ಪುನೀತ್ ರಾಜ್ಕುಮಾರ್ ಜೊತೆ ಈ ಫೋಟೊದಲ್ಲಿರುವ ಇಬ್ಬರು ಪುಟಾಣಿಗಳು ಯಾರು?
ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ 3 ವರ್ಷ ಕಳೆದಿದೆ. ಆದರೆ ಇವತ್ತಿಗೂ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಪ್ಪು ನೆನೆಪು ಅಜರಾಮರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಗುವಿನ ಒಡೆಯನ ಫೋಟೊಗಳು ಪದೇ ಪದೇ ಕಾಣಿಸಿಕೊಂಡು ಕಾಡುತ್ತವೆ. ಅದರಲ್ಲಿ ಅಪ್ಪು ಬಾಲ್ಯದ ಫೋಟೊಗಳು ಇವೆ.
ಬಾಲ್ಯದಲ್ಲೇ ಪುನೀತ್ ರಾಜ್ಕುಮಾರ್ ತಂದೆ ಜೊತೆ ಚಿತ್ರರಂಗಕ್ಕೆ ಬಂದರು. ಬುದ್ದಿ ಬರುವುದಕ್ಕೂ ಮುನ್ನ ಎಳೆ ಕಂದಮ್ಮ ಆಗಿದ್ದಾಗಲೇ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಮಿಂಚಿದ್ದರು. ಬಳಿಕ ಮಾಸ್ಟರ್ ಲೋಹಿತ್ ಆಗಿ ತಂದೆ ಜೊತೆ ಸಿನಿಮಾಗಳಲ್ಲಿ ನಟಿಸಿದರು. 'ವಸಂತ ಗೀತಾ' ಚಿತ್ರದಿಂದ ಅಪ್ಪು ಮೋಡಿ ಶುರುವಾಯಿತು. ಮುಂದೆ ಬಾಲ ನಟನಾಗಿ ಲೀಡ್ ರೋಲ್ಗಳಲ್ಲಿ ನಟಿಸಿ ಗೆದ್ದರು.

'ಬೆಟ್ಟದ ಹೂವು' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. 'ಭೂಮಿಗೆ ಬಂದ ಭಗವಂತ', 'ಯಾರಿವನು', 'ಭಾಗ್ಯವಂತ', 'ಭಕ್ತ ಪ್ರಹ್ಲಾದ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಗೆದ್ದರು. ಅಪ್ಪು ಬಾಲ್ಯದ ತುಂಟಾಟ, ನಟನೆ ನೋಡುವುದೇ ಚೆಂದ. ಅವತ್ತಿನ ಕಾಲಕ್ಕೆ ಸ್ಟಾರ್ ಪಟ್ಟ ಅಲಂಕರಿಸಿದ್ದರು.
ಅಪ್ಪಾಜಿ ಬಳಿಕ ನನಗಿಂತ ಮೊದಲು ನಮ್ಮ ಮನೆಯ ಸ್ಟಾರ್ ಆಗಿದ್ದು ಅಪ್ಪು ಎಂದು ಸ್ವತಃ ಶಿವಣ್ಣ ಹೇಳಿಕೊಂಡಿದ್ದಾರೆ. ಅಪ್ಪ ಅಮ್ಮನ ಜೊತೆಗೆ ಸೆಟ್ಗಳಿಗೆ ಹೋಗುತ್ತಿದ್ದ ಲೋಹಿತ್ ಹತ್ತಿರದಿಂದ ಸಿನಿಮಾ ನೋಡಿ ಬೆಳೆದವರು. ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದರಿಂದ ಸರಿಯಾಗಿ ಶಾಲೆಗೆ ಹೋಗಿ ಕಲಿಯಲು ಸಾಧ್ಯವಾಗಲಿಲ್ಲ.

ದರ್ಶನ್, ಸುದೀಪ್ ಜೊತೆಗೂ ಪುನೀತ್ ರಾಜ್ಕುಮಾರ್ ಬಾಲ್ಯದ ಫೋಟೊಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇನ್ನು ಇತ್ತೀಚೆಗೆ ಇದೊಂದು ಫೋಟೊ ಸಖತ್ ಸದ್ದು ಮಾಡ್ತಿದೆ. ಪುನೀತ್ ಜೊತೆ ಈ ಫೋಟೊದಲ್ಲಿರುವ ಮತ್ತಿಬ್ಬರು ಪುಟಾಣಿಗಳು ಯಾರು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಫೋಟೊ ನೋಡಿ ಕೆಲವರು ಅಪ್ಪು ಜೊತೆಗೆ ಇರುವುದು ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅವರಿಬ್ಬರು ಕೂಡ ಅಲ್ಲ. ಅಂದಹಾಗೆ ಇದು 'ಬೆಟ್ಟದ ಹೂವು' ಚಿತ್ರದ ಸಮಯದಲ್ಲಿ ಕ್ಲಿಕ್ಕಿಸಿರುವ ಫೋಟೊ ಎಂದು ಕೆಲವರು ಹೇಳುತ್ತಿದ್ದಾರೆ. ಆ ಚಿತ್ರದಲ್ಲಿ ನಟಿಸಿದ್ದ ಇಬ್ಬರು ಬಾಲ ಕಲಾವಿದರು ಇವರು ಎಂದು ಅಪ್ಪು ಆಪ್ತರಿಂದಲೇ ಫಿಲ್ಮಿಬೀಟ್ಗೆ ಮಾಹಿತಿ ಸಿಕ್ಕಿದೆ.
ಎನ್. ಲಕ್ಷ್ಮಿನಾರಾಯಣನ್ ನಿರ್ದೇಶನದ 'ಬೆಟ್ಟದ ಹೂವು' ಕನ್ನಡದ ಬಹಳ ಜನಪ್ರಿಯ ಸಿನಿಮಾ. ತನ್ನ ಕುಟುಂಬಕ್ಕಾಗಿ ಬಾಲ್ಲದಲ್ಲೇ ನೆರವಿಗೆ ನಿಲ್ಲುವ ರಾಮು ಎಂಬ ಹುಡುಗನ ಕಥೆ ಇದು. ಶೆರ್ಲಿ ಎಲ್. ಅರೋರಾ ಬರೆದ 'ವಾಟ್, ದೆನ್ ರಾಮನ್?' ಎಂಬ ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬಂದಿತ್ತು. ರಾಜನ್ ನಾಗೇಂದ್ರ ಸಂಗೀತ ಚಿತ್ರಕ್ಕಿತ್ತು. 1985ರಲ್ಲಿ ಸಿನಿಮಾ ತೆರೆಗೆ ಬಂದು ಗೆದ್ದಿತ್ತು.
ಆ ವರ್ಷ ಅತ್ಯುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ 'ಬೆಟ್ಟದ ಹೂವು' ಚಿತ್ರಕ್ಕೆ ಸಿಕ್ಕಿತ್ತು. ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಕೂಡ ಧಕ್ಕಿತ್ತು. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಅತ್ತಿಗುಂಡಿ ಗ್ರಾಮದಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ಆಗ ಅಪ್ಪುಗೆ 9 ವರ್ಷ ವಯಸ್ಸಾಗಿತ್ತು. 35 ವರ್ಷಗಳ ಬಳಿಕ 2018ರಲ್ಲಿ ಪುನೀತ್ ರಾಜ್ಕುಮಾರ್ ಆ ಊರಿಗೆ ಭೇಟಿ ನೀಡಿ ಸುತ್ತಾಡಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ, ಫೋಟೊಗಳು ಸಹ ವೈರಲ್ ಆಗಿತ್ತು.
'ಬೆಟ್ಟದ ಹೂವು' ಚಿತ್ರಕ್ಕಾಗಿ ಹಾಕಿದ್ದ ಸೆಟ್ ಜಾಗವನ್ನು ಪುನೀತ್ ಹುಡುಕಿದ್ದರು. ಸ್ಥಳೀಯರನ್ನು ಮಾತನಾಡಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. 'ನಟಸಾರ್ವಭೌಮ' ಸಿನಿಮಾ ಚಿತ್ರೀಕರಣಕ್ಕಾಗಿ ಆ ಕಡೆ ಹೋಗಿದ್ದ ಅಪ್ಪು ಜಾಗದ ನೆನಪಾಗಿ ಅಲ್ಲಿ ಇಳಿದು ಸುತ್ತಾಡಿದ್ದರು. ಹಳೆಯ ಸ್ಕೂಲ್, ಮನೆ ಹಾಗೂ ಚಿತ್ರೀಕರಣಕ್ಕೆ ಹಾಕಿದ್ದ ಸೆಟ್ ನೆನಪಿಸಿಕೊಂಡಿದ್ದರು.


Click it and Unblock the Notifications











