"ಪುನೀತ್ ಬಿಟ್ರೆ 'ಪೃಥ್ವಿ' ಸಿನ್ಮಾ ಮಾಡೋಕೆ ಯಾರ್ಗೂ ಆಗ್ತಿರ್ಲಿಲ್ಲ, ಬೆದರಿಕೆ ಕರೆಗಳು ಬರ್ತಿತ್ತು" ಹೀಗಂದಿದ್ಯಾರು?
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಮಾ 15 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಜೇಕಬ್ ವರ್ಗೀಸ್ ಈ ಆಕ್ಷನ್ ಚಿತ್ರಕ್ಕೆ ಸಾರಥ್ಯ ವಹಿಸಿದ್ದರು. ಒಂದು ಗಂಭೀರ ಸಂಗತಿಯನ್ನು ಚಿತ್ರದಲ್ಲಿ ತೆರೆದಿಟ್ಟಿದ್ದರು. ಬಳ್ಳಾರಿ ಗಣಿ ರಾಜಕೀಯವನ್ನು ಎಳೆ ಎಳೆಯಾಗಿ ಹೇಳುವ ಪ್ರಯತ್ನ ಮಾಡಲಾಗಿತ್ತು. ಜಿಲ್ಲಾಧಿಕಾರಿ ಪೃಥ್ವಿ ಕುಮಾರ್ ಪಾತ್ರದಲ್ಲಿ ಅಪ್ಪು ಮೋಡಿ ಮಾಡಿದ್ದರು.
ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಗಣಿ ರಾಜಕೀಯದ ಕಥೆ ಹೇಳಲು ಜೇಕಬ್ ಅಂಡ್ ಟೀಮ ಹರಸಾಹಸ ಪಟ್ಟಿತ್ತು. ನಟ ಪುನೀತ್ ರಾಜ್ಕುಮಾರ್ ಕೂಡ ತಂಡದ ಬೆನ್ನಿಗೆ ನಿಂತಿದ್ದರು. ಬೇರೆ ಯಾದಾದರೂ ಆಗಿದ್ದರೆ ಆ ಚಿತ್ರವನ್ನು ಅಂದುಕೊಂಡಂತೆ ಮಾಡಿ ಮುಗಿಸಲು ಆಗುತ್ತಿರಲಿಲ್ಲ. ಈ ವಿಚಾರವನ್ನು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕೆ. ಎಸ್ ನಂದೀಶ್ ನೆನಪಿಸಿಕೊಂಡಿದ್ದಾರೆ.

ನಂದೀಶ್ ನಿರ್ದೇಶನದ 'ರುದ್ರ ಗರುಡ ಪುರಾಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರಕ್ಕಾಗಿ ಕನ್ನಡ ಪಿಕ್ಚರ್ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ. ಜೇಕಬ್ ವರ್ಗಿಸ್ ಅವರ ಬಳಿಕ ಸಹಾಯಕರಾಗಿ ಕೆಲಸ ಮಾಡಿದ್ದನ್ನು ತಿಳಿಸಿದ್ದಾರೆ. 'ಪೃಥ್ವಿ' ಚಿತ್ರದ ಮೇಕಿಂಗ್ ಅನುಭವ ತೆರೆದಿಟ್ಟಿದ್ದಾರೆ.
'ಪೃಥ್ವಿ' ಸಿನಿಮಾ ಕಥೆ ಬರೆಯಲು ಆರಂಭಿಸಿದ ದಿನದಿಂದಲೂ ನಾನು ನಿರ್ದೇಶಕ ಜೇಕಬ್ ವರ್ಗೀಸ್ ಅವರ ಜೊತೆಗಿದ್ದೆ. ಆ ಕಥೆಯನ್ನು ಸಿನಿಮಾ ಮಾಡಲು ಪುನೀತ್ ಬಿಟ್ಟು ಬೇರೆ ಯಾರೇ ಆಗಿದ್ದರು ಆಗುತ್ತಿರಲಿಲ್ಲ. ಕಾರಣ ಅವತ್ತಿಗೆ ಮೈನಿಂಗ್ ಮಾಫಿಯಾ ಆ ತರ ಇತ್ತು. ನಾವು ಬಳ್ಳಾರಿಗೆ ಹೋಗಿ ಬರೀ ಲೊಕೇಶನ್ ಫೋಟೊ ಹಿಡಿದರೆ, ಕೆಲವರು ಬಂದು ನಮ್ಮ ಫೋಟೊ ತೆಗೆಯುತ್ತಿದ್ದರು. ಕೇಳಿದ್ರೆ, ನೀವು ತೆಗೆದ್ರಿ, ಅದಕ್ಕೆ ನಾವು ತೆಗೆದ್ವಿ, ಯಾಕೆ ತೆಗಿತ್ತೀರಾ" ಎನ್ನುತ್ತಿದ್ದರು ಎಂದು ನಂದೀಶ್ ಹೇಳಿದ್ದಾರೆ.
"ಕೊನೆಗೆ ಬಳ್ಳಾರಿಯಲ್ಲಿ ಚಿತ್ರೀಕರಣ ಮಾಡೋಕೆ ಸಾಧ್ಯವಾಗಲೇ ಇಲ್ಲ. ಒಂದು ಶಾಟ್ ಕೂಡ ಅಲ್ಲಿ ತೆಗೆದಿಲ್ಲ. ಬಳ್ಳಾರಿ ಗಣಿ ಸನ್ನಿವೇಶಗಳನ್ನು ವಿಶಾಖ ಪಟ್ಟಣಂ, ಮೈಸೂರಿನಲ್ಲಿ ಶೂಟ್ ಮಾಡಿದ್ದು. ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಕೂಡ ಸಾಕಷ್ಟು ಬೆದರಿಕೆ ಕರೆಗಳು ಬರ್ತಿತ್ತು. ಹಾಗ್ ಮಾಡ್ತೀವಿ, ಹೀಗ್ ಮಾಡ್ತೀವಿ ಎನ್ನುತ್ತಿದ್ದರು. ಅದನ್ನೆಲ್ಲಾ ಎದುರಿಸಲು ಪುನೀತ್ ಸರ್ ಕಾರಣ. ಅವರು ಇದ್ದಿದ್ದಕ್ಕೆ ಸಿನಿಮಾ ತೆರೆಗೆ ಬಂತು" ಎಂದು ನಂದೀಶ್ ವಿವರಿಸಿದ್ದಾರೆ.

'ಪೃಥ್ವಿ' ಸಿನಿಮಾ ನೋಡಿ ಸಾಕಷ್ಟು ಜನ ಡಾಕ್ಟರ್, ಐಎಎಸ್, ಐಪಿಎಸ್ ಓದಬೇಕು ಎಂದು ಸ್ಫೂರ್ತಿಯಾಗಿ ತೆಗೆದುಕೊಂಡರು. 'ಬಂಗಾರದ ಮನುಷ್ಯ' ಸಿನಿಮಾ ನೋಡಿ ಸಾಕಷ್ಟು ಜನ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿದ್ದರು. ಅದು ಬಿಟ್ಟರೆ 'ಪೃಥ್ವಿ' ಚಿತ್ರದಿಂದ ಪ್ರೇರಣೆ ಆಗಿದ್ದರು ಎನ್ನುವುದು ಸಂತೋಷ ತರುವಂತಹ ವಿಷಯ ಎಂದು ನಂದೀಶ್ ಹೇಳಿದ್ದಾರೆ. ಸದ್ಯ ಈ ಹೇಳಿಕೆ ವೈರಲ್ ಆಗುತ್ತಿದೆ.
ಅಪ್ಪು ಸರ್ ಜೊತೆ ಸಿನಿಮಾ ಚಿತ್ರೀಕರಣ ಮಾಡಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ಸೆಟ್ನಲ್ಲಿ ಒಟ್ಟಿಗೆ ಎಲ್ಲರ ಜೊತೆ ಊಟ ಮಾಡುತ್ತಿದ್ದರು. ಅಭಿಮಾನಿಗಳು ಬಂದರೆ ಎಲ್ಲರ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಆಗ ಇಷ್ಟು ಮೊಬೈಲ್ ಫೋನ್ ಇರಲಿಲ್ಲ, ಒಬ್ಬ ಫೋಟೊಗ್ರಾಫರ್ ಇಟ್ಟು ಫೋಟೊ ತೆಗೆಸಿ ಎಲ್ಲರಿಗೂ ಕೊಡಲು ಹೇಳುತ್ತಿದ್ದರು ಎಂದು ಆ ದಿನಗಳನ್ನು ನಂದೀಶ್ ಮೆಲುಕು ಹಾಕಿದ್ದಾರೆ. ನಂದೀಶ್ ನಿರ್ದೇಶನದ 'ರುದ್ರ ಗರುಣ ಪುರಾಣ' ಸಿನಿಮಾ ಈ ವಾರ ತೆರೆಗೆ ಬರ್ತಿದೆ.


Click it and Unblock the Notifications











