Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಕರ್ ನಾಗ್ ಆಕ್ಸಿಡೆಂಟ್ ಗೂ ಸುನೀಲ್ ದುರಂತ ಸಾವಿಗೂ ಇದೆ ಘೋರ ಸಂಬಂಧ.! ಏನ್ಗೊತ್ತಾ.?
ಇದಕ್ಕೆ ಆಕಸ್ಮಿಕ ಅಂತೀರೋ..? ಅಥವಾ ಕಾಕತಾಳೀಯ ಎನ್ನಬೇಕೋ..? ಮೂಢನಂಬಿಕೆ ಬಿಡಿ ಅಂತ ಮೂಗು ಮುರಿದರೂ, ಕನ್ನಡದ ಇಬ್ಬರು ತಾರೆಯರು ಒಂದೇ ರೀತಿ ಸಾವನ್ನಪ್ಪಿರೋದು ಸುಳ್ಳಲ್ಲ.!
ಕನ್ನಡ ಚಿತ್ರರಂಗದಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಅಪಘಾತಕ್ಕೀಡಾಗಿ ಘೋರ ಸಾವನ್ನಪ್ಪಿದರು. ಅದೇ ರೀತಿ ಮೂರು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದ ಉದಯೋನ್ಮುಖ ನಟ ಸುನೀಲ್ ಕೂಡ ಯಶಸ್ಸಿನ ಏಣಿ ಏರುತ್ತಿರುವಾಗಲೇ ದುರಂತ ಅಂತ್ಯ ಕಂಡರು.
ಶಂಕರ್ ನಾಗ್ ಮತ್ತು ಸುನೀಲ್ ಆಕ್ಸಿಡೆಂಟ್ ಸುತ್ತ ಹಲವು ಅಂತೆ-ಕಂತೆಗಳಿವೆ. ಅದೆಲ್ಲ ಪಕ್ಕಕ್ಕೆ ಇಟ್ಟರೂ, ಇಬ್ಬರ ಅಪಘಾತದಲ್ಲಿ ಹಲವು ಸಾಮ್ಯತೆಗಳಿವೆ ಅನ್ನೋದು ನಿಮಗೆ ಗೊತ್ತಾ.?
ಸೆಪ್ಟೆಂಬರ್ 30, 1990
ಜೋಕುಮಾರ ಸ್ವಾಮಿ ನಾಟಕವನ್ನು ಸಿನಿಮಾ ಮಾಡಬೇಕೆಂಬ ಆಸೆ ಶಂಕರ್ ನಾಗ್ ರವರಿಗೆ ಇತ್ತು. ಅಕ್ಟೋಬರ್ 1 ರಂದು 'ಜೋಕುಮಾರ ಸ್ವಾಮಿ' ಚಿತ್ರದ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಇದರ ಪ್ರಯುಕ್ತ ಸೆಪ್ಟೆಂಬರ್ 30, 1990 ರಂದು ದಾವಣಗೆರೆಗೆ ಹೊರಟಿದ್ದ ಶಂಕರ್ ನಾಗ್ ವಾಪಸ್ ಬರಲೇ ಇಲ್ಲ.!
ಜುಲೈ 24, 1994
ಚಿಕ್ಕೋಡಿಯಲ್ಲಿ ರಸಮಂಜರಿ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಿದ್ದ ನಟ ಸುನೀಲ್ ಜೋಪಾನವಾಗಿ ಮನೆ ತಲುಪಲಿಲ್ಲ. ಚಿತ್ರದುರ್ಗದ ಬಳಿ ಮಾದನಾಯಕನಹಳ್ಳಿ ಸಮೀಪದ ರಸ್ತೆಯಲ್ಲಿ ಸುನೀಲ್ ಪಯಣ ಬೆಳೆಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆಯಿತು. ಪರಿಣಾಮ, ಸುನೀಲ್ ಇಹಲೋಕ ತ್ಯಜಿಸಿದರು.
ಕರಾಳ ನೆನಪು : ಆ ಭೀಕರ ಘಟನೆ ನಡೆದು ಇಂದಿಗೆ 25 ವರ್ಷಗಳು
ಭಾನುವಾರದ ಭೂತ.!
ಇಲ್ಲಿ ಎಲ್ಲರೂ ಗಮನಿಸಬೇಕಾಗಿರುವ ಅಂಶ ಏನಪ್ಪಾ ಅಂದ್ರೆ, ಶಂಕರ್ ನಾಗ್ ಸಾವನ್ನಪ್ಪಿದ ಹೈವೇ (ದಾವಣಗೆರೆ-ಚಿತ್ರದುರ್ಗ) ಯಲ್ಲೇ ಸುನೀಲ್ ಕೂಡ ಪ್ರಾಣ ಬಿಟ್ಟಿದ್ದು.! ಎರಡೂ ಅಪಘಾತ ನಡೆದಿದ್ದು ಭಾನುವಾರದಂದೇ.! ನಾಲ್ಕು ವರ್ಷಗಳ ಅಂತರದಲ್ಲಿ ಕನ್ನಡ ಚಿತ್ರರಂಗದ ಎರಡು ಧ್ರುವತಾರೆಗಳು ಮಾಯವಾದರು.
ವಿಚಿತ್ರ ಸಂಗತಿ
ಇದಲ್ಲದೇ, ಇನ್ನೊಂದು ವಿಚಿತ್ರ ಸಂಗತಿ ಇದೆ. ಅದೇನು ಅಂದ್ರೆ, ಖ್ಯಾತ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪ್ರತಿಭಾವಂತ ಸುಧೀಂದ್ರ ಕಳ್ಳೋಳ್ ಸ್ವತಂತ್ರ ನಿರ್ದೇಶಕನಾಗಲು ಸಕಲ ತಯಾರಿ ಮಾಡಿಕೊಂಡಿದ್ದರು. ಸುಧೀಂದ್ರ ಕಳ್ಳೋಳ್ ಅವರ ಆಸೆಗೆ ಜೊತೆಯಾಗಿದ್ದು ಶಂಕರ್ ನಾಗ್. ಸುಧೀಂದ್ರ ಕಳ್ಳೋಳ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಾಯಕನಾಗಿ ಶಂಕರ್ ನಾಗ್ ನಟಿಸುತ್ತಿದ್ದರು. ಆ ಚಿತ್ರ ಮುಗಿಯುವ ಮುನ್ನವೇ ಶಂಕರ್ ನಾಗ್ ಅಪಘಾತಕ್ಕೀಡಾದರು. ದುರಂತ ಅಂದ್ರೆ, ಸುನೀಲ್ ಗೆ ಆಕ್ಸಿಡೆಂಟ್ ಆಗುವ ಮುನ್ನ ಅದೇ ಸುಧೀಂದ್ರ ಕಳ್ಳೋಳ್ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರು. ವಿಚಿತ್ರ ನೋಡಿ.. ಆ ಎರಡೂ ಚಿತ್ರಗಳೂ ಕಂಪ್ಲೀಟ್ ಆಗಲಿಲ್ಲ. ಇಬ್ಬರು ನಟರನ್ನು ಕಳೆದುಕೊಂಡ ಮೇಲೆ ನಿರ್ದೇಶನ ಮಾಡುವ ಸಾಹಸಕ್ಕೆ ಸುಧೀಂದ್ರ ಕಳ್ಳೋಳ್ ಕೈಹಾಕಲಿಲ್ಲ.!
ಹುಡುಗಿಯರ ಪಾಲಿಗೆ ಡ್ರೀಮ್ ಬಾಯ್ ಆಗಿದ್ದ ಸುನೀಲ್
ಅದು ಎಂಬತ್ತರ ದಶಕ... ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದ ಸಮಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ 'ರಾಮಕೃಷ್ಣ', ವಿದ್ಯಾಭ್ಯಾಸವನ್ನು ಬಿಟ್ಟು ನಟ 'ಸುನೀಲ್' ಆಗಿ ಬೆಳ್ಳಿತೆರೆ ಮೇಲೆ ಮಿನುಗಲು ಆರಂಭಿಸಿದರು. 'ಶ್ರುತಿ', 'ಬೆಳ್ಳಿ ಕಾಲುಂಗರ', 'ಮಾಲಾಶ್ರೀ ಮಾಮಾಶ್ರೀ' ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಸುನೀಲ್ ನೀಡಿದರು. ಹುಡುಗಿಯರ ಪಾಲಿಗೆ ಡ್ರೀಮ್ ಬಾಯ್, ನಿರ್ಮಾಪಕರ ಪಾಲಿಗೆ ಲಕ್ಕಿ ಬಾಯ್ ಆಗಿದ್ದ ಸುನೀಲ್ ಯಶೋಗಾಥೆ ಆಗಷ್ಟೇ ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿತ್ತು. ಅಷ್ಟರಲ್ಲಿ ನಡೆಯಬಾರದ ಘಟನೆ ನಡೆದೇ ಹೋಯಿತು.
ಆಕ್ಸಿಡೆಂಟ್ ಆಗುವ ಮುನ್ನ ಏನಾಯ್ತು.?
ಜುಲೈ 23, 1994.. ಅಂದು ಶನಿವಾರ, ಹೊಸ ಚಿತ್ರವೊಂದರ ಶೂಟಿಂಗ್ ನಿಮಿತ್ತ ನಟ ಸುನೀಲ್ ಹೈದರಾಬಾದ್ ನಲ್ಲಿದ್ದರು. ಸಂಜೆವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕತ್ತಲು ಕವಿಯುತ್ತಿದ್ದ ಹಾಗೇ ನಟ ಸುನೀಲ್ ಪಯಣ ಚಿಕ್ಕೋಡಿ ಕಡೆಗೆ ಶುರುವಾಯ್ತು. ಚಿಕ್ಕೋಡಿ ಕಡೆಗೆ ಸುನೀಲ್ ಹೊರಟಿದ್ದು ಯಾಕೆ ಅಂದ್ರೆ, ಅಲ್ಲಿ ನಡೆಯಬೇಕಿದ್ದ ರಸಮಂಜರಿ ಕಾರ್ಯಕ್ರಮಕ್ಕೆ 'ಸೂಪರ್ ಹಿಟ್ ಜೋಡಿ' ಸುನೀಲ್-ಮಾಲಾಶ್ರೀ ಮುಖ್ಯ ಅತಿಥಿಯಾಗಿದ್ದರು.
ಅವತ್ತು ಅಲ್ಲೇ ಇದ್ದಿದ್ದರೆ, ಇಂದು ಸುನೀಲ್ ಬದುಕಿರುತ್ತಿದ್ದರೇನೋ.!
ಹೈದರಾಬಾದ್ ನಿಂದ ಸಂಬಂಧಿ ಸಚಿನ್ ಮತ್ತು ಡ್ರೈವರ್ ಜೊತೆಗೆ ಕಾಂಟೆಸ್ಸಾ ಕಾರ್ ನಲ್ಲಿ ಚಿಕ್ಕೋಡಿ ಕಡೆಗೆ ಸುನೀಲ್ ಪ್ರಯಾಣ ಆರಂಭಿಸಿದರು. ಚಿಕ್ಕೋಡಿ ತಲುಪುವುದಕ್ಕೆ ಸ್ವಲ್ಪ ಲೇಟ್ ಆಗಿತ್ತು. ಆದರೂ, ರಸಮಂಜರಿ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಸುನೀಲ್ ಪಾಲ್ಗೊಂಡರು. ಜೊತೆಯಲ್ಲಿ ಮಾಲಾಶ್ರೀ ಕೂಡ ಇದ್ದರು. ರಸಮಂಜರಿ ಕಾರ್ಯಕ್ರಮ ಮುಗಿದಿದ್ದು ಮಧ್ಯರಾತ್ರಿ ಸುಮಾರು 3 ಗಂಟೆಗೆ. ಹೀಗಾಗಿ ಅಲ್ಲೇ ತಂಗಿ ಬೆಳಗ್ಗೆ ಎದ್ದು ಹೊರಡುವುದು ಸುನೀಲ್ ಪ್ಲಾನ್ ಆಗಿತ್ತು. ಆದ್ರೆ, ಅದಕ್ಕೆ ಸುನೀಲ್ ಡ್ರೈವರ್ ಸಹಕರಿಸಲಿಲ್ಲ. ಯಾಕಂದ್ರೆ, ಮಾರನೇ ದಿನ ಸುನೀಲ್ ಡ್ರೈವರ್ ಮಗನ ಬರ್ತಡೇ ಇತ್ತು. ಹೀಗಾಗಿ, ಮುಂಜಾನೆ ಹೊತ್ತಿಗೆ ಮನೆ ಸೇರಬೇಕು ಅಂತ ಡ್ರೈವರ್ ಒತ್ತಾಯಿಸಿದರು. ಡ್ರೈವರ್ ಮನಸ್ಸಿಗೆ ಘಾಸಿಯಾಗಬಾರದು ಅಂತ ಸುನೀಲ್ ಕೂಡ ಹೊರಟು ನಿಂತರು.
ಬೆಳ್ಳಂಬೆಳಗ್ಗೆ ಬಂದ ಯಮ.!
ಜುಲೈ 24, 1994... ಮುಂಜಾನೆ 4 ರ ಸಮಯ. ಚಿತ್ರದುರ್ಗ ಸಮೀಪದ ಮಾದನಾಯಕನಹಳ್ಳಿಯ ರಸ್ತೆಯಲ್ಲಿ ಸುನೀಲ್ ಕಾರು ವೇಗವಾಗಿ ಹೋಗುತ್ತಿತ್ತು. ಆಗ ಯಮಸ್ವರೂಪಿಯಾಗಿ ಬಂದಿದ್ದು ಒಂದು ಲಾರಿ. ವೇಗವಾಗಿ ಬಂದ ಲಾರಿ ಒಂದೇ ಕ್ಷಣದಲ್ಲಿ ಸುನೀಲ್ ಪ್ರಾಣವನ್ನು ನುಂಗಿತು. ಲಾರಿ ಹೊಡೆದ ರಭಸಕ್ಕೆ ಕಾಂಟೆಸ್ಸಾ ನುಜ್ಜುಗುಜ್ಜಾಯಿತು. ಅಪಘಾತದ ಭೀಕರತೆಗೆ ಮಗನ ಹುಟ್ಟುಹಬ್ಬ ಮಾಡಲು ಹೊರಟ್ಟಿದ್ದ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದರು. ಲಾರಿ ಡಿಕ್ಕಿ ಹೊಡೆದ ಮೇಲೆ, ಕಾರಿನಿಂದ ಹೊರ ಬಿದ್ದಿದ್ದ ನಟಿ ಮಾಲಾಶ್ರೀ ಮತ್ತು ಸಚಿನ್ ಗೆ ಪ್ರಜ್ಞೆ ಇರಲಿಲ್ಲ. ಇಬ್ಬರಿಗೂ ಮಲ್ಟಿಪಲ್ ಫ್ರ್ಯಾಕ್ಟರ್ ಆಗಿತ್ತು.
ಹಾರಿ ಹೋದ ಸುನೀಲ್ ಪ್ರಾಣ ಪಕ್ಷಿ
ಡ್ರೈವರ್ ಹಿಂದೆ ಕೂತಿದ್ದ ಸುನೀಲ್ ಕಾಲು ಕಟ್ ಆಗಿತ್ತು. ಕಾರಿನ ಮೇಲ್ಛಾವಣಿ ಬಿದ್ದ ಪರಿಣಾಮ ಸುನೀಲ್ ತಲೆಗೆ ಹೆಚ್ಚು ಪೆಟ್ಟಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನೀಲ್ ರನ್ನ ಸ್ಥಳೀಯರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದ್ರೆ, ಅಷ್ಟರಲ್ಲಿ ಸುನೀಲ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಬದುಕುಳಿದ ಮಾಲಾಶ್ರೀ
ಅಪಘಾತದ ನಂತರ ಮಾಲಾಶ್ರೀ ಮತ್ತು ಸಚಿನ್ ಬದುಕುಳಿದರು. ಆದರೆ, ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ ಸುನೀಲ್ ಬಾರದ ಲೋಕಕ್ಕೆ ಹೊರಟೇ ಹೋದರು.
ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದರೇನೋ.!
ಮುಗ್ಧ ನೋಟ ಹೊಂದಿದ್ದ ಪ್ರತಿಭಾನ್ವಿತ ನಟ ಸುನೀಲ್. ಅಂದಿನ ಕಾಲಕ್ಕೆ ಚಾಕಲೇಟ್ ಹೀರೋ ಆಗಿದ್ದ ನಟ ಸುನೀಲ್ ಇಂದು ಬದುಕಿದಿದ್ದರೆ, ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿದ್ದರೇನೋ.! ಆದರೆ, ದುರಾದೃಷ್ಟವಶಾತ್ ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿರುವಾಗಲೇ ದುರಂತ ಅಂತ್ಯ ಕಂಡರು.
ಇಂಜಿನಿಯರಿಂಗ್ ವಿದ್ಯಾರ್ಥಿ ಸುನೀಲ್
ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ನಟ ಸುನೀಲ್ ಇಂಜಿನಿಯರಿಂಗ್ ಓದುತ್ತಿದ್ದರು. ಎಂಜಿನಿಯರ್ ಆಗಬೇಕು ಎಂಬ ಆಸೆ ಸುನೀಲ್ ಗೆ ಇತ್ತು. ಅಷ್ಟರಲ್ಲಿ ಕನ್ನಡ ಚಿತ್ರರಂಗ ಅವರನ್ನ ಕೈಬೀಸಿ ಕರೆಯಿತು. ಯಕ್ಷಗಾನ ಕಲಾವಿದ ಕೂಡ ಆಗಿದ್ದ ಅವರು ಕ್ಲಾಸ್ ಗಳಿಗಿಂತ ನಾಟಕಗಳಿಗೆ ಹೆಚ್ಚು ಹಾಜರ್ ಆಗುತ್ತಿದ್ದರು. ನಟ ಆಗಬೇಕು ಎಂಬ ಆಸೆ ಅವರಲ್ಲಿತ್ತು.
ಕುಡ್ಲದ ಕುವರ 'ರಾಮಕೃಷ್ಣ'
ಸುನೀಲ್ ಮೂಲತಃ ಮಂಗಳೂರಿನವರು. ಬಂಟರ ಕುಟುಂಬದಲ್ಲಿ ಹುಟ್ಟಿದವರು. ಜಯಶೀಲ ಶೆಟ್ಟಿ-ನಿರ್ಮಲಾ ದಂಪತಿಯ ಕಿರಿಯ ಪುತ್ರನಾದ ಸುನೀಲ್ ಅವರ ನಿಜನಾಮ 'ರಾಮಕೃಷ್ಣ'. ಉಡುಪಿ ಸಮೀಪದ ಬಾರ್ಕೂರಿನಲ್ಲಿ ಪಿಯುಸಿ ವರೆಗೂ ವ್ಯಾಸಂಗ ಮಾಡಿದ ರಾಮಕೃಷ್ಣ, ಇಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದಿದ್ದರು.
ಒಂದು ಫೋಟೋದಿಂದ ಚಿತ್ರರಂಗಕ್ಕೆ ಬಂದ ಸುನೀಲ್
ಅಂದಿನ ಜನಪ್ರಿಯ ಮ್ಯಾಗಜೀನ್ 'ಅಭಿಮಾನಿ'ಗಾಗಿ ಫೋಟೋಗ್ರಾಫರ್ ವಿಶ್ವನಾಥ್ ಸುವರ್ಣ 'ಫೋಟೋ ಕಾಮಿಕ್ಸ್' ಮಾಡುತ್ತಿದ್ದರು. ಈ ಫೋಟೋ ಕಾಮಿಕ್ಸ್ ಗಾಗಿಯೇ ರಾಮಕೃಷ್ಣ ಮೊದಲು ಬಣ್ಣ ಹಚ್ಚಿದ್ದು. ಅದೇ ಫೋಟೋದಿಂದ 'ಬಿಸಿ ರಕ್ತ' ಮತ್ತು 'ನಾದ ಸುರಭಿ' ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ರಾಮಕೃಷ್ಣಗೆ ಸಿಕ್ತು.
ಕಣ್ಣೀರು ಹಾಕಿದ್ದರು ಸುನೀಲ್
ಹೊಸ ಮುಖಗಳನ್ನೇ ಇಟ್ಟುಕೊಂಡು 'ಕನ್ನಡದ ಕುಳ್ಳ' ದ್ವಾರಕೀಶ್ 'ಶ್ರುತಿ' ಚಿತ್ರ ಮಾಡಲು ಹೊರಟಾಗ ಅವರ ಕಣ್ಣಿಗೆ ಬಿದ್ದವರು ಹ್ಯಾಂಡ್ಸಮ್ ಹುಡುಗ ರಾಮಕೃಷ್ಣ. ಇದೇ ರಾಮಕೃಷ್ಣ ರನ್ನ 'ಸುನೀಲ್' ಆಗಿ 'ಶ್ರುತಿ' ಚಿತ್ರದ ಮೂಲಕ ದ್ವಾರಕೀಶ್ ಪರಿಚಯಿಸಿದರು. 'ಶ್ರುತಿ' ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದ ಸುನೀಲ್ ಗೆ ಮೊದಲ ದಿನವೇ ಆಘಾತ ಕಾದಿತ್ತು. 'ಶ್ರುತಿ' ಸಿನಿಮಾ ಬಿಡುಗಡೆ ಆದ ಮೊದಲ ದಿನ ಎಲ್ಲಾ ಕಡೆ ಖಾಲಿ ಹೊಡೆದಿತ್ತು. ಫ್ರೆಂಡ್ಸ್ ಜೊತೆಗೆ ಸಿನಿಮಾ ನೋಡೋಣ ಅಂತ ಪ್ರಮೋದ್ ಥಿಯೇಟರ್ ಗೆ ಹೋದ ಸುನೀಲ್, ಅಲ್ಲಿ ಯಾರೂ ಇಲ್ಲದೇ ಇರೋದನ್ನು ನೋಡಿ ಕಣ್ಣೀರು ಹಾಕಿದ್ದರು.
ಮೂರು ವರ್ಷಗಳಲ್ಲಿ ಹಿಟ್ ಮೇಲೆ ಹಿಟ್ ಕೊಟ್ಟ ಸುನೀಲ್
'ಶ್ರುತಿ' ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದ ಕಾರಣ, ಓಪನ್ನಿಂಗ್ ಡಲ್ ಆಗಿತ್ತು. ಆದ್ರೆ, ದಿನಗಳು ಉರುಳಿದಂತೆ 'ಶ್ರುತಿ' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣಲು ಆರಂಭಿಸಿತು. ಹಾಗೇ, ಚಿತ್ರ ಯಶಸ್ವಿ ಶತದಿನೋತ್ಸವ ಕೂಡ ಆಚರಿಸಿತು. ಇಲ್ಲಿಂದ ನಟ ಸುನೀಲ್ ಅದೃಷ್ಟ ಖುಲಾಯಿಸಿತು. ಚಿತ್ರರಂಗದಲ್ಲೇ ನೆಲೆಯೂರಿದ ಸುನೀಲ್ ಎಂಜಿನಿಯರ್ ಆಗುವ ಆಸೆಗೆ ತಿಲಾಂಜಲಿ ಬಿಟ್ಟರು. ಮೂರು ವರ್ಷಗಳಲ್ಲಿ 'ದಾಕ್ಷಾಯಿಣಿ', 'ಮೆಚ್ಚಿದ ಮದುಮಗ', 'ಬೆಳ್ಳಿ ಕಾಲುಂಗುರ', 'ನಗರದಲ್ಲಿ ನಾಯಕರು', 'ಸಿಂಧೂರ ತಿಲಕ', 'ಸಾಹಸಿ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ ಸುನೀಲ್ ಈಗ ನೆನಪು ಮಾತ್ರ.