ಅಚ್ಚ ಕನ್ನಡ ಕೆಫೆ ತೆರೆದು ಗೆದ್ದ ನಟ ಅರುಣ್ ಗೌಡ
ಬ್ಯುಸಿನೆಸ್ ಅನ್ನೋದು ಅಷ್ಟು ಸುಲಭ ಅಲ್ಲ. ಬರೀ ಹಣವೊಂದು ಇದ್ದರೆ ಬ್ಯುಸಿನೆಸ್ ಮಾಡಿ ಗೆಲ್ಲೋಕೆ ಆಗೋಲ್ಲ. ಕಠಿಣ ಪರಿಶ್ರಮ ಅಗತ್ಯ. ಸೋಲಿಗೆ ಜಗ್ಗದೇ ಮುನ್ನುಗ್ಗುವ ಛಲ ಬೇಕು. ಆರಂಭದಲ್ಲಿ ಹಿನ್ನಡೆಯಾದರೂ ಅದನ್ನು ಮೆಟ್ಟಿ ಗೆಲುವಿನ ಕಡೆ ಸಾಗಬೇಕು. ನಟ ಅರುಣ್ ಗೌಡ ಕೂಡ ಅಂತಹ ಸವಾಲುಗಳನ್ನೆಲ್ಲಾ ಮೆಟ್ಟಿ ಯಶಸ್ಸಿ ಉದ್ಯಮಿ ಎನಿಸಿಕೊಂಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಅಚ್ಚ ಕನ್ನಡದ ಕೆಫೆ ಆರಂಭಿಸಿ ಅರುಣ್ ಗೌಡ ಯಶ ಸಾಧಿಸಿದ್ದಾರೆ. ಸಾಮಾನ್ಯವಾಗಿ ಪಬ್, ಕೆಫೆಗಳಲ್ಲಿ ಹಿಂದಿ, ಇಂಗ್ಲೀಷ್ ಸಂಗೀತ ಕಿವಿ ಮೇಲೆ ರಾಚುತ್ತದೆ. ಅಲ್ಲಿ ಯಾಕೆ ಕನ್ನಡ ಹಾಡುಗಳನ್ನು ಹಾಕಲ್ಲ ಎನ್ನುವ ಪ್ರಶ್ನೆಯೂ ಕೆಲವರನ್ನು ಕಾಡುತ್ತದೆ. ಎಲ್ಲಾ ಭಾಷಿಕರು ಪಬ್ಗಳಿಗೆ ಬರುವುದರಿಂದ ಕನ್ನಡ ಮ್ಯೂಸಿಕ್ ಮಾತ್ರ ಕೇಳಿಸುತ್ತೇವೆ ಎಂದು ವ್ಯಾಪಾರಕ್ಕೆ ತೊಂದರೆ. ಇದನ್ನೇ ಸವಾಲ್ ಆಗಿ ಅರುಣ್ ಗೌಡ ಸ್ವೀಕರಿಸಿದ್ದರು.

ಕಾಲೇಜು ದಿನಗಳಲ್ಲಿ ಅರುಣ್ ಗೌಡ ಬ್ಯುಸಿನೆಸ್ ಮಾಡಲು ಆರಂಭಿಸಿದ್ದರು. ಸಣ್ಣ ಬಂಡಿ ಅಂಗಡಿಯಿಂದ ಆರಂಭಿಸಿ ಮುಂದೆ ಕೆಫೆ, ರೆಸ್ಟೊರೆಂಟ್ಗಳನ್ನು ತೆರೆಯುವ ಮಟ್ಟಿಗೆ ಬೆಳೆದು ಬಂದರು. 'ಹಳ್ಳಿ ಹೈದ ಪ್ಯಾಟೆಗ್ ಬಂದ' ಹಾಗೂ 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋಗಳಲ್ಲಿ ಮಿಂಚಿದ ಅರುಣ್ ಬಳಿಕ 'ಮುದ್ದು ಮನಸೆ' ಚಿತ್ರದ ಮೂಲಕ ಸಿನಿಮಾ ಹೀರೊ ಆಗಿದ್ದರು.
ನಟನೆಯ ಜೊತೆ ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಅರುಣ್ ಗೌಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆ ಜಿಮ್ನಲ್ಲಿ ಕಸರತ್ತು ನಡೆಸುವಾಗ ಒಮ್ಮೆ ಒಂದು ಚರ್ಚೆ ನಡೆಯಿತು. ಪಬ್, ಕೆಫೆಗಳಲ್ಲಿ ಯಾಕೆ ಕನ್ನಡ ಹಾಡುಗಳನ್ನು ಹಾಕಲ್ಲ. ಬರೀ ಕನ್ನಡ ಹಾಡುಗಳನ್ನು ಹಾಕಿದರೆ ಏನಾಗುತ್ತದೆ ಎನ್ನುವ ಚರ್ಚೆ ನಡೆಯಿತು. ಕೊನೆಗೆ ನಾವೇ ಯಾಕೆ ಒಂದು ಕೆಫೆ ತೆರೆಯಬಾರದು. ಅಲ್ಲಿ ಕನ್ನಡ ಹಾಡುಗಳನ್ನು ಮಾತ್ರ ಯಾಕೆ ಹಾಕಬಾರದು ಎನ್ನುವ ಆಲೋಚನೆ ಶುರುವಾಯಿತು. ಆಗ ಹುಟ್ಟಿಕೊಂಡಿದ್ದೇ ನ್ಯೂ ಬೆಲ್ ರೋಡ್ 'ಬೆಂಗಳೂರು ಅಡ್ಡ' ಎಂದು ಅವರು ಹೇಳುತ್ತಾರೆ.

ನಗರ ನ್ಯೂ ಬೆಲ್ ರೋಡ್ನಲ್ಲಿರುವ 'ಬೆಂಗಳೂರು ಅಡ್ಡ' ಕೆಫೆ ಸಂಪೂರ್ಣ ಕನ್ನಡಮಯವಾಗಿದೆ. ಭಾರತದ ಮೊದಲ ಕನ್ನಡ ಕೆಫೆ ಎಂದೇ ಇದನ್ನು ಕರೆಯಲಾಗಿದೆ. ಈ ಪಬ್ ಒಳಗೆ ಎಂಟ್ರಿ ಕೊಟ್ಟರೆ ಎಲ್ಲವೂ ಕನ್ನಡಮಯ. ಬರೀ ಅಲ್ಲಿ ಕೇಳುವ ಹಾಡು ಮಾತ್ರವಲ್ಲ, ಕನ್ನಡದ ಬರಹಗಳು, ಕನ್ನಡ ಸಾಧಕರ ಪರಿಚಯ ನಿಮಗೆ ಆಗುತ್ತದೆ. ಹುಂಬತನ ಮಾಡಿ ಪಬ್ ಆರಂಭಿಸಿದೆ. ಆದರೆ ಆರಂಭದ ಏಳೆಂಟು ತಿಂಗಳು ಚೆನ್ನಾಗಿ ಆಗಲಿಲ್ಲ. ಬಳಿಕ ವ್ಯಾಪಾರ ಕುದುರಿತು ಎಂದು ಅರುಣ್ ವಿವರಿಸುತ್ತಾರೆ.
ಸಾಮಾನ್ಯವಾಗಿ ಪಬ್ಗೆ ಬೇರೆ ಬೇರೆ ಭಾಷೆಗಳ ಜನರು ಬರುತ್ತಾರೆ. ಕನ್ನಡ ಬಿಟ್ಟು ಬೇರೆ ಮ್ಯೂಸಿಕ್ ಹಾಕುವಂತೆ ಕೇಳುತ್ತಾರೆ. ಇಲ್ಲ ಎಂದರೆ ನಾವು ಬೇರೆ ಕಡೆ ಹೋಗುತ್ತೇವೆ ಎಂದು ಹೋಗಿಬಿಡುತ್ತಾರೆ. ಇದರಿಂದ ನಷ್ಟವಾಗುತ್ತದೆ. ಇದೇ ಕಾರಣಕ್ಕೆ ಆರಂಭದಲ್ಲಿ 'ಬೆಂಗಳೂರು ಅಡ್ಡ' ನಮ್ಮ ನಿರೀಕ್ಷೆ ತಲುಪಲಿಲ್ಲ. ಆದರೆ ನಾವು ಪಟ್ಟು ಬಿಡಲಿಲ್ಲ. ನಿಧಾನವಾಗಿ ಕನ್ನಡಿಗರು ನಮ್ಮ ಕೈಹಿಡಿದರು. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಲು ಆರಂಭಿಸಿದರು. ಈಗ ವೀಕೆಂಡ್ನಲ್ಲಿ ನಮ್ಮ ಪಬ್ ತುಂಬಿ ತುಳುಕುತ್ತದೆ ಎಂದು ಅರುಣ್ ಸಂತಸ ವ್ಯಕ್ತಪಡಿಸುತ್ತಾರೆ.
'ಬೆಂಗಳೂರು ಅಡ್ಡ' ಮಾತ್ರವಲ್ಲದೇ ಎರಡ್ಮೂರು ರೆಸ್ಟೋರೆಂಟ್ಗಳನ್ನು ಅರುಣ್ ಗೌಡ ನಡೆಸುತ್ತಿದ್ದಾರೆ. ಇನ್ನು ಹೆಸರಿಡದ ಚಿತ್ರವೊಂದನ್ನು ಅವರು ನಿರ್ದೇಶಿಸಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಆ ಸಿನಿಮಾ ಮೂಡಿ ಬರಲಿದೆ. ಶೀಘ್ರದಲ್ಲೇ ಅರುಣ್ ಗೌಡ ಮದುವೆ ಕೂಡ ನಡೆಯಲಿದೆ. ಮತ್ತಷ್ಟು ಬ್ಯುಸಿನೆಸ್ ಸ್ಟಾರ್ಟ್ಟಪ್ ಆರಂಭಿಸಲು ಚಿಂತಿಸುತ್ತಿದ್ದಾರೆ.


Click it and Unblock the Notifications











