ಪುಟ್ಟಣ್ಣ ಕಣಗಾಲ್ ಅವರ 'ಮಸಣದ ಹೂವು' ಚಿತ್ರಕ್ಕೆ ಆಯ್ಕೆಯಾಗಿದ್ಹೇಗೆ ಅಪರ್ಣಾ..?
ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ 1973ರ ಜನವರಿ 7ರಂದು ಹುಟ್ಟಿದ ಅಪರ್ಣಾ ಬೆಳೆದಿದ್ದು ಬೆಂಗಳೂರಿನ ಮಲ್ಲೇಶ್ವರದಲ್ಲಿಯೇ. ಮಲ್ಲೇಶ್ವರದಲ್ಲಿ ತಮ್ಮ ಬಾಲ್ಯವನ್ನು ಕಳೆದ ಅಪರ್ಣಾ ಆ ನಂತರ ಕುಮಾರಪಾರ್ಕ್ ಶಾಲೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಪಡೆದರು. ಆ ನಂತರ ಎಂಇಎಸ್ ಕಾಲೇಜ್ನಲ್ಲಿ ಶಿಕ್ಷಣವನ್ನು ಪಡೆದರು.
ಇನ್ನೂ.. ನಿಮಗೆ ಗೊತ್ತಿರಲಿ. ಆ ಕಾಲದಲ್ಲಿ ಅಪರ್ಣಾ ಅವರ ಕೆ.ಎಸ್.ನಾರಾಯಣ ಸ್ವಾಮಿ ಸಿನಿಮಾ ಪತ್ರಕರ್ತರಾಗಿದ್ದರು. ವಿಶೇಷ ಅಂದರೆ.. ಕನ್ನಡ ಚಿತ್ರರಂಗದ ಭಾವ ಶಿಲ್ಪಿ, ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪುಟ್ಟಣ್ಣ ಕಣಗಾಲ್ ಖುದ್ದು ನಾರಾಯಣ ಸ್ವಾಮಿ ಅವರ ಬಳಿ ಬಂದು ಅಪರ್ಣಾಗೆ ನಾಯಕಿಯ ಪಾತ್ರ ನೀಡುವುದಾಗಿ ಹೇಳಿದ್ದರಂತೆ. ಹೀಗೆ ಕಾಲೇಜ್ ಕ್ಯಾಂಪಸ್ನಿಂದ ಸೀದಾ ಚಿತ್ರರಂಗಕ್ಕೆ ಬಂದ ಅಪರ್ಣಾ ಮಸಣದ ಹೂವು ಚಿತ್ರದ ಮೂಲಕ ಎಲ್ಲರ ಮನ ಗೆದ್ದರು.

ಆ ನಂತರ ಸಂಗ್ರಾಮ , ನಮ್ಮೂರ ರಾಜ , ಸಾಹಸ ವೀರ , ಮಾತೃ ವಾತ್ಸಲ್ಯ , ಒಲವಿನ ಆಸರೆ , ಇನ್ಸ್ಪೆಕ್ಟರ್ ವಿಕ್ರಮ್ , ಒಂದಾಗಿ ಬಾಳು , ಡಾಕ್ಟರ್ ಕೃಷ್ಣ , ಒಂಟಿ ಸಲಗ , ಚಕ್ರವರ್ತಿ ಹೀಗೆ ಒಂದು ಹತ್ತು ಸಿನಿಮಾ ಮಾಡಿದರು. ಅಪರ್ಣಾ ಮನಸು ಮಾಡಿದ್ದರೆ, ಚಿತ್ರರಂಗದಲ್ಲಿಯೇ ಮುಂದುವರೆಯಬಹುದಿತ್ತು. ಆ ಅವಕಾಶವೂ ಇತ್ತು.
ಆದರೆ, ಅಪರ್ಣಾ ಅವರಿಗೆ ಮರ ಸುತ್ತುವ ಪಾತ್ರ ಮಾಡಲು ಮನಸಿರಲಿಲ್ಲ. ಹೆಸರಿಗೆ ಮಾತ್ರ ನಾಯಕಿಯಾಗು ಕನಸು ಇರಲಿಲ್ಲ.ಹೀಗಾಗಿ ಚಿತ್ರದಲ್ಲಿ ಅದೆಲ್ಲೋ ದೂರ ನಿಂತು ಕಾಲಹರಣ ಮಾಡುವುದಕ್ಕಿಂತ ಬೇರೆ ಕೆಲಸ ಮಾಡುವುದು ಉತ್ತಮ ಎಂಬ ತೀರ್ಮಾನ ಮಾಡಿದ ಅಪರ್ಣಾ ಆ ನಂತರ ಯಾರ ಬಳಿಯೂ ಅವಕಾಶ ಕೇಳಿಕೊಂಡು ಹೋಗಲಿಲ್ಲ. ಬದಲಿಗೆ ಕಿರುತೆರೆಯತ್ತ ಮುಖ ಮಾಡಿದರು.

ಈ ವಿಚಾರಗಳನ್ನು ಖುದ್ದು ಅಪರ್ಣಾ ಸಂದರ್ಶನವೊಂದರಲ್ಲಿ ಈ ಹಿಂದೆ ಹೇಳಿದ್ದರು.ನಾನು ನನ್ನ ಕೆಲಸ ಮಾಡಿದೆ, ಯಾವ ವಿಷಯಕ್ಕೂ ನಾನು ಯಾರಿಗೂ ಏನೂ ಕೇಳಲಿಲ್ಲ. ನಾನು ಎಲ್ಲಿಯೂ ಅವಕಾಶ ಕೇಳಲಿಲ್ಲ. ಒಂದು ವೇಳೆ ಅವಕಾಶ ಕೊಟ್ಟಾಗ ನನಗೆ ಏನು ಕೆಲಸ ಕೊಟ್ಟಿದ್ದಾರೋ ಅದನ್ನು ನಾನು ಮಾಡಬೇಕು. ನನಗೆ ಡ್ಯಾನ್ಸ್ ಕೂಡ ಬರಲಿಲ್ಲ. ಅದೃಷ್ಟವಶಾತ್ ನನಗೆ ನಿರೂಪಣೆಯ ಅವಕಾಶ ಸಿಕ್ಕಿತು ಎಂದು ಅಪರ್ಣಾ ತಮ್ಮ ಬದುಕಿನ ಪುಟಗಳನ್ನು ತಿರುವಿ ಹಾಕಿದ್ದರು.
ಹೀಗೆ ಕನ್ನಡ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡ ಅಪರ್ಣಾ, ಆ ನಂತರ ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಅಪರ್ಣಾ ಅವರ ಖ್ಯಾತಿ ಎಷ್ಟಿತ್ತು ಅಂದರೆ ರಾಜಕೀಯ, ಧಾರ್ಮಿಕ, ಸಾಹಿತ್ಯಿಕ, ಪುಸ್ತಕ ಬಿಡುಗಡೆ, ಭಾವಗೀತೆಗಳ ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಅಪರ್ಣಾ ಇರಲೇ ಬೇಕು ಎನ್ನುವ ಮಾತು ಜನಜನಿತ ಆಗಿತ್ತು. ಇನ್ನೂ.. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆಯನ್ನೂ ಬರೆದಿದ್ದರು ಅಪರ್ಣಾ. ಇಂಥಾ ಅಪರ್ಣಾ ಈಗ ಬಾಳ ನಿರೂಪಣೆಯನ್ನು ಮುಗಿಸಿದ್ದಾರೆ. ನಮ್ಮನ್ನೆಲ್ಲ ದುಃಖದ ಕಡಲಲ್ಲಿ ಮುಳುಗಿಸಿ ನಿರ್ಗಮಿಸಿದ್ದಾರೆ.


Click it and Unblock the Notifications











