ಅಂಬಿ ಇಲ್ಲದ ಒಂದು ವರ್ಷ: ಏನೇನೆಲ್ಲಾ ನಡೆದು ಹೋಯ್ತು.!
ಅದು.. ನವೆಂಬರ್ 24, 2018 ರ ಸಂಜೆ.. ಉಸಿರಾಟದ ತೊಂದರೆಯಿಂದ ಬಳಲಿದ ಅಂಬರೀಶ್ ರನ್ನ ಬೆಂಗಳೂರಿಗೆ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಅಂಬರೀಶ್ ನಿಧನರಾದರು.
ಅಂಬರೀಶ್ ನಿಧನದ ಸುದ್ದಿ ಕೇಳಿ ಇಡೀ ಕರುನಾಡೇ ಸ್ತಬ್ಧಗೊಂಡಿತು. ಕಲಿಯುಗದ ಕರ್ಣನಿಗೆ ಕನ್ನಡಿಗರೆಲ್ಲರೂ ಕಂಬನಿ ಮಿಡಿದರು. ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಅಗಲಿ ಸರಿಯಾಗಿ ಒಂದು ವರ್ಷ ಉರುಳಿದೆ. ಈ ಒಂದು ವರ್ಷದಲ್ಲಿ ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಶೇಕ್ ಅಂಬರೀಶ್ ಬಾಳಲ್ಲಿ ನಡೆದಿರುವ ಘಟನೆಗಳು, ವಿವಾದಗಳು ಒಂದೆರಡಲ್ಲ.
ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಇದೀಗ ಮಂಡ್ಯ ಸಂಸದೆ ಆಗಿದ್ದರೆ, ಪುತ್ರ ಅಭಿಶೇಕ್ ಸ್ಯಾಂಡಲ್ ವುಡ್ ಹೀರೋ ಆಗಿದ್ದಾರೆ. ಆದ್ರೆ, ಇದನ್ನೆಲ್ಲ ನೋಡುವ ಭಾಗ್ಯ ಅಂಬರೀಶ್ ಗೆ ಇಲ್ಲ ಅನ್ನೋದು ವಿಧಿ ಲಿಖಿತ. ರೆಬೆಲ್ ಸ್ಟಾರ್ ಅಂಬರೀಶ್ ಬದುಕಿದಿದ್ದರೆ, ಸುಮಲತಾ ರಾಜಕೀಯಕ್ಕೆ ಬರ್ತಿದ್ರೋ, ಇಲ್ವೋ.. ಗೊತ್ತಿಲ್ಲ. ಆದ್ರೆ, 'ಸ್ವಾಬಿಮಾನಿ' ಸುಮಲತಾ ಸಂಸದೆ ಆಗಲು ಎದುರಿಸಿದ ಸವಾಲುಗಳು, ಅವಮಾನ ಅಷ್ಟಿಷ್ಟಲ್ಲ.
ಅಂಬರೀಶ್ ಇಲ್ಲದ ಒಂದು ವರ್ಷದಲ್ಲಿ ರೆಬೆಲ್ ಫ್ಯಾಮಿಲಿ ಎದುರಿಸಿದ ಟ್ರಬಲ್ ಗಳ ಕುರಿತು ಒಂದು ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬರೋಣ ಬನ್ನಿ...

ಅಂಬಿ ಇಲ್ಲದ ವಿವಾಹ ವಾರ್ಷಿಕೋತ್ಸವ
ಅಂಬರೀಶ್ ಇದ್ದಿದ್ದರೆ ತಮ್ಮ 27ನೇ ವಿವಾಹ ವಾರ್ಷಿಕೋತ್ಸವವನ್ನ ಪ್ರೀತಿಯ ಪತ್ನಿ ಸುಮಲತಾ ಜೊತೆಗೆ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದ್ರೆ, ದುರಾದೃಷ್ಟವಶಾತ್ 27ನೇ ಮದುವೆ ಆನಿವರ್ಸಿಗೆ 14 ದಿನ ಬಾಕಿ ಇರುವಾಗ ಅಂಬರೀಶ್ ಕೊನೆಯುಸಿರೆಳೆದರು. ಪತಿಯನ್ನು ಕಳೆದುಕೊಂಡ ದುಃಖದಲ್ಲಿ ವಿವಾಹ ವಾರ್ಷಿಕೋತ್ಸವದಂದು ಸುಮಲತಾ ಭಾವುಕರಾಗಿ ಪತ್ರ ಬರೆದಿದ್ದರು.

ಬೆಳ್ಳಿತೆರೆ ಮೇಲೆ ಕಾಲಿಟ್ಟ ಅಭಿಶೇಕ್
ಸ್ಯಾಂಡಲ್ ವುಡ್ ಸಿಲ್ವರ್ ಸ್ಕ್ರೀನ್ ಮೇಲೆ ಪುತ್ರ ಅಭಿಶೇಕ್ ಮಿಂಚುವುದನ್ನು ನೋಡಬೇಕೆನ್ನುವುದು ಅಂಬರೀಶ್ ಆಸೆ ಆಗಿತ್ತು. ಆದ್ರೆ, ಅದು ಈಡೇರುವ ಮುನ್ನವೇ ಅಂಬರೀಶ್ ಕೊನೆಯುಸಿರೆಳೆದಿದ್ದರು. ಆಭಿಶೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ 'ಅಮರ್' ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತು. ಆದ್ರೆ, ಅದನ್ನ ಕಣ್ತುಂಬಿಕೊಳ್ಳುವ ಅದೃಷ್ಟ ಅಂಬರೀಶ್ ಗೆ ಇರಲಿಲ್ಲ.

ಕನಸಿನ ಮನೆಯ ಗೃಹ ಪ್ರವೇಶ
ಆದಷ್ಟು ಬೇಗ ಜೆ.ಪಿ.ನಗರದಲ್ಲಿ ಇರುವ ತಮ್ಮ ಕನಸಿನ ಮನೆಯನ್ನು ನವೀಕರಣ ಮಾಡಿ ಗೃಹಪ್ರವೇಶ ಮಾಡಬೇಕು ಅನ್ನೋದು ಅಂಬರೀಶ್ ಇಚ್ಛೆ ಆಗಿತ್ತು. ಆದರೆ ಅದು ಸಾಕಾರಗೊಳ್ಳುವ ಮುನ್ನವೇ ಅಂಬರೀಶ್ ವಿಧಿವಶರಾದರು. ಕಳೆದ ಮೇ ತಿಂಗಳಿನಲ್ಲಿ ಅಂಬಿ ಮನೆಯ ನವೀಕರಣ ಕೆಲಸ ಪೂರ್ಣಗೊಂಡಿತು. ಸಾಂಪ್ರದಾಯಿಕವಾಗಿ ಸುಮಲತಾ ಮತ್ತು ಅಭಿಶೇಕ್ ಗೃಹಪ್ರವೇಶ ಮಾಡಿದರು. ಈ ಸಮಯದಲ್ಲಿ ಪತ್ನಿ ಮತ್ತು ಮಗನಿಗೆ ಅಂಬಿ ನೆನಪು ಕಾಡದೇ ಇರಲಿಲ್ಲ.

ರಾಜಕೀಯಕ್ಕೆ ಧುಮುಕಿದ ಸುಮಲತಾ
ಮಂಡ್ಯ ಜನತೆಯ ಅಕ್ಕರೆಯ ನಾಯಕನಾಗಿದ್ದ ಅಂಬರೀಶ್ ಬಾರದ ಲೋಕಕ್ಕೆ ಪಯಣ ಬೆಳೆಸಿದ ಮೇಲೆ ಅವರ ಸ್ಥಾನವನ್ನು ಪತ್ನಿ ತುಂಬಬೇಕು ಅನ್ನೋದು ಮಂಡ್ಯ ಜನತೆಯ ಇಚ್ಛೆ ಆಗಿತ್ತು. ಸಕ್ಕರೆ ನಾಡಿನ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುಮಲತಾ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದರು. ಮೈತ್ರಿ ಸರ್ಕಾರದಿಂದಾಗಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಸುಮಲತಾಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ ಇಳಿದರು.

ಮಂಡ್ಯ ರಾಜಕೀಯ ಜಂಜಾಟ
ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸುಮಲತಾಗೆ ಬಿಜೆಪಿ ಬೆಂಬಲಿ ನೀಡಿತು. ಸುಮಲತಾ ಎದುರಾಳಿಯಾಗಿ ಜೆ.ಡಿ.ಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರು. ಹಾಗ್ನೋಡಿದ್ರೆ, ಒಂದ್ಕಾಲದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅಂಬರೀಶ್ ಅತ್ಯಾಪ್ತರು. ಆದರೆ, ಅಂಬಿ ನಿಧನದ ಬಳಿಕ ಅದೆಲ್ಲವೂ ಉಲ್ಟಾ ಪಲ್ಟಾ ಆಯಿತು.

ಸುಮಲತಾ ಬೆನ್ನಿಗೆ ನಿಂತ ಜೋಡೆತ್ತು
ಚುನಾವಣೆಗೆ ನಿಂತ ಸುಮಲತಾ ಪರವಾಗಿ ಮೊದಲ ದಿನದಿಂದಲೂ ಜೊತೆಗೆ ಇದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್. 'ಜೋಡೆತ್ತು' ಅಂತಲೇ ಇವರಿಬ್ಬರು ಜನಪ್ರಿಯತೆ ಪಡೆದುಕೊಂಡರು. ಅಸಲಿಗೆ ಇವರಿಬ್ಬರೂ ಅಂಬರೀಶ್ ಗೆ ಫೇವರಿಟ್ ಆಗಿದ್ದವರು. ಅಂಬಿ ಇಹಲೋಕ ತ್ಯಜಿಸಿದ ಬಳಿಕ ಸುಮಲತಾ ಬೆನ್ನಿಗೆ ಬಂಡೆಯಂತೆ ನಿಂತು ಸಪೋರ್ಟ್ ಕೊಟ್ಟರು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಏನೇ ಮಾತು ಕೇಳಿಬಂದರೂ, ಅದಕ್ಕೆ ತಲೆ ಕೆಡಿಸಿಕೊಳ್ಳದ 'ಜೋಡೆತ್ತು' ಸುಮಲತಾ ರನ್ನ ಗೆಲ್ಲಿಸುವಲ್ಲಿ ಯಶಸ್ವಿಯಾದರು.

ದೂರ ಸರಿದ ಸುದೀಪ್
ಅಂಬರೀಶ್ ಕುಟುಂಬಕ್ಕೆ ಕಿಚ್ಚ ಸುದೀಪ್ ತುಂಬಾ ಹತ್ತಿರವಾಗಿದ್ದವರು. ಆದ್ರೆ, ಮಂಡ್ಯ ಚುನಾವಣೆ ರಾಜಕೀಯದಲ್ಲಿ ಮಾತ್ರ ಸುದೀಪ್ ತಟಸ್ಥರಾಗಿಬಿಟ್ಟರು. ಜೊತೆಗೆ ಚಿತ್ರೀಕರಣದಲ್ಲೂ ಬಿಜಿಯಿದ್ದ ಕಾರಣ ಸುದೀಪ್, ಸುಮಲತಾ ಪರವಾಗಿ ಪ್ರಚಾರ ಮಾಡುವ ಗೋಜಿಗೆ ಹೋಗಲಿಲ್ಲ.

ಮಂಡ್ಯದಲ್ಲಿ ಬೃಹತ್ ಸಮಾವೇಶ
ಮಂಡ್ಯ ಲೋಕಸಭಾ ಕ್ಷೇತ್ರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ದಿನ ಮಂಡ್ಯದ ಸಿಲ್ವರ್ ಜ್ಯೂಬ್ಲಿ ಪಾರ್ಕ್ ನಲ್ಲಿ ಸುಮಲತಾ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಅಂದು ಅಲ್ಲಿ ಜನಸಾಗರವೇ ಹರಿಬಂದಿತ್ತು. ಅಭಿಮಾನಿಗಳ ಜೈಕಾರದೊಂದಿಗೆ ಸುಮಲತಾ ನಾಮಪತ್ರ ಸಲ್ಲಿಸಿದರು. ಅಲ್ಲಿಂದ, ಸ್ವಾಭಿಮಾನಿ ಸುಮಲತಾ ಎದುರಿಸಿದ ಸವಾಲುಗಳು ಒಂದೆರಡಲ್ಲ.

ಕುಮಾರಸ್ವಾಮಿ ಗುಡುಗು
ಸುಮಲತಾ ಪರವಾಗಿ ಪ್ರಚಾರಕ್ಕೆ ಇಳಿದಿದ್ದ ದರ್ಶನ್ ಮತ್ತು ಯಶ್ ವಿರುದ್ಧ ಅಂದಿನ ಸಿ.ಎಂ. ಕುಮಾರಸ್ವಾಮಿ ಗುಡುಗಿದ್ದರು. ಪ್ರತಿನಿತ್ಯ ಜೋಡೆತ್ತು ಮತ್ತು ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆಗಳು ಕೇಳಿಬರುತ್ತಲೇ ಇತ್ತು. ಎಲ್ಲವನ್ನೂ ಸಹಿಸಿಕೊಂಡ ಸ್ವಾಭಿಮಾನಿ ಸುಮಲತಾ ಮಂಡ್ಯ ಜನತೆ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಅದೃಷ್ಟಕ್ಕೆ ಮಂಡ್ಯ ಜನತೆ ಸುಮಲತಾಗೆ ಕೈಕೊಡಲಿಲ್ಲ.

ಗೆದ್ದು ಬೀಗಿದ ಸುಮಲತಾ
ಏಟು-ಎದಿರೇಟು-ತಿರುಗೇಟು.. ಹೀಗೆ ಚುನಾವಣೆ ರಣರಂಗದಲ್ಲಿ ಎಲ್ಲವನ್ನೂ ಎದುರಿಸಿದ ಸುಮಲತಾ ಮಂಡ್ಯ ಜನರ ಆಶೀರ್ವಾದದಿಂದ ಸಂಸದೆ ಆದರು. ನಕಲಿ ಸುಮಲತಾ ಗಳ ಹಾವಳಿ ಇದ್ದರೂ, 'ಸ್ವಾಭಿಮಾನಿ' ಸುಮಲತಾ ಮಾತ್ರ ಗೆಲುವಿನ ನಗೆ ಬೀರಿದರು. ಪ್ರಚಾರ ಸಂದರ್ಭದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದವರೆಲ್ಲರಿಗೂ ಫಲಿತಾಂಶದ ಮೂಲಕ ಸುಮಲತಾ ದಿಟ್ಟ ಉತ್ತರ ನೀಡಿದರು.

ಸ್ವಾಭಿಮಾನಿಗಳ ವಿಜಯೋತ್ಸವ
ಒಂದು ಕಡೆ ಸಂಸದೆಯಾಗಿ ಗೆಲುವು, ಇನ್ನೊಂದು ಕಡೆ ಅಂಬರೀಶ್ ಹುಟ್ಟುಹಬ್ಬ. ಈ ಎರಡನ್ನೂ 'ಸ್ವಾಭಿಮಾನಿಗಳ ವಿಜಯೋತ್ಸವ' ಹೆಸರಿನಲ್ಲಿ ಸುಮಲತಾ ಆಚರಿಸಿದರು. ತಮ್ಮ ಗೆಲುವು 'ಸ್ವಾಭಿಮಾನಿ ಮಂಡ್ಯ ಜನರ ಗೆಲುವು' ಅಂತ ಸುಮಲತಾ ಹೇಳಿಕೊಂಡಿದ್ದರು.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿ ಮೇಲೆ ರೆಬೆಲ್ ಸ್ಟಾರ್ ಅಂಬರೀಶ್ ಕೂತಿದ್ದಾಗ ಇಡೀ ಕುಟುಂಬಸ್ಥರು, ಚಲನಚಿತ್ರ ರಂಗದ ಸ್ನೇಹಿತರು ಪಾಲ್ಗೊಂಡಿದ್ದರು. ಆದ್ರೆ, ಅದೇ ಕಾರ್ಯಕ್ರಮದ ಸಾಧಕರ ಕುರ್ಚಿ ಮೇಲೆ ಸುಮಲತಾ ಕೂರುವ ಹೊತ್ತಿಗೆ ಪತಿ ಅಂಬರೀಶ್ ಇರಲಿಲ್ಲ.!

'ಕುರುಕ್ಷೇತ್ರ' ಬಿಡುಗಡೆ
ಅಂಬರೀಶ್ ನಿಧನ ಹೊಂದಿದ ಬಳಿಕ ಬಿಡುಗಡೆ ಆದ ಸಿನಿಮಾ 'ಕುರುಕ್ಷೇತ್ರ'. ಈ ಚಿತ್ರದಲ್ಲಿ ಅಂಬರೀಶ್ ಭೀಷ್ಮನ ಪಾತ್ರ ನಿರ್ವಹಿಸಿದ್ದರು. 'ಅಂಬಿ ನಿಂಗ್ ವಯಸ್ಸಾಯ್ತೋ'.. ಅಂಬರೀಶ್ ಅಭಿನಯದ ಕೊನೆಯ ಚಿತ್ರವಾದರೆ, ಅಂಬರೀಶ್ ತೆರೆ ಮೇಲೆ ಕಾಣಿಸಿಕೊಂಡ ಕಟ್ಟ ಕಡೆಯ ಚಿತ್ರ 'ಕುರುಕ್ಷೇತ್ರ'.

ಅಂಬರೀಶ್ ಸ್ಮಾರಕ ವಿಳಂಬ
ಅಂಬರೀಶ್ ಅಗಲಿದೆ ಮೇಲೆ ಮೈತ್ರಿ ಸರ್ಕಾರವೇ ಬಿದ್ದು ಹೋಯ್ತು. ಎಚ್.ಡಿ.ಕುಮಾರಸ್ವಾಮಿ ಬದಲು ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಅಂಬರೀಶ್ ಸ್ಮಾರಕದ ಕೆಲಸವನ್ನು ಬೇಗ ಆರಂಭಿಸುವುದಾಗಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದ್ರೀಗ, ಮುಖ್ಯಮಂತ್ರಿಗಳು ಬೇರೆ. ಸರ್ಕಾರ ಬೇರೆ. ಹೀಗಾಗಿ, ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕಾಲ ಇನ್ನೂ ಕೂಡಿ ಬಂದಿಲ್ಲ.


Click it and Unblock the Notifications











