ನಮ್ಮಪ್ಪನ ಸಾವಿನ ಸುದ್ದಿ ಮುಚ್ಚಿಟ್ಟ ನಿರ್ಮಾಪಕ, ಅಂತ್ಯಕ್ರಿಯೆಗೆ ಹೋಗ್ಲಿಲ್ಲ; 'ಕನ್ನಡತಿ' ಆಮನಿ ಭಾವುಕ
ಬಹುಭಾಷಾ ನಟಿ ಆಮನಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸಿದ್ದರಿಂದ ಆಕೆ ಆಂಧ್ರ ಮೂಲದವರು ಎಂದೇ ಸಾಕಷ್ಟು ಜನ ಅಂದುಕೊಂಡಿದ್ದಾರೆ. ಅಸಲಿ ವಿಚಾರ ಏನು ಅಂದ್ರೆ, ಆಕೆ ಕನ್ನಡದವರು. ಬೆಂಗಳೂರಿನಲ್ಲಿ ಓದಿ ಬೆಳೆದವರು.
ನಟಿ ಆಮನಿ ತಂದೆ ಮಾದಪ್ಪ ಅಪ್ಪಟ ಕನ್ನಡಿಗರು. ಮಾದೇಶ ಪಿಕ್ಚರ್ಸ್ ಬ್ಯಾನರ್ನಲ್ಲಿ ಸಿನಿಮಾ ವಿತರಕರಾಗಿದ್ದರು. ಅಂದಹಾಗೆ ಆಕೆಗೆ ಪೋಷಕರು ಇಟ್ಟು ಹೆಸರು ಮಂಜುಳಾ. ಬೆಂಗಳೂರಿನ ಬಾಷ್ಯಂ ಸರ್ಕಲ್ ಬಳಿ ಶಾಲೆಯೊಂದರಲ್ಲಿ ಓದಿದರು. ವಿಜಯನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿದ್ದರು. ಆದರೆ ನಟಿಯಾಗುವ ಆಸೆಯಿಂದ ಅರ್ಧಕ್ಕೆ ಕಾಲೇಜು ಬಿಟ್ಟು ಚಿತ್ರರಂಗದತ್ತ ಮುಖ ಮಾಡಿದರು.

ಸಾಕಷ್ಟು ಜನರಿಗೆ ಆಕೆ ಕನ್ನಡತಿ, ಬೆಂಗಳೂರಿನಲ್ಲಿ ಓದಿ ಬೆಳೆದಿದ್ದು ಎನ್ನುವುದು ಗೊತ್ತಿಲ್ಲ. ನಿರ್ದೇಶಕ ರಘುರಾಮ್ ತಮ್ಮ ಯೂಟ್ಯೂಬ್ ಚಾನಲ್ಗಾಗಿ ಆಮನಿ ಸಂದರ್ಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಆಕೆ ಕನ್ನಡದಲ್ಲಿ ಸಂದರ್ಶನ ನೀಡಿದ್ದು ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ. ಚಿಕ್ಕಂದಿನಿಂದ ಸಿನಿಮಾ ನಾಯಕಿಯಾಗುವ ಕನಸುಕಂಡ ಮಂಜುಳಾ ಮುಂದೆ ಆಮನಿಯಾಗಿ ಮೋಡಿ ಮಾಡಿದ ಕಥೆ ಬಿಚ್ಚಿಟ್ಟಿದ್ದಾರೆ.
ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಬಳಿ ಮೊದಲಿಗೆ ಸಿನಿಮಾ ಅವಕಾಶ ಕೇಳಿ ಹೋಗಿದ್ದರಂತೆ ಮಂಜುಳಾ. ಆದರೆ ಇನ್ನು ಚಿಕ್ಕ ಹುಡುಗಿ ಮುಂದೆ ನೋಡೋಣ ಹೋಗು ಎಂದು ಹೇಳಿ ಕಳುಹಿಸಿದ್ದರಂತೆ. ತಮಿಳಿನ 'ತೆಮ್ಮಂಗು ಪಾಟ್ಟುಕಾರನ್' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಮೀನಾಕ್ಷಿ ಎನ್ನುವ ಹೆಸರಿನಲ್ಲಿ ಕಾಲಿವುಡ್ಗೆ ಪರಿಚಿತರಾಗಿದ್ದರು. ಆರಂಭದಲ್ಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು.
ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ನಿಜಾಮಾಬಾದ್ನಲ್ಲಿ ಇದ್ದರಂತೆ. ಅಲ್ಲೇ ಚಿತ್ರೀಕರಣ ನಡೆಯುತ್ತಿತ್ತು. ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಅಷ್ಟು ಬೇಗ ಹೋಗುತ್ತಾರೆ ಎಂದುಕೊಂಡಿರಲಿಲ್ಲ, ನಾವು ಚಿತ್ರೀಕರಣ ಮಾಡುತ್ತಿದ್ದೆವು. ಅದು ಕ್ಲೈಮ್ಯಾಕ್ಸ್ ಶೂಟಿಂಗ್. ಅವತ್ತು ನಾನು ಹೊರಟುಬಿಟ್ಟರೆ ಶೂಟಿಂಗ್ ನಿಂತು ಹೋಗುತ್ತಿತ್ತು. ಹಾಗಾಗಿ ನಮ್ಮ ತಂದೆ ಸಾವಿನ ಸುದ್ದಿಯನ್ನು ನಿರ್ಮಾಪಕರು ಹೇಳಲೇ ಇಲ್ಲ.

ಬೆಂಗಳೂರಿನಲ್ಲಿ ತಂದೆ ತೀರಿಕೊಂಡಿದ್ದರು. ಅಣ್ಣ ಫೋನ್ ಮಾಡಿ ನಿಜಾಮಾಬಾದ್ ಬಳಿ ನಾವು ಉಳಿದುಕೊಂಡಿದ್ದ ಹೋಟೆಲ್ಗೆ ತಿಳಿಸಿದ್ದ. ಈಗಿನ ರೀತಿ ಆಗ ಮೊಬೈಲ್ ಫೋನ್ ಇರಲಿಲ್ಲ. ಲ್ಯಾಂಡ್ಲೈನ್ ಮಾತ್ರ. ಚಿತ್ರೀಕರಣ ಮುಗಿದು ಮರುದಿನ, ನಿಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದೆಯಂತೆ ಎಂದು ಹೇಳಿದರು. ಆಗ ಕೂಡ ತಂದೆ ಸಾವಿನ ವಿಚಾರ ಹೇಳಲಿಲ್ಲ. ನಮ್ಮ ತಾಯಿ ಜೊತೆಗಿದ್ದರು. ಕೂಡಲೇ ವಿಮಾನದ ಮೂಲಕ ಇಬ್ಬರೂ ಬಂದೆವು.
ನಾನು ಅಮ್ಮ ಬೆಂಗಳೂರಿಗೆ ಬರುವ ವೇಳೆಗೆ ಅಂತ್ಯಕ್ರಿಯೆ ಮುಗಿದು ಹೋಗಿತ್ತು. ಎರಡು ದಿನ ಕಾದು ಕಾರ್ಯ ಮುಗಿಸಿದ್ದರು. ಆಗ ಅಷ್ಟು ಸುಲಭವಾಗಿ ಕಮ್ಯೂನಿಕೇಟ್ ಮಾಡೋಕೆ ಆಗುತ್ತಿರಲಿಲ್ಲ. ಹಾಗಾಗಿ ಬರುವ ವೇಳೆಗೆ ಎಲ್ಲಾ ಮುಗಿದಿತ್ತು. ವಿಷಯ ಗೊತ್ತಿದ್ದು ನಾನು ಬರಲಿಲ್ಲ ಎಂದು ನನ್ನ ಸಹೋದರ ಅಂದುಕೊಂಡಿದ್ದ. ಕೊನೆ ಬಾರಿ ತಂದೆ ಮುಖ ನೋಡಲು ಆಗಲಿಲ್ಲ. ಆ ನೋವಿನಲ್ಲಿ ಇದ್ದಾಗಲೇ ಇ. ವಿ. ವಿ ಸತ್ಯನಾರಾಯಣ ಅವರಿಗೆ ಕರೆ ಬಂತು.
ತಂದೆ ಆಶೀರ್ವಾದ ಎನ್ನುವಂತೆ 'ಜಂಬಲಕಡಿಪಂಬ' ಸಿನಿಮಾ ಅವಕಾಶ ಸಿಕ್ತು. ಮತ್ತೆ ಹಿಂತಿರುಗಿ ನೋಡಲೇಯಿಲ್ಲ. ಇ. ವಿ. ವಿ ಸತ್ಯನಾರಾಯಣ ನನಗೆ ಆಮನಿ ಎನ್ನುವ ಹೆಸರು ಕೊಟ್ಟರು ಎಂದು ಆಕೆ ವಿವರಿಸಿದ್ದಾರೆ. ಕನ್ನಡದಲ್ಲಿ ಆಮನಿ 'ಬಾಳಿನ ಜ್ಯೋತಿ' ಹಾಗೂ 'ಅಪ್ಪಾಜಿ' ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











