ಬಿಡುತ್ತಾರೆ. ಮರುದಿನ ಕೆಲಸಕ್ಕೆ ಹೋಗುವುದಿಲ್ಲ. ಅದೆ ದಿನ ಚೆನ್ನೈನ ಮನೆಯಲ್ಲಿಯೆ ಹೊಂಬಿಸಿಲು ಸಿನಿಮಾ ಮುಹೂರ್ತ ಕೂಡ ನೆರವೇರುತ್ತೆ. ನಂತರ ಹೊಂಬಿಸಿಲು ರಿಲೀಸ್ ಆಗಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣುತ್ತೆ.

ಗೀತಪ್ರಿಯಾ ನಿರ್ದೇಶನದ ಸಿನಿಮಾ
ಹೊಂಬಿಸಿಲು ಗೀತಪ್ರಿಯ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಬಿ.ಎಸ್ ಸೋಮಸುಂದರ್ ಮತ್ತು ಸಂಪತ್ ರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ 1978ರಲ್ಲಿ ತೆರೆಗೆ ಬಂದಿದೆ. ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ನಾಯಕಿಯಾಗಿ ಆರತಿ ಕಾಣಿಸಿಕೊಂಡಿದ್ದಾರೆ. ಹೊಂಬಿಸಿಲು ಸಿನಿಮಾ ವಿಷ್ಣುವರ್ಧನ್ ದೊಡ್ಡ ಮಟ್ಟದ ಖ್ಯಾತಿ ತಂದು ಕೊಡುತ್ತೆ. ಕನ್ನಡ ಚಿತ್ರಪ್ರಿಯರ ಮನದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ.


Click it and Unblock the Notifications











