"ಒಬ್ಬ 300-400 ಪ್ರೇಮಪತ್ರ ಬರೆದಿದ್ದ, ಒಮ್ಮೆ ಜಿರಳೆ ಇಟ್ಟು ಪತ್ರ ಕಳಿಸಿದ್ದ"; ಭಾವನಾ
'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಖ್ಯಾತಿಯ ನಟಿ ಭಾವನಾ ರಾಮಣ್ಣ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಮಲಯಾಳಂ ಚಿತ್ರವೊಂದರಲ್ಲಿ ನಟಿಸಿದ್ದರು. ಕಳೆದ ವರ್ಷ ಆ ಸಿನಿಮಾ ಬಿಡುಗಡೆ ಆಗಿತ್ತು.
ತಮಿಳು, ತೆಲುಗು ಚಿತ್ರಗಳಲ್ಲಿ ಕೂಡ ಭಾವನಾ ಬಣ್ಣ ಹಚ್ಚಿದ್ದಾರೆ. 'ನೀ ಮುಡಿದ ಮಲ್ಲಿಗೆ' ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದ ಆಕೆ 'ಭಾಗೀರಥಿ' ಹಾಗೂ 'ಕ್ಷಾಮ' ಚಿತ್ರಗಳಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಡೀ ಗ್ಲಾಮರಸ್ ಮಾತ್ರವಲ್ಲ ಗ್ಲಾಮರಸ್ ಪಾತ್ರಗಳಲ್ಲಿ ಕೂಡ ಆಕೆ ನಟಿಸಿದ್ದು ಇದೆ. 1996ರಲ್ಲಿ 'ಮಾರಿಬಲೆ' ಎನ್ನುವ ತುಳು ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು.

ಸದ್ಯ ಭಾವನಾ ರಾಮಣ್ಣ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಆದರೆ ಮೊನ್ನೆ ಮೊನ್ನೆ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಆಕೆ ಮಾತನಾಡಿ ಸುದ್ದಿ ಆಗಿದ್ದರು. ನಟ ದರ್ಶನ್ ಪರ ಬೆಂಬಲ ಸೂಚಿಸಿದ್ದರು. ಒಂದು ವೇಳೆ ದರ್ಶನ್ ತಪ್ಪು ಮಾಡಿದ್ದರೂ ಅವರ ಪರ ನಿಲ್ಲುತ್ತೇನೆ ಎಂದು ಹೇಳಿದ್ದರು. ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್ನಲ್ಲಿ ಭಾವನಾ ಮಾತನಾಡಿದ್ದಾರೆ. ಸಿನಿಮಾ, ವೈಯಕ್ತಿಕ ಜೀವನದ ಬಗ್ಗೆ ಮನದಾಳ ತೆರೆದಿಟ್ಟಿದ್ದಾರೆ.
ನಟಿ ಭಾವನಾ ಇನ್ನು ಮದುವೆ ಆಗಿಲ್ಲ. ಅದಕ್ಕೆ ಕಾರಣ ಏನು ಎನ್ನವುದನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ನನ್ನ ಜೀವನದಲ್ಲೂ ವಯಸ್ಸಿಗೆ ತಕ್ಕಂತೆ ಪ್ರೀತಿ ಆಗಿತ್ತು. ಅದು 24 ವರ್ಷದ ಮೇಲೆ. ಅದಕ್ಕಿಂತ ಮುಂದೆ ಪ್ರೀತಿಯ ಬಗ್ಗೆ ಯಾವುದೇ ಗಮನ ಇರಲಿಲ್ಲ. ನನಗೆ ಬೇರೆ ಆಕಾಂಕ್ಷೆಗಳು ಜಾಸ್ತಿ ಇತ್ತು. ಡ್ಯಾನ್ಸ್ ಕಡೆ ಹೆಚ್ಚು ಒಲವಿತ್ತು. ನನ್ನ ಮೇಲೆ ನನ್ನ ಪೋಷಕರು, ಗುರುಗಳಿಗೆ ಹೆಚ್ಚು ಭರವಸೆ ಇತ್ತು. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಗೀತಿ ಆಲೋಚನೆ ಬರಲಿಲ್ಲ ಎಂದಿದ್ದಾರೆ.
ನಿಜ ಹೇಳಬೇಕು ಅಂದ್ರೆ ನನ್ನ ಹಿಂದೆ ಸಾಕಷ್ಟು ಹುಡುಗರು ಬಿದ್ದಿದ್ದರು. ಆದರೆ ನಮ್ಮಮ್ಮ ಅದನ್ನು ಸರಿಯಾಗಿ ನಿಭಾಯಿಸಿದರು. ಬಹಳ ಶಿಸ್ತುಬದ್ಧವಾಗಿ ಬೆಳೆಸಿದರು. ಹುಡುಗರು ಯಾರು ಬೇಕಾದರೂ ಮನೆಗೆ ಬಂದು ಮಾತನಾಡಬಹುದು. ಆ ರೀತಿ ಸ್ವಾತಂತ್ರ ಅಮ್ಮ ಕೊಟ್ಟಿದ್ದರು. ನಾನು ಎನ್ಸಿಸಿಯಲ್ಲಿ ಇದ್ದಾಗ ಗೋವಾದ ಸ್ನೇಹಿತ ಒಬ್ಬ ಇದ್ದ. ಅವನು ಪತ್ರಗಳನ್ನಯ ಬರೆಯುತ್ತಿದ್ದ. ದಿನಕ್ಕೆ ಎರಡರಂತೆ 300-400 ಪತ್ರ ಬರೆದಿದ್ದ. ಒಮ್ಮೆ ಸತ್ತ ಜಿರಳೆಯನ್ನು ಹಾಕಿ ಕಳುಹಿಸಿದ್ದ ಎಂದು ಭಾವನಾ ನೆನಪಿಸಿಕೊಂಡಿದ್ದಾರೆ.

ಈಗ ಅಂತಹ ಪ್ರೀತಿ ಇದ್ಯಾ ಇಲ್ವಾ ಗೊತ್ತಿಲ್ಲ. ಪತ್ರ ಕೂಡ ಯಾರು ಬರೆಯುವುದಿಲ್ಲ. ಈಗ ಬರೀ ಡಿಜಿಟಲ್ ಮೆಸೇಜ್ ಬಂದಿದೆ. 'ಚಂದ್ರಮುಖಿ ಪ್ರಾಣಸಖಿ' ಚಿತ್ರದಲ್ಲಿ 'ಮೊದಲ ಪ್ರೇಮ ಪತ್ರವೇ' ಎನ್ನುವ ಹಾಡು ನನಗೆ ಸಿಕ್ಕಿತ್ತು. ಆ ಹಾಡು ಬಹಳ ಚೆನ್ನಾಗಿದೆ. ನನಗೆ ನಮ್ಮ ಪೋಷಕರು ಸಂಪೂರ್ಣ ಸ್ವಾತಂತ್ರ ಕೊಟ್ಟಿದ್ದರು. ನಿನಗೆ ಯಾರು ಒಳ್ಳೆಯವನು ಎನಿಸುತ್ತಾರೋ ಅವರನ್ನು ಬಾಳಸಂಗಾತಿಯಾಗಿ ಮಾಡಿಕೋ ಎಂದರು. ಆದರೆ ನಾನೇ ಸ್ವಲ್ಪ ಹಿಂದೆ ಉಳಿದೆ ಎಂದು ಭಾವನಾ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರೀತಿ, ಮದುವೆ ಏನಾದರೂ ಸಾಧ್ಯ ಇದ್ಯಾ? ಎನ್ನುವ ಪ್ರಶ್ನೆಗೆ ಗೊತ್ತಿಲ್ಲ ಎಂದು ಭಾವನಾ ಉತ್ತರಿಸಿದ್ದಾರೆ. ಬೇರೆ ಕಡೆ ಗೊತ್ತಿಲ್ಲ. ಆದರೆ ಬಾಲಿವುಡ್ ಭಿನ್ನ. ರಣ್ವೀರ್ ಸಿಂಗ್ - ದೀಪಿಕಾ ಪಡುಕೋಣೆ ಅವರನ್ನು ನೋಡಿದಂತೆ ಕನ್ನಡದಲ್ಲಿ ನಾವು ನೋಡಲು ಸಾಧ್ಯವಿಲ್ಲ. ಅದು ನನಗೆ ಅರ್ಥವಾಗುತ್ತದೆ. ಅದನ್ನು ತಪ್ಪು ಎಂದು ಕೂಡ ನಾನು ಹೇಳಲ್ಲ. ನಮ್ಮ ನೆಲದ ಸಂಪ್ರದಾಯ, ಸಂಸ್ಕೃತಿ ಆ ರೀತಿ ಇದೆ. ಅದನ್ನು ನಾನು ಗೌರವಿಸುತ್ತೀನಿ. ಆದರೆ ನಾನು ಸಿನಿಮಾವನ್ನು ಪ್ರೋಫೆಷನ್ ಆಗಿ ತಗೊಂಡಿದ್ದೀನಿ ಎಂದಿದ್ದಾರೆ.
ನನಗೆ ಒಂಟಿತನ ಅಂತ ಎಂದು ಅನಿಸಿಲ್ಲ. ಈಗ ಅಭ್ಯಾಸವಾಗಿದೆ. ಹಿಂದೆ ಕೆಲವೊಮ್ಮೆ ಅನ್ನಿಸಿತ್ತು. ನಮ್ಮ ಸ್ನೇಹಿತರು ಮದುವೆ ಆಗಿ ಅವರ ಫ್ಯಾಮಿಲಿ ಜೊತೆ ಸುತ್ತಾಡುವುದನ್ನು ನೋಡಿದಾಗ ನನಗೂ ಫ್ಯಾಮಿಲಿ ಇರಬೇಕಿತ್ತು ಎನಿಸಿದ್ದು ಇದೆ. ಆದರೆ ಈಗ ಆ ರೀತಿ ಅನ್ನಿಸಲ್ಲ. ಆದರೆ ಈಗ ಒಬ್ಬಳೇ ಸುತ್ತಾಡುವುದು ಇಷ್ಟವಾಗಲ್ಲ. ತಂಗಿ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದು ಭಾವನಾ ರಾಮಣ್ಣ ವಿವರಿಸಿದ್ದಾರೆ.


Click it and Unblock the Notifications











