ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಏಕೈಕ ನಟಿ ಬಗ್ಗೆ ನಿಮಗೆಷ್ಟು ಗೊತ್ತು.?
ಕನ್ನಡ ಚಿತ್ರರಂಗದಲ್ಲಿ 'ಅತ್ಯುತ್ತಮ ನಟಿ' ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿಯರು ಯಾರ್ಯಾರು ಅಂತ ಹೇಳಬಲ್ಲಿರಾ.? ಗಲ್ಲದ ಮೇಲೆ ಕೈಯಿಟ್ಟು ಯೋಚಿಸುತ್ತಿದ್ದರೆ, ಸ್ವಲ್ಪ ತಾಳಿ.. ಉತ್ತರವನ್ನು ನಾವೇ ಹೇಳ್ತೀವಿ.
1973 ರಲ್ಲಿ 'ಕಾಡು' ಚಿತ್ರದ ಅಭಿನಯಕ್ಕಾಗಿ ನಂದಿನಿ ಭಕ್ತವತ್ಸಲ.
2004 ರಲ್ಲಿ 'ಹಸೀನಾ' ಚಿತ್ರದ ಅಭಿನಯಕ್ಕಾಗಿ ತಾರಾ.
2007 ರಲ್ಲಿ 'ಗುಲಾಬಿ ಟಾಕೀಸ್' ಚಿತ್ರದ ಅಭಿನಯಕ್ಕಾಗಿ ಉಮಾಶ್ರೀ.
'ಅತ್ಯುತ್ತಮ ನಟಿ' ವಿಭಾಗದಲ್ಲಿ ಇಲ್ಲಿಯವರೆಗೂ ಕನ್ನಡ ಚಿತ್ರರಂಗಕ್ಕೆ ಮೂರು ಪ್ರಶಸ್ತಿಗಳು ಮಾತ್ರ ಸಂದಿವೆ. ಈ ಮೂವರು ನಟಿಮಣಿಯರ ಪೈಕಿ ನಟಿ ತಾರಾ ಮತ್ತು ನಟಿ ಉಮಾಶ್ರೀ ಎಲ್ಲರಿಗೂ ಪರಿಚಿತ. ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ತಾರಾ ಮತ್ತು ಉಮಾಶ್ರೀ ಜನಪ್ರಿಯತೆ ಗಳಿಸಿದ್ದಾರೆ.
ಆದ್ರೆ, ಕನ್ನಡ ಚಿತ್ರರಂಗಕ್ಕೆ ಮೊಟ್ಟ ಮೊದಲ 'ಅತ್ಯುತ್ತಮ ನಟಿ' ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟಿ ನಂದಿನಿ ಭಕ್ತವತ್ಸಲ ಬಗ್ಗೆ ನಿಮಗೆಷ್ಟು ಗೊತ್ತಿದೆ.? ನಂದಿನಿ ಭಕ್ತವತ್ಸಲ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ಕೇರಳ ಮೂಲದ ನಟಿ ನಂದಿನಿ
ನಂದಿನಿ ಹುಟ್ಟಿದ್ದು ಕೇರಳದಲ್ಲಿ ಆದರೂ ಬೆಳೆದಿದ್ದೆಲ್ಲ ಕರ್ನಾಟಕದಲ್ಲಿ. ನಂದಿನಿ ಅವರ ನಿಜನಾಮ ಪ್ರೇಮ. ಈಕೆಯ ತಂದೆ ಪ್ರೊಫೆಸರ್.ಓ.ಕೆ.ನಂಬಿಯಾರ್ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲೀಷ್ ಮತ್ತು ಇತಿಹಾಸ ವಿಷಯದಲ್ಲಿ ಪ್ರೊಫೆಸರ್ ಆಗಿದ್ದರು. ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗಾವಣೆಗೊಂಡರು. ಹೀಗಾಗಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರೇಮ ವಿದ್ಯಾಭ್ಯಾಸ ಮುಗಿಸಿದರು.

ಪ್ರತಿಭಾವಂತೆ ಪ್ರೇಮ.!
ಬಾಲ್ಯದಿಂದಲೂ ಪ್ರೇಮಗೆ ಸಂಗೀತ, ಸಾಹಿತ್ಯ, ನೃತ್ಯಗಳಲ್ಲಿ ಅಪಾರ ಆಸಕ್ತಿ. ಪ್ರತಿಭಾವಂತೆ ಆಗಿದ್ದ ಪ್ರೇಮಗೆ ಬಣ್ಣದ ಬದುಕು ಕೈಬೀಸಿ ಕರೆಯಿತು. ಹಿಂದಿ ಚಿತ್ರರಂಗದ ಮೂಲಕ ಚಿತ್ರ ಬದುಕಿಗೆ ಪ್ರೇಮ ಪದಾರ್ಪಣೆ ಮಾಡಿದರು. 1965 ರಲ್ಲಿ ಬಿಡುಗಡೆಗೊಂಡ ಸಸ್ಪೆನ್ಸ್-ಹಾರರ್ 'ಪೂನಂ ಕಿ ರಾತ್' ಚಿತ್ರದಲ್ಲಿ ಪ್ರೇಮ 'ನಂದಿನಿ' ಪಾತ್ರದಲ್ಲಿ ಅಭಿನಯಿಸಿದರು. ತೆರೆಮೇಲೆ ನಂದಿನಿ ಆಗಿ ಕಾಣಿಸಿಕೊಂಡ ಪ್ರೇಮ, ಚಿತ್ರರಂಗದಲ್ಲಿ ನಂದಿನಿ ಅಂತಲೇ ಗುರುತಿಸಿಕೊಂಡರು.

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂದಿನಿ
ಎಂಟು ವರ್ಷಗಳ ಗ್ಯಾಪ್ ನಂತರ 1973 ರಲ್ಲಿ ತೆರೆಕಂಡ 'ಕಾಡು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಂದಿನಿ (ಪ್ರೇಮ) ಕಾಲಿಟ್ಟರು. ಈ ಚಿತ್ರದಲ್ಲಿ ಗೌಡ್ತಿ ಕಮಲಿ ಆಗಿ ನಂದಿನಿ ನೀಡಿದ ಅಭಿನಯಕ್ಕೆ ಊರ್ವಶಿ ಪ್ರಶಸ್ತಿ (ಅತ್ಯುತ್ತಮ ನಟಿ - ರಾಷ್ಟ್ರ ಪ್ರಶಸ್ತಿ) ಲಭಿಸಿತು.

ಊರ್ವಶಿ ಪ್ರಶಸ್ತಿ
ಭಾರತೀಯ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ ನಟಿಯರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಪ್ರಶಸ್ತಿಗೆ ಆಗಿನ ಕಾಲದಲ್ಲಿ 'ಊರ್ವಶಿ ಪ್ರಶಸ್ತಿ' ಎಂಬ ಹೆಸರಿತ್ತು. 1975 ರಲ್ಲಿ ಅತ್ಯುತ್ತಮ ನಟಿಯರಿಗೆ ನೀಡುವ 'ಊರ್ವಶಿ ಪ್ರಶಸ್ತಿ'ಯ ಹೆಸರನ್ನು 'ರಜತ ಕಮಲ ಪ್ರಶಸ್ತಿ' ಎಂದು ಬದಲಾಯಿಸಲಾಯಿತು.

ಕಾಡು ಚಿತ್ರ
ಗಿರೀಶ್ ಕಾರ್ನಾಡ್ ನಿರ್ದೇಶನದ 'ಕಾಡು' ಚಿತ್ರದಲ್ಲಿ ಮಾಸ್ಟರ್ ನಟರಾಜ್, ಅಮರೀಶ್ ಪುರಿ, ನಂದಿನಿ, ಲೋಕೇಶ್, ಟಿ.ಎಸ್.ನಾಗಾಭರಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಇದೇ ಚಿತ್ರದಲ್ಲಿನ ಅಭಿನಯಕ್ಕೆ ಮಾಸ್ಟರ್ ನಟರಾಜ್ ಗೆ 'ಅತ್ಯುತ್ತಮ ಬಾಲನಟ' ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಹಾಗೇ, 'ಕಾಡು' ಎರಡನೇ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿದೆ.

ನಟನೆ ಮುಂದುವರೆಸದ ನಂದಿನಿ
ಬಾಲಿವುಡ್ ನಲ್ಲಿ 'ಪೂನಂ ಕಿ ರಾತ್' ಮತ್ತು ಸ್ಯಾಂಡಲ್ ವುಡ್ ನಲ್ಲಿ 'ಕಾಡು' ಚಿತ್ರಗಳ ಬಳಿಕ ನಂದಿನಿ ಬಣ್ಣದ ಬದುಕಿನಲ್ಲಿ ಮುಂದುವರೆಯಲಿಲ್ಲ. 'ಕಾಡು' ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರೂ, ನಟನೆಯನ್ನ ನಂದಿನಿ ಮುಂದುವರೆಸಲಿಲ್ಲ.

ನಂದಿನಿ ಹೆಸರಲ್ಲಿದೆ ದಾಖಲೆ.!
ಕನ್ನಡ ಚಿತ್ರರಂಗಕ್ಕೆ ಮೊಟ್ಟ ಮೊದಲ 'ಅತ್ಯುತ್ತಮ ನಟಿ-ರಾಷ್ಟ್ರ ಪ್ರಶಸ್ತಿ' (ಊರ್ವಶಿ ಪ್ರಶಸ್ತಿ) ತಂದುಕೊಟ್ಟ ನಂದಿನಿ ಚಿತ್ರರಂಗದಿಂದ ದೂರವಾಗಲು ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಕನ್ನಡ ಚಿತ್ರರಂಗದಲ್ಲಿ ನಟಿಸಿದ ಮೊದಲ ಹಾಗೂ ಏಕೈಕ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ದಾಖಲೆ ಇನ್ನೂ ನಂದಿನಿ ಹೆಸರಿನಲ್ಲಿದೆ.

ನಂದಿನಿ ವೈವಾಹಿಕ ಬದುಕು
ಬೆಂಗಳೂರಿನ ಚಿತ್ರ ಹಂಚಿಕೆದಾರರೂ, ಕರ್ನಾಟಕ ಫಿಲ್ಮ್ ಚೇಂಬರ್ ನ ಅಧ್ಯಕ್ಷರೂ, ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷರೂ ಆಗಿದ್ದ ಮೂಲ ಭಕ್ತವತ್ಸಲ ಜೊತೆಗೆ ನಂದಿನಿ ವೈವಾಹಿಕ ಬದುಕಿಗೆ ಕಾಲಿಟ್ಟರು. ಈ ದಂಪತಿಗೆ ಆನಂದ ರಂಗ, ವೇದ ಮನು ಮತ್ತು ದೇವ್ ಸಿರಿ ಎಂಬ ಮೂವರು ಮಕ್ಕಳಿದ್ದಾರೆ. ಚಿತ್ರರಂಗದಿಂದ ದೂರ ಉಳಿದ ನಂದಿನಿ ಭಕ್ತವತ್ಸಲ ಕುಟುಂಬದ ಜೊತೆಗೆ ಸುಖವಾಗಿದ್ದಾರೆ.


Click it and Unblock the Notifications











