ನಿಮಗೆ ಗೊತ್ತಾ 40 ವರ್ಷಗಳ ಹಿಂದೆ ಕನ್ನಡದಲ್ಲಿ 'ಲಕ್ಕಿ ಭಾಸ್ಕರ್' ಅಪ್ಪನಂಥ ಸಿನ್ಮಾ ಬಂದಿತ್ತು!
ದುಲ್ಕರ್ ಸಲ್ಮಾನ್ ನಟನೆಯ 'ಲಕ್ಕಿ ಭಾಸ್ಕರ್' ಸಿನಿಮಾ ಒಂದು ವರ್ಷ ಪೂರೈಸಿದೆ. ಸಿನಿರಸಿಕರು ಮತ್ತೊಮ್ಮೆ ಈ ಕಲ್ಟ್ ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ವೆಂಕಿ ಅಟ್ಲೂರಿ ನಿರ್ದೇಶನದ ಸಿನಿಮಾ ಕಳೆದ ವರ್ಷ ಅಕ್ಟೋಬರ್ 31ರಂದು ತೆರೆಗೆ ಬಂದಿತ್ತು. ಚಿತ್ರಮಂದಿರಗಳಲ್ಲಿ ಗೆದ್ದ ಬಳಿಕ ಓಟಿಟಿಯಲ್ಲಿ ಮತ್ತಷ್ಟು ದೊಡ್ಡದಾಗಿ ಸದ್ದು ಮಾಡಿತ್ತು.
ಇದೊಂದು ಬ್ಲ್ಯಾಕ್ ಕಾಮಿಡಿ ಕ್ರೈಂ ಜಾನರ್ ಸಿನಿಮಾ. ಭಾಸ್ಕರ್ ಕುಮಾರ್ ಎಂಬ ಬ್ಯಾಂಕ್ ಉದ್ಯೋಗಿಯ ಜರ್ನಿಯ ಕಥೆ ಚಿತ್ರದಲ್ಲಿದೆ. 90ರ ದಶಕದಲ್ಲಿ ಬ್ಯಾಂಕ್ ವ್ಯವಸ್ಥೆಯ ಲಾಭ ಪಡೆದು ಆತ ಹೇಗೆ ದುಡ್ಡು ಮಾಡುತ್ತಾನೆ, ಅದನ್ನು ಶೇರ್ ಮಾರುಕಟ್ಟೆಯಲ್ಲಿ ಹೂಡಿ ಹೆಚ್ಚಿನ ಲಾಭ ಪಡೆಯುತ್ತಾನೆ. ಕೊನೆಗೆ ಎಲ್ಲಾ ಹಣವನ್ನು ಹೊತ್ತು ವಿದೇಶಕ್ಕೆ ಪಾಲಾಯನವಾಗಿಬಿಡುತ್ತಾನೆ ಎನ್ನುವ ಕಥೆ ಚಿತ್ರದಲ್ಲಿದೆ.

ಓಟಿಟಿಯಲ್ಲಿ 'ಲಕ್ಕಿ ಭಾಸ್ಕರ್' ಬಿಡುಗಡೆಯಾಗಿ ಹೆಚ್ಚಿನ ಜನರನ್ನು ತಲುಪಿತ್ತು. ಸಿನಿಮಾ ನೋಡಿದ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿ ಬರೆದಿದ್ದರು. ಸರಿ ತಪ್ಪುಗಳ ಬಗ್ಗೆ ಚರ್ಚಿಸಿದ್ದರು. ಮೋಸವನ್ನು ಸಮರ್ಥಿಸುವ ಹಾಗೂ ರಂಜಿಸಲು ಸಿನಿಮಾ ಇದು ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದೆಲ್ಲವನ್ನು ಮೀರಿ ಸಿನಿಮಾ ಗೆದ್ದಿತ್ತು. ನಿಮಗೆ ಗೊತ್ತಾ 40 ವರ್ಷಗಳ ಹಿಂದೆಯೇ 'ಲಕ್ಕಿ ಭಾಸ್ಕರ್' ಚಿತ್ರ ನೆನೆಪಿಸುವ ಸಿನಿಮಾ ಕನ್ನಡದಲ್ಲಿ ಬಂದಿತ್ತು. ಆರ್. ಕೆ ನಾರಾಯಣ್ ಬರೆದ 'ದಿ ಫೈನಾನ್ಷಿಯಲ್ ಎಕ್ಸ್ಫರ್ಟ್' ಕಾದಂಬರಿ ಆಧರಿಸಿ ಟಿ. ಎಸ್ ನಾಗಾಭರಣ ಆ ಚಿತ್ರವನ್ನು ಕಟ್ಟಿಕೊಟ್ಟಿದ್ದರು.
ಹಣ ಎನ್ನುವುದು ಜೀವನದಲ್ಲಿ ಬಹಳ ಮುಖ್ಯ. ಅದರಲ್ಲೂ ಮಧ್ಯಮ ವರ್ಗದ ಜನ ಹಣ ಸಂಪಾದನೆಗಾಗಿ ನಾನಾ ಕಸರತ್ತು ಮಾಡುತ್ತಾರೆ. ಆದರೆ ಹಣ ಮಾಡುವ ಮಾರ್ಗ ಸರಿಯಾಗಿ ಇರಬೇಕು. ಇನ್ನು ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿ ಕೊಡೆ ಹಿಡಿತಾನೆ ಎನ್ನುವಂತೆ ಆಗಬಾರದು. ಹಣದ ಹಿಂದೆ ಬಿದ್ದವನು ಮನೆ ಹೆಂಡತಿ ಮಕ್ಕಳ ಕಡೆ ಗಮನ ಕೊಡದಿದ್ದರೆ ಏನೆಲ್ಲಾ ಎಡವಟ್ಟು ಆಗುತ್ತದೆ ಎನ್ನುವ ವಿಚಾರವನ್ನು ಈ ಚಿತ್ರದಲ್ಲಿ ಹೇಳಿದ್ದಾರೆ.

1983ರಲ್ಲಿ ಬಂದಿದ್ದ ಕನ್ನಡ 'ಬ್ಯಾಂಕರ್ ಮಾರ್ಗಯ್ಯ' ಚಿತ್ರದಲ್ಲಿ ಕೂಡ ಇಂಥದ್ದೇ ಕಥೆ ಇತ್ತು. ಆ ಚಿತ್ರದಲ್ಲಿ ಕೂಡ ಲೇವಾದೇವಿ ವ್ಯವಹಾರ ನಡೆಸುವ ಮಾರ್ಗಯ್ಯ ಕೂಡ ಜನರಿಂದ ಹಣ ಸಂಗ್ರಹಿಸಿ ಶೇರ್ ಮಾರ್ಕೆಟ್ನಲ್ಲಿ ಹೂಡಿ ಲಾಭ ಮಾಡುತ್ತಾನೆ. ಇತ್ತೀಚೆಗೆ ಸಾಕಷ್ಟು ಜನ ಶೇರ್ ಮಾರ್ಕೆಟ್, ಎಸ್ಐಪಿ, ಮ್ಯೂಚುವಲ್ ಫಂಡ್ ಮೇಲೆ ಹಣ ಹೂಡಲು ಆರಂಭಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಆದರೆ 'ಬ್ಯಾಂಕರ್ ಮಾರ್ಗಯ್ಯ' ಚಿತ್ರದಲ್ಲೇ ಠೇವಣಿ, ಹೂಡಿಕೆ, ಶೇರ್ಗಳ ಬಗ್ಗೆ ಚರ್ಚಿಸಲಾಗಿತ್ತು.
ಮಾರ್ಗಯ್ಯನ ಪಾತ್ರದಲ್ಲಿ ನಟ ಲೋಕೇಶ್ ಅದ್ಭುತವಾಗಿ ನಟಿಸಿದ್ದರು. ಸಹಕಾರಿ ಬ್ಯಾಂಕಿನ ಎದುರು ಕೂತು ಫಾರ್ಮ್ಗಳನ್ನು ಭರ್ತಿ ಮಾಡಿ ಗ್ರಾಮಸ್ಥರಿಗೆ ಸಾಲ ಕೊಡಿಸಲು ಮಾರ್ಗಯ್ಯ ಸಹಾಯ ಮಾಡುತ್ತಿರುತ್ತಾನೆ. ಆದರೆ ಲೇವಾದೇವಿ ಪುಸ್ತಕ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾನೆ. ಪೂಜೆ ಮಾಡಿ ದೇವರ ಕೃಪೆಯಿಂದ ಸಿರಿವಂತನಾಗುವ ಕನಸು ಕಾಣುತ್ತಾನೆ. ಬಳಿಕ ಡಾ. ಪಾಲ್(ಸುಂದರಕೃಷ್ಣ ಅರಸ್) ಬರೆದ ಪುಸ್ತಕ ಮುದ್ರಣ ಮಾಡಿಸಿ ಸಿರಿವಂತನಾಗುತ್ತಾನೆ.
ತಾನು ಮುದ್ರಣ ಮಾಡಿ ಮಾರಿ ಹಣ ಸಂಪಾದಿಸಿದ ಪುಸ್ತಕದಿಂದ ತನ್ನ ಮಗನೇ ಹಾಳಾಗುತ್ತಿದ್ದಾನೆ ಎಂದು ಗೊತ್ತಾದಾಗ ಆ ವ್ಯಾಪಾರ ಕೈಬಿಡುತ್ತಾನೆ. ಜನರಿಗೆ ಸಾಲ ಕೊಟ್ಟು ಹಣ ಮಾಡುತ್ತಿದ್ದ ಮಾರ್ಗಯ್ಯ ಕೊನೆಗೆ ತಾನೇ ಠೇವಣಿದಾರರಿಂದ ಹಣ ಪಡೆದು ಅದನ್ನು ಶೇರ್ ಮಾರ್ಕೆಟ್ನಲ್ಲಿ ಹೂಡಿ ಹಣ ಮಾಡಿ ಗೆಲ್ಲುತ್ತಾನೆ. ಅದಕ್ಕೂ ಪೆಟ್ಟು ಬಿದ್ದಾಗ ಕೊನೆಗೆ ತನ್ನ ಹಳೇ ಜೀವನಕ್ಕೆ ಮರಳುತ್ತಾನೆ.
ಚಿತ್ರದಲ್ಲಿ ಲೋಕೇಶ್ ಪತ್ನಿಯಾಗಿ ಜಯಂತಿ ನಟಿಸಿದ್ದರು. ಮಗನಾಗಿ ಸುಂದರ್ ರಾಜ್ ಬಣ್ಣ ಹಚ್ಚಿದ್ದರು. ಡಾ. ಪಾಲ್ ಆಗಿ ಪ್ರಮುಖ ಪಾತ್ರದಲ್ಲಿ ಸುಂದರ್ಕೃಷ್ಣ ಅರಸ್ ಮಿಂಚಿದ್ದರು. ಇನ್ನು ಮಾರ್ಗಯ್ಯನ ಮಗನ ಬಾಲ್ಯದ ಪಾತ್ರದಲ್ಲಿ ಮಾಸ್ಟರ್ ಮಂಜುನಾಥ್ ನಟಿಸಿದ್ದು ವಿಶೇಷ. ವಿಜಯ ಭಾಸ್ಕರ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್.
'ಲಕ್ಕಿ ಭಾಸ್ಕರ್' ಹಾಗೂ 'ಬ್ಯಾಂಕರ್ ಮಾರ್ಗಯ್ಯ' ಚಿತ್ರದ ಕಥೆಗಳು ಬೇರೆ ಬೇರೆ ಆಗಿದ್ದರೂ ಕೆಲ ವಿಚಾರಗಳಲ್ಲಿ ಸಾಮ್ಯತೆಯಿದೆ. ಚಿತ್ರಗಳ ಥೀಮ್ ಒಂದೇ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ವೀಡಿಯೋವೊಂದು ವೈರಲ್ ಆಗಿ ಭಾರೀ ಚರ್ಚೆ ಹುಟ್ಟಾಕ್ಕಿದೆ. 'ಲಕ್ಕಿ ಭಾಸ್ಕರ್' ಮೀರಿಸುವ ಸಿನಿಮಾ 'ಬ್ಯಾಂಕರ್ ಮಾರ್ಗಯ್ಯ' ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಸಾಕಷ್ಟು ಜನ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ನೋಡಿ 'ಲಕ್ಕಿ ಭಾಸ್ಕರ್' ಸಿನಿಮಾ ಮಾಡಿದಂತಿದೆ ಎಂದು ಕೆಲವರು ಹೇಳುತ್ತಿದ್ದಾರೆ.


Click it and Unblock the Notifications











