'ಸಿಂಹದ ಮರಿಸೈನ್ಯ' ಚಿತ್ರೀಕರಣದ ವೇಳೆ ಮೊದಲ ದಿನ ನಿರ್ದೇಶಕರು ನನ್ನ ಕೆನ್ನೆಗೆ ಬಾರಿಸಿದ್ರು
ಕರ್ನಾಟಕ ಮೂಲಕ ನಟ ಅರ್ಜುನ್ ಸರ್ಜಾ ಸದ್ಯ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರ್ತಿಸಿಕೊಂಡಿದ್ದಾರೆ. ತಂದೆ ಶಕ್ತಿ ಕಪೂರ್ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಪೋಷಕ ಕಲಾವಿದರಾಗಿದ್ದರು. ಹಾಗಾಗಿ ಅರ್ಜುನ್ ಚಿತ್ರರಂಗ ಪ್ರವೇಶ ಕಷ್ಟವಾಗಲಿಲ್ಲ. 'ಸಿಂಹದ ಮರಿಸೈನ್ಯ' ಚಿತ್ರದ ಮೂಲಕ 17 ವರ್ಷಕ್ಕೆ ಬಣ್ಣ ಹಚ್ಚಿದ್ದರು.
ಕನ್ನಡದಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸು ಸಿಗದೇ ಇದ್ದಾಗ ಅರ್ಜುನ್ ಸರ್ಜಾ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಹೀರೊ ಆಗಿ ಅಲ್ಲಿ ಸಕ್ಸಸ್ ಕಂಡರು. ಇವತ್ತಿಗೂ ಲೀಡ್ ರೋಲ್ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪೋಷಕ ಪಾತ್ರಗಳಿಗೂ ಜೀವ ತುಂಬುತ್ತಿದ್ದಾರೆ. ಆಕ್ಷನ್ ಕಿಂಗ್ ನಟನೆಯ 'ಬ್ಲಾಸ್ಟ್' ಸಿನಿಮಾ ಕಳೆದ ವಾರ ತೆರೆಕಂಡು ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳಲ್ಲಿ ಅರ್ಜುನ್ ಸರ್ಜಾ ಭಾಗಿ ಆಗಿದ್ದಾರೆ. ತಮ್ಮ ಸಿನಿಜರ್ನಿ, ಸೋಲು ಗೆಲುವಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಚಿತ್ರರಂಗ ಪ್ರವೇಶಿಸಿದ ವಿಚಾರವನ್ನು ಅರ್ಜುನ್ ಸರ್ಜಾ ಮೆಲುಕು ಹಾಕಿದ್ದಾರೆ. SS MUSIC ವಾಹಿನಿ ಸಂದರ್ಶನದಲ್ಲಿ ಆಕ್ಷನ್ ಕಿಂಗ್ ಭಾಗಿ ಆಗಿದ್ದಾರೆ. ಈ ವೇಳೆ 'ಸಿಂಹದ ಮರಿಸೈನ್ಯ' ಚಿತ್ರಕ್ಕೆ ಆಯ್ಕೆ ಆಗಿದ್ದು ಮೊದಲ ದಿನ ಚಿತ್ರೀಕರಣ ಎಲ್ಲವನ್ನು ನೆನಪಿಸಿಕೊಂಡಿದ್ದಾರೆ. ಹೇಳಿದಂತೆ ನಟಿಸಲಿಲ್ಲ ಎಂದು ನಿರ್ದೇಶಕರು ಬಂದು ಕೆನ್ನೆಗೆ ಬಾರಿಸಿದ್ದರು ಎಂದು ಎಂದು ಕಹಿ ನೆನಪು ಬಿಚ್ಚಿಟ್ಟಿದ್ದಾರೆ.
ಚಿಕ್ಕಂದಿನಲ್ಲಿ ನನಗೆ ನಟನಾಗುವ ಆಲೋಚನೆ ಇರಲಿಲ್ಲ. ಬಹಳ ನಾಚಿಕೆ ಸ್ವಭಾವದವನಾಗಿದ್ದೆ. ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಜೊತೆಗೂ ಮಾತನಾಡುತ್ತಿರಲಿಲ್ಲ. ನನ್ನ ಚಿತ್ರರಂಗಕ್ಕೆ ತಳ್ಳಿಬಿಟ್ಟರು. ತಂದೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ವಿಲನ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ನಾನು ಕರಾಟೆ ಕಲಿತಿದ್ದೆ. ರಾಜೇಂದ್ರ ಸಿಂಗ್ ಬಾಬು ಅಂತ ದೊಡ್ಡ ನಿರ್ದೇಶಕರು. ಯಾರೋ ಅವರ ಬಳಿಕ ಶಕ್ತಿ ಪ್ರಸಾದ್ ಮಗ ಬ್ರೂಸ್ಲೀ ತರ ಇದ್ದಾನೆ ಎಂದು ಹೇಳಿದ್ದಾರೆ. ನನ್ನ ಒಮ್ಮೆ ಬರೋಕೆ ಹೇಳಿದ್ರು, ಯಾಕೆ ಎನ್ನುವುದು ಗೊತ್ತಿರಲಿಲ್ಲ ಎಂದು ಅರ್ಜುನ್ ಸರ್ಜಾ ಮೆಲುಕು ಹಾಕಿದ್ದಾರೆ.
ಅಲ್ಲಿಗೆ ಹೋಗುತ್ತಿದ್ದಂತೆ ಮೊದಲು ಶರ್ಟ್ ತೆಗೆಯೋಕೆ ಹೇಳಿದ್ರು. ಏನಪ್ಪಾ ಇದು ಒಳ್ಳೆ ಬ್ರೂಸ್ಲೀ ತರ ಬಾಡಿ ಇದೆ ಅಂತ ಆಶ್ಚರ್ಯಪಟ್ಟಿದ್ರು. ನಟಿಸ್ತೀಯಾ ಎಂದು ಕೇಳಿದ್ರು. ಗೊತ್ತಿಲ್ಲ ಅಪ್ಪನನ್ನು ಕೇಳ್ಬೇಕು ಎಂದೆ ಹೀಗೆ ನಟನೆ ಆರಂಭವಾಯ್ತು ಎಂದು ಆಕ್ಷನ್ ಕಿಂಗ್ ಹೇಳಿದ್ದಾರೆ. "ಆಗ ಬರೀ ಮಣ್ಣಿನ ರೀತಿ ಇದ್ದೆ. ನಗೋಕೆ ಗೊತ್ತಿಲ್ಲ. ನಟಿಸೋಕು ಗೊತ್ತಿಲ್ಲ. ಅಳುವುದಕ್ಕೆ ಗೊತ್ತಿರಲಿಲ್ಲ. ಫೈಟ್ ಮಾತ್ರ ಮಾಡ್ತಿದ್ದೆ. ಅದೊಂದೇ ನನ್ನ ಕ್ವಾಲಿಟಿ ಆಗಿತ್ತು. ಬಳಿಕ ನಟಿಸುವುದು ಮುಖ್ಯ ಎನ್ನುವುದು ಗೊತ್ತಾಯಿತು" ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.
ಹೆಚ್ಚು ಕಮ್ಮಿ 30ರಿಂದ 40 ಸಿನಿಮಾಗಳನ್ನು ಮಾಡಿದ ಮೇಲೆ ನಟನೆ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದೆ. ಅದಕ್ಕೂ ಮುನ್ನ ಬರೀ ಫೈಟ್, ಶರ್ಟ್ ಬಿಚ್ಚು ಫೈಟ್ ಮಾಡು ಎನ್ನುವಂತೆ ಇದ್ದೆ. ಬಳಿಕ ಶಿವಾಜಿ ಹಾಗೂ ತಮಿಳ್ ನಾಗೇಶ್ ಅವರ ಸಿನಿಮಾಗಳನ್ನು ಹೆಚ್ಚು ನೋಡಿ ಕಲಿತೆ. ಓಹ್ ನಟನೆ ಅಂದ್ರೆ ಹಿಂಗೆ ಮಾಡ್ಬೇಕಾ? ಎಂದು ಅರ್ಥ ಮಾಡಿಕೊಂಡೆ. ಬಳಿಕ ನಾನೇ ನಿರ್ದೇಶಕನಾದೆ. ಆ ಬಳಿಕವೇ ನಟನೆ ಏನು ಎಂದು ಅರ್ಥ ಮಾಡಿಕೊಂಡು ಇಷ್ಟು ದೂರ ಬಂದೆ ಎಂದು ಅರ್ಜುನ್ ಸರ್ಜಾ ವಿವರಿಸಿದ್ದಾರೆ.
ಮೊದಲಿಗೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗ ಶಕ್ತಿ ಪ್ರಸಾದ್ ಮಗ ಎಂದು ಯಾರು ಮೆರೆಸಲಿಲ್ಲ. ಬೈಯ್ತಿದ್ರು, ಒದೆ ಕೂಡ ತಿಂದಿದ್ದೀನಿ ಎಂದು ಅರ್ಜುನ್ ಸರ್ಜಾ ಆ ದಿನಗಳಿಗೆ ಜಾರಿದ್ದಾರೆ. "ಮೊದಲ ದಿನ ಒಂದು ಸಾವಿನ ಸನ್ನಿವೇಶ. ನನ್ನ ಸಹಪಾಠಿ ಸತ್ತು ಹೋಗಿರುತ್ತಾನೆ. ಅದು ಚಿತ್ರದ ಕೊನೆಯ ಸನ್ನಿವೇಶ. ಆದ್ರೆ ಅದನ್ನು ಮೊದಲ ದಿನ ಚಿತ್ರೀಕರಣ ಮಾಡಿದ್ರು. ಅಳುವುದಕ್ಕೆ ಹೇಳಿದ್ರು, ನನಗೆ ಅಳಲು ಗೊತ್ತಿರಲಿಲ್ಲ. ಅಕ್ಕಪಕ್ಕ ಇದ್ದವರು ಕಾಮಿಡಿ ಮಾಡಿ ನಗಿಸುತ್ತಿದ್ರು. ನಿರ್ದೇಶಕರು ನೋಡುವಷ್ಟು ನೋಡು ಹತ್ತಿರ ಬಂದು ಕನ್ನೆಗೆ ಒಂದು ಬಿಟ್ರು. ಓಹ್ ಎಂದು ಅಳಲು ಶುರು ಮಾಡಿದೆ. ನಿರ್ದೇಶಕರಿಗೆ ಎದ್ದು ಹೊಡೆದುಬಿಡೋಣ ಎಂದುಕೊಂಡೆ. ಕಂಟ್ರೋಲ್ ಮಾಡಿಕೊಂಡೆ. ಕೂಡಲೇ ನಿರ್ದೇಶಕರು ಈಗ ಸರಿಯಾಗಿದೆ, ಅಳ್ತಿದ್ದಾನೆ, ಶಾಟ್ ತೆಗೀರು" ಅಂತ ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications