ಮೊದಲ ಮದುವೆ, ಗಂಡನ ಕಿರುಕುಳ, ವಿಚ್ಛೇದನದ ಬಗ್ಗೆ ನಟಿ ಸುಧಾರಾಣಿ ಮಾತು
ಖ್ಯಾತ ನಟಿ ಸುಧಾರಾಣಿ ಇದೀಗ ಕಿರುತೆರೆ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನಗೆದ್ದಿದ್ದಾರೆ. ಒಂದ್ಕಾಲದಲ್ಲಿ ಕನ್ನಡದ ಬಹುಬೇಡಿಕೆಯ ನಟಿಯಾಗಿದ್ದ ಸುಧಾರಾಣಿ ದಿಢೀರನೆ ಮದುವೆಯಾಗಿ ಚಿತ್ರರಂಗದಿಂದ ದೂರಾಗಿದ್ದರು.
ಮದುವೆಯಾಗಿ ಪತಿ ಡಾ. ಸಂಜತ್ ಜೊತೆ ಅಮೆರಿಕಾಗೆ ಹೋಗಿ ಸುಧಾರಾಣಿ ಸೆಟ್ಲ್ ಆಗಿದ್ದರು. ಬಳಿಕ ಡಿವೋರ್ಸ್ ಪಡೆದು ಪತಿಯಿಂದ ದೂರಾಗಿದ್ದರು. ಪತಿಯ ಕಿರುಕುಳಕ್ಕೆ ಬೇಸತ್ತು ಅಮೆರಿಕಾದಿಂದ ಜೀವಂತವಾಗಿ ಮರಳಿ ಭಾರತಕ್ಕೆ ಬರುವಂತಾಗಿತ್ತು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಮಾತನಾಡಿದ್ದರು. ಸಹೋದರ ಅರುಣ್ ಆ ವಿಚಾರಗಳನ್ನು ವಿವರಿಸಿದ್ದರು. ಇದೀಗ ಖುದ್ದು ಸುಧಾರಾಣಿ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.

ಮೊದಲ ಪತಿಯಿಂದ ದೂರಾಗಿದ್ದ ಸುಧಾರಾಣಿ ಬಳಿಕ ಕುಟುಂಬಕ್ಕೆ ಆಪ್ತರಾಗಿದ್ದ ಗೋವರ್ಧನ್ ಕೈ ಹಿಡಿದರು. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸುಧಾರಾಣಿ ಅಂತರಾಳ ತೆರೆದಿಟ್ಟಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. "ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದಾಕೆ. ಅಮ್ಮ ಮೊದ್ಲೆ ಹೇಳಿದ್ದರು. 20-22 ವರ್ಷ ಅಷ್ಟೆ ಸಿನಿಮಾ. ಆಮೇಲೆ ಸಿನಿಮಾ ಬೇಡ ಅಂತ. ಲೈಫ್ ಅಲ್ಲಿ ಸೆಟ್ಲ್ ಆಗ್ಬೇಕು ಅಂತ. ಸರಿ ನೋಡಿ ಮದುವೆ ಮಾಡಿದ್ರು"
"ಆರಂಭದಲ್ಲಿ ಅಮೆರಿಕಾಗೆ ಹೋಗಿ ಅಡ್ಜೆಸ್ಟ್ ಆಗುವುದು ಕಷ್ಟ. ಇಲ್ಲಿದ್ದಾಗ ಶೂಟಿಂಗ್, ಮನೆ ಇಷ್ಟೇ ನನ್ನ ಪ್ರಪಂಚ ಆಗಿತ್ತು. ಅಲ್ಲಿ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಆರಂಭದಲ್ಲಿ ಕಷ್ಟ ಆಯ್ತು. ಬೇಗ ಕಲಿತುಕೊಂಡೆ. ಈ ಹಾದಿಯಲ್ಲಿ ನನ್ನೊಳಗೆ ಇಷ್ಟು ಧೈರ್ಯ ಇದ್ಯಾ? ನಾನು ಇದೆಲ್ಲ ಮಾಡಬಹುದಾ? ಎನಿಸಿತ್ತು. ನಾನೊಬ್ಬಳೇ ಎಲ್ಲಾ ಕಡೆ ಓಡಾಡಿ ನನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಅದು ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ" ಎಂದು ಸುಧಾರಾಣಿ ಹೇಳಿದ್ದಾರೆ.
"ನನ್ನ ಕೌಟುಂಬಿಕ ಜೀವನದಲ್ಲಿ ಕಷ್ಟ ಬಂದಾಗ ನನಗೆ ಧೈರ್ಯ ತುಂಬಲು ನಾನು ಮಾಡಿದ ಪಾತ್ರಗಳೇ ಸಹಕಾರಿ ಆಯಿತು ಎನಿಸುತ್ತೆ. ನಾನು ಕೂಡಲೇ ಬಿಡೋಕೆ ಹೋಗಲಿಲ್ಲ. ಸರಿಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆ. ಸಾಧ್ಯವಾಗುವುದೇ ಇಲ್ಲ ಎಂದಾಗ ಸುಮ್ಮನೆ ಅದನ್ನು ಹಿಡಿದು ಜಗ್ಗಾಡುವುದರಲ್ಲಿ ಅರ್ಥ ಇಲ್ಲ ಎಂದಾಗ ಹೊರ ಬರಬೇಕು ಎಂದುಕೊಂಡೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ಎಂದು ನಿರ್ಧರಿಸಿದೆ. ಹಾಲು ಚೆಲ್ಲುವವರೆಗೂ ಸಮಾಧಾನದಿಂದ ಇರಬಹುದು. ಹಾಲು ಚೆಲ್ಲಿದ ಮೇಲೆ ಏನೂ ಮಾಡೋಕೆ ಆಗೊಲ್ಲ"

ನಿಮ್ಮ ಪ್ರಾಣ ತೆಗೆಯೋಕೆ ಮುಂದಾಗಿದ್ದ ವ್ಯಕ್ತಿ ಜೊತೆ ಹೇಗೆ ಜೀವನ ಸಾಗಿಸಿದ್ರಿ ಎನ್ನುವ ಪ್ರಶ್ನೆಗೆ "ಒಂದು ಪೀಕ್ಗೆ ಹೋದಮೇಲೆ ಏನು ಮಾಡೋಕೆ ಆಗೊಲ್ಲ. ಆ ವ್ಯಕ್ತಿಗೆ ದ್ವೇಷ ಏನೋ ಗೊತ್ತಿಲ್ಲ. ಮಾನಸಿಕ ಸಮಸ್ಯೆ ಇತ್ತು. ಆ ವ್ಯಕ್ತಿಗೆ ಕೆಲ ಸಮಸ್ಯೆಗಳಿತ್ತು. ಅದನ್ನು ಒಪ್ಪಲು ಯಾರು ರೆಡಿ ಇರ್ಲಿಲ್ಲ. ಅರ್ಥ ಮಾಡಿಕೊಂಡು ಚಿಕಿತ್ಸೆ ಕೊಡಿಸಬೇಕು ಅಂತ ಆ ಕಡೆಯಿಂದ ಯಾರಿಗೂ ಅನ್ನಿಸಲಿಲ್ಲ. ಆರಂಭದಲ್ಲಿ ನಾನು ಸಾಧ್ಯವಾದಷ್ಟು ಸಹಿಸಿಕೊಂಡೆ. ಇವತ್ತು ಸರಿ ಹೋಗಬಹುದು, ನಾಳೆ ಸರಿಹೋಗಬಹುದು ಎಂದು ಕಾದೆ. ಆಗೋದೇ ಇಲ್ಲ ಎನಿಸಿದ್ದಾಗ ನಾನು ಹೊರಬರಬೇಕು ಎಂದು ತೀರ್ಮಾನಿಸಿದೆ" ಎಂದಿದ್ದಾರೆ.
"ನನಗಿನ್ನು ಆಗ 22 ವರ್ಷ ವಯಸ್ಸು. ಇಷ್ಟು ಬೇಗ ಡಿವೋರ್ಸ್ ಅಂದಾಗ ಭಯ, ಆತಂಕ ಇತ್ತು. ಪೀಕ್ ಅಲ್ಲಿ ಇದ್ದಾಗ ಇಂಡಸ್ಟ್ರಿ ಬಿಟ್ಟೆ, ನನ್ನ ವಿದ್ಯಾಭ್ಯಾಸ ಮುಗಿದಿರಲಿಲ್ಲ ಎನ್ನುವ ಗೊಂದಲ ಇತ್ತು. ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ. ಏನು ಸಾಧ್ಯವಾಗಲ್ಲ ಎಂದಾಗ ಎಲ್ಲವನ್ನು ಎದುರಿಸಬೇಕು ಎಂದುಕೊಂಡೆ. ಸಮಾಜಕ್ಕೆ ಯಾಕೆ ಹೆದರಬೇಕು. ಅವರಿಗೆ ಅನ್ನಿಸಿದ್ದು ಅವ್ರು ಹೇಳ್ತಾರೆ. ಸಿನಿಮಾ ಮಾಡಿದಾಗ ಕೆಲವರಿಗೆ ಇಷ್ಟವಾಗುತ್ತೆ, ಕೆಲವರಿಗೆ ಇಷ್ಟವಾಗಲ್ಲ ಅದನ್ನು ಹೇಗೆ ಸ್ವೀಕರಿಸುತ್ತೀವೋ ಇದನ್ನೂ ಹಾಗೆ ಸ್ವೀಕರಿಸಬೇಕು. ಇದು ನನ್ನ ಜೀವನ. ನಾನೇ ನಿರ್ಧಾರ ತಗೋಬೇಕು ಎಂದುಕೊಂಡೆ" ಎಂದು ಸುಧಾರಾಣಿ ವಿವರಿಸಿದ್ದಾರೆ.
"ಸಂಸಾರ ಶುರುವಾದ ಆರಂಭದಲ್ಲೇ ಸಮಸ್ಯೆ ಗೊತ್ತಾಗಿ ಬಿಟ್ಟುಬರೋಕೆ ಆಗೊಲ್ಲ. ಒಂದಷ್ಟು ದಿನ ಕಾಯಬೇಕು. ಸರಿ ಮಾಡೋಕೆ ಆದ್ರೆ ಪ್ರಯತ್ನಿಸಬೇಕು. ಸುಖಾ ಸುಮ್ಮನೆ ಅಷ್ಟು ಬೇಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಂದಷ್ಟು ದಿನ ಸಹಿಸಿಕೊಳ್ಳುವ ಪ್ರಯತ್ನ ಮಾಡಿದೆ. ಸಾಧ್ಯವಾಗಲಿಲ್ಲ" ಎಂದು ಸುಧಾರಾಣಿ ಹೇಳಿದ್ದಾರೆ.


Click it and Unblock the Notifications











