15ನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡು ರಿಸಪ್ಷನಿಸ್ಟ್ ಆಗಿ ಕೆಲಸ ಮಾಡಿದ್ದರು ಅಪ್ಪು ಜೊತೆ ಅಭಿನಯಿಸಿದ್ದ ಈ ನಾಯಕಿ..!
'ಕಲೆ' ಎಷ್ಟೇ ಇದ್ದರೂ ಒಮ್ಮೆ ನಾಯಕಿಯರು 'ಮದುವೆ'ಯಾದರೆ ಇಲ್ಲಿ 'ಬೆಲೆ' ಇಲ್ಲ ಅನ್ನುವ ಮಾತು ಇದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಈ ಮಾತನ್ನ ಸುಳ್ಳಾಗಿಸುತ್ತಾರೆ. ಮಿಕ್ಕಂತೆ ಬಹುತೇಕರ 'ಕಥೆ-ವ್ಯಥೆ' ಸೇಮ್ ಟು ಸೇಮ್. ಇದಕ್ಕೆ ಮತ್ತೊಂದು ಉದಾಹರಣೆ ಅನಿತಾ ಹಸ್ಸಂದಾನಿ.
ಹೌದು, ಅನಿತಾ ಹಸ್ಸಂದಾನಿ. ಒಂದ್ಕಾಲದ ಅಪ್ರತಿಮ ಸುಂದರಿ. ಐಶ್ವರ್ಯ ರೈ ಅಭಿನಯದ 'ತಾಲ್' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಅನಿತಾ ಅವರ ಜೀವನದ ಶ್ರೇಷ್ಠ ಸಾಧನೆ 'ನುವ್ವು ನೇನು'.ತೇಜಾ ನಿರ್ದೇಶನದಲ್ಲಿ ಬಂದಿದ್ದ 'ನುವ್ವು ನೇನು' ಮೂಲಕ 'ನೇಮು'..'ಫೇಮು'..ಸಂಪಾದಿಸಿದ ಅನಿತಾ ಕೇವಲ 'ಎರಡೇ ವರ್ಷ'ದಲ್ಲಿ 'ಹನ್ನೊಂದು' ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ತೆಲುಗು, ತಮಿಳು, ಹಿಂದಿ ಹೀಗೆ ಮೂರು ಭಾಷೆಯಲ್ಲಿಯೂ ಮಿಂಚಿದರು.

ಇನ್ನೂ.. ಅಪ್ಪು ಅಭಿನಯದ 'ವೀರ ಕನ್ನಡಿಗ' ಚಿತ್ರದ ಮೂಲಕ, ಅನಿತಾ ಕನ್ನಡ ಚಿತ್ರರಂಗಕ್ಕೂ ಪರಿಚಯವಾದರು. ಕನ್ನಡಿಗರ ಹೃದಯವನ್ನೂ ಗೆದ್ದರು.ವೀರ ಕನ್ನಡಿಗ ಚಿತ್ರದ ನಂತರ ಮತ್ತೆರಡು ಕನ್ನಡ ಸಿನಿಮಾಗಳನ್ನ ಮಾಡಿದರು ಅನಿತಾ. ಆ ಪೈಕಿ ಒಂದು 'ಗಂಡುಗಲಿ ಕುಮಾರ ರಾಮ' ಆದರೆ, ಮತ್ತೊಂದು 'ಹುಡುಗ ಹುಡುಗಿ'. ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ನಾಯಕಿಯಾಗಿ ಮಿಂಚ್ತಿದ್ದ ಅನಿತಾ ಏಕಾಏಕಿ 'ಸೈಡ್ ರೋಲ್' ಗಳಿಗೆ ಸೀಮಿತರಾದರು. 2010 ರ ನಂತರ ಅಲ್ಲೊಂದು.. ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೂ ಅಷ್ಟೊತ್ತಿಗಾಗಲೇ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ಲಾರಾ ದತ್ತಾ ಹೀಗೆ ಅನೇಕರು ಚಿತ್ರರಂಗಕ್ಕೆ ಬಂದಿದ್ದರು. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದರು.
ಹೀಗಾಗಿಯೇ ಏನೋ ಇನ್ನೂ ನೆಲೆಯೂರಿ ನಿಲ್ಲುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದ ಅನಿತಾ 2013ರಲ್ಲಿ 'ರೊಹೀತ್ ರೆಡ್ಡಿ' ಜೊತೆ ಸಪ್ತಪದಿಯನ್ನ ತುಳಿದರು. 2016ರ ನಂತರ ಬೆಳ್ಳಿ ಪರದೆಯಿಂದ ಸಂಪೂರ್ಣ ಅಂತರವನ್ನ ಕಾಪಾಡಿಕೊಂಡರು. ಸದ್ಯಕ್ಕೆ ಅನಿತಾಗೆ ಈಗ 42ರ ಹರೆಯ. ಗಂಡನ ಜೊತೆ ನೆಮ್ಮದಿಯಾಗಿ ಸಂಸಾರ ನೌಕೆಯಲ್ಲಿ ವಿಹರಿಸುತ್ತಿರುವ ಅನಿತಾಗೆ 'ಆರವ್ ರೆಡ್ಡಿ' ಎಂಬ ಮುದ್ದಾದ ಮುಗ ಕೂಡ ಇದ್ದಾನೆ.

ಇಂಥಾ ಅನಿತಾ ಒಂದು ಕಾಲದಲ್ಲಿ ಬದುಕಿನ ಬಂಡಿಯನ್ನೇಳೆಯಲು ತುಂಬಾನೇ ಕಷ್ಟ ಪಟ್ಟಿದ್ದಾರೆ ಅನ್ನುವುದು ಬಹುತೇಕರಿಗೆ ಗೊತ್ತಿರದ ಸಂಗತಿ. ಹೌದು, ಅನಿತಾ ಅವರಿಗೆ ಈ ಸಕಲ ಐಶ್ವರ್ಯ, ಸಂಪತ್ತು, ಏಕಾಏಕಿ ಸಿಕ್ಕಿದ್ದಲ್ಲ. ತಮ್ಮ ಬದುಕಿನಲ್ಲಿ ಅನೇಕ ನೋವು-ಅವಮಾನ ಎದುರಿಸಿದ ನಂತರ ಈ ಸ್ಥಾನ ಮತ್ತು ಮಾನ ಅನಿತಾ ಅವರಿಗೆ ಸಿಕ್ಕಿದೆ. ಸಿದ್ಧಾರ್ಥ್ ಕಣ್ಣನ್ ಅವರ ಸಂದರ್ಶನದಲ್ಲಿ ಅನಿತಾ ಖುದ್ದು ಈ ಮಾತುಗಳನ್ನು ಹೇಳಿದ್ದಾರೆ. ಆ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.
ನನಗಿನ್ನೂ ಆಗ ಹದಿನೈದು ವರ್ಷ. ಕುಡಿತಕ್ಕೆ ಶರಣಾಗಿದ್ದ ನಮ್ಮ ತಂದೆ ತೀರಿಕೊಂಡರು. ಆಗ ನಮಗೆ ದಿಕ್ಕು ತೋಚದಂತಾಗಿತ್ತು ಎಂದಿರುವ ಅನಿತಾ ನಮ್ಮ ತಂದೆ ನಮ್ಮನ್ನು ಅಗಲುವ ಮುನ್ನ ನನ್ನ ಅಕ್ಕನ ಮದುವೆಯಾಗಿತ್ತು. ಹೀಗಾಗಿ ನಾನು ಬದುಕುವುದರ ಜೊತೆ ನನ್ನ ಅಮ್ಮನನ್ನು ಸಾಕುವ ಜವಾಬ್ಧಾರಿ ನನ್ನ ಮೇಲೆ ಬಿತ್ತು ಎಂದಿದ್ದಾರೆ. ಮಗಳಿಗೆ ಇನ್ನೂ 15 ವರ್ಷ, ದಿಕ್ಕು ದಿಸೆಯಿಲ್ಲದ ಅಮ್ಮ ಮತ್ತು ಮಗಳು ಅದ್ಹೇಗೆ ಬದುಕುತ್ತಾರೋ ಏನೋ ಎಂದು ನಮ್ಮ ಅಕ್ಕ ಪಕ್ಕದವರೆಲ್ಲ ಮಾತನಾಡಿಕೊಂಡಿದ್ದರು.ಆದರೆ, ನಾನು ಕುಗ್ಗಲಿಲ್ಲ, ಹೆದರಲಿಲ್ಲ, ಜವಾಬ್ದಾರಿಯನ್ನು ವಹಿಸಿಕೊಂಡೆ, ಹದಿನೈದನೇ ವರ್ಷಕ್ಕೆ ಕೆಲಸ ಹುಡುಕಲು ಶುರು ಮಾಡಿದೆ ಎಂದಿದ್ದಾರೆ.

ಅಮ್ಮನನ್ನು ಸಾಕುವ ಜವಾಬ್ಧಾರಿಯೊಂದಿಗೆ ಹೀಗೆ ಕೆಲಸಕ್ಕೆ ಅಲೆಯುತ್ತಿರುವ ಸಂದರ್ಭದಲ್ಲಿಯೇ ಬಾಲಿವುಡ್ನ ಹಿರಿಯ ನಟ ಮನೋಜ್ ಕುಮಾರ್ ಅವರ ಮಗ ಕುನಾಲ್ ಗೋಸ್ವಾಮಿ ಅವರ ಕಚೇರಿಯಲ್ಲಿ ನನಗೆ ಕೆಲಸ ಸಿಕ್ಕಿತ್ತು ಎಂದಿರುವ ಅನಿತಾ, ಅವರ ಕಚೇರಿಯಲ್ಲಿ ನಾನು ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇ ಎಂದಿದ್ಧಾರೆ.ಬದುಕು ಇಲ್ಲಿಂದಾನೇ ಬದಲಾಯಿತು ಅಂದಿದ್ದಾರೆ.
ಹೌದು, ಕುನಾಲ್ ಗೋಸ್ವಾಮಿ ಅವರ ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ಕುನಾಲ್ ಅವರ ಸಹೋದರ ನನ್ನ ಬಳಿ ಬಂದು ನೀನ್ಯಾಕೇ ಒಂದು ಫೋಟೋ ಶೂಟ್ ಮಾಡಿಸಬಾರದು..? ಎಂದು ಪ್ರಶ್ನೆ ಕೇಳಿದರು. ಅವರ ಈ ಪ್ರಶ್ನೆ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದಿರುವ ಅನಿತಾ ಅಲ್ಲಿಂದಾಚೆ ಫೋಟೋಶೂಟ್ ಮಾಡಿಸಿದೆ, ಆಡಿಷನ್ ಕೊಡಲು ಶುರು ಮಾಡಿದೆ, ಲುಕ್ ಟೆಸ್ಟ್ಗಳನ್ನು ಕೊಡಲು ಶುರು ಮಾಡಿದೆ. ಪರಿಣಾಮ ಇವತ್ತು ನಿಮ್ಮ ಮುಂದೆ ಇದ್ದೇನೆ ಎಂದಿದ್ದಾರೆ. ಕುನಾಲ್ ಗೋಸ್ವಾಮಿ ಮತ್ತು ಅವರ ಸಹೋದರನಿಗೆ ಅವಕಾಶ ನೀಡಿ, ಬದುಕು ಬದಲಿಸಿದ್ದಕ್ಕೆ ಧನ್ಯವಾದಗಳನ್ನು ಅನಿತಾ ಹೇಳಿದ್ದಾರೆ.


Click it and Unblock the Notifications











