ಕಾಶಿನಾಥ್ ಸರ್ಗೆ ಆ್ಯಸಿಡ್ ಹಾಕಲು ಮನೆಗೆ ಒಬ್ಬ ವ್ಯಕ್ತಿ ಬಂದಿದ್ದ, 25 ವರ್ಷದ ಹಿಂದಿನ ಘಟನೆ ನೆನೆದ ಉಪೇಂದ್ರ..!
ಕನ್ನಡ ಚಿತ್ರರಂಗದ ಸಿದ್ಧ ಸೂತ್ರಗಳನ್ನೆಲ್ಲ ಪಕ್ಕಕ್ಕೆ ಇಟ್ಟು, ಹೊಸದೊಂದು ಸಿನಿಮಾ ವ್ಯಾಕರಣವನ್ನ ಪರಿಚಯ ಮಾಡಿದ ಖ್ಯಾತಿ ಕನ್ನಡ ಚಿತ್ರರಂಗದ ಖ್ಯಾತ ನಾಯಕ.. ನಿರ್ದೇಶಕ.. ನಿರ್ಮಾಪಕ.. ಕಾಶಿನಾಥ್ ಅವರದ್ದು. ಸಿನಿಮಾವನ್ನ ಹೀಗೆಯೇ ಯಾಕೆ ಮಾಡಬೇಕು..? ಹೀಗೆ ಯಾಕೆ ಮಾಡಬಾರದೆನ್ನೋ ಹೊಸ ಆಲೋಚನೆಗೆ ಮುನ್ನುಡಿ ಬರೆದವರು ಕಾಶಿನಾಥ್.
ಅಲ್ಲೀತನ್ಕ ಇದ್ದ ಮಡಿವಂತಿಕೆ.. ಸಂಪ್ರದಾಯ.. ಸಂಸ್ಕ್ರತಿಯೆನ್ನೆಲ್ಲ ಪಾಲಿಸದೇ ಹೊಸ ಅಲೆಯನ್ನೇ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಕಾಶಿನಾಥ್ ಕನ್ನಡ ಚಿತ್ರರಂಗದ ಅನೇಕರ ಪಾಳಿನ ಗುರು ಕೂಡ ಹೌದು. ವಿ.ಮನೋಹರ್, ಉಮಾಶ್ರೀ, ಅಭಿನಯ, ಸುನೀಲ್ ಕುಮಾರ್ ದೇಸಾಯಿ, ಮುರಳಿ ಕೃಷ್ಣ ಹೀಗೆ ಅನೇಕರು ಕಾಶಿನಾಥ್ ಅವರ ಗುರುಕುಲದ ವಿದ್ಯಾರ್ಥಿಗಳೇ. ಆ ಪೈಕಿ ಉಪೇಂದ್ರ ಕೂಡ ಒಬ್ಬರು. ಇಂಥಾ ಉಪೇಂದ್ರ ಈಗ ತಮ್ಮ ಗುರುಗಳಾದ ಕಾಶಿನಾಥ್ ಅವರ ಬಗ್ಗೆ ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹೌದು, ಅಸಲಿಗೆ ಕಾಶಿನಾಥ್ ಅವರ ಮಗ ಅಭಿಮನ್ಯು ಕೆಲ ವರ್ಷಗಳ ಅಜ್ಞಾತವಾಸದ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆ ಪೈಕಿ ಸೂರಿ ಲವ್ಸ್ ಸಂಧ್ಯಾ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚಿಗೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಕೂಡ ನಡೆದಿದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಉಪೇಂದ್ರ, ಕಾಶಿನಾಥ್ ಅವರ ಜೊತೆ ಕಳೆದ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಬ್ಬ ವ್ಯಕ್ತಿ ಕಾಶಿನಾಥ್ ಅವರಿಗೆ ಆಸಿಡ್ ಹಾಕಲು ಬಂದಿದ್ದ ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ಈ ಕುರಿತು ಮಾತನಾಡಿರುವ ಉಪೇಂದ್ರ ಅದೊಂದು ದಿನ ನಾವು ಇಬ್ಬರೇ ಇದ್ವಿ, ಅವತ್ತು ಬೇರೆ ಯಾರು ಇರಲಿಲ್ಲ, ಆಗ ಚಿತ್ರರಂಗದಲ್ಲಿಯೇ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಬಂದ, ಅವರ ಎದುರುಗಡೆ ಕುಳಿತುಕೊಂಡು ನನಗೆ 25,000, 50,000 ಹಣ ಕೊಡಬೇಕು ನೀವು ಎಂದು ಕಾಶಿನಾಥ್ ಅವರಿಗೆ ಹೇಳಿದ, ಅದಕ್ಕೆ ಕಾಶಿನಾಥ್ ಅವರು ಯಾಕೆ ಎನ್ನುವ ಪ್ರಶ್ನೆ ಕೇಳಿದರು. ನಾನ್ಯಾಕೇ ಕೊಡಬೇಕು ಕೊಡಲ್ಲ ಎಂದು ಹೇಳಿದರು, ಆಗ ಆ ವ್ಯಕ್ತಿ ಆ್ಯಸಿಡ್ ಬಾಟಲಿಯನ್ನು ತೋರಿಸಿ ನಾಳೆ ಬೆಳಿಗ್ಗೆ 10-30ಕ್ಕೆ ನಾನು ಮತ್ತೆ ಬರ್ತಿನಿ ನೀವು ಕೊಡಲಿಲ್ಲ ಅಂದರೆ ಆ್ಯಸಿಡ್ ಹಾಕ್ತೀನಿ ಎಂದು ಹೇಳಿ ಹೊರಟು ಹೋದ ಎಂದಿದ್ದಾರೆ.
ಮುಂದುವರೆದು ನಾನು ಆಗ ಕಾಲೇಜ್ನಲ್ಲಿ ಓದ್ತಿದ್ದೆ ಹೀಗಾಗಿ ಸರ್ ನಾಳೆ ನಾನು ಕೆಲ ಹುಡುಗರನ್ನು ಕರ್ಕೊಂಡು ಬರ್ತೆನೆ ಎಂದು ಹೇಳಿದೆ ಅದಕ್ಕೆ ಅವರು ನೀನು ಸುಮ್ನೆ ಇರು ನೀನು ತಲೆ ಕೆಡಿಸಿಕೊಳ್ಳಬೇಡ ನಾಳೆ ಬಾಗಿಲು ತೆರದೆ ಇರುತ್ತೆ, ಗೇಟ್ ಓಪನ್ ಇರುತ್ತೆ, ಅವನು ಬರಲಿ ನೀನು ತಲೆ ಕೆಡಿಸಿಕೊಳ್ಳಬೇಡ, ನೀನು ನನ್ನ ಜೊತೆ ಕೂರಬೇಡ ದೂರ ಕುಂತಿರು ಎಂದು ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಮರುದಿನ ಹೇಳಿದ ಸಮಯಕ್ಕೆ ಸರಿಯಾಗಿ ಆ ವ್ಯಕ್ತಿ ಮತ್ತೆ ಬಂದ, ಬಾಟ್ಲಿಯನ್ನು ಹೊರಗೆ ಇಟ್ಟು ಮತ್ತೆ ದುಡ್ಡು ಕೇಳಿದ ಆಗ ಕೂಡ ಕಾಶಿನಾಥ್ ಅವರು ಕೊಡಲ್ಲ ಯಾಕೆ ಕೊಡಬೇಕು ನೀನೇದಾರೂ ಕೆಲಸ ಮಾಡಿದ್ದೀಯಾ ಎಂದು ಪ್ರಶ್ನೆ ಕೇಳಿದರು, ಕೊಡಲ್ಲ ಅಂದರು. ಆಗ ಅವನು ಅವರ ಮುಖ ನೋಡಿದ ಎದ್ದು ಹೋದ, ಹೀರೋಯಿಸಂ ಅಂದರೆ ಇದೇ ಅಲ್ವಾ ಎಂದು ಹೇಳಿದ್ದಾರೆ ಉಪೇಂದ್ರ. ಆ ಧೈರ್ಯ ಇದೆಯಲ್ಲ ಅದನ್ನು ಮೆಚ್ಚಬೇಕು ಎಂದು ಹೇಳಿದ್ದಾರೆ.
ಇನ್ನು ಕಾಶಿನಾಥ್ ಅವರ ಮಗ ಅಭಿಮನ್ಯು ಅವರ ಅಭಿನಯವನ್ನು ಕೂಡ ಕೊಂಡಾಡಿರುವ ಉಪೇಂದ್ರ ಚಿತ್ರದ ಕ್ಲೈಮ್ಯಾಕ್ಸ್ ನೋಡಿದರೆ ಹೃದಯ ಕಿತ್ತು ಬರುತ್ತೆ ಅಷ್ಟೊಂದು ಅದ್ಭುತವಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಡೀ ಚಿತ್ರತಂಡಕ್ಕೆ ಇದೇ ವೇಳೆ ಶುಭಾಶಯವನ್ನು ಕೂಡ ಕೋರಿದ್ದಾರೆ.


Click it and Unblock the Notifications











