Divorce ; 2025ರ ಆರಂಭದ ನಾಲ್ಕು ತಿಂಗಳಿನಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಸೆಲೆಬ್ರೆಟಿಗಳಿವರು..!
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇದಕ್ಕೆ ಪುರಾವೆ ಎನ್ನುವಂತೆ ಈ ವರ್ಷದ ಆರಂಭದಲ್ಲಿಯೇ ಹಲವಾರು ಜನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವರು ಡಿವೋರ್ಸ್ ಪಡೆದಿದ್ದಾರೆ. ಹಾಗಿದ್ದರೆ ಈ ವರ್ಷದ ಈ ನಾಲ್ಕು ತಿಂಗಳಿನಲ್ಲಿ ಯಾರೆಲ್ಲ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿದ್ದಾರೆ. ತಮ್ಮ ಸಾಂಸಾರಿಕ ಜೀವನದ ವಿಚಾರದಿಂದ ಯಾರೆಲ್ಲ ಸದ್ದು ಮಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ.
ರನ್ಯಾ ರಾವ್ ಮತ್ತು ಜತಿನ್ ಹುಕ್ಕೇರಿ
ಮಾಣಿಕ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರನ್ಯಾ, ಸದ್ಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ. ಅದ್ಯಾವ ಕಾಲಕ್ಕೆ ರನ್ಯಾ ಹೊರ ಬರುತ್ತಾರೆ ಎನ್ನುವುದು ಗೊತ್ತಿಲ್ಲವಾದರು ರನ್ಯಾ ಅವರ ಪತಿ ಜತಿನ್ ಹುಕ್ಕೇರಿ ನ್ಯಾಯಾಲಕಯಕ್ಕೆ ವಿಚ್ಛೇದನದ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಮದುವೆಯಾಗಿದ್ದ ಇಬ್ಬರ ನಡುವೆ ಕೇವಲ ಒಂದೇ ತಿಂಗಳಿನಲ್ಲಿ ಮನಸ್ತಾಪ ಶುರುವಾಗಿತ್ತು. ಇನ್ನು ರನ್ಯಾ ದುಬೈ ಪ್ರವಾಸ ಜತಿನ್ ಮನದಲ್ಲಿ ಅನುಮಾನದ ಬೀಜ ಬಿತ್ತಿತ್ತು. ಪ್ರಶ್ನೆ ಮಾಡಿದಾಗೆಲ್ಲ ರನ್ಯಾ ರಂಪ-ರಾಮಾಯಣ ಮಾಡಲು ಶುರು ಮಾಡಿದರು.

ಸಂಧಾನಕ್ಕೆ ಇಬ್ಬರ ಮನೆ ಮಂದಿ ಪದೇ ಪದೇ ಪ್ರಯತ್ನ ಮಾಡಿದರು ಕೂಡ ಯಾವ ಪ್ರಯೋಜನವಾಗಲಿಲ್ಲ. ಹೀಗಾಗಿಯೇ ಡಿವೋರ್ಸ್ ನೀಡುವ ಕುರಿತು ಜತಿನ್ ಆಲೋಚನೆ ಮಾಡುತ್ತಿದ್ದ ಸಮಯದಲ್ಲಿಯೇ ರನ್ಯಾ ನಟಿಯಲ್ಲ ಬದಲಿಗೆ ಚಿನ್ನದ ಕಳ್ಳಿ ಎನ್ನುವ ವಿಚಾರ ಜಗಜ್ಜಾಹೀರಾಯ್ತು. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ರನ್ಯಾ ಬಂಧನವಾಯ್ತು. ಇನ್ನು ರನ್ಯಾ ಅವರನ್ನು ಮದುವೆ ಮಾಡಿಕೊಂಡ ತಪ್ಪಿಗೆ ರನ್ಯಾ ರಾವ್ ಬಂಧನದ ನಂತರ ಜತಿನ್ ಹುಕ್ಕೇರಿಯವರನ್ನು ಡಿಆರ್ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಬಂಧನದ ಭೀತಿಯಿಂದ ಜತಿನ್ ಹುಕ್ಕೇರಿ ಹೈಕೋರ್ಟ್ ಮೆಟ್ಟಿಲನ್ನೇರಿದ್ದರು. ಈ ಎಲ್ಲ ಕಾರಣಗಳಿಂದ ರನ್ಯಾ ಅವರಿಂದ ದೂರವಾಗುವ ನಿರ್ಧಾರವನ್ನು ಜತಿನ್ ಮಾಡಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ
ರಿಶ್ತೆ, ಸಿಐಡಿ, ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ, ಹೀಗೆ ಹತ್ತು ಹಲವು ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಅಮನ್ ವರ್ಮಾ, 2016ರ ಡಿಸೆಂಬರ್ನಲ್ಲಿ ವಂದನಾ ಲಾಲ್ವಾನಿ ಅವರನ್ನು ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ಜೀವನ ಖುಷಿಯಿಂದ ಕೂಡಿತ್ತು. ಆದರೆ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಆ ನಂತರ ಇಬ್ಬರ ನಡುವೆ ಮಗು ಮಾಡಿಕೊಳ್ಳುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಹೀಗಾಗಿಯೇ ಅಮನ್ ವರ್ಮಾ ಅವರಿಂದ ದೂರವಾಗುವ ನಿರ್ಧಾರಕ್ಕೆ ಬಂದ ವಂದನಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದರು. ಇನ್ನು ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ತಮ್ಮ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಹಲವು ಬಾರಿ ಪ್ರಯತ್ನವನ್ನು ಮಾಡಿದ್ದರು ಕೂಡ ಸಾಧ್ಯವಾಗಲಿಲ್ಲ. ರಾಜಿ ಮಾಡಿಕೊಳ್ಳಲಾಗದ ಹಂತಕ್ಕೆ ಈಗ ವಿಚಾರ ತಲುಪಿದ್ದು ವಿಚ್ಛೇದನ ಪಡೆಯುವುದೊಂದೇ ಅಂತಿಮ ದಾರಿಯೆಂದು ಇಬ್ಬರು ನಿರ್ಧರಿಸಿದರು.
ಮುಗ್ದಾ ಚಾಪೇಕರ್ ಮತ್ತು ರಾವಿಶ್ ದೇಸಾಯಿ
ಧರ್ಮ ವೀರ್, ಗೋಲ್ಮಾಲ್ ಹೈ ಸಬ್ ಗೋಲ್ಮಾಲ್ ಹೈ, ಹಲ್ಲಾ ಬೋಲ್, ಮುಂತಾದ ಧಾರಾವಾಹಿಗಳ ಮೂಲಕ ಹಿಂದಿ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ಮುಗ್ದಾ ಚಾಪೇಕರ್ ಕೂಡ ತಮ್ಮ 09 ವರ್ಷಗಳ ದಾಂಪತ್ಯಕ್ಕೆ ಇದೇ ವರ್ಷ ಗುಡ್ ಬೈ ಹೇಳಿದ್ದಾರೆ. ತಮ್ಮ ಪತಿ ರಾವಿಶ್ ದೇಸಾಯಿಗೆ ವಿಚ್ಚೇದನ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಯಾಕೆಂದರೆ ಮುಗ್ದಾ ಚಾಪೇಕರ್ ಮತ್ತು ರಾವಿಶ್ ದೇಸಾತಿ ಅವರದ್ದು ಲವ್ ಮ್ಯಾರೇಜ್. ಧಾರಾವಾಹಿಯಲ್ಲಿ ಜೊತೆಯಲ್ಲಿ ಅಭಿನಯಿಸುತ್ತಾ ಪ್ರೀತಿಯಲ್ಲಿ ಬಿದ್ದವರು ಇಬ್ಬರು. ಹೀಗಾಗಿಯೇ ತಮ್ಮ ನೆಚ್ಚಿನ ಜೋಡಿ ನಿಜ ಜೀವನದಲ್ಲಿ ಕೂಡ ಒಂದಾಗುತ್ತಿದೆ ಎಂದು ಅನೇಕರು ಖುಷಿ ಪಟ್ಟಿದ್ದರು. ಶುಭ ಕೋರಿದ್ದರು. ಆದರೆ 09 ವರ್ಷಗಳ ದಾಂಪತ್ಯ ಜೀವನ ಈ ವರ್ಷದ ಆರಂಭದಲ್ಲಿ ಮುರಿದು ಬಿತ್ತು.
ಜಿ.ವಿ. ಪ್ರಕಾಶ್ ಮತ್ತು ಸೈಂಧವಿ
ಜಿ.ವಿ.ಪ್ರಕಾಶ್ ಪಕ್ಕದ ತಮಿಳುನಾಡಿನ ಖ್ಯಾತ ಸಂಗೀತ ನಿರ್ದೇಶಕ. ಇಷ್ಟೇ ಅಲ್ಲ ನಟ ಕೂಡ ಹೌದು. ಪೊಲ್ಲಾಧವನ್, ರಾಜಾ ರಾಣಿ, ತೇರಿ, ತಲೈವಿ ಕ್ಯಾಪ್ಟನ್ ಮಿಲ್ಲರ್ ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಇವರದ್ದು. ಇನ್ನು ಇವರ ಪತ್ನಿ ಸೈಂಧವಿ ಕೂಡ ತಮಿಳು ಚಿತ್ರರಂಗದ ಖ್ಯಾತ ಗಾಯಕಿ. ಅನಿಯನ್ ಚಿತ್ರದ ಮೂಲಕ 2005ರಲ್ಲಿ ವೃತ್ತಿ ಜೀವನ ಶುರು ಮಾಡಿದ ಸೈಂಧವಿ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಕೇವಲ ತಮಿಳು ಮಾತ್ರವಲ್ಲ ತೆಲುಗಿನಲ್ಲಿ ಕೂಡ ಹಾಡು ಹಾಡಿರುವ ಸೈಂಧವಿ ಕನ್ನಡದಲ್ಲಿ ಸೈಕೋ, ಉಲ್ಲಾಸ ಉತ್ಸಾಹ ಚಿತ್ರಗಳ ಹಾಡನ್ನು ಹಾಡಿದ್ದಾರೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿನ 'ಮತ್ತೆ ನೋಡಬೇಡ' ಹಾಡಿಗೆ ಕೂಡ ಧ್ವನಿಯಾಗಿದ್ದಾರೆ.
ಇಂಥಾ ಹಿನ್ನೆಲೆಯ ಜಿವಿ ಪ್ರಕಾಶ್ ಮತ್ತು ಸೈಂಧವಿ ಕಳೆದ ವರ್ಷ ಮೇ 13ರಂದು ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದರು.ಆದರೆ, ಆಗ ಇವರಿಬ್ಬರ ಅಭಿಮಾನಿಗಳು ಮುನಿಸು ಮರೆತು ಮತ್ತೆ ಒಂದಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಈ ನಿರೀಕ್ಷೆ ಈ ವರ್ಷ ಹುಸಿಯಾಯ್ತು. ಯಾಕೆಂದರೆ ವರ್ಷದ ನಂತರ ಜಿವಿ ಪ್ರಕಾಶ್ ಈಗ ತಮ್ಮ ಪತ್ನಿ ಸೈಂಧವಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಂತೆಯೇ ಜೊತೆಯಾಗಿ ಬಂದು ಡಿವೋರ್ಸ್ ಅರ್ಜಿ ಸಲ್ಲಿಸಿ ತೆರಳಿದರು. ಇನ್ನು ಇಬ್ಬರ ವಿಚ್ಛೇದನಕ್ಕೆ ನಟಿ ದಿವ್ಯಾ ಭಾರತಿ ಕಾರಣವೆನ್ನುವ ಮಾತು ಕೇಳಿ ಬರುತ್ತಿದೆಯಾದರೂ ದಿವ್ಯಾ ಭಾರತಿ ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
ಸಂಯುಕ್ತಾ ಷಣ್ಮುಗನ್ ಮತ್ತು ಕಾರ್ತಿಕ್ ಶಂಕರ್
2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ, ಬಿಗ್ ಬಾಸ್ ನಾಲ್ಕರಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಷಣ್ಮುಗನಾಥನ್ ಅವರ ದಾಂಪತ್ಯ ಕೂಡ ಇದೇ ವರ್ಷ ಮುರಿದು ಬಿತ್ತು. ತಮ್ಮ ಪತಿ ಕಾರ್ತಿಕ್ ಶಂಕರ್ ಅವರಿಂದ ದೂರವಾಗುತ್ತಿರುವ ವಿಚಾಋವನ್ನು ಫೋಟೊಶೂಟ್ ಮೂಲಕ ಸಂಯುಕ್ತಾ ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದ ಸಂಯುಕ್ತಾ, ಎಲ್ಲಾ ಪೇಪರ್ ಕೆಲಸಗಳನ್ನು ಮುಗಿಸಿದ್ದೇನೆ, ಹಿಂದೆಂದಿಗಿಂತಲೂ ನಾನು ಬಲಶಾಲಿಯಾಗಿದ್ದೇನೆ ಎಂದು ಹೇಳಿದ್ದರು. ಡಿವೋರ್ಸ್ ನಂತರ ನನ್ನ ಮುಖದ ಕಳೆ ಎಂದು ತಮ್ಮ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ, ಹಿಂಬಾಲಕರಿಗೆ ಶಾಕ್ ನೀಡಿದರು.
ಅಂದ್ಹಾಗೇ ಚಿತ್ರರಂಗದಲ್ಲಿ ಬ್ಯುಸಿ ಇದ್ದಾಗಲೇ ಸಂಯುಕ್ತಾ ತಮ್ಮ ಪೋಷಕರ ಒತ್ತಾಸೆಯಂತೆ ಕಾರ್ತಿಕ್ ಶಂಕರ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಇವರಿಗೆ ರಾಯನ್ ಎಂಬ ಮಗ ಕೂಡ ಇದ್ದಾನೆ. ಗಂಡ-ಮನೆ-ಸಂಸಾರ ಎಂದು ಸಂಯುಕ್ತಾ ಖುಷಿಯಾಗಿಯೇ ಇದ್ದರು. ಆದರೆ, ಸಂಯುಕ್ತಾ ಬೆನ್ನ ಹಿಂದೆ ಮಾಡಬಾರದ್ದನ್ನೆಲ್ಲ ಕಾರ್ತಿಕ್ ಶಂಕರ್ ಮಾಡಲು ಶುರು ಮಾಡಿದ್ದರು. ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ತಮ್ಮ ದಾಂಪತ್ಯ ಮುರಿದು ಬೀಳಲು ಪತಿಯ ಈ ಅನೈತಿಕ ಸಂಬಂಧವೇ ಕಾರಣವೆಂದು ಸಂಯುಕ್ತಾ ಹೇಳಿದ್ದರು.


Click it and Unblock the Notifications











