2021 ವಿಶೇಷ: ಈ ವರ್ಷ ವಿವಾಹ ಬಂಧನಕ್ಕೆ ಒಳಗಾದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿವರು
2021 ಸ್ಯಾಂಡಲ್ವುಡ್ ಪಾಲಿಗೆ, ಚಂದನವನದ ಸೆಲೆಬ್ರಿಟಿಗಳ ಪಾಲಿಗೆ ಮಿಶ್ರಫಲ ನೀಡಿದ ವರ್ಷವೆನ್ನಬಹುದು. 2020 ರ ಕೊರೊನಾ ಮುಂದುವರೆದರೂ ಚಿತ್ರಮಂದಿರಗಳು ತೆರೆದು ತುಸುವಾದರೂ ಉಸಿರಾಡುವಂತಾಯಿತು.
ಕೊರೊನಾ ಮಹಾಮಾರಿ ನಡುವೆಯೂ ಸಾಕಷ್ಟು ಧನಾತ್ಮಕ ಸಂಗತಿಗಳು ಈ ವರ್ಷ ಚಂದನವನದಲ್ಲಿ ನಡೆದವು. ಹಲವು ಜೋಡಿಗಳು ಈ ವರ್ಷ ವಿವಾಹ ಬಂಧನಕ್ಕೆ ಕಾಲಿರಿಸಿದವು.
ಕೆಲವರು ಅದ್ಧೂರಿಯಾಗಿ ವಿವಾಹವಾದರೆ ಕೆಲವರು ಗುಟ್ಟಾಗಿ ವಿವಾಹವಾದರು. ಒಂದಿಬ್ಬರ ವಿವಾಹವೇ ವಿವಾದವೂ ಆಗಿಬಿಟ್ಟಿತು. ಒಟ್ಟಾರೆ ಸ್ಯಾಂಡಲ್ವುಡ್ನಲ್ಲಿ ಈ ವರ್ಷ ಮದುವೆ ಕಲರವ ಜೋರಾಗಿಯೇ ಇತ್ತು. ಸ್ಯಾಂಡಲ್ವುಡ್ ದೊಡ್ಡ ತಾರೆಯರು, ತಾರೆಯರ ಮಕ್ಕಳು, ಕಿರಿತೆರೆ ತಾರೆಯರು ಹೀಗೆ ಹಲವರು ಈ ವರ್ಷ ವಿವಾಹವಾದರು. ಪಟ್ಟಿ ಇಲ್ಲಿದೆ ನೋಡಿ.

ರಮೇಶ್ ಅರವಿಂದ್ ಪುತ್ರಿಯ ವಿವಾಹ
ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾರ ವಿವಾಹ 2020ರ ಡಿಸೆಂಬರ್ 28ರಂದೇ ಆಯಿತು. ಆದರೆ ಆರತಕ್ಷತೆ ಜನವರಿ ತಿಂಗಳಲ್ಲಿ ನಡೆಯಿತು. ಚಿತ್ರರಂಗ ಹಾಗೂ ರಾಜಕೀಯ ರಂಗದ ಹಲವು ಗಣ್ಯರು ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ನಟ ಯಶ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಇನ್ನೂ ಹಲವರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಷ್ಟೆ ಅಲ್ಲದೆ ಡ್ಯಾನ್ಸ್ ಸಹ ಮಾಡಿದ್ದು ಗಮನ ಸೆಳೆಯಿತು.

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ವಿವಾಹ
ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಇದೇ ವರ್ಷಾರಂಭದಲ್ಲಿ ವಿವಾಹವಾದರು. ಫೆಬ್ರವರಿ 14 ರಂದು ಈ ತಾರಾ ಜೋಡಿ ವಿವಾಹ ಬಂಧನಕ್ಕೆ ಒಳಗಾದರು. ಕೋವಿಡ್ ನಿಯಮದ ನಡುವೆ ಕೆಲವೇ ಕುಟುಂಬದವರೊಡನೆ ರಂಗು-ರಂಗಿನ ವೇದಿಕೆಯಲ್ಲಿ ಈ ತಾರಾ ಜೋಡಿ ಮದುವೆಯಾದರು. ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈ ವರ್ಷ ಪ್ರೀತಿಗೆ ವಿವಾಹದ ಮುದ್ರೆ ಒತ್ತಿದರು.

ಎಸ್ ನಾರಾಯಣ್ ಪುತ್ರನ ವಿವಾಹ
ಕನ್ನಡದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಮನೆ ಮದುವೆ ಸಂಭ್ರಮದಿಂದ ಕೂಡಿದೆ. ನಟ, ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ್ ಅವರ ಪುತ್ರ ಪವನ್ ಕುಮಾರ್ ಇಂದು ದಾಂಪತ್ಯ ಜೀವನ ಆರಂಭಿಸಿದರು. ಫೆಬ್ರವರಿ 21ರ ಬೆಳಗ್ಗೆ 7.30 ರಿಂದ 8.30 ಗಂಟೆಗೆ ನಡೆದ ಶುಭ ಲಗ್ನದಲ್ಲಿ ಪವಿತ್ರಾ ಅವರನ್ನು ಪವನ್ ಕುಮಾರ್ ವರಿಸಿದ್ದಾರೆ. ನಂತರ 10 ಗಂಟೆಗೆ ಆರತಕ್ಷತೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು. ಎಸ್ ನಾರಾಯಣ್ ಅವರ ಪುತ್ರನ ವಿವಾಹಕ್ಕೆ ಆಗ ಮುಖ್ಯಮಂತ್ರಿ ಆಗಿದ್ದ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಗಣ್ಯರು ಆಗಮಿಸಿದ್ದರು. ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಹ ಆಗಮಿಸಿದ್ದರು.

ಚೈತ್ರಾ ಕೊಟೂರು ವಿವಾಹ
ಮಾರ್ಚ್ 29ರಂದು ಮಾಜಿ ಬಿಗ್ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ನಾಗಾರ್ಜುನ ಎಂಬುವರ ಜೊತೆ ಸರಳವಾಗಿ ವಿವಾಹವಾದರು. ಆದರೆ ವಿವಾಹದ ದಿನವೇ ಇವರ ಪ್ರಕರಣ ಠಾಣೆ ಮೆಟ್ಟಿಲೇರಿತು. ಇದು ಬಲವಂತದ ಮದುವೆ ಎಂದು ನಾಗಾರ್ಜುನ ಹಾಗೂ ಕುಟುಂಬದವರು ಆರೋಪಿಸಿದರು. ನಂತರ ನಡೆದ ಬೆಳವಣಿಗೆಗಳಿಂದ ಚೈತ್ರಾ ಕೊಟೂರು ಆತ್ಮಹತ್ಯೆ ಯತ್ನ ಮಾಡಿದರು ಆದರೆ ಪ್ರಾಣಾಪಾಯದಿಂದ ಪಾರಾದರು. ಬಳಿಕ ಚೈತ್ರಾ ಕೊಟೂರು ಸಹ ನಾಗಾರ್ಜುನ್ ಹಾಗೂ ಕುಟುಂಬದವರ ವಿರುದ್ಧ ದೂರು ನೀಡಿದರು.

ಚಂದನ್-ಕವಿತಾ ಗೌಡ
ಕೊರೊನಾ ವೈರಸ್ ಭೀತಿಯ ನಡುವೆಯೇ ನಟ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಮೇ 14ರಂದು ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಲಾಕ್ಡೌನ್ ನಿಯಮದಂತೆ ಸರಳವಾಗಿ ವಿವಾಹ ಮಾಡಿಕೊಂಡರು. ಇಬ್ಬರು ಮಾಸ್ಕ್ ಧರಿಸಿ ಮದುವೆ ಆಗಿದ್ದು ವಿಶೇಷ. ಚಂದನ್ ಕುಮಾರ್ ಅವರು 'ಲಕ್ಷ್ಮಿ ಬಾರಮ್ಮ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕವಿತಾ ಗೌಡ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂದನ್ ಅವರು ಇತ್ತೀಚೆಗಷ್ಟೆ ಬಿರಿಯಾನಿ ಹೋಟೆಲ್ ಸಹ ಆರಂಭಿಸಿದ್ದಾರೆ.

ಪ್ರಣಿತಾ ಸುಭಾಷ್ ವಿವಾಹ
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಬಹಳ ಗುಟ್ಟಾಗಿ ಮದುವೆಯಾದರು. ನಟಿ ಪ್ರಣಿತಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮೊದಲೇ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಅದನ್ನು ಅಲ್ಲಗಳೆದ ಪ್ರಣಿತಾ ಆ ಬಳಿಕ ನಿಗದಿತ ದಿನಾಂಕದಂದೇ ವಿವಾಹವಾದರು. ಕುಟುಂಬ ಸದಸ್ಯರು ಮತ್ತು ಅತ್ಯಾಪ್ತರು ಮಾತ್ರವೇ ಮದುವೆ ಸಮಾರಂಭದಲ್ಲಿ ಹಾಜರಿದ್ದರು. ಕನಕಪುರ ರಸ್ತೆಯ ರೆಸಾರ್ಟ್ನಲ್ಲಿ, ಉದ್ಯಮಿ ನಿತಿನ್ ರಾಜಾ ಎಂಬುವರೊಟ್ಟಿಗೆ ಪ್ರಣಿತಾ ಸುಭಾಷ್ ಸಪ್ತಪದಿ ತುಳಿದರು.

ದಾನಿಶ್ ಸೇಠ್ ವಿವಾಹ
ಕನ್ನಡದ 'ಹಂಬಲ್ ಪೊಲಿಟೀಶಿಯನ್ ನಾಗರಾಜ್', 'ಫ್ರೆಂಚ್ ಬಿರಿಯಾನಿ' ಸಿನಿಮಾಗಳಲ್ಲಿ ನಟಿಸಿರುವ ನಟ, ನಿರೂಪಕ, ಹಾಸ್ಯ ಕಲಾವಿದ ದಾನಿಶ್ ಸೇಠ್ ಈ ವರ್ಷ ವಿವಾಹ ಬಂಧನಕ್ಕೆ ಒಳಗಾದರು. ತಮ್ಮ ಬಹುವರ್ಷಗಳ ಗೆಳತಿ ಆದ್ಯಾ ರಂಗನಾಥ್ ಜೊತೆಗೆ ಅತ್ಯಂತ ಸರಳವಾಗಿ ದಾನಿಶ್ ಸೇಠ್ ವಿವಾಹವಾದರು. ಉಂಗುರಗಳನ್ನು ಬದಲಾಯಿಸಿಕೊಂಡು, ನೊಂದಣಿ ಕಚೇರಿಯಲ್ಲಿ ಹಾರ ಬದಲಿಸಿ ತಮ್ಮ ವಿವಾಹವನ್ನು ನೊಂದಣಿ ಮಾಡಿಸಿಕೊಂಡರು ಈ ಜೋಡಿ. ನಂತರ ಆಪ್ತರಿಗಾಗಿ ಸರಳ ಕಾರ್ಯಕ್ರಮವನ್ನು ಆಯೋಜಿಸಿದ್ದರು. ದಾನಿಶ್ ಸೇಠ್ ಪ್ರಸ್ತುತ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಬೇಕಿದೆ.

ವಿವಾಹವಾದ ಮಂಸೋರೆ
'ರಾಷ್ಟ್ರ ಪ್ರಶಸ್ತಿ' ವಿಜೇತ ನಿರ್ದೇಶಕ ಮಂಸೋರೆ ಆಗಸ್ಟ್ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜುಲೈ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಂಸೋರೆ ಸ್ವಾತಂತ್ರ್ಯ ದಿನಾಚರಣೆಯ ದಿನ ಅಖಿಲಾ ಜೊತೆ ಸಪ್ತಪದಿ ತುಳಿದರು. ಸರಳವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಅಖಿಲಾ ಜೊತೆ ಮಂಸೋರೆ ವೈವಾಹಿಕ ಬದುಕಿನ ಪಯಣ ಆರಂಭಿಸಿದರು.


Click it and Unblock the Notifications











