ಯಶ್-ಪ್ರಶಾಂತ್ ನೀಲ್ ಮುನಿಸಿಕೊಂಡಿದ್ದಾರಾ? ಈ ಪ್ರಶ್ನೆ ಮೂಡಿದ್ದು ಯಾಕೆ?
ಪ್ರಶಾಂತ್ ನೀಲ್ ನಿರ್ದೇಶಿಸಿದ 'ಸಲಾರ್' ಸಿನಿಮಾ ಇಂದು (ಡಿಸೆಂಬರ್ 22) ಅದ್ಧೂರಿಯಾಗಿ ರಿಲೀಸ್ ಆಗಿದೆ. 'ಕೆಜಿಎಫ್ 2' ಅಂತಹ ಮೆಗಾ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ 'ಕೆಜಿಎಫ್'ಗೂ ಮೀರಿದ ಸಿನಿಮಾ ಕೊಡಬಹುದಾ? ಅನ್ನೋದನ್ನು ಪ್ರೇಕ್ಷಕರು ಎದುರು ನೋಡಿದ್ದು ನಿಜ.
'ಸಲಾರ್' ಬಗ್ಗೆ ಎಷ್ಟು ಕ್ರೇಜ್ ಇತ್ತೋ.. ಅಷ್ಟೇ ಕ್ರೇಜ್ ಈ ಸಿನಿಮಾದಲ್ಲಿ ರಾಕಿ ಭಾಯ್ ಇರಬಹುದಾ? ಅನ್ನೋ ಪ್ರಶ್ನೆಗೂ ಇತ್ತು. ಯಾಕಂದ್ರೆ, 'ಕೆಜಿಎಫ್' ಸಿರೀಸ್ ಮಾಡಿ ಮುಗಿಸುವ ವೇಳೆಗೆ ಪ್ರಶಾಂತ್ ನೀಲ್ ಹಾಗೂ ಯಶ್ ಸ್ನೇಹ ತುಂಬಾನೇ ಗಟ್ಟಿಯಾಗಿತ್ತು. ಇಬ್ಬರು ಒಟ್ಟಾದರೆ, ಮತ್ತೆ ಹೊಸ ಇತಿಹಾಸವನ್ನು ಸೃಷ್ಟಿಸಿಬಿಡಬಹುದು ಅನ್ನೋ ಅನುಮಾನ ಹುಟ್ಟಿಕೊಳ್ಳುವಷ್ಟು ಗಾಢವಾಗಿತ್ತು.

ಆದರೆ, 'ಸಲಾರ್' ರಿಲೀಸ್ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯೊಂದು ಹರಿದಾಡುವುದಕ್ಕೆ ಶುರುವಾಗಿತ್ತು. ಯಶ್ ಹಾಗೂ ಪ್ರಶಾಂತ್ ನೀಲ್ ನಡುವೆ ವೈಮಸ್ಸು ಮೂಡಿದೆ. ಇಬ್ಬರೂ ಮುಖಾ ಮುಖಿ ಕೂಡ ಮಾತಾಡುವ ವಾತಾವರಣವಿಲ್ಲ. ಇಬ್ಬರೂ ತಮ್ಮ ತಮ್ಮ ಹಾದಿಯನ್ನು ಹಿಡಿದು ಹೊರಟಿದ್ದಾರೆಂಬ ಚರ್ಚೆನೂ ಆಗಿತ್ತು.
ಇಬ್ಬರು ಸ್ನೇಹದಲ್ಲಿ ಬಿರುಕು ಮೂಡಿದೆ ಅಂತ ಸುದ್ದಿಯೋ ಹಬ್ಬಿತ್ತು. ಈ ಸುದ್ದಿಯಲ್ಲಿ ಸತ್ಯ ಎಷ್ಟಿದೆಯೋ..? ಸುಳ್ಳು ಎಷ್ಟಿದೆಯೋ? ಅವರಿಬ್ಬರಿಗೆ ಗೊತ್ತು. ಆದರೆ, ಇಂತಹದ್ದೊಂದು ಸುದ್ದಿ ಹಬ್ಬುವುದಕ್ಕೆ ಕಾರಣವೇನು? ದಿಢೀರನೇ ಯಶ್, ಪ್ರಶಾಂತ್ ನೀಲ್ ನಡುವೆ ವೈಮನಸ್ಸು ಮೂಡುವುದಕ್ಕೆ ಏನು ಕಾರಣ? ಇಂತಹ ಪ್ರಶ್ನೆಗಳಿಗೆ ನೆಟ್ಟಿಗರೇ ಒಂದಿಷ್ಟು ಸಾಕ್ಷಿಗಳನ್ನು ನೀಡುತ್ತಿದ್ದಾರೆ.
'ಸಲಾರ್' ರಿಲೀಸ್ಗೂ ಮುನ್ನ ರಾಜಮೌಳಿ ಜೊತೆ ಪ್ರಶಾಂತ್ ನೀಲ್, ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಮೂವರ ಸಂದರ್ಶನವಿತ್ತು. ಇಡೀ ಸಂದರ್ಶನದಲ್ಲಿ ಸಾಕಷ್ಟು ಬಾರಿ ರಾಜಮೌಳಿ 'ಕೆಜಿಎಫ್' ಸಿನಿಮಾ ಬಗ್ಗೆ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಅದಕ್ಕೆ ಪ್ರಶಾಂತ್ ನೀಲ್ ಉತ್ತರಿಸುವಾಗ ಯಶ್ ಬಗ್ಗೆ ಮಾತಾಡಲಿಲ್ಲ. ಸುಮಾರು 7 ವರ್ಷಗಳ ಕಾಲ 'ಕೆಜಿಎಫ್' ಸರಣಿಗೆ ಒಟ್ಟಿಗೆ ಕೆಲಸ ಮಾಡಿದವರ ಬಗ್ಗೆ ಪ್ರಶಾಂತ್ ನೀಲ್ ಯಾಕೆ ಮಾತನಾಡುವ ಉತ್ಸಾಹ ತೋರಲಿಲ್ಲ ಅನ್ನೋದು ನೆಟ್ಟಿಗರ ಪ್ರಶ್ನೆ.

ಕನ್ನಡದಲ್ಲಿಯೂ ಪ್ರಶಾಂತ್ ನೀಲ್ ಸಂದರ್ಶನ ನೀಡಿದ್ದರು. ಆ ವೇಳೆ ಕೂಡ ಯಶ್ ಬಗ್ಗೆ ಒಂದೆರಡು ಬಾರಿ ಮಾತಾಡಿದ್ದಷ್ಟೇ. ಪ್ರಶಾಂತ್ ನೀಲ್ ಹೆಚ್ಚಾಗಿ ರಾಕಿ ಭಾಯ್ ಬರಲೇ ಇಲ್ಲ. ಸಂದರ್ಶನ ನೀಡಿದ್ದು 'ಸಲಾರ್' ಬಗ್ಗೆ ಆಗಿದ್ದರೂ, 'ಕೆಜಿಎಫ್' ಬಗ್ಗೆ ಪ್ರಶ್ನೆ ಮಾಡಿದಾಗಲೂ ಯಶ್ ಯಾಕೆ ನೆನಪಾಗಲಿಲ್ಲ ಅನ್ನೋದು ಹಲವರ ಪ್ರಶ್ನೆ. ಇನ್ನೊಂದು ಕಡೆ 'ಕೆಜಿಎಫ್ 3' ಸ್ಕ್ರಿಪ್ಟ್ ರೆಡಿಯಿದೆ. ಆದರೆ, ನಿರ್ದೇಶನ ಮಾಡುವ ಬಗ್ಗೆ ಖಚಿತ ಮಾಹಿತಿಯನ್ನು ಈ ಹಿಂದೆ ಕೊಟ್ಟಿರಲಿಲ್ಲ. ಇವೆಲ್ಲವೂ ಯಶ್ ಹಾಗೂ ಪ್ರಶಾಂತ್ ನೀಲ್ ಮುನಿಸಿಕೊಂಡಿದ್ದಾರೆನ್ನುವ ಬಗ್ಗೆ ನೆಟ್ಟಿಗರು ಕೊಟ್ಟ ಕಾರಣಗಳು.
ಆದ್ರೀಗ ಮಾಧ್ಯಮವೊಂದಕ್ಕೆ 'ಕೆಜಿಎಫ್ 3' ಬರೋದು ಪಕ್ಕಾ. ಯಶ್ ಆ ಸಿನಿಮಾದಲ್ಲಿ ನಟಿಸುತ್ತಾರೆ. ಹೊಂಬಾಳೆ ಫಿಲ್ಮ್ಸ್, ಯಶ್ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದು, ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಧಾರಕ್ಕೆ ಬರುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಅಲ್ಲದೆ, 'ಸಲಾರ್' ಪ್ರಚಾರದ ವೇಳೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ "ಎಲ್ಲರೂ ರಿಸರ್ವ್ಡ್ ಆಗಿರುತ್ತಾರೆ. ಎರಡೂ ವರ್ಷಗಳ ಪ್ರತಿ ದಿನ ಒಟ್ಟಿಗೆ ಸಿನಿಮಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಇಬ್ಬರ ನಡುವೆ ಒಳ್ಳೆ ಬಾಂಧವ್ಯ ಇಲ್ಲದಿದ್ದರೆ ತೆರೆಮೇಲೆ ಒಳ್ಳೆ ಸಿನಿಮಾ ನೋಡಲು ಸಾಧ್ಯವಿಲ್ಲ. ಇಬ್ಬರ ಕೆಮೆಸ್ಟ್ರಿ ತೆರೆಮೇಲೆ ಮಿಸ್ ಆಗುತ್ತದೆ. ನನ್ನ ಹಾಗೂ ಯಶ್ ಸ್ನೇಹ ಜೀವನ ಪರ್ಯಂತ ಮುಂದುವರೆಯಲಿದೆ" ಎಂದು ಪ್ರಶಾಂತ್ ನೀಲ್ ಹೇಳಿದ್ದರು.
ಪ್ರಶಾಂತ್ ನೀಲ್ ಬೇರೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮಿಬ್ಬರ ಸ್ನೇಹದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶೀಘ್ರದಲ್ಲೇ 'ಕೆಜಿಎಫ್ 3' ಅನ್ನು ಇಬ್ಬರೂ ಕೂತು ಅನೌನ್ಸ್ ಮಾಡಿದರೆ, ಇಬ್ಬರು ನಡುವಿನ ಊಹಾ ಪೋಹಗಳಿಗೆ ತೆರೆಬಿದ್ದಂತೆ ಆಗುತ್ತೆ.


Click it and Unblock the Notifications











