ಡಾ.ರಾಜ್ಕುಮಾರ್ ಬಗ್ಗೆ ಎಎನ್ಆರ್ ಆಡಿದ್ದ ಮುತ್ತಿನಂಥ ಮಾತುಗಳು
ಅಜಾತಶತ್ರು ಡಾ.ರಾಜ್ಕುಮಾರ್ ಅವರಿಗೆ ಎಲ್ಲ ಚಿತ್ರರಂಗಗಳಲ್ಲಿಯೂ ಆತ್ಮೀಯ ಗೆಳೆಯರಿದ್ದರು. ನೆರೆ ರಾಜ್ಯಗಳ ಖ್ಯಾತ ನಟರು ರಾಜ್ಕುಮಾರ್ ಅವರನ್ನು ಆದರ್ಶ ಭಾವದಿಂದ ನೋಡುತ್ತಿದ್ದರು. ಇದಕ್ಕೆ ಹಲವಾರು ಉದಾಹರಣೆಗಳು ಇವೆ.
ಅದರಲ್ಲಿಯೂ ತೆಲುಗು, ತಮಿಳು ಚಿತ್ರರಂಗದ ಆಗಿನ ಕಾಲದ ನಟರು ರಾಜ್ಕುಮಾರ್ ಅವರನ್ನು ಬಹು ಗೌರವದಿಂದ ಕಾಣುತ್ತಿದ್ದರು. ಎನ್ಟಿಆರ್, ಎಎನ್ಆರ್, ಎಂಜಿಆರ್ ಇನ್ನೂ ಹಲವರಿಗೆ ಅಣ್ಣಾವ್ರೆಂದರೆ ಬಹು ಪ್ರೀತಿ, ಗೌರವ.
ಡಾ.ರಾಜ್ಕುಮಾರ್ ಅವರು ಪ್ರತಿಷ್ಠಿತ ಪದ್ಮಭೂಷಣ ಗೌರವಕ್ಕೆ ಪ್ರಾಪ್ತರಾದಾಗ ಬೆಂಗಳೂರಿನ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಬೃಹತ್ತಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನೆರೆ-ಹೊರೆಯ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅಣ್ಣಾವ್ರ ಬಗ್ಗೆ ಹೇಳಿದ್ದ ಮಾತುಗಳು ಕೇಳಿದರೆ ಅಣ್ಣಾವ್ರು ಅದೆಷ್ಟು ದೊಡ್ಡ ನಟರಾಗಿದ್ದರು ಎಂಬುದು ಅರ್ಥವಾಗುತ್ತದೆ.

ರಾಜ್ಕುಮಾರ್ ಮದುಮಗ, ಪಾರ್ವತಮ್ಮ ಮದುಮಗಳು: ಎಎನ್ಆರ್
ಕಾರ್ಯಕ್ರಮದಲ್ಲಿ ತೆಲುಗು ಮಿಶ್ರಿತ ಇಂಗ್ಲಿಷ್ನಲ್ಲಿ ಮಾತನಾಡಿದ ಎಎನ್ಆರ್, 'ಈ ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಅವರು ಮದುಮಗ, ಪಾರ್ವತಮ್ಮನವರು ಮದುಮಗಳು' ಎಂದು ಹಾಸ್ಯ ಚಟಾಕಿ ಹಾರಿಸಿ ತಮ್ಮ ಭಾಷಣ ಶುರುವಿಟ್ಟುಕೊಂಡರು.

ಹಲವು ನಟರಿದ್ದಾರೆ ಆದರೆ ರಾಜ್ಕುಮಾರ್ ಒಬ್ಬರೇ: ಎಎನ್ಆರ್
'ರಾಜ್ಕುಮಾರ್ ಒಬ್ಬ ಮುಗ್ದ ಹುಡುಗ, ಒಬ್ಬ ಹುಲಿ, ಒಬ್ಬ್ ಯೋಗಿ ಕೂಡ. ರಾಜ್ಕುಮಾರ್ ಅವರ ಪ್ರತಿಭೆ ಬಗ್ಗೆ ಮಾತನಾಡುವ ಹಕ್ಕು ನನಗೆ ಇಲ್ಲ. ಹಲವು ಮಂದಿ ನಟರು ಇದ್ದಾರೆ ಆದರೆ ರಾಜ್ಕುಮಾರ್ ಇರುವುದು ಒಬ್ಬರೇ' ಎಂದು ಹೇಳಿದರು ಎಎನ್ಆರ್.

ಯುವನಟರು ಆದರ್ಶವಾಗಿ ತೆಗೆದುಕೊಳ್ಳಬೇಕು: ಎಎನ್ಆರ್
ರಾಜ್ಕುಮಾರ್ ಅವರನ್ನು ನಟರುಗಳು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದಿದ್ದ ಎಎನ್ಆರ್, 'ರಾಜ್ಕುಮಾರ್ ಅವರಂತೆ ವೃತ್ತಿ ಕೃಷಿ ಮಾಡಿದ ವ್ಯಕ್ತಿ ನಾನು ನೋಡಿಲ್ಲ. ಯುವ ನಟರು ಅವರನ್ನು ಆದರ್ಶವಾಗಿ ತೆಗೆದುಕೊಂಡು ಅವರ ಹಾದಿಯಲ್ಲಿ ನಡೆಯಬೇಕು' ಎಂದರು.
Recommended Video

ಹಲವು ಗಣ್ಯರು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
1983 ರ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಆ ವೈಭವಪೂರ್ಣ ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳ ನಟರಾದ ಅತಿಥಿಗಳಾಗಿ ಆಗಮಿಸಿದ್ದ ಶಿವಾಜಿ ಗಣೇಶನ್, ಅಮಿತಾಬ ಬಚ್ಚನ್, ರಜನಿಕಾಂತ್, ದಾಸರಿ ನಾರಾಯಣ ರಾವ್ ಭಾಗವಹಿಸಿದ್ದರು. ಜೊತೆಗೆ ಹಲವಾರು ಕನ್ನಡ ಸಿನಿಮಾರಂಗದ ನಟರೂ ಸಹ ಭಾಗವಹಿಸಿದ್ದರು. ಶಿವಾಜಿ ಗಣೇಶನ್, ಅಮಿತಾಬ್ ಬಚ್ಚನ್ ಸಹ ರಾಜ್ಕುಮಾರ್ ನಟನೆಯನ್ನು ಹೊಗಳಿದ್ದರು.
(ಮಾಹಿತಿ: ಹಳೆಯ ಪತ್ರಿಕೆ ಸಂಗ್ರಹ, 'ಚಂದನ-ನಂದನ' ಫೇಸ್ಬುಕ್ ಪುಟ)


Click it and Unblock the Notifications











