ಹಂಸಲೇಖಗೆ ರಾಷ್ಟ್ರ-ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ, ಗೀತೆಗಳು
''ಸರಸ್ವತಿ ಪುತ್ರ, ಅಕ್ಷರಗಳ ಮಿತ್ರ. ಕಲೆಗೆ ಸಂಗೀತಕ್ಕೆ ತುಂಬ ಹತ್ರ. ಇವರು ಎಂದಿಗೂ ಭಾಷೆ ಭಾವನೆಗಳಿಗೆ ದೇಸಿ ಸೂತ್ರ. ಅವರೇ ಶ್ರೀ ಹಂಸಲೇಖ ಅನ್ನೋ ಜ್ಞಾನದ, ತಂತ್ರಜ್ಞಾನದ, ನಾದದ, ವೇದದ, ಪದ್ಯದ, ಗದ್ಯದ, ಜಾನಪದದ, ಜನಪದದ ಸೊಗಡಿನ ಪ್ರತಿಭಾ ಸಾಗರ....,'' ನಾದಬ್ರಹ್ಮ ಹಂಸಲೇಖರ ಕುರಿತು ನಿರ್ದೇಶಕ ರಘುರಾಮ್ ಹೇಳಿರುವ ಅರ್ಥಗರ್ಭಿತ ಮಾತುಗಳು.
ದೇಸಿದೊರೆ ಹಂಸಲೇಖ ಇಂದು 70ನೇ ವರ್ಷ ಜನುಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಸುಮಾರು ನಾಲ್ಕುವರೆ ದಶಕದಿಂದಲೂ ಚಲನಚಿತ್ರ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ದಿಗ್ಗಜ ತಂತ್ರಜ್ಞರಿಗೆ ಅಭಿಮಾನಿಗಳು ಪ್ರೀತಿಯಿಂದ ಶುಭಕೋರುತ್ತಿದ್ದಾರೆ. ಹಂಸಲೇಖರ ಒಂದೊಂದು ಹಾಡುಗಳು ಇಂದಿಗೂ ಅಚ್ಚುಮೆಚ್ಚು. ಅದರಲ್ಲೂ ರವಿಚಂದ್ರನ್-ಹಂಸಲೇಖ ಜೋಡಿಯಲ್ಲಿ ಮೂಡಿಬಂದ ಹಾಡುಗಳು ಮರೆಯಲು ಸಾಧ್ಯವಿಲ್ಲ.
ಹಂಸಲೇಖರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿಗಳು ಸಿಕ್ಕಿವೆ. ನಾದಬ್ರಹ್ಮನಿಗೆ ಈ ಪ್ರಶಸ್ತಿಗಳನ್ನು ತಂದುಕೊಟ್ಟ ಸೂಪರ್ ಹಿಟ್ ಗೀತೆಗಳು ಹಾಗೂ ಸಿನಿಮಾಗಳು ಯಾವುದು ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ...

ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ
1995ರಲ್ಲಿ ತೆರೆಕಂಡಿದ್ದ 'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದರು. ಆ ವರ್ಷ ಪ್ರಕಟವಾದ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಅವಾರ್ಡ್ ಹಂಸಲೇಖರಿಗೆ ಲಭಿಸಿತು. ಇದುವರೆಗೂ ನಾದಬ್ರಹ್ಮರಿಗೆ ಸಿಕ್ಕಿದ ಮೊದಲ ಹಾಗೂ ಏಕೈಕ ರಾಷ್ಟ್ರ ಪ್ರಶಸ್ತಿ. ವಿಶೇಷ ಅಂದ್ರೆ ಇದೇ ಸಿನಿಮಾದ 'ಉಮಾಂಡು ಗಮಾಂಡು...' ಹಾಡಿಗಾಗಿ ಎಸ್ಪಿಬಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ಸಂಗೀತ ನಿರ್ದೇಶನಕ್ಕಾಗಿ 3 ರಾಜ್ಯ ಪ್ರಶಸ್ತಿ
1994ರಲ್ಲಿ 'ಹಾಲುಂಡ ತವರು' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಮೊದಲ ಸಲ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿತು. ನಂತರ 1995ರಲ್ಲಿ 'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಹಾಗೂ 2005ರಲ್ಲಿ ತೆರೆಕಂಡ 'ನೆನಪಿರಲಿ' ಸಿನಿಮಾಗೆ ಮತ್ತೆ ರಾಜ್ಯ ಪ್ರಶಸ್ತಿ ದೊರೆಯಿತು.

ಸಾಹಿತ್ಯಕ್ಕಾಗಿ 2 ರಾಜ್ಯ ಪ್ರಶಸ್ತಿ
'ಹಾಲುಂಡ ತವರು' ಚಿತ್ರದ ಗೀತರಚನೆಗಾಗಿ ನಾದಬ್ರಹ್ಮನಿಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಅದಾದ ಬಳಿಕ 'ಶ್ರೀಮಂಜುನಾಥ' ಚಿತ್ರದ ಹಾಡಿಗಾಗಿಯೂ ಅತ್ಯುತ್ತಮ ಗೀತರಚನೆಕಾರ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಶ್ರೀಮಂಜುನಾಥ ಸಿನಿಮಾದ ಸಂಗೀತಕ್ಕಾಗಿ ಆಂಧ್ರ ಸರ್ಕಾರ ನೀಡುವ ಪ್ರತಿಷ್ಠಿತ 'ನಂದಿ ಪ್ರಶಸ್ತಿ' ಸಹ ಸಿಕ್ಕಿದೆ.
Recommended Video

ಆರು ಬಾರಿ ಫಿಲಂ ಫೇರ್
ನೆನಪಿರಲಿ, ಪ್ರೀತ್ಸೆ, ಯಾರೇ ನೀನು ಚೆಲುವೆ, ಹಾಲುಂಡ ತವರು, ಆಕಸ್ಮಿಕ, ರಾಮಾಚಾರಿ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಒಟ್ಟು ಆರು ಬಾರಿ ಸೌತ್ ಫಿಲಂ ಫೇರ್ ಪ್ರಶಸ್ತಿ ಸಿಕ್ಕಿದೆ. 2014ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಿದೆ.


Click it and Unblock the Notifications











