ತಮ್ಮ ಕೊನೆ ದಿನಗಳಲ್ಲಿ ಸೌಂದರ್ಯ ಪದೇ ಪದೆ ಕೇಳುತ್ತಿದ್ದ ಹಾಡು ಯಾವುದು?
ನಟಿ ಸೌಂದರ್ಯ ಅಗಲಿ 21 ವರ್ಷ ಕಳೆದಿದೆ. ಇಂದಿಗೂ ಸಿನಿರಸಿಕರು ಆಕೆಯನ್ನು ಮರೆತ್ತಿಲ್ಲ. ಸೌಂದರ್ಯಳ ಸ್ನಿಗ್ಧ ಚೆಲುವೆ, ನಟನೆ, ಪಕ್ಕದ್ಮನೆ ಹುಡುಗಿಯಂತಹ ಇಮೇಜ್ ಅಷ್ಟು ಸುಲಭವಾಗಿ ಮಾಸುವಂತದ್ದಲ್ಲ. ದಶಕದ ಕಾಲ ಸೌತ್ ಸಿನಿದುನಿಯಾದಲ್ಲಿ ಸ್ಟಾರ್ ನಟಿಯಾಗಿ ಸೌಂದರ್ಯ ಮೆರೆದಿದ್ದರು.
2004ರ ಏಪ್ರಿಲ್ 17, ಭಾರತೀಯ ಚಿತ್ರರಂಗ ಮರೆಯಲಾರದ ದಿನ. ಅಂದು ಸೌಂದರ್ಯ ದುರಂತ ಅಂತ್ಯ ಕಂಡಿದ್ದರು. ಬಿಜೆಪಿ ಪರ ಪ್ರಚಾರಕ್ಕಾಗಿ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಸಣ್ಣ ಏರ್ಕ್ರಾಫ್ಟ್ನಲ್ಲಿ ಸೌಂದರ್ಯ ಆಂಧ್ರ ಪ್ರದೇಶಕ್ಕೆ ಹೊರಟಿದ್ದರು. ಆದರೆ ಟೇಕ್ಅಪ್ ಆದ ಕೆಲವೇ ಕ್ಷಣದಲ್ಲಿ ಏರ್ಕ್ರಾಫ್ಟ್ ದುರಂತಕ್ಕೀಡಾಗಿ ಸುಟ್ಟು ಕರಕಲಾಗಿತ್ತು. ಈ ದುರಂತದಲ್ಲಿ ಸೌಂದರ್ಯ ಜೊತೆ ಸಹೋದರ ಅಮರ್ನಾಥ್ ಸಹ ಜೀವ ಕಳೆದುಕೊಂಡಿದ್ದರು.

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಕನ್ನಡದ ಹುಡುಗೆ ಸೌಂದರ್ಯ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ರಜನಿಕಾಂತ್, ಚಿರಂಜೀವಿ, ಅಮಿತಾಬ್ ಬಚ್ಚನ್, ವಿಷ್ಣುವರ್ಧನ್ ಸೇರಿದಂತೆ ಘಟಾನುಘಟಿ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದರು. ನಟಿ ಸೌಂದರ್ಯ ಬಗ್ಗೆ ನಿರ್ದೇಶಕ ರಘುರಾಮ್ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ.
ಸೌಂದರ್ಯ ತಮ್ಮ ಕೊನೆಯ ದಿನಗಳಲ್ಲಿ ಅದೊಂದು ಹಾಡನ್ನು ಪದೇ ಪದೆ ಕೇಳುತ್ತಿದ್ದರಂತೆ. 'ಆಪ್ತಮಿತ್ರ' ಚಿತ್ರದ ಚಿತ್ರೀಕರಣದ ವೇಳೆ ರಘುರಾಮ್ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದರು. ಅಂದು ನಟಿ ಸೌಂದರ್ಯ ಅವರು ಆ ಹಾಡನ್ನು ಯಾಕೆ ಕೇಳುತ್ತಿದ್ದರು ಎನ್ನುವುದು ನನಗೆ ಗೊತ್ತಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಈ ಬಗ್ಗೆ ವೀಡಿಯೋ ಮಾಡಿದ್ದಾರೆ.
ನಟಿ ಸೌಂದರ್ಯ ಹಾಗೂ ನಿರ್ದೇಶಕ ರಘುರಾಮ್ ಒಂದೇ ಶಾಲೆಯಲ್ಲಿ ಓದಿದವರು. ಶಾಲೆಯಲ್ಲಿ ಸೌಮ್ಯ(ಸೌಂದರ್ಯ) ನಮ್ಮ ಸೀನಿಯರ್ ಆಗಿದ್ದರು ಎಂದು ರಘುರಾಮ್ ನೆನಪಿಸಿಕೊಂಡಿದ್ದಾರೆ. 'ದೋಣಿ ಸಾಗಲಿ' ಚಿತ್ರದಲ್ಲಿ ಸೌಂದರ್ಯ ಜೊತೆ ಸಣ್ಣ ಪಾತ್ರದಲ್ಲಿ ಕೂಡ ರಘುರಾಮ್ ನಟಿಸಿದ್ದಾರೆ. ಆ ಚಿತ್ರದ ಚಿತ್ರೀಕರಣದ ವೇಳೆ ನನ್ನನ್ನು ಅವರು ತಮ್ಮ ಕಾರಿನಲ್ಲಿ ಶೂಟಿಂಗ್ ಸೆಟ್ಗೆ ಕರೆದುಕೊಂಡು ಹೋಗಿ ಬಂದಿದ್ದರು ಎಂದು ರಘುರಾಮ್ ಮೆಲುಕು ಹಾಕಿದ್ದಾರೆ.

ಈಟಿವಿ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವಾಗ 'ಆಪ್ತಮಿತ್ರ' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ನಾನು ಚಿತ್ರದ ಬಗ್ಗೆ ಪ್ರಚಾರಕ್ಕಾಗಿ ತಂಡ ಸದಸ್ಯರ ಸಣ್ಣ ಸಂದರ್ಶನ (ಬೈಟ್) ತರಬೇಕಿತ್ತು. ಬೆಂಗಳೂರು ಪ್ಯಾಲೇಸ್ನಲ್ಲಿ ಚಿತ್ರೀಕರಣ ನಡೀತಿತ್ತು. ಅಲ್ಲಿಗೆ ಕ್ಯಾಮರಾ ಸಮೇತ ರಘುರಾಮ್ ಹೋಗಿದ್ದರು. ಸೌಂದರ್ಯ ಅವರನ್ನು ಮಾತನಾಡಿಸಲು ಹೋದಾಗ ಸ್ವಲ್ಪ ಹೊತ್ತು ಬಿಟ್ಟು ಬಾ, ಅವರನ್ನೆಲ್ಲಾ ಮಾತನಾಡಿಸು ಕೊನೆಗೆ ನಾನು ಮಾತನಾಡ್ತೀನಿ ಎಂದು ಸೌಂದರ್ಯ ಹೇಳಿದ್ದರು.
ಎಲ್ಲರನ್ನು ಮಾತನಾಡಿಸಿ ಮತ್ತೆ ಸೌಂದರ್ಯ ಅವರ ಮುಂದೆ ಹೋಗಿ ನಿಂತಾಗ ಆಕೆ ಐಪೋಡ್ನಲ್ಲಿ ಯಾವುದೋ ಹಾಡು ಕೇಳುತ್ತಿದ್ದರು. ಪದೇ ಪದೇ ಅದೇ ಹಾಡು ಕೇಳುತ್ತಿದ್ದರು. ಕೂಡಲೇ ಹತ್ತಿರಕ್ಕೆ ಕರೆದು ತಾವು ಕೇಳುತ್ತಿದ್ದ ಹೆಡ್ ಫೋನ್ ಅನ್ನು ನನ್ನ ಕಿವಿಗೆ ಹಾಕಿ ಹಾಡು ಪ್ಲೇ ಮಾಡಿದರು. ಅದು ಶಾರುಖ್ ಖಾನ್ ನಟನೆಯ 'ಕಲ್ ಹೋ ನ ಹೋ' ಚಿತ್ರದ 'ಹರ್ ಘಡಿ ಬಾದಲ್ ರಹಿ ಹೈ' ಹಾಡು ಎಂದು ರಘುರಾಮ್ ನೆನಪು ಮಾಡಿಕೊಂಡಿದ್ದಾರೆ.
ಆ ಹಾಡನ್ನು ಪದೇ ಪದೆ ಸೌಂದರ್ಯ ಕೇಳುತ್ತಿದ್ದರು. ನಾನು ಚೆನ್ನಾಗಿದೆ ಮೇಡಂ ಎಂದೆ. ಚೆನ್ನಾಗಿದೆ ಅಲ್ಲ ರಘು ಎಷ್ಟು ಅರ್ಥ ಗರ್ಭಿತವಾಗಿದೆ, ಎಷ್ಟು ಸತ್ಯ ಇದೆ ಅಲ್ವಾ?, ನಾಳೆ ಇದ್ಯೋ ಇಲ್ವೋ ಎಂಬುದು ನಮಗೆ ಗೊತ್ತಿಲ್ಲ. "ಪ್ರತಿ ಕ್ಷಣವೂ ಬದುಕು ಬದಲಾಗುತ್ತಿದೆ, ನಾಳೆ ಇರಬಹುದು ಅಥವಾ ಇಲ್ಲದಿರಬಹುದು" ಎಂದರು. ಅದೇ ನಾನು ಕೊನೆಯದಾಗಿ ಸೌಂದರ್ಯ ಅವರನ್ನು ನೋಡಿದ್ದು. ಅವರು ಯಾಕೆ ಆ ಹಾಡು ಕೇಳುತ್ತಿದ್ದರು, ನನಗೆ ಯಾಕೆ ಕೇಳಿಸಿದರು. ನಾಳೆ ಇದ್ಯೋ ಇಲ್ವೋ ಎಂದು ಯಾಕೆ ಅಂದ್ರು ಎನ್ನುವುದು ಉತ್ತರ ಸಿಗದ ಪ್ರಶ್ನೆ ಎಂದು ರಘುರಾಮ್ ವಿವರಿಸಿದ್ದಾರೆ.


Click it and Unblock the Notifications











