Mayuri Kyatari: ಅವಮಾನ-ಸನ್ಮಾನ ಎರಡೂ ಅನುಭವಿಸಿರುವ ಮಯೂರಿ
ನಟಿ ಮಯೂರಿ ಬಿಗ್ಬಾಸ್ ಸೀಸನ್ 09 ಕ್ಕೆ ಪ್ರವೇಶ ಪಡೆದಿದ್ದಾರೆ. ಇದೊಂದು ಆಶ್ಚರ್ಯಕರ ಎಂಟ್ರಿ ಎಂದೇ ಹೇಳಬೇಕು. ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಂಡು, ಪತಿ-ಮಗುವಿನ ಆರೈಕೆಯಲ್ಲಿರುವ ಮಯೂರಿ ಬಿಗ್ಬಾಸ್ಗೆ ಬರುತ್ತಾರೆಂದು ಯಾರೂ ಊಹಿಸಿರಲಿಲ್ಲ.
ನಟಿ ಮಯೂರಿ, ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಕಠಿಣ ಸ್ಪರ್ಧಿಯಂತೂ ಆಗಲಿದ್ದಾರೆ. ನೋಡಲು ಸುಂದರ, ಮುಗ್ದವಾಗಿ ಕಂಡರೂ ಮಯೂರಿಯಲ್ಲಿ 'ಫೈಟರ್' ವ್ಯಕ್ತಿತ್ವ ಅಡಗಿದೆ. ಹುಬ್ಬಳ್ಳಿಯ ಗಂಡುಮೆಟ್ಟಿದ ನೆಲದ ಈ ಹುಡುಗಿ ಮುಗ್ದ ಹೌದು ಆದರೆ ಅವಶ್ಯಕತೆ ಬಂದಾಗ ಸಿಡಿದು ನಿಲ್ಲಬಲ್ಲರು ಸಹ.
ಕಿರುತೆರೆ-ಹಿರಿತೆರೆ ಎರಡಲ್ಲೂ ಹೆಸರು ಮಾಡಿರುವ ಮಯೂರಿ. 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಿಂತು ಹೋಗಿ ವರ್ಷಗಳೇ ಆಗಿದ್ದರೂ ಸಹ ಈಗಲೂ ಮಯೂರಿಯನ್ನು 'ಅಶ್ವಿನಿ ನಕ್ಷತ್ರ' ನಟಿ ಎಂದೇ ಗುರುತಿಸುವುದು ಅಷ್ಟರ ಮಟ್ಟಿಗೆ ತಮ್ಮ ಮೊದಲ ಪಾತ್ರದಿಂದಲೇ ಜನರನ್ನು ಸೆಳೆದಿದ್ದರು ಈ ನಟಿ.
ವಿಪರ್ಯಾಸವೆಂದರೆ 'ಅಶ್ವಿನಿ ನಕ್ಷತ್ರ'ದ ಬಳಿಕ ಕಿರುತೆರೆಯಿಂದ ದೂರಾದರು ಮಯೂರಿ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿಬಿಟ್ಟರು. ದೊಡ್ಡ ಬ್ಯಾನರ್ಗಳ ಜೊತೆ ಸಿನಿಮಾಗಳನ್ನು ಮಾಡಿದ ಮಯೂರಿ. ಇತ್ತೀಚೆಗೆ ಚಿತ್ರರಂಗದಿಂದ ತುಸು ದೂರ ಉಳಿದಿದ್ದರು. ಇದೀಗ 'ವೀಲ್ ಚೇರ್ ರೋಮಿಯೊ' ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದ ನಟಿ ಈಗ ಹಠಾತ್ತನೆ ಬಿಗ್ಬಾಸ್ಗೆ ಕಾಲಿಟ್ಟು ಶಾಕ್ ನೀಡಿದ್ದಾರೆ.

ಹುಬ್ಬಳ್ಳಿಯ ಸಾಮಾನ್ಯ ಕುಟುಂಬದ ಹುಡುಗಿ ಮಯೂರಿ
ಮಯೂರಿ ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ಮೂಲತಃ ಹುಬ್ಬಳ್ಳಿಯವರಾದ ಮಯೂರಿ ತನ್ನ ಪದವಿ ವರೆಗಿನ ಶಿಕ್ಷಣವನ್ನು ಹುಬ್ಬಳ್ಳಿಯಲ್ಲೇ ಮುಗಿಸಿದರು. ಕಲೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಮಯೂರಿ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆ ಮಾಡುವ ಮುನ್ನ ನಾಲ್ಕು ವರ್ಷಗಳ ಕಾಲ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದರು. ಬಳಿಕ ಕುಟುಂಬದವರ ಅನುಮತಿಯೊಂದಿಗೆ ಧಾರಾವಾಹಿ ಆಡಿಷನ್ ಪ್ರಾರಂಭ ಮಾಡಿದರು. ಆಗ ದೊರೆತಿದ್ದೇ 'ಅಶ್ವಿನಿ ನಕ್ಷತ್ರ'.

ಅವಮಾನ, ಅನುಮಾನ, ಸನ್ಮಾನ ಎದುರಿಸಿರುವ ಮಯೂರಿ
ಸ್ವತಃ ಮಯೂರಿಯವರೇ ಹಿಂದೊಮ್ಮೆ 'ಫಿಲ್ಮಿಬೀಟ್' ಜೊತೆ ಹೇಳಿಕೊಂಡಿರುವಂತೆ, ಅವರು ಜೀವನದಲ್ಲಿ ಅವಮಾನ, ಅನುಮಾನ ಹಾಗೂ ಸನ್ಮಾಗಳನ್ನು ಪಡೆದವರಂತೆ. ಮಯೂರಿ ನಿರೂಪಣೆ ಮಾಡುತ್ತಿದ್ದ ಸಮಯದಲ್ಲಿ ಹಲವು ಅವಮಾನಗಳನ್ನು ಎದುರಿಸಿದ್ದರು. ಅವರ ಸಂಬಂಧಿಗಳೇ ಮಯೂರಿಯನ್ನು ಅವಮಾನಿಸಿದ್ದರು. ಆದರೆ ಇದಕ್ಕೆಲ್ಲ ಕುಗ್ಗದ ಮಯೂರಿ ಹಠ ಬಿಡದೆ ತಮಗೆ ಸರಿ ಎನಿಸಿದ ದಾರಿಯಲ್ಲಿ ನಡೆದರು ಜಯಶೀಲರಾದರು. ಹಿಂದೊಮ್ಮೆ ತಮಗೆ ಅವಮಾನಿಸಿದವರೆ ಅವರನ್ನು ಕರೆದು ಸನ್ಮಾನ ಮಾಡಿದರು.

ಆರೆ ತಿಂಗಳಲ್ಲಿ ಶಶಾಂಕ್ರಿಂದ ಕರೆ
ಮೊದಲ ಧಾರಾವಾಹಿಗೆ ಮಯೂರಿ ಗಳಿಸಿದಷ್ಟು ಜನಪ್ರಿಯತೆ ಇನ್ನಾವ ಕಿರುತೆರೆ ನಟಿಯರೂ ಗಳಿಸಿಲ್ಲ ಎನಿಸುತ್ತದೆ. ಧಾರಾವಾಹಿ ನಟಿಯಾಗಿದ್ದ ಮಯೂರಿಗೆ ಸಿನಿಮಾ ತಾರೆಯಷ್ಟು ಜನಪ್ರಿಯತೆ ಧಕ್ಕಿತ್ತು. ಧಾರಾವಾಹಿ ಪ್ರಸಾರವಾದ ಕೇವಲ ಆರೇ ತಿಂಗಳ ಅವಧಿಯಲ್ಲಿ ಮಯೂರಿಗೆ ಸಿನಿಮಾ ಅವಕಾಶಗಳ ಹರಿವು ಆರಂಭವಾಗಿಬಿಟ್ಟಿತ್ತು. ಹೊಸ ಟ್ಯಾಲೆಂಟ್ಗಳನ್ನು ಹುಡುಕುವುದರಲ್ಲಿ ನಿಸ್ಸೀಮರಾಗಿರುವ ನಿರ್ದೇಶಕ ಶಶಾಂಕ್ ಕರೆ ಮಾಡಿ ತಮ್ಮ ಹೊಸ ಸಿನಿಮಾ 'ಕೃಷ್ಣ-ಲೀಲಾ'ನಲ್ಲಿ ಅವಕಾಶ ಕೊಟ್ಟರು. ಆ ನಂತರ ಮಯೂರಿ ಹಿಂತಿರುಗಿ ನೋಡಿದ್ದೇ ಇಲ್ಲ.

ರವಿಚಂದ್ರನ್-ಪುನೀತ್ ಅವರಿಂದ ಹೊಗಳಿಕೆ
ಅಜಯ್ ರಾವ್ ನಾಯಕ ನಟರಾಗಿದ್ದ 'ಕೃಷ್ಣ-ಲೀಲಾ' ಸಿನಿಮಾದಲ್ಲಿ ನಾಯಕಿ ಲೀಲಾ ಪಾತ್ರದಲ್ಲಿ ನಟಿಸಿದ ಮಯೂರಿ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ರವಿಚಂದ್ರನ್, ಪುನೀತ್ ರಾಜ್ಕುಮಾರ್ ಅವರಂಥವರು ಸಹ ಮಯೂರಿಗೆ ಅಭಿನಂದನೆ ಸಲ್ಲಿಸಿದ್ದರು. ಆ ನಂತರ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ರ 'ಇಷ್ಟಕಾಮ್ಯ' ಸಿನಿಮಾಕ್ಕೆ ಆಯ್ಕೆಯಾದ ಮಯೂರಿ ನಟನೆಯಲ್ಲಿ ಮಾಗುತ್ತಲೇ ಸಾಗಿದರು. 'ನಟರಾಜ ಸರ್ವೀಸ್', 'ಕರಿಯಾ 2', '8 ಎಂಎಂ', 'ನನ್ನ ಪ್ರಕಾರ' ಸೇರಿ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ ಮಯೂರಿ. 2019 ರ ವರೆಗೆ ಸಿನಿಮಾಗಳಲ್ಲಿ ಸಕ್ರಿಯರಾಗಿಯೇ ಇದ್ದರು.

2020 ರಲ್ಲಿ ವಿವಾಹ, 2021 ರಲ್ಲಿ ತಾಯಿಯಾದ ಮಯೂರಿ
2020 ರ ಕೋವಿಡ್ ನಡುವೆಯೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ತಮ್ಮ ಬಹುಸಮಯದ ಗೆಳೆಯ ಅರುಣ್ ಅವರೊಟ್ಟಿಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾದರು. 2021 ರ ಮಾರ್ಚ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಮದುವೆ ಬಳಿಕವೂ ನಟಿಸಿದ ಮಯೂರಿ 2022 ರಲ್ಲಿ ಬಿಡುಗಡೆ ಆದ 'ವೀಲ್ ಚೇರ್ ರೋಮಿಯೊ' ಸಿನಿಮಾದಲ್ಲಿ ನೆನಪುಳಿಯುವ ಪಾತ್ರದಲ್ಲಿ ನಟಿಸಿದರು. ಕಣ್ಣು ಕಾಣದ ವೇಶ್ಯೆಯಾಗಿ ಮಯೂರಿಯ ನಟನೆ ವಿಮರ್ಶಕರ ಮೆಚ್ಚುಗೆ ಗಳಿಸಿತು. ಇದೀಗ ಒಮ್ಮೆಲೆ ಬಿಗ್ಬಾಸ್ ಮೂಲಕ ದಶಕದ ಬಳಿಕ ಕಿರುತೆರೆಗೆ ಕಾಲಿಡುತ್ತಿದ್ದಾರೆ.

ಗಟ್ಟಿ ಮನಸ್ಥಿತಿಯೊಂದಿಗೆ ಬಿಗ್ಬಾಸ್ಗೆ ಬಂದಿದ್ದಾರೆ
ಎರಡು ವರ್ಷದ ಮಗುವನ್ನು ಮಯೂರಿ ಬಿಗ್ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. ಸಣ್ಣ ಕೂಸನ್ನು ಬಿಟ್ಟು ಬರುವುದು ಮಯೂರಿಗೆ ಸುಲಭದ ನಿರ್ಧಾರವಂತೂ ಅಲ್ಲ. ಆದರೂ ಬಿಗ್ಬಾಸ್ಗೆ ಬರುತ್ತಿದ್ದಾರೆಂದರೆ ಅಚಲ ನಿರ್ಣಯದೊಂದಿಗೆ ಬರುತ್ತಿರುವುದಂತೂ ಖಾಯಂ. ಹುಬ್ಬಳ್ಳಿಯ ಈ ಹುಡುಗಿ ಚೆನ್ನಾಗಿ ಆಡಿ ಗೆಲ್ಲಲೆನ್ನುವುದು ಅವರ ಅಭಿಮಾನಿಗಳ ಆಶಯ. ಈ ಬಾರಿ ಘಟಾನುಘಟಿಗಳೇ ಬಿಗ್ಬಾಸ್ ಮನೆಯಲ್ಲಿರುವ ಕಾರಣ ಆಟ ಸುಲಭವಂತೂ ಇರುವುದಿಲ್ಲ.


Click it and Unblock the Notifications











