ನಿವೇದಿತಾ ಜೈನ್ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ? ಅಂದು ರಾತ್ರಿ ನಡೆದ ಘಟನೆ ವಿವರಿಸಿದ ತಾಯಿ
ಎಷ್ಟು ಸಿನಿಮಾಗಳಲ್ಲಿ ನಟಿಸಿದರು ಎನ್ನುವುದಕ್ಕಿಂತ ತಾರೆಯರು ಯಾವ ರೀತಿ ಮೋಡಿ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ. ಕೆಲವರು ಬಣ್ಣದ ಲೋಕಕ್ಕೆ ಹೀಗೆ ಬಂದು ಹಾಗೆ ಮರೆ ಆಗಿಬಿಡುತ್ತಾರೆ. ಚಿತ್ರರಂಗದಿಂದ ದೂರಾದವರೆ ಕಥೆ ಒಂದ್ಕಡೆ ಆದರೆ ಬಾರದ ಲೋಕಕ್ಕೆ ಪಯಣ ಬೆಳೆಸಿದವರ ಕಥೆ ಮತ್ತೊಂದು ಕಡೆ.
ಕನ್ನಡದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ನಟಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ನಟಿ ನಿವೇದಿತಾ ಜೈನ್. ಬಹಳ ಚಿಕ್ಕ ವಯಸ್ಸಿನಲ್ಲೇ ಆಕೆ ಇಹಲೋಕ ತ್ಯಜಿಸಿಬಿಟ್ಟರು. ತಮ್ಮ ಹುಟ್ಟುಹಬ್ಬದ ಮರುದಿನವೇ ಆಕಸ್ಮಿಕವಾಗಿ ತಮ್ಮ ಮನೆ ಮೇಲಿಂದ ಕಾಲು ಜಾರಿ ಬಿದ್ದು ಕೋಮಾಗೆ ಹೋಗಿದ್ದರು. 23 ದಿನಗಳ ಬಳಿಕ ಕೊನೆಯುಸಿರೆಳೆದಿದ್ದರು. ನಿವೇದಿತಾ ಜೈನ್ ನಿಧನದ ಬಗ್ಗೆ ಸಾಕಷ್ಟು ಕಟ್ಟು ಕಥೆಗಳಿವೆ.

ನಿವೇದಿಕಾ ಜೈನ್ ಸಾವಿನ ಹಿಂದೆ ಚಿತ್ರರಂಗದವರ ಕೈವಾಡ, ರಾಜಕೀಯ ನಾಯಕರ ಸಂಚು ಇತ್ತು ಎಂದು ಕೂಡ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಲೇ ಇದೆ. ಬಹಳ ದಿನಗಳ ಬಳಿಕ ನಿವೇದಿತಾ ಜೈನ್ ತಾಯಿ ಪ್ರಿಯಾ ಜೈನ್ ಮಾತನಾಡಿದ್ದಾರೆ. ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್ನಲ್ಲಿ ಅವರು ಮಾತನಾಡಿದ್ದಾರೆ. ಆ ದಿನ ಏನಾಯ್ತು ಎನ್ನುವುದನ್ನು ವಿವರಿಸಿದ್ದಾರೆ.
"ಅವತ್ತು ನಾವೆಲ್ಲರೂ ಮನೆಯಲ್ಲೇ ಇದ್ದೆವು. ಮನೆ ಕೆಲಸದವರು, ನಾನು, ನಮ್ಮ ಯಜಮಾನ್ರು ಎಲ್ಲರೂ ಇದ್ವಿ. ಮಿಸ್ ಇಂಡಿಯಾ ಬ್ಯೂಟಿ ಕಾಂಟೆಸ್ಟ್ಗೆ ಸಿದ್ಧತೆ ನಡೆಸುತ್ತಿದ್ದಳು. ಯಾರು ನೋಡಬಾರದು ಎನ್ನುವ ಕಾರಣಕ್ಕೆ ಮನೆ ಟೆರೆಸ್ ಮೇಲೆ ಕ್ಯಾಟ್ವಾಕ್ ಅಭ್ಯಾಸ ಮಾಡುತ್ತಿದ್ದಳು. ರಾತ್ರಿ ಏನಾಯ್ತು ಅಂದ್ರೆ, ನಮ್ಮ ಮನೆಯ ತೆರೆಸ್ ಮೇಲೆ ಸುತ್ತಾ ಗ್ಲಿಲ್ ಇತ್ತು. ಆಕೆಯ ಎತ್ತರ 5.8 ಅಡಿ. ಜೊತೆಗೆ ಹೈ ಹೀಲ್ಡ್ ಚಪ್ಪಲಿ ಹಾಕಿದ್ದಳು. ಅವತ್ತು ಕಾಲು ಸ್ಲಿಪ್ ಆಗಿ ಮೇಲಿನಿಂದ ಬಿದ್ದು ಬಿಟ್ಟಿದ್ದಳು"

"ಪೆರಾಪೆಟ್ ವಾಲ್ ಬಹಳ ಚಿಕ್ಕದಾಗಿತ್ತು. ಹಾಗಾಗಿ ಎರಡು ಅಂತಸ್ತು ಮೇಲಿನಿಂದ ಜಾರಿ ಬಿದ್ದಿದ್ದಳು. ನಾನು ಆಗ ಅಡುಗೆ ಮನೆಯಲ್ಲಿ ಏನೋ ಅಡುಗೆ ಮಾಡುತ್ತಿದ್ದೆ. ಸಣ್ಣ ಆಲೂಗಡ್ಡೆ ಬೆಣ್ಣೆಯಲ್ಲಿ ಫ್ರೈ ಮಾಡಿ ಕೊಡಲು ಹೇಳಿದ್ದಳು. ನಾನು ಅದನ್ನು ಮಾಡುತ್ತಿದ್ದೆ. ಯಜಮಾನ್ರು ಹುಷಾರಿಲ್ಲದೇ ಮೇಲೆ ಬೆಡ್ರೂಂನಲ್ಲಿ ಮಲಗಿದ್ದರು. ನಮ್ಮ ತಂದೆ ಕೂಡ ಅವತ್ತು ಮನೆಗೆ ಬಂದಿದ್ದರು. ಇದ್ದಿಕ್ಕಿದಂತೆ ಜೋರಾಗಿ ಸದ್ದಾಯ್ತು. ಬೋರಲು ಬಿದ್ದಿದ್ದಳು"
"ನಾನು ಓಡಿ ಹೋಗಿ ನೋಡಿ ಯಜಮಾನರನ್ನು ಕೂಗಿ ಕರೆದೆ. ಮೊದಲಿಗೆ ರಾರಾಜಿ ನಗರದ ನಮ್ಮ ಮನೆಯಿಂದ ಕಾರಿನಲ್ಲಿ ಗಾಯತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಬಳಿಕ ಅಲ್ಲಿಂದ ಮಲ್ಯ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಪ್ರಜ್ಞೆ ಇರಲಿಲ್ಲ. ಏದುಸಿರು ಬಿಡುತ್ತಿದ್ದಳು. ರಕ್ತ ಧಾರಾಕಾರವಾಗಿ ಹರಿಯುತಿತ್ತು. ಇದು ಸತ್ಯ. ಇದು ವಾಸ್ತವ. ಜನ ಏನೇನೊ ಮಾತನಾಡುತ್ತಾರೆ. ಯಾವುದೋ ವಿಚಾರಕ್ಕೆ ನಿವೇದಿತಾ ಹೆಸರು ತಳುಕು ಹಾಕಿ ಮಾತನಾಡಿದರು. ನೋವಾಗುತ್ತಿತ್ತು" ಎಂದು ಪ್ರಿಯಾ ಜೈನ್ ಕಣ್ಣೀರಾಗಿದ್ದಾರೆ.
"ನಿವೇದಿತಾಳದ್ದು ಆತ್ಮಹತ್ಯೆ ಅಲ್ಲ. ಆಕಸ್ಮಿಕ ಸಾವು. ಸಿಬಿಐ ಅಧಿಕಾರಿಗಳು ಬಂದು ತನಿಖೆ ನಡೆಸಿದ್ದರು. ದೊಡ್ಡ ಗೊಂಬೆಗಳನ್ನು ತಂದು ಮೇಲಿನಿಂದ ತಳ್ಳಿ ತೋರಿಸಿದ್ದರು. ಆತ್ಮಹತ್ಯೆ ಹತ್ಯೆ ಮಾಡಿಕೊಳ್ಳುವಾಗ ದೂರಕ್ಕೆ ಜಗಿಯುತ್ತಾರೆ. ಆದರೆ ಕಾಲು ಜಾರಿ ಬಿದ್ದಿದ್ದರಿಂದ ನಿವೇದಿತಾ ಇಲ್ಲೇ ಬಿದ್ದಿದ್ದಳು ಎಂದು ಹೇಳಿದ್ದರು" ಅಂತ ಆಕೆ ನೆನಪಿಸಿಕೊಂಡಿದ್ದಾರೆ.
"ಸಾಕಷ್ಟು ಜನ ಆಕೆಯನ್ನು ಟಾರ್ಗೆಟ್ ಮಾಡಿದ್ದರು. ಏನೇನೆ ಮಾತನಾಡಿದ್ದರು. ಅದನ್ನು ನೆನೆದರೆ ಬೇಸರವಾಗುತ್ತದೆ. ಆಕೆ 23 ದಿನ ಆಸ್ಪತ್ರೆಯಲ್ಲಿ ಇದ್ದಾಗ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದೆವು. ಯಾರು ಏನು ಹೇಳುತ್ತಾರೋ ಎಲ್ಲಾ ಮಾಡಿದೆವು. ಆದರೆ ಕೊನೆಗೂ ಆಕೆ ಸೆಮಿ ಕೋಮಾ ಇಂದ ಹೊರಗೆ ಬರಲಿಲ್ಲ" ಎಂದು ಪ್ರಿಯಾ ಜೈನ ವಿವರಿಸಿದ್ದಾರೆ.
1994ರಲ್ಲಿ ಮಿಸ್ ಬೆಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದ ನಿವೇದಿತಾ ಜೈನ್ 'ಶಿವರಂಜಿನಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ಶಿವರಾಜ್ಕುಮಾರ್ ನಟನೆಯ 'ಶಿವಸೈನ್ಯ' ನಟಿಸಿ ಮೋಡಿ ಮಾಡಿದ್ದರು. ತೆಲುಗಿನ 'ತೋಕಲೇನಿ ಪಿಟ್ಟ' ಹಾಗೂ ತಮಿಳಿನ 'ಮಾಯಿನ್ ಮನಿಕೋಡಿ' ಎನ್ನುವ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ಸೂತ್ರಧಾರ' ಆಕೆ ನಟಿಸಿದ ಕೊನೆಯ ಚಿತ್ರ.


Click it and Unblock the Notifications











