Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಿವಕಾಶಿಯಿಂದ ದುಬೈವರೆಗೆ': ಸುಂದರಿ ಶ್ರೀದೇವಿ ಬದುಕು ಹೇಗಿತ್ತು; ಅಂತ್ಯ ಹೀಗೇಕಾಯ್ತು?
ದಕ್ಷಿಣ ಧ್ರುವದಿಂ ಉತ್ತರ ಧ್ರುವಕು ಚುಂಬಕ ಗಾಳಿ ಬೀಸಿದ ನಟಿಯರ ಪೈಕಿ 'ಸುರಸುಂದರಿ', 'ಚಾಂದಿನಿ', 'ಸೌಂದರ್ಯದ ಸಿರಿದೇವಿ' ಅಂತೆಲ್ಲಾ ಕರೆಸಿಕೊಂಡಿದ್ದ ಶ್ರೀದೇವಿ ಪ್ರಮುಖರು. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಪಡೆದು, ಬಳಿಕ ಇಡೀ ಬಾಲಿವುಡ್ದನ್ನೇ ತನ್ನ ಕಿರುಬೆರಳಿನಲ್ಲಿ ಆಡಿಸಿದ ಚೆಲುವಾಂತ ಚೆಲುವೆ ಈಕೆ. 80ರ ದಶಕದಲ್ಲಿ ಸಿನಿ ಪ್ರಿಯರ ಮನಗೆದ್ದಿದ್ದ ಆಕೆಯ ಬದುಕು ಹಲವು ಕವಲುಗಳನ್ನು ಒಳಗೊಂಡಿದ್ದ ಜಿಟಲ ಕಾನನದಂತಿದೆ. ಅದರಲ್ಲೂ ಅಂತ್ಯ ಇವತ್ತಿಗೂ ಗುಮಾನಿಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಒಂದು ಕಾಲದ ಡ್ರೀಮ್ ಗರ್ಲ್ ಜೀವನದ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ವ್ಯಕ್ತಿ ಚಿತ್ರ ಇಲ್ಲಿದೆ.
ಪಟಾಕಿಗಳ ರಾಜಧಾನಿಯ ಕುವರಿ
'ಪಟಾಕಿ'ಗಳ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ತಮಿಳುನಾಡಿನ ಶಿವಕಾಶಿಯಲ್ಲಿ 13 ಆಗಸ್ಟ್ 1963ರಂದು ಶ್ರೀದೇವಿ ಜನಿಸಿದರು. ವಕೀಲರಾಗಿದ್ದ ಅಯ್ಯಪ್ಪನ್ ಮತ್ತು ರಾಜೇಶ್ವರಿ ಎಂಬ ಸಸ್ಯಹಾರಿ ದಂಪತಿ ಪುತ್ರಿ ಶ್ರೀದೇವಿಯ ಮೂಲ ಹೆಸರು ಶ್ರೀಅಮ್ಮ ಯಂಗೆರ್ ಅಯ್ಯಪ್ಪನ್. ಶ್ರೀದೇವಿಗೆ ಓರ್ವ ಸಹೋದರಿ ಮತ್ತು ಇಬ್ಬರು ಸಹೋದರರಿದ್ದಾರೆ. ತಂದೆ ಮೂಲತಃ ತಮಿಳಿನವರಾಗಿದ್ದರೆ, ತಾಯಿಯ ಹುಟ್ಟೂರು ತಿರುಪತಿ. ಹೀಗಾಗಿ, ಮನೆಯಲ್ಲಿ ತಮಿಳು ಮತ್ತು ತೆಲುಗನ್ನ ನಿರರ್ಗಳ ಶ್ರೀದೇವಿ ಮಾತನಾಡುತ್ತಿದ್ದರು.
ಶ್ರೀದೇವಿ ಹಠಾತ್ ನಿಧನದ ಬಗ್ಗೆ ಸಹೋದರಿ ಶ್ರೀಲತಾ ಮೌನವಾಗಿರೋದು ಯಾಕೆ.?
ನಾಲ್ಕನೇ ವಯಸ್ಸಿಗೆ ಬಣ್ಣ ಹಚ್ಚಿದಾಕೆ
ಮುದ್ದು ಮುದ್ದಾಗಿದ್ದ ಪುಟ್ಟ ಬಾಲಕಿ ಶ್ರೀದೇವಿ ನಾಲ್ಕನೇ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಶಿವಾಜಿ ಗಣೇಶನ್ ಅಭಿನಯದ ತಮಿಳಿನ 'ಕಂದನ್ ಕರುಣೈ' ಚಿತ್ರದಲ್ಲಿ ಬಾಲ ಮುರುಗನ್ ಆಗಿ ಶ್ರೀದೇವಿ ಕಾಣಿಸಿಕೊಂಡಿದ್ದರು. ನಟನೆಯನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುತ್ತಿದ್ದ ಪುಟಾಣಿ ಶ್ರೀದೇವಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬಂದವು. 'ತುನೈವನ್', 'ಮಾ ನಾನ್ನ ನಿರ್ದೋಷಿ', 'ನಾಮ್ ನಾಡು', 'ಪ್ರಾರ್ಥನೈ', 'ಬಾಬು', 'ಜೂಲಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲಿನಟಿಯಾಗಿ ಶ್ರೀದೇವಿ ನಟಿಸಿದರು.
ಪತಿ ಬೋನಿ ಕಪೂರ್ ಗಾಗಿ ತನ್ನ ಆಸ್ತಿ ಮಾರಾಟ ಮಾಡಿದ್ದ ಶ್ರೀದೇವಿ!
ಪಂಚಭಾಷಾಗಳ ಪ್ರತಿಭಾವಂತೆ
ಅಚ್ಚರಿ ಅಂದರೆ ಬಾಲನಟಿಯಾಗಿರುವಾಗಲೇ ಶ್ರೀದೇವಿ ಪಂಚಭಾಷಾ ತಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಬಾಲನಟಿಯಾಗಿ ಶ್ರೀದೇವಿ ಅಭಿನಯಿಸಿದ್ದಾರೆ. ಬಾಲಿವುಡ್ನಲ್ಲಿ ಶ್ರೀದೇವಿ ನಟಿಸಿದ ಮೊದಲ ಚಿತ್ರ ಕೆ. ಎಸ್. ಆರ್. ದಾಸ್ ನಿರ್ದೇಶನದ 'ರಾಣಿ ಮೇರಾ ನಾಮ್'. ಕನ್ನಡದಲ್ಲಿ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ 'ಭಕ್ತ ಕುಂಬಾರ', 'ಯಶೋಧ ಕೃಷ್ಣ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ಶ್ರೀದೇವಿ ನಟಿಸಿದ್ದಾರೆ. 1971ರಲ್ಲಿ ಬಿಡುಗಡೆ ಆದ ಮಲಯಾಳಂನ 'ಪೂಮ್ಪಟ್ಟ' ಚಿತ್ರದಲ್ಲಿನ ಅಭಿನಯಕ್ಕಾಗಿ ಬಾಲಕಿ ಶ್ರೀದೇವಿ ಕೇರಳ ರಾಜ್ಯದ 'ಅತ್ಯುತ್ತಮ ಬಾಲನಟಿ' ಪ್ರಶಸ್ತಿ ಪಡೆದಿದ್ದಾರೆ.
ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ!
13ಕ್ಕೆ ಪೂರ್ಣಪ್ರಮಾಣದ ನಟಿ
ಐದು ಭಾಷೆಗಳಲ್ಲಿ ಬಹುಬೇಡಿಕೆಯ ಬಾಲನಟಿಯಾಗಿದ್ದ ಶ್ರೀದೇವಿ, 1976 ರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಕೆ. ಬಾಲಚಂದರ್ ನಿರ್ದೇಶನದ ತಮಿಳಿನ 'ಮೂನ್ಡ್ರು ಮುಡಿಚು' ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದುಕೊಂಡಾಕೆ. ಅಲ್ಲಿಂದ ಆಕೆ ಹಿಂದಿರುಗಿ ನೋಡಿದ್ದೇ ಇಲ್ಲ. 'ಮೂನ್ಡ್ರು ಮುಡಿಚು' ಚಿತ್ರದ ಮೂಲಕ ಶುರುವಾದ ಕಮಲ್ ಹಾಸನ್-ಶ್ರೀದೇವಿ ಕಾಂಬಿನೇಶನ್, 'ಸದ್ಮಾ', 'ಅಂದಗಾಡು', 'ಗುರು', 'ವಸಂತ ಕೋಕಿಲ' ಸೇರಿದಂತೆ ವಿವಿಧ ಭಾಷೆಗಳಲ್ಲಿ ಒಟ್ಟು 27 ಚಿತ್ರಗಳಲ್ಲಿ ಮುಂದುವರೆಯಿತು. ಕಮಲ್ ಹಾಸನ್-ಶ್ರೀದೇವಿ ಅಂದಿನ ಸೂಪರ್ ಹಿಟ್ ಜೋಡಿ. ಕಮಲ್ ಹಾಸನ್, ರಜನಿಕಾಂತ್, ಅಂಬರೀಶ್, ಅಮಿತಾಬ್ ಬಚ್ಚನ್, ಚಿರಂಜೀವಿ, ಜಿತೇಂದ್ರ, ಎನ್.ಟಿ.ಆರ್, ಎ.ಎನ್.ಆರ್, ಕೃಷ್ಣ, ಶಿವಾಜಿ ಗಣೇಶನ್, ಅನಿಲ್ ಕಪೂರ್, ವೆಂಕಟೇಶ್, ನಾಗಾರ್ಜುನ, ರಾಜೇಶ್ ಖನ್ನ, ಸಂಜಯ್ ದತ್, ಮಿಥುನ್ ಚಕ್ರವರ್ತಿ, ರಿಶಿ ಕಪೂರ್ ಸೇರಿದಂತೆ ಐದು ಭಾಷೆಗಳ ಸ್ಟಾರ್ ಹೀರೋಗಳ ಜೊತೆಗೆ ಶ್ರೀದೇವಿ ತೆರೆ ಹಂಚಿಕೊಂಡಿದ್ದಾರೆ. ಜಿತೇಂದ್ರ-ಶ್ರೀದೇವಿ ಕೆಮಿಸ್ಟ್ರಿ 16 ಚಿತ್ರಗಳಲ್ಲಿ ವರ್ಕ್ ಆಗಿದೆ.
ಉತ್ತರ ಭಾರತಕ್ಕೆ ಪದಾರ್ಪಣೆ
ಅದಾಗಲೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಶ್ರೀದೇವಿಯನ್ನ ಬಾಲಿವುಡ್ ಕೈಬೀಸಿ ಕರೆದಿದ್ದು 'ಸೋಲ್ವಾ ಸಾವನ್' ಚಿತ್ರಕ್ಕಾಗಿ. ತಮಿಳಿನಲ್ಲಿ ಪಿ. ಭಾರತಿರಾಜ ನಿರ್ದೇಶನದ ಶ್ರೀದೇವಿ, ರಜನಿಕಾಂತ್, ಕಮಲ್ ಹಾಸನ್ ನಟನೆಯ '16 ವಯದಿನಿಲೆ' ಚಿತ್ರ ಸೂಪರ್ ಹಿಟ್ ಆಗಿತ್ತು. ಇದೇ ಚಿತ್ರವನ್ನ ಪಿ. ಭಾರತಿರಾಜ ಬಾಲಿವುಡ್ನಲ್ಲಿ ರೀಮೇಕ್ ಮಾಡಲು ಮುಂದಾದರು. ಆಗ 16 ವರ್ಷದ ಮೇಹ್ನಾ ಪಾತ್ರಕ್ಕೆ ಶ್ರೀದೇವಿ ಬಿಟ್ಟು ಪಿ.ಭಾರತಿರಾಜಗೆ ಬೇರೆ ಯಾರೂ ಕಾಣಲಿಲ್ಲ. ಶ್ರೀದೇವಿ, ಅಮೋಲ್ ಪಾಲೇಕರ್ ಮತ್ತು ಕುಲ್ ಭೂಷಣ್ ಖರಬಂಧ ಕಾಂಬಿನೇಶನ್ ನಲ್ಲಿ 'ಸೋಲ್ವಾ ಸಾವನ್' ರಿಲೀಸ್ ಆಯ್ತು. ತಮಿಳಿನಲ್ಲಿ '16 ವಯದಿನಿಲೆ' ಮತ್ತು ತೆಲುಗಿನಲ್ಲಿ 'ಪದಹಾರೆಲ್ಲ ವಯಸ್ಸು' ಹಿಟ್ ಆದಂತೆ ಬಾಲಿವುಡ್ ನಲ್ಲಿ 'ಸೋಲ್ವಾ ಸಾವನ್' ಸಕ್ಸಸ್ ಆಗಲಿಲ್ಲ.
ಬ್ರೇಕ್ ಕೊಟ್ಟ 'ಹಿಮ್ಮತ್ ವಾಲಾ'
'ಸೋಲ್ವಾ ಸಾವನ್' ಫ್ಲಾಪ್ ಆದ್ಮೇಲೆ ಬಾಲಿವುಡ್ ನಲ್ಲಿ ಶ್ರೀದೇವಿ ಮತ್ತೆ ಗುರುತಿಸಿಕೊಳ್ಳಲು ನಾಲ್ಕು ವರ್ಷಗಳು ಬೇಕಾಯ್ತು. 1983 ರಲ್ಲಿ ಜಿತೇಂದ್ರ ಜೊತೆಗೆ 'ಹಿಮ್ಮತ್ ವಾಲಾ' ಚಿತ್ರದಲ್ಲಿ ಶ್ರೀದೇವಿ ನಟಿಸಿದರು. 'ನೈನೋ ಮೈ ಸಪ್ನಾ' ಅಂತ ಕುಣಿದಿದ್ದೇ ಕುಣಿದಿದ್ದು, ಶ್ರೀದೇವಿ ಕಿಸ್ಮತ್ ಬದಲಾಯಿತು. ಹೊಸ ಕನಸು ಉತ್ತರ ಭಾರತದಲ್ಲೂ ಅರಳಿತು. ಇಲ್ಲಿಂದ ಅವರ ಬಾಲಿವುಡ್ ಪಯಣ ಹೂವಿನ ಹಾಸಿಗೆ ಆಗಿತ್ತು. 'ಹಿಮ್ಮತ್ ವಾಲಾ' ಚಿತ್ರದಂತಹ ಹಿಟ್ ಕೊಟ್ಟ ಶ್ರೀದೇವಿ-ಜಿತೇಂದ್ರ ಕಾಂಬಿನೇಶನ್ ಮುಂದಿನ 16 ಚಿತ್ರಗಳಲ್ಲಿ ಮುಂದುವರೆಯಿತು. 'ಜಾನಿ ದೋಸ್ತ್', 'ಜಸ್ಟಿಸ್ ಚೌಧರಿ', 'ತೋಫಾ', 'ಸುಹಾಗನ್', 'ಧರ್ಮ್ ಅಧಿಕಾರಿ' ಚಿತ್ರಗಳಲ್ಲಿ ಶ್ರೀದೇವಿ-ಜಿತೇಂದ್ರ ಸಕ್ಸಸ್ ಸವಾರಿ ಮಾಡಿದರು.
ದೊಡ್ಡ ಯಶಸ್ಸು ಕೊಟ್ಟ ಸದ್ಮಾ
1983 ರಲ್ಲಿ ತೆರೆಕಂಡ ಶ್ರೀದೇವಿ-ಕಮಲ್ ಹಾಸನ್ ಜೋಡಿಯ 'ಸದ್ಮಾ' ದೊಡ್ಡ ಯಶಸ್ಸು ಗಳಿಸಿತು. ಅಸಲಿಗೆ ಇದು ಶ್ರೀದೇವಿ ತಮಿಳಿನಲ್ಲಿ ನಟಿಸಿದ್ದ 'ಮೂನ್ಡ್ರಂ ಪಿರೈ' ಚಿತ್ರದ ರೀಮೇಕ್. ಮಾನಸಿಕ ಅಸ್ವಸ್ಥೆಯ ಪಾತ್ರವನ್ನ ಶ್ರೀದೇವಿ ಈ ಚಿತ್ರದಲ್ಲಿ ನಿಭಾಯಿಸಿದ್ದರು. ಅವರ ಅಭಿನಯ ವ್ಯಾಪಕ ಮೆಚ್ಚುಗೆ ಪಾತ್ರವಾಗಿತ್ತು. 'ಜಾಗ್ ಉಠಾ ಇನ್ಸಾನ್', 'ನಾಗಿನ್', 'ಮಿಸ್ಟರ್ ಇಂಡಿಯಾ', 'ಚಾಂದಿನಿ', 'ಚಾಲ್ ಬಾಜ್', 'ಲಮ್ಹೆ', 'ಖುದಾ ಗವಾ', 'ಗುಮ್ರಾ' ಚಿತ್ರಗಳು ಶ್ರೀದೇವಿರವರನ್ನ 'ಬಾಲಿವುಡ್ ರಾಣಿ'ಯನ್ನಾಗಿಸಿತು. ಒಂದಾದ ಮೇಲೊಂದರಂತೆ ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದ ಶ್ರೀದೇವಿ, ತಮ್ಮ ಸಮಕಾಲಿನ ನಟಿಯರಾದ ಜಯಪ್ರದ ಮತ್ತು ಮೀನಾಕ್ಷಿ ಶೇಷಾದ್ರಿ ರವರನ್ನೂ ಮೀರಿ ಬೆಳೆದರು. ಇದೇ ಕಾರಣಕ್ಕೆ ಶ್ರೀದೇವಿಗೆ 'ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್' ಎಂಬ ಬಿರುದು ಲಭಿಸಿತು.
ವಿಶಿಷ್ಟ ದಾಖಲೆಗೆ ಒಡತಿಯಾದ ಶ್ರೀದೇವಿ
ಒಂದು ಹಂತಕ್ಕೆ ನಾಯಕಿಯಾಗಿ ಮಿಂಚಿದ ನಂತರ ಆ ನಟಿಗೆ ಸಿಗೋದು ಪೋಷಕ ಪಾತ್ರ ಅಥವಾ ತಾಯಿ ಪಾತ್ರಗಳು. ಇಂತಹ ಅದೆಷ್ಟೋ ಸ್ಟಾರ್ ನಟಿಯರನ್ನ ನಾವು ನೋಡಿದ್ದೇವೆ. ಆದರೆ ಈ ವಿಚಾರಕ್ಕೆ ಶ್ರೀದೇವಿ ಅಪವಾದ. ತನ್ನ ಕಾಲದ ಮೇರು ನಟರ ಜೊತೆ ತೆರೆ ಹಂಚಿಕೊಂಡ ಶ್ರೀದೇವಿ ನಂತರ ಅವರ ಮಕ್ಕಳ ಜೊತೆಗೂ ನಾಯಕಿಯಾಗಿದ್ದವರು. ಇದಕ್ಕೆ ಉದಾಹರಣೆ ಅಕ್ಕಿನೇನಿ ನಾಗೇಶ್ವರ ರಾವ್ ಗೆ ನಾಯಕಿಯಗಿದ್ದ ಶ್ರೀದೇವಿ ಮುಂದೆ ನಾಗಾರ್ಜುನ ಜೊತೆಗೂ ಡ್ಯೂಯೆಟ್ ಹಾಡಿದ್ದರು. ಹಾಗೇ ಬಾಲಿವುಡ್ ಸ್ಟಾರ್ ಧರ್ಮೇಂದರ್ ಜೊತೆ ಮರ ಸುತ್ತಿದ ಶ್ರೀದೇವಿ ಅವರ ಮಗ ಸನ್ನಿ ಡಿಯೋಲ್ ಜೊತೆಗೂ ಹೆಜ್ಜೆ ಹಾಕಿದ್ದರು.
ಪ್ರತಿಶ್ರಮಕ್ಕೆ ಪ್ರಶಸ್ತಿಗಳ ಪ್ರತಿಫಲ
ಇಷ್ಟೆಲ್ಲಾ ಸಾಧನೆಗೆ ಪ್ರತಿಫಲ ರೂಪದಲ್ಲಿ ಪ್ರಶಸ್ತಿಗಳೂ ಶ್ರೀದೇವಿಯನ್ನು ಅರಸಿ ಬಂದವು. 'ಪೂಮ್ಬಟ್ಟ' ಚಿತ್ರಕ್ಕೆ ಕೇರಳ ಸರ್ಕಾರದ ಅತ್ಯುತ್ತಮ ಬಾಲನಟಿ ಪ್ರಶಸ್ತಿಯಿಂದ ಆರಂಭವಾದ ಇವುಗಳ ಆಗಮನ, '16 ವಯದಿನಿಲೆ' ಚಿತ್ರಕ್ಕೆ ಫಿಲ್ಮ್ ಫೇರ್ ಸೌತ್ ವಿಶೇಷ ಪ್ರಶಸ್ತಿ ರೂಪದಲ್ಲಿ ಮುಂದಿವರಿಯಿತು. 'ಮೂನ್ಡ್ರು ಪಿರೈ' ಚಿತ್ರಕ್ಕೆ ತಮಿಳುನಾಡು ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ, 'ಮೀನ್ಡುಮ್ ಕೋಕಿಲ', 'ಕ್ಷಣ ಕ್ಷಣಂ' ಚಿತ್ರಕ್ಕೆ ಫಿಲ್ಮ್ ಫೇರ್ ಸೌತ್ ಅತ್ಯುತ್ತಮ ನಟಿ ಪ್ರಶಸ್ತಿ, 'ಸದ್ಮಾ', 'ಚಾಲ್ ಬಾಜ್', 'ಚಾಂದಿನಿ' ಚಿತ್ರಕ್ಕೆ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ, 'ಕ್ಷಣ ಕ್ಷಣಂ' ಚಿತ್ರಕ್ಕೆ ನಂದಿ ಪ್ರಶಸ್ತಿ, 'ಲಮ್ಹೆ', 'ಖುದಾ ಗವಾ', 'ಗುಮ್ರಾ', 'ಲಾಡ್ಲಾ' ಚಿತ್ರಕ್ಕೆ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ, 'ಮಾಮ್' ಚಿತ್ರಕ್ಕೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಶ್ರೀದೇವಿ ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಶ್ರೇಷ್ಠ ಪುರಸ್ಕಾರಗಳಲ್ಲಿ ಒಂದಾದ 'ಪದ್ಮಶ್ರೀ'ಗೂಶ್ರೀದೇವಿ ಪಾತ್ರರಾಗಿದ್ದಾರೆ. ಇವೆಲ್ಲದರ ಜೊತೆಗೆ ಸ್ಮಿತಾ ಪಾಟೀಲ್ ಮೆಮೋರಿಯಲ್ ಅವಾರ್ಡ್, ಆಂಧ್ರ ಪ್ರದೇಶ ಸರ್ಕಾರದ ಕಲಾ ಸರಸ್ವತಿ ಪ್ರಶಸ್ತಿ, ಎ.ಎನ್.ಆರ್ ನ್ಯಾಷನಲ್ ಅವಾರ್ಡ್ ಸೇರಿದಂತೆ ಹಲವು ಗೌರವಗಳು ಶ್ರೀದೇವಿಗೆ ಸಂದಿವೆ.
ಫ್ಯಾಷನ್ ಐಕಾನ್ ಖಾಸಗಿ ಬದುಕು
ಶ್ರೀದೇವಿ ಜೊತೆಗೆ ಶೂಟಿಂಗ್ ನಲ್ಲಿ ತಾಯಿ ರಾಜೇಶ್ವರಿ ಅಥವಾ ಸಹೋದರಿ ಶ್ರೀಲತಾ ಇರಲೇಬೇಕಿತ್ತು. 1991 ರಲ್ಲಿ ಶ್ರೀದೇವಿ ತಂದೆ ಸಾವನ್ನಪ್ಪಿದರು. ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದ ತಾಯಿಗೆ ನ್ಯೂಯಾರ್ಕ್ ನಲ್ಲಿ ತಪ್ಪಾಗಿ ಆಪರೇಶನ್ ಆದ್ಮೇಲೆ 1996 ರಲ್ಲಿ ಕೊನೆಯುಸಿರೆಳೆದರು. ಖಾಸಗಿತನವನ್ನು ಹೆಚ್ಚು ಇಷ್ಟಪಡುತ್ತಿದ್ದವರು ಶ್ರೀದೇವಿ, ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಮಾಧ್ಯಮ ಅಥವಾ ಪತ್ರಿಕಾ ಮಿತ್ರರ ಜೊತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಹಾಗ್ನೋಡಿದ್ರೆ, ಶ್ರೀದೇವಿ ಸಂದರ್ಶನಗಳನ್ನು ನೀಡಿದ್ದೇ ಅಪರೂಪ. 'ಫ್ಯಾಶನ್ ಐಕಾನ್' ಅಂತಲೇ ಶ್ರೀದೇವಿ ಖ್ಯಾತಿ ಪಡೆದಿದ್ದರು. ಸಿನಿಮಾಗಳಲ್ಲಿ ಅವರ ಸ್ಟೈಲಿಂಗ್ ಚೆನ್ನಾಗಿರುತ್ತಿತ್ತು. ಫ್ಯಾಶನ್ ಮಾಡೆಲ್ ಆಗಿಯೂ ಕಾಣಿಸಿಕೊಂಡ ಶ್ರೀದೇವಿ 'ವೋಗ್' ಸೇರಿದಂತೆ ಹಲವು ಫ್ಯಾಶನ್ ಮ್ಯಾಗಝೀನ್ ನಲ್ಲಿ ಫೀಚರ್ ಆಗಿದ್ದರು.
ಬೋನಿ ಮೋಹದ ಬಲೆಯಲ್ಲಿ
'ಜಾಗ್ ಉಠಾ ಇನ್ಸಾನ್' ಚಿತ್ರದಲ್ಲಿ ನಟಿಸಿದ ಬಳಿಕ ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ಮಧ್ಯೆ ಪ್ರೀತಿ ಮೊಳಕೆಯೊಡೆಯಿತು. ಬಳಿಕ ಇವರಿಬ್ಬರು ಮದುವೆಯಾದರು ಎಂದು ಅಂದಿನ ಪತ್ರಿಕೆಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಶ್ರೀದೇವಿ ಎಲ್ಲೂ ತುಟಿ ಎರಡು ಮಾಡಿರಲಿಲ್ಲ. ಶ್ರೀದೇವಿಯ ಸೌಂದರ್ಯಕ್ಕೆ ಮನಸೋತಿದ್ದ ಬೋನಿ ಕಪೂರ್, ಆಕೆಯ ಜೊತೆ ಆತ್ಮೀಯತೆ ಬೆಳೆಸಿಕೊಳ್ಳಲು 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ಆಫರ್ ಕೊಟ್ಟರು. ಕೇಳಿದಕ್ಕಿಂತ ಹೆಚ್ಚು ಸಂಭಾವನೆಯನ್ನೇ ಶ್ರೀದೇವಿಗೆ ಬೋನಿ ಕಪೂರ್ ನೀಡಿದ್ದರು. ಅಷ್ಟರಲ್ಲಾಗಲೇ, ಬೋನಿ ಕಪೂರ್ ಗೆ ಮೋನಾ ಎಂಬುವರ ಜೊತೆಗೆ ಮದುವೆ ಆಗಿತ್ತು. ಹೀಗಿದ್ದರೂ, ಇತ್ತ ಮಿಥುನ್ ಚಕ್ರವರ್ತಿಯಿಂದ ಬೇರ್ಪಟ್ಟು ಒಂಟಿಯಾಗಿದ್ದ ಶ್ರೀದೇವಿಗೆ ಅಕ್ಷರಶಃ ಆಶ್ರಯ ನೀಡಿದ್ದು ಬೋನಿ ಕಪೂರ್.
ಮದುವೆಗೂ ಮುಂಚೆ ತಾಯಿಯಾದರು
ಬೋನಿ ಕಪೂರ್ ಮತ್ತು ಶ್ರೀದೇವಿ ಸ್ನೇಹ ಸಂಬಂಧ ಪ್ರೀತಿ ರೂಪ ಪಡೆದ ಪರಿಣಾಮ ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿ ಆಗಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ, ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ 1996 ರಲ್ಲಿ ಬೋನಿ ಕಪೂರ್, ಶ್ರೀದೇವಿಯನ್ನ ಮದುವೆ ಆದರು. ಬೋನಿ ಮತ್ತು ಶ್ರೀದೇವಿ ದಂಪತಿಗೆ ಒಟ್ಟು ಇಬ್ಬರು ಹೆಣ್ಣು ಮಕ್ಕಳಾದರು (ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್). ಮದುವೆ-ಮಕ್ಕಳಿಂದಾಗಿ ಬಣ್ಣದ ಬದುಕಿನಿಂದ ಕೊಂಚ ಗ್ಯಾಪ್ ಪಡೆದ ಶ್ರೀದೇವಿ 2012 ರಲ್ಲಿ 'ಇಂಗ್ಲೀಷ್ ವಿಂಗ್ಲೀಷ್' ಚಿತ್ರದಲ್ಲಿ ನಟಿಸಿದರು. 'ಇಂಗ್ಲೀಷ್ ವಿಂಗ್ಲೀಷ್' ಹಿಟ್ ಆಯ್ತು. ನಿಜ ಹೇಳ್ಬೇಕಂದ್ರೆ, ಬಾಲಿವುಡ್ ನಲ್ಲಿ ಸಕ್ಸಸ್ ಫುಲ್ ಕಮ್ ಬ್ಯಾಕ್ ಮಾಡಿದ ಏಕೈಕ ಹೀರೋಯಿನ್ ಅಂದ್ರೆ ಅದು ಶ್ರೀದೇವಿ. ಬಳಿಕ 'ಪುಲಿ', 'ಮಾಮ್', 'ಝೀರೋ' ಚಿತ್ರಗಳಲ್ಲಿ ಶ್ರೀದೇವಿ ನಟಿಸಿದ್ದರು. ಹಾಗೆ ನೋಡಿದರೆ, ಶ್ರೀದೇವಿ ತೆರೆಮೇಲೆ ಕಾಣಿಸಿಕೊಂಡ ಕೊನೆಯ ಚಿತ್ರ 'ಝೀರೋ'. ಹಿಂದಿಯ 'ಕಳಂಕ್' ಮತ್ತು ಮಲಯಾಳಂ ನಲ್ಲಿ 'ಶ್ರೀ ಶ್ರೀ ದೇವರಾಗಂ' ಚಿತ್ರಗಳಲ್ಲಿ ನಟಿಸಲು ಶ್ರೀದೇವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು, ಆದರೆ ಅವ್ಯಾವವೂ ನೆರವೇರಲಿಲ್ಲ ಎಂಬುದು ದುರಂತ.
ಸಾವಿನಲ್ಲೂ ನಿಗೂಢತೆ ಉಳಿಸಿ ಹೋದ ನಟಿ
ಸಂಬಂಧಿ ಮೋಹಿತ್ ಮಾರ್ವ ಮದುವೆಗೆಂದು ಪುತ್ರಿ ಖುಷಿ ಮತ್ತು ಪತಿ ಬೋನಿ ಕಪೂರ್ ಜೊತೆಗೆ ಶ್ರೀದೇವಿ ದುಬೈಗೆ ಹಾರಿದ್ದರು. ಮದುವೆ ಮುಗಿದ್ಮೇಲೆ ಫೆಬ್ರವರಿ 24 ರಂದು ದುಬೈನ ಹೋಟೆಲ್ ನಲ್ಲಿ ತಂಗಿದ್ದರು ಶ್ರೀದೇವಿ, ಬಾತ್ ಟಬ್ ನಲ್ಲಿ ಅಕಸ್ಮಾತ್ ಆಗಿ ಮುಳುಗಿ ಸಾವನ್ನಪ್ಪಿದರು ಎಂದು ವರದಿಯಾಯಿತು. ಹೀಗೆ ದೊಡ್ಡದೊಂಡು ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡು ಜನಪ್ರಿಯ ನಟಿಯ ಕೊನೆ ಅಚ್ಚರಿಯ ರೀತಿಯಲ್ಲಿ ಮುಗಿದು ಹೋಯಿತು. ಶ್ರೀದೇವಿ ಸಾವಿನ ಸುತ್ತ ಹಲವು ಅನುಮಾನಗಳಿದ್ದರೂ, ದುಬೈನಲ್ಲಿ ಕೇಸ್ ಕ್ಲೋಸ್ ಆಯಿತು. ಫೆಬ್ರವರಿ 28 ರಂದು ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜ ಚಿತಾಗಾರದಲ್ಲಿ ಶ್ರೀದೇವಿ ಅಂತ್ಯ ಸಂಸ್ಕಾರ ನಡೆಯಿತು. ಬಹುಶಃ ಭಾರತೀಯ ಸಿನೆಮಾ ಜಗತ್ತು ಇಂತಹ ಬಹುಭಾಷ, ಪ್ರತಿಭಾವಂತ ನಟಿಯನ್ನು ಮತ್ತೆಂದೂ ಕಾಣುವುದು ಕಷ್ಟವಿದೆ.