ಅಣ್ಣಾವ್ರ ಚಿತ್ರ ರೀಮೆಕ್ ಮಾಡಿ ಗೆದ್ದ ಬಳಿಕ ಚಿರು ಸಂಭಾವನೆ ₹1.25 ಕೋಟಿಗೇರಿತ್ತು!
ನಟಸಾರ್ವಭೌಮ ರಾಜ್ಕುಮಾರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಬೇರೆ ಭಾಷೆಯ ಸಿನಿಮಾಗಳನ್ನು ಅಣ್ಣಾವ್ರು ರೀಮೆಕ್ ಮಾಡಿದ್ದು ಇದೆ. ಅದೇ ರೀತಿ ರಾಜ್ಕುಮಾರ್ ನಟನೆಯ ಸಿನಿಮಾಗಳು ಬೇರೆ ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿರುವುದು ಇದೆ.
ಶಿವಾಜಿ ಗಣೇಶನ್ ತಿರಸ್ಕರಿಸಿದ್ದ 'ಕಸ್ತೂರಿ ನಿವಾಸ' ಕಥೆಯನ್ನು ಸಿನಿಮಾ ಮಾಡಿ ರಾಜ್ಕುಮಾರ್ ಗೆಲುವಿನ ನಗೆ ಬೀರಿದ್ದರು. ಬಳಿಕ ಶಿವಾಜಿ ಇಷ್ಟಪಟ್ಟು ರೀಮೆಕ್ ಮಾಡುವಂತಾಯಿತು. ಇನ್ನು ಅಣ್ಣಾವ್ರ ಸಿನಿಮಾಗಳನ್ನು ರೀಮೆಕ್ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಒಂದು ವೇಳೆ ರೀಮೆಕ್ ಮಾಡಿದರೂ ಗೆಲ್ಲುತ್ತಿರಲಿಲ್ಲ. ನಟನೆ ವಿಚಾರದಲ್ಲಿ ಅಣ್ಣಾವ್ರನ್ನು ಮೀರಿಸಲು ಸಾಧ್ಯವಾಗತ್ತಿರಲಿಲ್ಲ.

ಅಣ್ಣಾವ್ರ ಸಾಕಷ್ಟು ಸಿನಿಮಾಗಳು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ರೀಮೆಕ್ ಆಗಿದೆ. ಆದರೆ 'ಅನುರಾಗ ಅರಳಿತು' ಸಿನಿಮಾ 7 ಭಾಷೆಗಳಿಗೆ ರೀಮೆಕ್ ಆಗಿ ದಾಖಲರ ಬರೆದಿತ್ತು. ಕನ್ನಡ ಲೇಖಕಿ ಎಚ್.ಜಿ. ರಾಧಾದೇವಿ ಬರೆದ 'ಅನುರಾಗದ ಅಂತಃಪುರ' ಕಾದಂಬರಿ ಆಧರಿಸಿ ಎಂ. ಎಸ್ ರಾಜಶೇಖರ್ ಚಿತ್ರ ನಿರ್ದೇಶನ ಮಾಡಿದ್ದರು.
34 ವರ್ಷಗಳ ಹಿಂದೆ 'ಅನುರಾಗ ಅರಳಿತು' ಸಿನಿಮಾ ತೆರೆಗೆ ಬಂದಿತ್ತು. ಕನ್ನಡದಲ್ಲಿ ಗೆದ್ದ ಚಿತ್ರವನ್ನು ತಮಿಳಿನಲ್ಲಿ 'ಮನ್ನನ್' ಹೆಸರಿನಲ್ಲಿ ರಜನಿಕಾಂತ್ ರೀಮೆಕ್ ಮಾಡಿ ಸಕ್ಸಸ್ ಕಂಡಿದ್ದರು. ಅದೇ ರೀತಿ 'ಘರಾನಾ ಮೊಗುಡು' ಟೈಟಲ್ನಲ್ಲಿ ತೆಲುಗಿಗೆ ಚಿರಂಜೀವಿ ರೀಮೆಕ್ ಮಾಡಿದ್ದರು. 'ಲಾಡ್ಲಾ' ಆಗಿ ಹಿಂದಿಗೆ ರೀಮೆಕ್ ಆದಾಗ ಅನಿಲ್ ಕಪೂರ್, ಶ್ರೀದೇವಿ ನಟಿಸಿದ್ದರು.
ಒಬ್ಬ ಸಾಮಾನ್ಯ ಕಾರ್ಮಿಕ ಅದೇ ಕಾರ್ಖಾನೆಯ ಮಾಲೀಕನ ಮಗಳ ಸೊಕ್ಕನ್ನು ಮುರಿದು ಬುದ್ಧಿ ಕಲಿಸುವ ಕಥೆ 'ಅನುರಾಗ ಅರಳಿತು' ಚಿತ್ರದಲ್ಲಿದೆ. ಮೇಲ್ನೋಟಕ್ಕೆ ಕಥೆ ಸಿಂಪಲ್ ಅನಿಸಿದರೂ ಅದನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು. ಬರೋಬ್ಬರಿ 50 ವಾರಗಳ ಕಾಲ ಸಿನಿಮಾ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಒಡಿಯಾ, ಬೆಂಗಾಲಿ, ಬಾಂಗ್ಲಾದೇಶಿ ಬೆಂಗಾಲಿ ಮತ್ತು ಸಿಂಹಳ ಭಾಷೆಗಳಿಗೆ ರೀಮೆಕ್ ಆಗಿದ್ದ ಚೊಚ್ಚಲ ಕನ್ನಡ ಸಿನಿಮಾ ಇದಾಗಿತ್ತು.
ಚಿತ್ರದಲ್ಲಿ ಕಾರ್ಮಿಕ ಶಂಕರ್ ಆಗಿ ಅಣ್ಣಾವ್ರು ನಟಿಸಿದ್ದರೆ ಕಾರ್ಖಾನೆ ಮಾಲೀಕರ ಮಗಳು ಆಶಾದೇವಿಯಾಗಿ ಮಾಧವಿ ಮಿಂಚಿದ್ದರು. ಗೀತಾ, ಪಂಡರಿ ಬಾಯಿ, ಕೆ. ಎಸ್ ಅಶ್ವಥ್, ತೂಗುದೀಪ ಶ್ರೀನಿವಾಸ್, ಸದಾಶಿವ ಬ್ರಹ್ಮಾವರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಉಪೇಂದ್ರ ಕುಮಾರ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಭಾರ್ಗವಿ ಆರ್ಟ್ಸ್ ಮೂವಿಸ್ ಬ್ಯಾನರ್ ಅಡಿಯಲ್ಲಿ ಎಂ. ಎಸ್ ಪುಟ್ಟಸ್ವಾಮಿ ಚಿತ್ರಕ್ಕೆ ಹಣ ಹೂಡಿದ್ದರು. ಚಿ. ಉದಯ್ಶಂಕರ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದರು.
'ಅನುರಾಗ ಅರಳಿತು' ಸಿನಿಮಾ ಕನ್ನಡಕ್ಕಿಂತ ತೆಲುಗಿಗೆ ರೀಮೆಕ್ ಆಗಿ ಹೆಚ್ಚು ಸದ್ದು ಮಾಡಿತ್ತು. 'ಘರಾನಾ ಮೊಗುಡು' ಸಿನಿಮಾ 39 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿತ್ತು. ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಕರ್ನಾಟಕದಲ್ಲಿ ಕೂಡ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಅವತ್ತಿ ಕಾಲಕ್ಕೆ ವಿತರಕರಿಗೆ 10 ಕೋಟಿ ರೂ. ಶೇರ್ ತಂದುಕೊಟ್ಟಿತ್ತು.

ಕರ್ನಾಟಕದಲ್ಲಿ 'ಘರಾನಾ ಮೊಗುಡು' ಚಿತ್ರದ ಆರ್ಭಟ ನೋಡಿ ರಾಜ್ಕುಮಾರ್ ಹುಬ್ಬೇರಿಸಿದ್ದರಂತೆ. ಚಿರಂಜೀವಿ ಅವರಿಗೆ ಖುದ್ದು ಅಣ್ಣಾವ್ರು ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದರಂತೆ. ಏನಪ್ಪಾ ನಮ್ಮ ರಾಜ್ಯದಲ್ಲಿ ನಮ್ಮ ಸಿನಿಮಾ ಮೀರಿಸುವಂತೆ ನಿಮ್ಮ ಸಿನಿಮಾ ಸದ್ದು ಮಾಡ್ತಿದೆ ಎಂದು ಮಾತನಾಡಿದ್ದರಂತೆ. ಖುಷಿ ವ್ಯಕ್ತಪಡಿಸಿದ್ದರಂತೆ. ಈ ವಿಚಾರವನ್ನ ರಾಜ್ಕುಮಾರ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಹಾಲು ಜೇನು ರಾಮ್ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದರು.
ನಿಮಗೆ ಗೊತ್ತಾ 'ಘರಾನಾ ಮೊಗುಡು' ಸಿನಿಮಾ ಸಕ್ಸಸ್ ಬೆನ್ನಲ್ಲೇ ಚಿರಂಜೀವಿ ಸಂಭಾವನೆ 1 ಕೋಟಿ ರೂ. ಮೀರಿತ್ತು. 90ರ ದಶಕದ ಆರಂಭದಲ್ಲಿ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ನಟ ಎನಿಸಿಕೊಂಡಿದ್ದರು. 'ದಿ ವೀಕ್' ಮ್ಯಾಗಜೀನ್ನಲ್ಲಿ ಅಮಿತಾಬ್ ಬಚ್ಚನ್ ಮೀರಿಸಿದ ಚಿರಂಜೀವಿ ಎಂಬ ಹೆಡ್ಲೈನ್ನಲ್ಲಿ ಸುದ್ದಿ ಪ್ರಕರಣವಾಗಿತ್ತು.
'ಜಗದೇಕ ವೀರುಡು ಅತಿಲೋಕ ಸುಂದರಿ', 'ರೌಡಿ ಅಲ್ಲುಡು' ಹಾಗೂ 'ಘರಾನಾ ಮೊಗುಡು' ಹೀಗೆ ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿ ಗೆದ್ದಿದ್ದರು. 'ಘರಾನಾ ಮೊಗುಡು' ನಂತರ ಬಂದ 'ಆಪತ್ಭಾಂದವುಡು' ಚಿತ್ರಕ್ಕಾಗಿ ಚಿರಂಜೀವಿ 1.25 ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಕನ್ನಡದ 'ಅನುರಾಗ ಅರಳಿತು' ಚಿತ್ರಕ್ಕೆ ತೆಲುಗು ಪ್ರೇಕ್ಷಕರು ಬಯಸುವ ಮಸಾಲೆ ಅಂಶಗಳನ್ನು ಬೆರೆಸಿ ಸಿನಿಮಾ ಕಟ್ಟಿಕೊಡಲಾಗಿತ್ತು.
ಚಿರಂಜೀವಿ ತಮ್ಮ ಸ್ಟೈಲ್ ಹಾಗೂ ಮ್ಯಾನರಿಸಂ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ನಾಯಕಿಯಾಗಿ ನಗ್ಮಾ ಸಾಥ್ ಕೊಟ್ಟಿದ್ದರು. ಎಂ. ಎಂ ಕೀರವಾಣಿ ಸಂಗೀತದಲ್ಲಿ ಆಲ್ಬಮ್ ಸೂಪರ್ ಹಿಟ್ ಆಗಿತ್ತು. 'ಬಂಗಾರು ಕೋಡಿ ಪೆಟ್ಟ', 'ಪಂಡು ಪಂಡು ಪಂಡು' ರೀತಿಯ ಹಾಡುಗಳು ಪಡ್ಡೆ ಹುಡುಗನ ಮನಗೆದ್ದಿತ್ತು. ಇನ್ನು 'ಕಿಟುಕುಲು ತೆಲಿಸಿನ' ಎಂದು ಶುರುವಾಗುವ ಒಂದು ಐಟಂ ಸಾಂಗ್ ರೀತಿಯ ಬಿಂದಾಸ್ ಸಾಂಗ್ ಕೂಡ ಚಿತ್ರದಲ್ಲಿ ಸದ್ದು ಮಾಡಿತ್ತು.
ಎಂ. ಎಂ ಕೀರವಾಣಿ ಸಂಗೀತದಲ್ಲೇ 'ಬಂಗಾರು ಕೋಡಿ ಪೆಟ್ಟ' ಹಾಡನ್ನು 'ಮಗಧೀರ' ಚಿತ್ರಕ್ಕಾಗಿ ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿತ್ತು. ಅಷ್ಟರಮಟ್ಟಿಗೆ ಆ ಹಾಡು ಚಿರಂಜೀವಿ ಡ್ಯಾನ್ಸ್ ಮೋಡಿ ಮಾಡಿತ್ತು. 'ಘರಾನಾ ಮೊಗುಡು' ಬ್ಲಾಕ್ಬಸ್ಟರ್ ಹಿಟ್ ಆಗಿ ಕ್ರೇಜ್ ಹೆಚ್ಚಾಗಿತ್ತು. ಮುಂದೆ ದೇಶ ವಿದೇಶಗಳಲ್ಲಿ ಸಿನಿಮಾ ರೀಮೆಕ್ ಆಗುವಂತಾಯಿತು.
ಕೆ. ವಿಶ್ವನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಆಪತ್ಭಾಂದವುಡು' ಸಿನಿಮಾ ಬಾಕ್ಸಾಫೀಸ್ನಲ್ಲಿ ಅಷ್ಟಾಗಿ ಗೆಲ್ಲಲಿಲ್ಲ. ಆದರೆ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದ ನಟನೆಗಾಗಿ ಚಿರಂಜೀವಿಗೆ ಅತ್ಯುತ್ತಮ ನಟ ಆಂಧ್ರ ಪ್ರದೇಶನ ರಾಜ್ಯ ಪ್ರಶಸ್ತಿ(ನಂದಿ ಪ್ರಶಸ್ತಿ) ಹಾಗೂ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು.
'ಅನುರಾಗ ಅರಳಿತು' ಸಿನಿಮಾ 7 ಭಾಷೆಗೆ ರೀಮೆಕ್ ಆಗಿದ್ದು ಸೇರಿ 50ಕ್ಕೂ ಹೆಚ್ಚು ಬಾರಿ ಅಣ್ಣಾವ್ರ ಸಿನಿಮಾ ರೀಮೆಕ್ ಆದಂತಾಗಿತ್ತು. ಈ ದಾಖಲೆ ಬರೆದ ಮೊದಲ ನಟ ರಾಜ್ಕುಮಾರ್ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ ತಮ್ಮ ಸಿನಿಮಾಗಳು 9 ಭಾಷೆಗೆ ರೀಮೆಕ್ ಆಗಿ ಅಣ್ಣಾವ್ರು ಅಪರೂಪದ ದಾಖಲೆ ಬರೆದಿದ್ದರು.
ರಾಜ್ಕುಮಾರ್ ಹೀರೊ ಆಗಿ ನಟಿಸಿದ 'ಬೇಡರ ಕಣ್ಣಪ್ಪ' ಚಿತ್ರ ತೆಲುಗಿಗೆ ರೀಮೆಕ್ ಆಗಿತ್ತು. 'ಕಾಳಹಸ್ತಿ ಮಹಾತ್ಮೆ' ಹೆಸರಿನಲ್ಲಿ ನಿರ್ಮಾಣವಾಗಿದ್ದ ಚಿತ್ರದಲ್ಲಿ ಸ್ವತಃ ರಾಜ್ಕುಮಾರ್ ನಟಿಸಿದ್ದರು. 'ಎರಡು ಕನಸು' ಚಿತ್ರ ತೆಲುಗಿಗೆ 'ಪೂಜ' ಹೆಸರಿನಲ್ಲಿ ರೀಮೆಕ್ ಆಗಿತ್ತು.
'ಸಂಪತ್ತಿಗೆ ಸವಾಲ್' ಸಿನಿಮಾ ತೆಲುಗಿನಲ್ಲಿ 'ತೋಟ ರಾಮುಡು', ತಮಿಳಿನಲ್ಲಿ 'ಪುದು ವೆಳ್ಳಂ' ಹಾಗೂ ಮಲಯಾಳಂ ಭಾಷೆಯಲ್ಲಿ 'ಥೆಮ್ಮಡಿ ವೇಲಪ್ಪನ್' ಹೆಸರಿನಲ್ಲಿ ರೀಮೆಕ್ ಆಗಿತ್ತು. ಅಣ್ಣಾವ್ರ 'ದಾರಿ ತಪ್ಪಿದ ಮಗ' ಸಿನಿಮಾ 'ಕೊಲ್ಲಕಾರನ್' ಹೆಸರಿನಲ್ಲಿ ಮಲಯಾಳಂ ಭಾಷೆಗೆ ಡಬ್ ಆಗಿತ್ತು. ಅಷ್ಟೇ ಅಲ್ಲ 'ಮನುಷ್ಯ ಮೃಗಂ' ಹೆಸರಿನಲ್ಲಿ ರೀಮೆಕ್ ಸಹ ಆಗಿ ಸದ್ದು ಮಾಡಿತ್ತು.
'ಶಂಕರ್ ಗುರು' ಸಿನಿಮಾ ತಮಿಳಿನಲ್ಲಿ 'ತ್ರಿಶೂಲಂ', ತೆಲುಗಿನಲ್ಲಿ 'ಕುಮಾರ ರಾಜ' ಹಾಗೂ ಹಿಂದಿಯಲ್ಲಿ 'ಮಹಾನ್' ರೀಮೆಕ್ ಆಗಿತ್ತು. 'ಭಾಗ್ಯದ ಲಕ್ಷ್ಮಿಬಾರಮ್ಮ' ಸಿನಿಮಾ ಚಿತ್ರ ತೆಲುಗಿನಲ್ಲಿ 'ಮಹಾರಾಜಶ್ರೀ ಮಾಯಗಾಡು' ಹೆಸರಿನಲ್ಲಿ ರೀಮೆಕ್ ಆಗಿ ರಿಲೀಸ್ ಆಗಿತ್ತು. ಘಟ್ಟಮನೇನಿ ಕೃಷ್ಣ ಹಾಗೂ ಶ್ರೀದೇವಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ. ಹೀಗೆ ಅಣ್ಣಾವ್ರ ಸಾಕಷ್ಟು ಚಿತ್ರಗಳು ಬೇರೆ ಭಾಷೆಗಳಿಗೆ ರೀಮೆಕ್ ಆಗಿ ಸದ್ದು ಮಾಡಿವೆ.


Click it and Unblock the Notifications











