'KGF' ಬಗ್ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ನುಡಿದಿದ್ದ ಭವಿಷ್ಯ ಏನು?
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಟನೆಯ 'KGF' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಕನ್ನಡ ಸಿನಿಮಾ ಕೂಡ 1000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ತೋರಿಸಿದ ಸಿನಿಮಾ ಇದು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿತ್ತು.
2015ರಲ್ಲಿ ಯಶ್ 'KGF' ಚಿತ್ರಕ್ಕೆ ಸಹಿ ಮಾಡಿದ್ದರು. ಬರೋಬ್ಬರಿ 3 ವರ್ಷಗಳ ಬಳಿಕ ಸಿನಿಮಾ ತೆರೆಗೆ ಬಂದಿತ್ತು. ಫಸ್ಟ್ ಚಾಪ್ಟರ್ ಬ್ಲಾಕ್ಬಸ್ಟರ್ ಹಿಟ್ ಆಗಿ 4 ವರ್ಷಗಳ ನಂತರ ಚಾಪ್ಟರ್-2 ತೆರೆಗೆ ಬಂದಿತ್ತು. 'ಮಿ. & ಮಿ ರಾಮಾಚಾರಿ' ಬಳಿಕ ನೀಲ್ ಜೊತೆ ಯಶ್ ಕೈಜೋಡಿಸಿದ್ದರು. ನಡುವೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಬಂದು ಹೋಯಿತು.

ಬಹಳ ತಡವಾಗಿಯೇ 'KGF' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದ ಫಸ್ಟ್ ಟ್ರೈಲರ್ ನೋಡಿದಾಗಲೇ ಇದು ತೆರೆಮೇಲೆ ಮ್ಯಾಜಿಕ್ ಮಾಡುವ ಸುಳಿವು ಸಿಕ್ಕಿತ್ತು. ಆದರೆ ಅದಕ್ಕಿಂತ ಮುಂಚೆ ಯಶ್ ಈ ಚಿತ್ರದ ಸಾಮಾನ್ಯ ಸಿನಿಮಾ ಅಲ್ಲ, ದೊಡ್ಡದಾಗಿ ಏನೋ ಮಾಡುತ್ತದೆ ಎಂದುಕೊಂಡಿದ್ದರು. ಅವರ ಲೆಕ್ಕಾಚಾರ ಸುಳ್ಳಾಗಲಿಲ್ಲ. ಕನ್ನಡ ಚಿತ್ರವನ್ನಯ ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದು ಗೆದ್ದಿದ್ದರು.
ವಿಜಯ್ ಕಿರಗಂದೂರ್ ಹಾಗೂ ಪ್ರಶಾಂತ್ ನೀಲ್ಗಿಂತಲೂ ಯಶ್ ಚಿತ್ರವನ್ನು ಬಹಳ ನಂಬಿದ್ದರು. ಅದಕ್ಕೆ ಪ್ಯಾನ್ ಇಂಡಿಯಾ ಕನಸು ಕಂಡಿದ್ದರು. ಯಶ್ ಮಾತ್ರವಲ್ಲ ಶ್ರೀಮುರಳಿ ಕೂಡ 'KGF' ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಎಂದು ಮೊದಲೇ ಭವಿಷ್ಯ ನುಡಿದಿದ್ದರಂತೆ. ಈ ವಿಚಾರವನ್ನು ತೆಲುಗು ಸಂದರ್ಶನವೊಂದರಲ್ಲಿ ರೋರಿಂಗ್ ಸ್ಟಾರ್ ಬಿಚ್ಚಿಟ್ಟಿದ್ದಾರೆ.
"KGF ಸಿನ್ಮಾ ಸೋಲುತ್ತದೆ ಎಂದು ನನಗೆ ಅನ್ನಿಸಿರಲಿಲ್ಲ. ಇಡೀ ತಂಡದಲ್ಲಿ ನಾನೇ ಮೊದಲಿಗ ಅನ್ನಿಸುತ್ತೆ, ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಬೇಕು ಎಂದಿದ್ದು. ಕುಟುಂಬ ಸದಸ್ಯರ ಗೆಟ್ ಟು ಗೆದರ್ ಇತ್ತು. ಬರೀ KGF ಶೋ ರೀಲ್ ನೋಡಿ, ನೀವು ಈ ಸಿನ್ಮಾ ಪ್ಯಾನ್ ಇಂಡಿಯಾ ಮಾಡದಿದ್ದರೆ ನಮ್ಮಂತ ಮೂರ್ಖರು ಇರುವುದಕ್ಕೆ ಸಾಧ್ಯವಿಲ್ಲ, ಎಂದು ನಾನು ಅವತ್ತೆ ಹೇಳಿದ್ದೆ.
ನನ್ನ ಮಾತು ಕೇಳಿ ಕುಟುಂಬ ಸದಸ್ಯರು, ಏನು ಹಿಂಗೆ ಹೇಳ್ತೀಯಾ, ಹಾಗೆ ಹೀಗೆ ಎಂದು ಕೇಳಿದ್ದರು. ಅದು ಆ ರೀತಿ ಆಯಿತು. ಯಾರೂ ಕೂಡ 'KGF' ಚಿತ್ರವನ್ನು ತಡೆಯಲು ಸಾಧ್ಯವಾಗಲಿಲ್ಲ. ನಾನು ಹೇಳಿದ್ದೆ ಯಾರು ಈ ರೀತಿ ವಿಷ್ಯುವಲೈಸ್ ಮಾಡಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದೆ. ನಾನು- ಪ್ರಶಾಂತ್ ಮಾತನಾಡುವಾಗ ನನಗೆ ಗೊತ್ತು ಆತ ಎಷ್ಟು ಬುದ್ಧಿವಂತ, ಆತನ ವಿಷನ್ ಎಂಥದ್ದು ಎಂದು. ಹಾಗಾಗಿ ಯಾರಿಗೆ ಗೊತ್ತಿತ್ತೋ ಬಿಡ್ತೋ ನನಗೆ 'KGF' ದೊಡ್ಡ ಹಿಟ್ ಆಗುತ್ತದೆ ಎಂದು ಗೊತ್ತಾಗಿತ್ತು. ಮುಂದೆ ಅದೇ ಆಯಿತು.

ಯಶ್ ನಟನೆ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಅದರಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಎಲ್ಲಾ ಕಲಾವಿದರಿಂದ ಒಳ್ಳೆ ಕೆಲಸ ತೆಗೆಸಿದ್ದರು. ಹಾಗಾಗಿ 'KGF- 1' ಹಾಗೂ 'KGF- 2' ಎರಡೂ ಚಿತ್ರಗಳು ಕೂಡ ಆ ಮಟ್ಟಿಗೆ ಹಿಟ್ ಆಯಿತು ಎಂದು ಶ್ರೀಮುರಳಿ ವಿವರಿಸಿದ್ದಾರೆ.
ಸದ್ಯ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 31ಕ್ಕೆ ಸಿನಿಮಾ ತೆರೆಗೆ ಬರಲಿದೆ. ಪ್ರಶಾಂತ್ ನೀಲ್ ಕತೆ ಬರೆದಿದ್ದು ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದೆ.


Click it and Unblock the Notifications











