Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯದಲ್ಲಿದ್ದೂ ರಾಜಕಾರಣಿಯಾಗದ ರೆಬೆಲ್ ಸ್ಟಾರ್
ಸಿನಿಮಾಗಳಲ್ಲಿನ ಪಾತ್ರಗಳು ಮತ್ತು ತಮ್ಮ ನೇರಾನೇರ ಸ್ವಭಾವದ ಕಾರಣದಿಂದ 'ರೆಬೆಲ್' ವಿಶೇಷಣ ಪಡೆದುಕೊಂಡವರು ಅಂಬರೀಷ್. ರೆಬೆಲ್ ಸ್ಟಾರ್ ಎನ್ನುವುದು ಚಿತ್ರರಂಗದಿಂದ ಬಂದ ಬಿರುದಾಗಿದ್ದರೂ, ರಾಜಕೀಯದಲ್ಲಿಯೂ ಅವರು ರೆಬೆಲ್ ಆಗಿದ್ದರು. ತಮ್ಮ ಮನಸಿಗೆ ಒಪ್ಪದ ಕೆಲಸಗಳನ್ನು ಸ್ವಪಕ್ಷದ ನಾಯಕರೇ ಹೇಳಿದರೂ ನಿರಾಕರಿಸುತ್ತಿದ್ದವರು.
ರಾಜಕೀಯದಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿಲ್ಲವೋ ಅಥವಾ ರಾಜಕೀಯ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ.. ಅವರೊಬ್ಬ ಪರಿಪೂರ್ಣ ರಾಜಕಾರಣಿಯಾಗಿ ಜನರಿಗೆ ಸಿಗಲಿಲ್ಲ. ಅವರ ಒರಟು ಮತ್ತು ಉಡಾಫೆಯ ಸ್ವಭಾವವೂ ಇದಕ್ಕೆ ಕಾರಣವಾಗಿರಬಹುದು. ರಾಜಕೀಯವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರೆ ಕೇಂದ್ರ ಮತ್ತು ರಾಜ್ಯ ಸಚಿವರಾಗಿ, ಸಂಸದರಾಗಿ, ಶಾಸಕರಾಗಿ ಅವರು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದರು. ಮುಂದ ಓದಿ...
ರಾಜಕೀಯಕ್ಕೆ ಕರೆದ ದೇವೇಗೌಡರು
ನಟರಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವ ವೇಳೆಯಲ್ಲಿಯೇ ಅಂಬರೀಷ್ ರಾಜಕೀಯಕ್ಕೆ ಬಂದರು. ಅವರು ರಾಜಕೀಯಕ್ಕೆ ಬಂದಿದ್ದಕ್ಕಿಂತ ಹೆಚ್ಚಾಗಿ ಒಕ್ಕಲಿಗರಾದ ಅಂಬರೀಷ್ ಜನಪ್ರಿಯತೆ ಮತ್ತು ಜಾತಿ ಬಲ ಎರಡೂ ಪಕ್ಷಕ್ಕೂ ನೆರವಾಗುತ್ತದೆ ಎಂಬುದನ್ನು ಅರಿತಿದ್ದ ಎಚ್ ಡಿ ದೇವೇಗೌಡ ರಾಜಕೀಯಕ್ಕೆ ಕರೆತಂದರು. ಆಗಿನ್ನೂ ಜನತಾದಳ ಒಡೆದಿರಲಿಲ್ಲ. ದೇವಗೌಡರು ಪ್ರಧಾನಿಯಾದಾಗ ರಾಮನಗರ ವಿಧಾನಸಭೆ ಕ್ಷೇತ್ರ ತೆರವಾಯಿತು. ಹಿಂದೆ ಮುಂದೆ ನೋಡದೆ ಅಂಬರೀಷ್ ಅಲ್ಲಿನ ಉಪಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಟಿಕೆಟ್ ಪಡೆದು ಕಣಕ್ಕಿಳಿದರು. ಕಾಂಗ್ರೆಸ್ನ ಸಿಎಂ ಲಿಂಗಪ್ಪ ಎದುರು ಸೋಲುಂಡರು. ಮತ್ತೆ ಎರಡು ವರ್ಷ ಅಂಬರೀಷ್ ರಾಜಕೀಯದ ಕಡೆ ತಲೆಹಾಕಿರಲಿಲ್ಲ.
ಅಂಬರೀಶ್ ಪದೇ-ಪದೇ ಭೇಟಿ ನೀಡುತ್ತಿದ್ದ ಹೋಟೆಲ್ಗಳು
ಕಾಂಗ್ರೆಸ್ಗೆ ಜಿಗಿತ
1998ರಲ್ಲಿ ಲೋಕಸಭೆ ಚುನಾವಣೆ ಬಂದಾಗ ಮತ್ತೆ ರಾಜಕೀಯದತ್ತ ಗಮನ ಹರಿಸಿದರು. ತವರು ಜಿಲ್ಲೆ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿದ ಅವರು ನಿರಾಯಾಸವಾಗಿ ಗೆಲುವು ಸಾಧಿಸಿದರು. ಅಷ್ಟರಲ್ಲಾಗಲೇ ಅಂಬರೀಷ್ ಗೆಲ್ಲುವ ಕುದುರೆ. ಅವರು ತಮ್ಮ ಜತೆಗಿದ್ದರೆ ಲಾಭ ಎನ್ನುವುದು ಇತರೆ ರಾಜಕೀಯ ಪಕ್ಷಗಳಿಗೂ ಅರಿವಾಗಿತ್ತು. ಹಾಗೆಯೇ ಕಾಂಗ್ರೆಸ್ ಅವರನ್ನು ತಮ್ಮೆಡೆಗೆ ಸೆಳೆದುಕೊಂಡಿತು. 1999ರಲ್ಲಿ ಮತ್ತೆ ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾದರು.
ರಾಜಕಾರಣದಲ್ಲಿ ಜವಾಬ್ದಾರಿ
ಇತ್ತ ರಾಜ್ಯದಲ್ಲಿ ಎಸ್ ಎಂ ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಂಬರೀಷ್ ಅವರಿಗೆ ಪ್ರಾಮುಖ್ಯ ನೀಡಿತು. ಅವರ ಜನಪ್ರಿಯತೆಯನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಿತ್ತು. ಹಾಗಾಗಿಯೇ ಪಕ್ಷದ ಉಪಾಧ್ಯಕ್ಷರ ಜವಾಬ್ದಾರಿ ನೀಡಿತು. ಒಂದು ವೇಳೆ ಅಂಬರೀಷ್ ಈ ಹೊಣೆಗಾರಿಕೆಯನ್ನು ನಿಭಾಯಿಸಿದ್ದರೆ ಕೆಲವೇ ವರ್ಷಗಳಲ್ಲಿ ಅವರು ಕಾಂಗ್ರೆಸ್ನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿಬಿಡುತ್ತಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಅವರ ಅಸ್ತಿತ್ವ ಮತ್ತೊಂದು ಮಟ್ಟಕ್ಕೆ ಹೋಗುವ ಸಾಧ್ಯತೆ ಇತ್ತು. ಬಹುಶಃ ಅವರಿಗೆ ರಾಜಕೀಯ ಆಸಕ್ತಿ ಮೂಡಿಸಿದರೂ ರಾಜಕಾರಣ ಒಲಿಯಲಿಲ್ಲ ಎನಿಸುತ್ತದೆ.
ಅಂಬರೀಶ್ ಅತ್ಯಾಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ತೆರೆದ ನೆನಪಿನ ಪುಸ್ತಕ
ಸಚಿವ ಸ್ಥಾನಕ್ಕೆ ರಾಜೀನಾಮೆ
2004ರಲ್ಲಿ ಅಂಬರೀಷ್ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅವರಿಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸ್ಥಾನ ಅನಾಯಾಸವಾಗಿ ಒಲಿದಿತ್ತು. ಯುಪಿಎ ಒಕ್ಕೂಟದ ಅನೇಕ ಹಿರಿ-ಅನುಭವಿ ತಲೆಗಳನ್ನು ಬಿಟ್ಟು ಅಂಬರೀಷ್ ಅವರಿಗೆ ಆದ್ಯತೆ ನೀಡಲಾಗಿತ್ತು. ಆದರೆ ಅಲ್ಲಿಯೂ ಅಂಬರೀಷ್ ಜವಾಬ್ದಾರಿ ನಿಭಾಯಿಸಲಿಲ್ಲ. ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಅವರು ಆ ನೆಪವೊಡ್ಡಿ ರಾಜೀನಾಮೆ ನೀಡಿದರು. ಅವರು ಅಧಿಕಾರದಲ್ಲಿದ್ದು ಪ್ರಭಾವ ಬಳಸಿದ್ದರೆ ರಾಜ್ಯಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಯಬಹುದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇಲ್ಲಿ ಅಂಬರೀಷ್ ಅವರ ರೆಬೆಲ್ ವ್ಯಕ್ತಿತ್ವ ಮಸುಕಾಯಿತು.
ಸೋಲಿನ ಆಘಾತ
ರಾಜಕಾರಣದ ಕೆಸರೆರಚಾಟಗಳ ನಡುವೆ ಅಂಬರೀಷ್ ಹೈರಾಣಾದರು. ರಾಷ್ಟ್ರ ರಾಜಕಾರಣ ಸಾಕೆನಿಸಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸೋಲಿನ ಆಘಾತದ ಬಳಿಕ, ಲೋಕಸಭೆಯಲ್ಲಿಯೂ ನಿಂತು ಮತ್ತೊಂದು ಹೊಡೆತ ಅನುಭವಿಸಿದರು. ಕೊನೆಗೆ ರಾಜಕೀಯ ಜಿದ್ದಾಜಿದ್ದಿಯ ನಡುವೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ರಮ್ಯಾ ಅವರನ್ನು ನಿಲ್ಲಿಸಿದಾಗ ಪಕ್ಷದ ನಾಯಕರೊಂದಿಗಿನ ಮುನಿಸನ್ನು ಮರೆತು ರಮ್ಯಾ ಪರ ನಿಂತು ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸಿದರು.
ಹ್ಯಾಪಿ ಬರ್ಥಡೇ ರೆಬೆಲ್ ಸ್ಟಾರ್: ಚಿತ್ರರಂಗಕ್ಕೆ ಕಾಡುತ್ತಿದೆ ಅಂಬರೀಷ್ ಅನುಪಸ್ಥಿತಿ
ಸ್ವಪಕ್ಷದೊಳಗೆ ಟೀಕೆ
ರಾಜಕೀಯದಲ್ಲಿ ಸ್ಥಾನಕ್ಕಾಗಿ ಎಲ್ಲರೂ ಬಡಿದಾಡುಕೊಳ್ಳುವಾಗ ತಮ್ಮ ಹಿಂದೆಯೇ ಬರುತ್ತಿದ್ದ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ಅಂಬರೀಷ್ ಅಪ್ಪಿಕೊಳ್ಳಲಿಲ್ಲ. ಹೀಗಾದರೂ ಮತದಾರರು ಅವರನ್ನು ಕೈಬಿಟ್ಟಿರಲಿಲ್ಲ. 2013ರಲ್ಲಿ ವಿಧಾನಸಭೆಯಲ್ಲಿ ಸ್ಪರ್ಧಿಸಿ ಗೆದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಖಾತೆಯ ಜವಾಬ್ದಾರಿ ಸಿಕ್ಕಿತು. ಆದರೆ ಆ ವೇಳೆಗೆ ಅಂಬರೀಷ್ ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಸ್ವಪಕ್ಷದೊಳಗೇ ಟೀಕೆಗಳನ್ನು ಅನುಭವಿಸುತ್ತಿದ್ದರು. ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಅಂಬರೀಷ್ ಏಳುವುದೇ ತಡವಾಗಿ. ಅವರನ್ನು ನೆಚ್ಚಿಕೊಂಡರೆ ಕೆಲಸಗಳು ಆಗುವುದಿಲ್ಲ ಎಂಬ ಮಾತು ಸಂಪುಟದ ಸಹೋದ್ಯೋಗಿಗಳಿಂದಲೇ ಕೇಳಿಬರತೊಡಗಿದವು. ಕೊನೆಗೆ ಸಿದ್ದರಾಮಯ್ಯ ತಮ್ಮ ಸಂಪುಟದಿಂದ ಅವರನ್ನು ಕೈಬಿಟ್ಟರು.
ರಾಜಕೀಯ ನಿವೃತ್ತಿ
'ನಾನು 15 ವರ್ಷಗಳಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದೆ' ಎಂದು ಅಂಬರೀಷ್ ಒಮ್ಮೆ ಹೇಳಿದ್ದರು. ಅವರು ಮುಖ್ಯಮಂತ್ರಿಯಾಗುವುದು ಅಸಾಧ್ಯವೇನೂ ಆಗಿರಲಿಲ್ಲ. ಆದರೆ ರಾಜಕಾರಣಿಯಾಗಿ ಅವರು ರಾಜ್ಯಕ್ಕೆ ಸಿಗಲಿಲ್ಲ. ತಮ್ಮನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ ಕೋಪ ಅವರಲ್ಲಿ ಕೊನೆಯವರೆಗೂ ಇತ್ತು. ಇನ್ನೊಂದೆಡೆ ಆರೋಗ್ಯವೂ ಹದಗೆಡುತ್ತಿತ್ತು. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ಮೂಡಿತು. ಅಂಬರೀಷ್ ಅವರ ಅರ್ಥವಾಗದ ನಡೆಗಳು ಪಕ್ಷವನ್ನು ಗೊಂದಲಕ್ಕೆ ದೂಡಿತ್ತು. ಕೊನೆಗೆ ಸ್ಪರ್ಧಿಸುವುದಿಲ್ಲ ಎಂದರು. ಪ್ರಚಾರಕ್ಕೂ ಅವರು ತೆರಳಲಿಲ್ಲ. ಪ್ರಚಾರ ಮಾಡುವುದಾಗಿದ್ದರೆ ನಾನೇ ಸ್ಪರ್ಧಿಸುತ್ತಿದ್ದೆ ಎಂದಿದ್ದರು.
ರಾಜಕೀಯವೂ ರಂಜನೀಯ
ಅಂಬರೀಷ್ ಎಂದರೆ ನೆನಪಾಗುವುದು ರೆಬೆಲ್ ವ್ಯಕ್ತಿತ್ವ, ಮಾತುಗಳು. ಅದು ರಾಜಕಾರಣದಲ್ಲಿಯೂ ಇತ್ತು. ಆದರೆ ರಾಜ್ಯದ ಪರ ಕೆಲಸ ಮಾಡುವ ವಿಚಾರದಲ್ಲಿ ಅವರು ಆ ರೆಬೆಲ್ ಛಾತಿ ತೋರಿಸಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ರಾಜಕೀಯವಾಗಿ ನಾಯಕನಾಗಿ ಬೆಳೆಯುವ ಅವಕಾಶ ಒಲಿದರೂ ಬಳಸಿಕೊಳ್ಳಲಿಲ್ಲ. ಅವರ ಒಡನಾಟವನ್ನು ಮಂಡ್ಯ, ಬೆಂಗಳೂರು, ದೆಹಲಿಗೆ ಸೀಮಿತವಾಗಿಸಿಕೊಂಡರು. ಸುಮಾರು 24 ವರ್ಷಗಳ ರಾಜಕೀಯ ಜೀವನವನ್ನು ಕೂಡ ಅವರು ಸಿನಿಮಾ ಮದುಕಿನಷ್ಟೇ ರಂಜನೀಯವಾಗಿ ಕಳೆದರು ಎಂಬ ಆಪಾದನೆಯಿದೆ. ಅವರಿಗೆ ಕೊನೆಗೂ ರಾಜಕಾರಣ ಮಾಡಲು ಬರಲಿಲ್ಲ. ಆದರೆ ಅಪ್ಪಟ ಮಾನವೀಯ ವ್ಯಕ್ತಿಯಾಗಿ ಉಳಿದಿದ್ದರು ಎಂಬ ಮೆಚ್ಚುಗೆಯ ಮಾತನ್ನು ಉಳಿಸಿ ಹೋದರು.