ಬದುಕು-ಬವಣೆ ; ದೂರ ತಳ್ಳಿದ ಚಿತ್ರರಂಗ, ಹೊಟ್ಟೆಪಾಡಿಗಾಗಿ ವಾಚ್ಮ್ಯಾನ್ ಕೆಲಸ ಮಾಡುತ್ತಿರುವ ಖ್ಯಾತ ನಟ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ಬರುವವರಿಗೆ ಬದುಕಲು ತಮ್ಮಲ್ಲಿನ ಕಲೆಯೊಂದೇ ಆಸರೆಯಾಗಿತ್ತು. ಅವರ ಅಭಿನಯ ಸಾಮರ್ಥ್ಯವೇ ಆ ಕಾಲಕ್ಕೆ ಅವರಿಗೆ ಶಕ್ತಿಯಾಗಿತ್ತು. ಇನ್ನೂ.. ಆ ಕಾಲದಲ್ಲಿ ಕಲೆಯನ್ನೇ ನಂಬಿಕೊಂಡವರಿಗೆ ಅವಕಾಶ ಸಿಕ್ಕರೆ ಸಾಕಿತ್ತು, ಹಣದ ಮುಖವನ್ನು ಕೂಡ ಅನೇಕರು ನೋಡುತ್ತಿರಲಿಲ್ಲ. ಚೌಕಾಸಿಯನ್ನೂ ಮಾಡುತ್ತಿರಲಿಲ್ಲ. ಕಲೆಯನ್ನು ಹೊರತು ಪಡಿಸಿ
ಬೇರೆ ಮೂಲದಿಂದ ಹಣ ಗಳಿಸುವ ಉದ್ದೇಶ ಕೂಡ ಆ ಕಾಲದಲ್ಲಿ ಬಹುತೇಕರಿಗೆ ಇರುತ್ತಿರಲಿಲ್ಲ.ಹೀಗಾಗಿಯೇ ಅನೇಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಕಣ್ಣೀರಿನಲ್ಲಿ ಇಲ್ಲಿ ಕೈತೊಳೆದಿದ್ದಾರೆ. ಒಂದೊಪ್ಪತ್ತಿನ ಅನ್ನಕ್ಕೂ ಒದ್ದಾಡಿ ಪ್ರಾಣ ತ್ಯಜಿಸಿದವರು ಇದ್ದಾರೆ.

ಇನ್ನೂ ಕೆಲವರು ತಮ್ಮ ಪ್ರಭಾವಳಿಯನ್ನು ತಲೆಗೇರಿಸಿಕೊಂಡು, ಯಾವ ಯಾವುದೋ ಶೋಕಿಗೆ ಬಿದ್ದು ದುಡಿದ ಹಣವನ್ನೆಲ್ಲ ಕರಗಿಸಿಕೊಂಡಿದ್ದಾರೆ. ಆ ಕಡೆ ದುಡ್ಡು ಖಾಲಿಯಾದ ನಂತರ ಈ ಕಡೆ ಅವಕಾಶ ಸಿಗದ ಹಿನ್ನೆಲೆ ಒದ್ದಾಡಿದವರು ಇದ್ದಾರೆ. ದುರಂತ ಅಂದರೆ ಕಾಲ ಬದಲಾದರು ಕೂಡ ಇವತ್ತು ಕೂಡ ಅನೇಕ ಕಲಾವಿದರ ಪರಿಸ್ಥಿತಿ ಸುಧಾರಿಸಿಲ್ಲ. ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು ಕೂಡ ಇನ್ನು ಅನೇಕರಿಗೆ ಲಕ್ಷ್ಮಿ ಒಲಿದಿಲ್ಲ. ಇದಕ್ಕೆ ಸವಿ ಸಿಧು ಸದ್ಯದ ಉದಾಹರಣೆ.
ಹೌದು, ಸವಿ ಸಿಧು..ಬಾಲಿವುಡ್ನ ಪ್ರಖ್ಯಾತ ನಟ. ಹಲವಾರು ಚಿತ್ರಗಳಲ್ಲಿ ನೀವು ಇವರನ್ನು ನೋಡಿರಬಹುದು. ಉದಾಹರಣೆಗೆ ತಾಕತ್, ಬ್ಲ್ಯಾಕ್ ಫ್ರೈಡೇ, ಗುಲಾಲ್, ಪಟಿಯಾಲ ಹೌಸ್, ಡೇ ಡಿ, ಬೇವಕೂಫಿಯಾನ್.
ಹೀಗೆ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಗೆದ್ದ ಸವಿ ಸಿಧು ಇಂದು ಜೀವನ ನಿರ್ವಹಣೆಗಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಮಾಡುತ್ತಿದ್ದಾರೆ. ಅಚ್ಚರಿ ಎನಿಸಿದರೂ ಇದೇ ಸತ್ಯ.
ಸವಿ ಸಿಧು ಅವರ ವಾಸ್ತವದ ಈ ಬದುಕಿಗೆ ಕೈಗನ್ನಡಿಯನ್ನು ಫಿಲ್ಮ್ ಕಂಪ್ಯಾನಿಯನ್ ಕೈಗನ್ನಡಿ ಹಿಡಿದಿದ್ದು, ಸವಿ ಸಿಧು ತಮ್ಮ ಬದುಕಿನ ಕಥನವನ್ನು ಈ ಫಿಲ್ಮ್ ಕಂಪ್ಯಾನಿಯನ್ ಜೊತೆ ಹಂಚಿಕೊಂಡಿದ್ದಾರೆ. ಬದುಕಿನ ಅನಿವಾರ್ಯತೆಯ ಮುಂದೆ ಪ್ರತಿಷ್ಠೆ, ಗೌರವ, ಎಲ್ಲವೂ ನಗಣ್ಯ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸವಿ ಸಿಧು, ಸದ್ಯ ನನ್ನ ಬದುಕಿನ ಅತ್ಯಂತ ಕಷ್ಟಕರವಾದ ದಿನಗಳಿವು ಎಂದು ಹೇಳಿದ್ದಾರೆ. ನಾನು ನನ್ನ ಪತ್ನಿಯನ್ನು ಕಳೆದುಕೊಂಡೆ ಆ ನಂತರ ನನ್ನ ತಂದೆ ಮತ್ತು ತಾಯಿ ಕೂಡ ನಿಧನರಾದರು, ನನ್ನ ಅತ್ತೆಯೂ ಕೂಡ ನನ್ನನ್ನು ಅಗಲಿದರು ಎಂದು ಹೇಳಿದ್ದಾರೆ. ಹೀಗೆ ಎಲ್ಲರನ್ನು ಕಳೆದುಕೊಂಡು ಒಬ್ಬಂಟಿಯಾದ ನಾನು ಆ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.
ಹೀಗಾಗಿ ಹೊಟ್ಟೆ ಪಾಡಿಗಾಗಿ ನಾನು ವಾಚ್ಮ್ಯಾನ್ ಕೆಲಸ ಮಾಡಲು ಶುರು ಮಾಡಿದೆ ಎಂದಿರುವ ಸವಿ ಸಿಧು, ಈ ಕೆಲಸ ತುಂಬಾನೇ ಕಠಿಣವಾದ ಕೆಲಸ, ಹನ್ನೆರಡು ಗಂಟೆಗಳ ಕಾಲ ಶ್ರಮ ಬೇಡುವ ಕೆಲಸ ಇದು, ಹೀಗಾಗಿ ಸಿನಿಮಾಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಬಸ್ ಟಿಕೆಟ್ ಖರೀದಿ ಮಾಡಲು ಕೂಡ ನನ್ನ ಬಳಿ ಹಣ ಇಲ್ಲ ಹೀಗಿರುವಾಗ ಸಿನಿಮಾ ನೋಡುವುದೆಲ್ಲ ದೂರದ ಮಾತು ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೇ ಸವಿ ಸಿಧು 2014ರಲ್ಲಿ ತೆರೆಗೆ ಬಂದ ಬೇವಕೂಪಿಯಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಬಾಲಿವುಡ್ನಿಂದ ಅಕ್ಷರಶಃ ಕಣ್ಮರೆಯಾಗಿದ್ದ ಸವಿ ಸಿಧು 2019ರಲ್ಲಿ ಮುಂಬೈನ ಅಂಧೇರಿಯ ಲೋಖಂಡ್ವಾಲಾ ಬಳಿಯ ಬಹು ಮಹಡಿ ಕಟ್ಟಡಿಯಲ್ಲಿ ವಾಚ್ಮ್ಯಾನ್ ಕೆಲಸ ಮಾಡುವ ಸಮಯದಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಈ ಹಿನ್ನೆಲೆ ಫಿಲ್ಮ್ ಕಂಪ್ಯಾನಿಯನ್ ತಂಡ ಇವರನ್ನು ಆಗ ಹುಡುಕಿಕೊಂಡು ಹೋಗಿ ಮಾತನಾಡಿಸಿತ್ತು. ಮೇಲೆ ಉಲ್ಲೇಖಿಸಲಾದ ವಿವರಗಳನ್ನು ಸವಿ ಸಿಧು 2019ರಲ್ಲಿ ಫಿಲ್ಮ್ ಕಂಪ್ಯಾನಿಯನ್ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದರು.
ಇನ್ನು 2019ರಲ್ಲಿ ಸವಿ ಸಿಧು ಅವರ ಈ ಸಂದರ್ಶನದ ತುಣುಕು ವೈರಲ್ ಆದ ನಂತರ ಬಾಲಿವುಡ್ನ ಸದ್ಯದ ಸ್ಟಾರ್ ಹೀರೋ ರಾಜ್ ಕುಮಾರ್ ರಾವ್, ಸವಿ ಸಿಧು ಅವರ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ನಿಮ್ಮೆಲ್ಲ ಚಿತ್ರಗಳಲ್ಲಿ, ನಿಮ್ಮ ಅಭಿನಯಕ್ಕೆ ಮನ ಸೋತವರಲ್ಲಿ ನಾನು ಕೂಡ ಒಬ್ಬ, ನಿಮ್ಮ ಈ ಕಥೆ ನನಗೆ ಸ್ಫೂರ್ತಿಯನ್ನು ನೀಡಿದೆ ಎಂದು ರಾಜ್ ಕುಮಾರ್ ರಾವ್ ಹೇಳಿದ್ದರು. ನಿಮ್ಮ ಸಕಾರಾತ್ಮಕ ಚಿಂತನೆಗೆ ನನ್ನದೊಂದು ಸಲಾಂ ಎಂದು ಹೇಳಿದ್ದ ರಾಜ್ ಕುಮಾರ್ ರಾವ್ ಸಂದರ್ಶನ ಮಾಡಿದ್ದ ಫಿಲ್ಮ್ ಕಂಪ್ಯಾನಿಯನ್ಗೆ ಧನ್ಯವಾದ ಹೇಳಿದ್ದರು. ನನ್ನೆಲ್ಲ ಕಾಸ್ಟಿಂಗ್ ಸ್ನೇಹಿತರಲ್ಲಿ ನಿಮ್ಮನ್ನು ಸಂಪರ್ಕ ಮಾಡುವಂತೆ ನಾನು ಮನವಿಯನ್ನು ಮಾಡಿಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದರು.
ಇನ್ನು ಸವಿ ಸಿಧು 1995ರಲ್ಲಿ ತಾಖತ್ ಚಿತ್ರವನ್ನು ಮಾಡಿದಾಗ ಇವರಲ್ಲಿರುವ ಕಲೆಯನ್ನು ಗುರುತಿಸಿದವರಲ್ಲಿ ಬಾಲಿವುಡ್ನ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಕೂಡ ಒಬ್ಬರು. ಕೂಡಲೇ ತಮ್ಮ ಪಾಂಚ್ ಚಿತ್ರಕ್ಕೆ ಸವಿ ಸಿಧು ಅವರನ್ನು ಆಗ ಅನುರಾಗ್ ಕಶ್ಯಪ್ ಆಯ್ಕೆ ಮಾಡಿಕೊಂಡಿದ್ದರು. ಈ ಚಿತ್ರ ಇನ್ನು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿಲ್ಲವಾದರೂ ಕೂಡ ಅನುರಾಗ್ ಕಶ್ಯಪ್ ಆ ನಂತರ ತಮ್ಮ ಎರಡು ಮೂರು ಚಿತ್ರಗಳಲ್ಲಿ ಸವಿ ಸಿಧು ಅವರಿಗೆ ಅವಕಾಶಗಳನ್ನು ನೀಡಿದ್ದರು.
ಹೀಗಾಗಿಯೇ ಸವಿ ಸಿಧು ವಾಚ್ ಮ್ಯಾನ್ ಕೆಲಸ ಮಾಡುತ್ತಿರುವ ವಿಡಿಯೋವನ್ನು ಕಂಡು ಆಘಾತಕ್ಕೊಳಗಾಗಿದ್ದ ಅನುರಾಗ್ ಕಶ್ಯಪ್, ರಾಜ್ ಕುಮಾರ್ ರಾವ್ ಅವರು ಹಂಚಿಕೊಂಡ ವಿಡಿಯೋ ಮತ್ತು ಅವರು ಬರೆದುಕೊಂಡಿದ್ದ ಸಾಲುಗಳನ್ನು ಮೆಚ್ಚಿಕೊಂಡಿದ್ದರು. ಇನ್ನು ಈ ವಿಡಿಯೋ 2019ರಲ್ಲಿ ವೈರಲ್ ಆದ ನಂತರ ಸವಿ ಸಿಧು ಅವರಿಗೆ 2020ರಲ್ಲಿ ಮಸ್ಕಾ ಎಂಬ ಚಿತ್ರದಲ್ಲಿ ಅವಕಾಶ ಕೂಡ ಸಿಕ್ಕಿತ್ತು.
ಮನಿಷಾ ಕೊಯಿರಾಲಾ, ಜಾವೇದ್ ಜಾಫ್ರಿ ಸೇರಿ ಹಲವರು ಈ ಚಿತ್ರದಲ್ಲಿದ್ದರು. ಆದರೆ ಈ ಚಿತ್ರ ತೆರೆಗೆ ಬಂದು ಈಗ ಐದು ವರ್ಷಗಳಾಗಿವೆ. ಈ ಐದು ವರ್ಷಗಳಲ್ಲಿ ಸವಿ ಸಿಧು ಬೇರೆ ಯಾವ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಏನಾದರು ? ಎಲ್ಲಿ ಹೋದರು ಎನ್ನುವ ಮಾಹಿತಿ ಕೂಡ ಯಾರಿಗೂ ಕೂಡ ಸಿಗುತ್ತಿಲ್ಲ. ಹೀಗಾಗಿಯೇ ಇದೀಗ ಸವಿ ಸಿಧು ಅವರ ಹಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸವಿ ಸಿಧು ಅವರ ಕುರಿತು ಬಾಲಿವುಡ್ನಲ್ಲಿ ಮತ್ತೊಮ್ಮೆ ಚರ್ಚೆ ಕೂಡ ನಡೆಯುತ್ತಿದೆ.
ಇನ್ನುಳಿದಂತೆ ಲಕ್ನೋ ಮೂಲದವರಾಗಿರುವ ಸವಿ ಸಿಧು, ಚಂದೀಗಡ್ನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. ಆ ನಂತರ ಮತ್ತೆ ಲಕ್ನೋಗೆ ಮರಳಿದ್ದ ಸವಿ ಸಿಧು ಕಾನೂನು ಅಧ್ಯಯನ ಮಾಡಲು ಶುರು ಮಾಡಿದರು. ಆದರೆ, ರಂಗಭೂಮಿ ಇವರನ್ನು ಸೆಳೆಯಿತು. ಹೀಗಾಗಿ ನಟನೆಯನ್ನು ಆರಿಸಿಕೊಂಡ ಸವಿ ಸಿಧು ಇದರ ನಡುವೆ ಮಾಡೆಲಿಂಗ್ನಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.
ಇಂತಾ ಸವಿ ಸಿಧು ಪಟಿಯಾಲಾ ಹೌಸ್ನಲ್ಲಿ ಬಾಲಿವುಡ್ನ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದರು. ಬಾಲಿವುಡ್ನ ಹಿರಿಯ ನಟಿ ಡಿಂಪಲ್ ಕಪಾಡಿಯಾ ಕೂಡ ಈ ಚಿತ್ರದಲ್ಲಿದ್ದರು. ಸದ್ಯ ಸವಿ ಸಿಧು ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು ಸವಿ ಸಿಧು ಅವರಿಗೆ ಬಾಲಿವುಡ್ ಕರೆದು ಅವಕಾಶ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











